Wednesday, April 4, 2012

ಕಥೆ : ವೃತ್ತಿಗೌರವ

ವೃತ್ತಿಗೌರವ 
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್' ಎಂದು ಊದಿದ. ಕಟಿಂಗ್ ಮಾಡುವಾಗ ಮಾದುವಿನ ಅಭ್ಯಾಸದು. ಮಾದವನ್ ಅವನ ಹೆಸರು ಎಲ್ಲರು ಮಾದು ಎಂದೆ ಕರೆಯುತ್ತಿದ್ದರು. ಪಾಪರೆಡ್ಡಿ ಪಾಳ್ಯದಲ್ಲಿ ಅವನು 'ಮಾದು ಹೇರ್ ಕಟಿಂಗ್ ಅಂಡ್ ಸಲೂನ್' ಪ್ರಾರಂಬಿಸಿ ಹತ್ತು ಹನ್ನೆರಡು ವರ್ಷಗಳೆ ಕಳೆದಿದ್ದವು. ಮೊದಲಿಗೆ ಸಾದರಣ  ಜಾಗ, ಹತ್ತಿರ ರಿಂಗ್ ರೋಡ್ ಹಾದು ಹೋದಂತೆ ಜನದಟ್ಟಣೆಯ ಪ್ರದೇಶವಾಯಿತು. ಎದುರಿಗೆ 'ಮಂಜು ಕೆಫೆ' ಪ್ರಾರಂಬವಾದ ನಂತರ ಅವನಿಗು ವ್ಯಾಪಾರ ಏರುಮುಖವಾಯಿತು.

   ಕುರ್ಚಿಯಲ್ಲಿ ಕುಳಿತವನ ತಲೆಯನ್ನೊಮ್ಮೆ ತೃಪ್ತಿಯಿಂದ ನೋಡಿದ ಮಾದು  'ಸರಿಯಾಯ್ತ ಸಾರ್? ಇನ್ನು ಸ್ವಲ್ಪ ಶಾರ್ಟ್ ಮಾಡಲ?" ಎಂದ,  ಅವನು ಕನ್ನಡಿಯಲ್ಲಿಯೆ ಇವನನ್ನು ನೋಡುತ್ತ 'ಬೇಡ ಸರಿಯಾಗಿದೆ' ಎಂದ.ಅವನ ತಲೆ ಬಾಚತೊಡಗಿದ ಮಾದು, ಇವನನ್ನು ಕಳಿಸಿದರೆ ಎದುರಿಗೆ ಹೋಗಿ ಕಾಫಿ ಕುಡಿದುಬರಬಹುದು ಅಂತ ಅವನ ಯೋಚನೆ.ಬಾನುವಾರ ಹೊರತುಪಡಿಸಿ ಉಳಿದ ದಿನ ಬೆಳಗ್ಗೆ ಹತ್ತರ ನಂತರ ಜನ ಕಡಿಮೆ ಈದಿನ ಗುರುವಾರ ಅಂದುಕೊಳ್ಳುವಾಗಲೆ ಅಂಗಡಿ ಎದುರು ದಡದಡ ಶಬ್ದ ಮಾಡುತ್ತ ಬಂದ ಬುಲೆಟ್ ಬೈಕ್ ನಿಂತಿತು. ಅದರ ಸವಾರ ಮಾದುವಿನ ಅಂಗಡಿ ಒಳಗೆ ಬರತೊಡಗಿದ.ಆಜಾನುಬಾನು ವ್ಯಕ್ತಿತ್ವ, ತಲೆಯಿತ್ತಿ ನೋಡಬೇಕಾದ ಎತ್ತರ,ಮುಖ ಸದಾ ಗಂಭೀರ.ಅವನನ್ನು ನೋಡುವಾಗಲೆ ಮಾದುವಿನ ತುಟಿ ಅಪ್ರಯತ್ನವಾಗಿ ನುಡಿಯಿತು 'ಅಣ್ಣ' ಎಂದು.ಮಾದು ಬೇಗ ಕುಳಿತಿದ್ದ ಗಿರಾಕಿಯನ್ನು ಎಬ್ಬಿಸಿ, ಕುರ್ಚಿ ಹಾಗು ಎದುರಿನ ಜಾಗ ಸ್ವಚ್ಚಮಾಡಲು ತೊಡಗಿದ.ಕುರ್ಚಿಯಿಂದ ಎದ್ದ ವ್ಯಕ್ತಿ ಹೊರಗೆ ಹೋದ. ಒಳಗೆ ಬಂದ ಆಗುಂತಕ ವ್ಯಕ್ತಿಯನ್ನು ವಿನಯವಾಗಿ 'ಬನ್ನಿ ಅಣ್ಣ ಬನ್ನಿ' ಅಂತ ಸ್ವಾಗತಿಸಿದ ಮಾದು.

   ಒಳಬಂದ ಆಗುಂತಕ ಸುತ್ತಲು ಒಮ್ಮೆ ನೋಡಿ ತಲೆಯಾಡಿಸುತ್ತ ಮಾದು ತೋರಿದ ಕುರ್ಚಿಯಲ್ಲಿ ಕುಳಿತು ಎದುರಿನ ದೊಡ್ಡಕನ್ನಡಿಯಲ್ಲಿ ತನ್ನ ಮುಖನೋಡಿಕೊಂಡ.ನಿದಾನಕ್ಕೆ ಶರ್ಟಿನ ಮೇಲಿನ ಗುಂಡಿಗಳನ್ನು ತೆಗೆದು,ಶುಬ್ರವಾಗಿದ್ದ ದೊಡ್ಡ ಬಿಳಿಯಬಟ್ಟೆಯನ್ನು ಕುತ್ತಿಗೆಯ ಸುತ್ತಲು ಬರುವಂತೆ ಮಾಡಿ ಅಣ್ಣನಿಗೆ ಹೊದ್ದಿಸಿದ್ದ ಮಾದು, ಕೈಯಲ್ಲಿ ಕತ್ತರಿ ಬಾಚಣಿಗೆ ಹಿಡಿದು 'ಅಣ್ಣ ಶಾರ್ಟ್ ಮಾಡಲ? ಮೀಡಿಯಂ ಇರಲ?" ಅಂದ. ಅವನು ಮಾದುವಿನ ಮುಖ ನೋಡುತ್ತ "ಅದೇನು ಪ್ರತಿಸಲ ಕೇಳ್ತಿಯ, ಮಾಮೂಲಿನಂತೆ ನಿನ್ನ ಕೆಲಸ ಮಾಡು" ಎಂದ. ಅವನ ದ್ವನಿ ಮಾದುವಿಗೆ ಬೆಚ್ಚಿಬೀಳುವಂತೆ ಆಯಿತು.ಮಾದು ತನ್ನ ಕೆಲಸ ಪ್ರಾರಂಬಿಸಿದಂತೆ, ಆವ್ಯಕ್ತಿ ತಲೆಯನ್ನು ಕುರ್ಚಿಯ ಹಿಂಬಾಗಕ್ಕೆ ಒರಗಿಸಿ ಕಣ್ಣುಮುಚ್ಚಿ ಕುಳಿತ.

   ಅಣ್ಣ ಎನ್ನುವ ಆ ವ್ಯಕ್ತಿ ಸಾಮಾನ್ಯನಲ್ಲ. ನಗರದಲ್ಲಿನ ಆಯಿಲ್ ಮಾಫಿಯವನ್ನು ಸಂಪೂರ್ಣವಾಗಿ ತನ್ನ ವಶದಲ್ಲಿ ಹಿಡಿದಿದ್ದ ಸೋಮಶೇಖರ ರೆಡ್ಡಿ.ಅವನಿಗೆ ಹಲವು ಅನ್ವರ್ಥನಾಮಗಳು ಆಯಿಲ್ ಕಿಂಗ್,ಬಂಕ್ ಪಿನ್,ಇತ್ಯಾದಿ. ಅವನ ಜನರೆಲ್ಲ ಅವನನ್ನು 'ಅಣ್ಣ' ಎಂದೆ ಕರೆಯುತ್ತಿದ್ದರು. ಅವನಿಗೆ ಈರೀತಿ ಹೊರಗೆ ಓಡಾಡುತ್ತ ತನ್ನ ಕೆಲಸ ಮಾಡಿಕೊಳ್ಳುವದರಲಿ ಏನೊ ಥ್ರಿಲ್.ಅವನ ಹಿಂದೆ ಬಿದ್ದಿದ್ದ ಪೋಲಿಸ್ ಪಡೆಯಬಗ್ಗೆ ಅವನಿಗೆ ಚಿಂತೆ ಇರಲಿಲ್ಲ. ಪೋಲಿಸರ ಚಲನವಲನದ ಬಗ್ಗೆ ಸಾಕಷ್ಟು ಮುಂದಾಗಿಯೆ ಅವನಿಗೆ ಸುದ್ದಿ ಮುಟ್ಟುತ್ತಿತ್ತು. ಅವನಿಗೆ ಸಾಕಷ್ಟು ಜೀವಭಯವಿದ್ದು, ಮತ್ತೆರಡು ಗುಂಪುಗಳು ಇವನನ್ನು ಮುಗಿಸಿ ಆಯಿಲ್ ಮಾಫಿಯವನ್ನು ವಶಕ್ಕೆ ತೆಗೆದುಕೊಳ್ಳವ ಪ್ರಯತ್ನದಲ್ಲಿದ್ದರು.ಈಚೆಗೆ ಅವನಿಗೆ ಬಂದಿರುವ ಸೂಚನೆಯಂತೆ ವಿರೋದಿ ಗುಂಪುಗಳೆರಡು ಒಂದಾಗಿವೆ ಇವನನ್ನು 'ಡೀಲ್' ಮಾಡಲು.ಹಾಗಾಗಿ ಸದಾ ರಕ್ಷಣೆ ಇಟ್ಟುಕೊಂಡೆ ಅವನು ಓಡಾಡಬೇಕಿತ್ತು.ಈಗಲು ಮಾದು ಕತ್ತೆತ್ತಿ ನೋಡಿದರೆ ಕಾಣುತಿತ್ತು, ಎದುರಿನ 'ಮಂಜು ಕೆಫೆ' ಯಲ್ಲಿ ಮೂರು ಬೈಕ್ ಗಳಲ್ಲಿ ಬಂದ ಆರು ಜನ ದಡೂತಿ ವ್ಯಕ್ತಿಗಳು ಕಾಫಿ ಕುಡಿದು ಸಿಗರೇಟ್ ಸೇದುತ್ತ ನಿಂತಿದ್ದರು.ಅವರು ಸಾಮಾನ್ಯರಲ್ಲ ಅಣ್ಣನ ರಕ್ಷಣೆಗೆ ಬಂದ ಅಂಗರಕ್ಷಕರು. ಅವರು ಸುತ್ತಲು ತಮ್ಮ ದೃಷ್ಟಿ ಹರಸುತ್ತ ಕಾಯುತ್ತಿದ್ದರು. ಗಮನಿಸಿದರೆ ಅವರ ಪ್ಯಾಂಟ್ ಜೇಬಿನಲ್ಲಿ ಕುಳಿತಿರುವ ದೂರಕ್ಕು ಶೂಟ್ ಮಾಡಬಹುದಾದ ಪಿಸ್ತೂಲ್ ಗಳು ಅಡಗಿರುವುದು ಕಾಣುತ್ತಿದ್ದವು.ಬೈಕ್ ಗಳಲ್ಲಿ ಯಾವ ಕ್ಷಣಕ್ಕು ಸಿದ್ದವಾದ ಲಾಂಗ್ ಹಾಗು ಚೈನ್ ಗಳು.

   ಇಷ್ಟಾಗಿ 'ಅಣ್ಣ' ಎನ್ನುವ ಆ ವ್ಯಕ್ತಿ  ಮೈಮರೆತು ಕುಳಿತಿರಲಿಲ್ಲ, ನೋಡಲು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದ್ದ ಅವನು ಸನ್ನದನಾಗಿಯೆ ಇದ್ದ. ಯಾರನ್ನು ನಂಬದ ಅವನು ಈ ಮಾದನನ್ನು ಹೇಗೆ ನಂಬಿಯಾನು.ಮಾದು ಹೊದೆಸಿದ ಹೊದಿಗೆಯ ಅಡಿಯಲ್ಲು ಅವನ ಕೈ ಪಿಸ್ತೂಲ್ ಮೇಲೆಯೆ ಇದ್ದು, ಯಾವ ಕ್ಷಣಕ್ಕು ಬೇಕಾದಲ್ಲಿ 'ಬುಲೆಟ್' ಚಿಮ್ಮಲು ಸಿದ್ದವಾಗಿತ್ತು. ಮಾದುವಿನ ಕೈಗಳು ಎಂದಿನಂತಿರದೆ ಇಂದು ಅಣ್ಣನ ತಲೆಯ ಮೇಲೆಲ್ಲ ಓಡಾಡುವಾಗ ನವಿರಾಗಿ ನಡಗುತ್ತಿದ್ದವು. ಅದಕ್ಕೆ ಕಾರಣ ಹಿಂದಿನ ದಿನ ರಾತ್ರಿ ನಡೆದ ಘಟನೆ ಮಾದುವಿನ ಮನದಲ್ಲಿ ತೇಲಿಹೋಗುತ್ತಿತ್ತು............

   ಮಾದು ರೂಮಿನಲ್ಲಿ ಒಬ್ಬನೆ ಇರುವುದು, ಬೆಳಗಿನ ದುಡಿಮೆಯ ಶ್ರಮ ಮರೆಯಲು ಸಂಜೆ ಸ್ವಲ್ಪ ಕುಡಿಯುತ್ತಿದ್ದ. ಊಟ ನಿದಾನವಾಗಿ ಮಾಡಿದರಾಯಿತೆಂದು ಹಾಗೆ ಕಾಲು ಚಾಚಿದ್ದ. ಹೊರಗೆ ಯಾರೊ ಬಾಗಿಲು ತಟ್ಟುತ್ತಿದ್ದಾರೆ. ಬೇಸರದಿಂದಲೆ ಎದ್ದು ಬಾಗಿಲು ತೆರೆದ ಎದುರಿಗೆ ಸೀನ ನಿಂತಿದ್ದ, ತನ್ನ ಅಂಗಡಿಯ ಖಾಯಂ ಗಿರಾಕಿ, ಆದರೆ ಮನೆಗೆ ಏಕೆ ಬಂದಿದ್ದಾನೆ ಅನ್ನಿಸುವಾಗಲೆ ಅವನು ಹೇಳಿದ "ಮಾದು ನಿನ್ನ ಜೊತೆ ಸ್ವಲ್ಪ ಮಾತಿತ್ತು, ಹೊರಗೆ ಬರ್ತೀಯ?" ಅದಕ್ಕೆ ಮಾದುವೆಂದೆ 'ಇಲ್ಲೆ ಹೇಳಬಹುದಲ್ಲ ನನ್ನದಿನ್ನು ಊಟವಿಲ್ಲ" 

  ಅದಕ್ಕೆ ಸೀನ  "ಮಾದು ಇಲ್ಲಿ ಸರಿ ಹೋಗಲ್ಲ ಸ್ವಲ್ಪ ಹೊರಗೆ ಬಾ " ಎಂದವನೆ ಹೊರಟ, ವಿದಿಯಿಲ್ಲದೆ ಮಾದು ಬಾಗಿಲಿಗೆ ಬೀಗ ತಗುಲಿಸಿ ಹಿಂದೆ ಹೊರಟ. ರಸ್ತೆಯ ಕಡೆಯಲ್ಲಿ ಕಾರು ನಿಂತಿತ್ತು, ಸೀನ ಅದನ್ನು ತೋರಿ ಹತ್ತು ಎಂದ, ಮಾದು ಮುಖ ಗಂಟಿಕ್ಕಿದ, ಇದೆಂತಹ ಪಿರಿಪಿರಿ ಇವನದು ಎಂದು. ಅದನ್ನು ಅರಿತವನಂತೆ ಸೀನ "ಬರಿ ಹತ್ತು ನಿಮಿಷವಷ್ಟೆ ಜಾಸ್ತಿ ಆಗಲ್ಲ" ಎಂದ. ಹಿಂದಿನ ಸೀಟಿನಲ್ಲಿ ಮಾದು ಹಾಗು ಸೀನ ಕುಳಿತಂತೆ ಕಾರು ಹೊರಟಿತು, ಆಗ ಮಾದು ಗಮನಿಸಿದ ಮುಂದಿನ ಸೀಟಿನಲ್ಲಿ ಡ್ರೈವರ್ ಅಲ್ಲದೆ ಪಕ್ಕದಲ್ಲಿ ಮತ್ತೊಬ್ಬ ಅಪರಿಚಿತ ದಡೂತಿ ವ್ಯಕ್ತಿಯಿದ್ದ. ಕಾರು ಚಲಿಸಿದಂತೆ ಕೇಳಿದ ಮಾದು "ನನ್ನ ಏಕೆ ಕರೆತಂದೆ ಹೇಳು?"

    ಅದಕ್ಕೆ ಸೀನ "ಮಾದು ಅಷ್ಟೊಂದು ಆತುರವ, ಸರಿ ಹೇಳ್ತಿನಿ, ನಾನೀಗ  ಭಯ್ಯ, ಬಷೀರ್ ಭಯ್ಯ ಕಡೆಯಿಂದ ಬರ್ತಿದ್ದೀನಿ.ನಿನಗೆ ಅಂತ ಒಂದು ಡೀಲ್ ಇದೆ' ಅಂದ. ಮಾದು ಕೆರಳಿದ " ಎಂತ ಮಾತದು ಸರಿಯಾಗಿ ಹೇಳು, ಭಯ್ಯ ಅಂದರೆ ಯಾರವನು? ಡೀಲ್ ಅಂದರೆ ಏನು?". ಕಾರಿನಲ್ಲಿ ಮುಂದೆ ಕುಳಿತಿದ್ದ ವ್ಯಕ್ತಿ ಕ್ರೂರವಾಗಿ ಹಿಂದೆ ನೋಡಿದ. ಸೀನ ಮಾದುವಿನ ಹೆಗಲ ಮೇಲೆ ಕೈಯಿಟ್ಟ " ಮಾದು ಹಾಗೆಲ್ಲ ಮಾತಾಡಬೇಡ, ಡೇಂಜರ್, ನಿನಗೆ ತಿಳಿಯದ್ದೇನು, ಭಯ್ಯ ಅಂದರೆ ಬಷೀರ್ ಭಯ್ಯ ಅಂಡರ್ ಗ್ರೌಂಡ್ ಗೆ ಗೊತ್ತಿರುವ ಮಾಫಿಯ ಕಿಂಗ್, ಅವನ ಪರವಾಗಿ ನಿನ್ನ ಹತ್ತಿರ ಬರುತ್ತಿದ್ದೀನಿ" 

  ಮಾದುವಿನ ಹೃದಯ ಬಡಿತವೇರಿತು ಅವನು ತುಸು ಗೊಂದಲಗೊಂಡು ಅಂದ " ನನ್ನ ಹತ್ರ ಎಂತ ಡೀಲ್, ನನಗೂ ಅವನಿಗು ಎಂತ ಸಂಭಂದವೆ ಇಲ್ಲ?"  ಅದಕ್ಕೆ ಸೀನನೆಂದ "ಹೌದು ನಿನಗೆ ಸಂಭಂದವಿಲ್ಲ ಅಂತಲೆ ನಿನ್ನ ಹತ್ತಿರ ಬರುತ್ತಿರುವುದು. ನಾಳೆ ಒಬ್ಬ ವ್ಯಕ್ತೀನ ಮುಗಿಸಬೇಕು".  ಮಾದು ಬೆಚ್ಚಿಬಿದ್ದು ಅಂದ "ಸೀನ ನೀನು ನನ್ನನ್ನೇನು ಮಾಡಿದ್ದೀಯ? ನಾನು ಕೊಲೆಗಾರ ಅಲ್ಲ, ಸುಫಾರಿ ಕೊಡ್ತೀಯಾ? ನನಗಿದೆಲ್ಲ ಆಗಲ್ಲ, ನನಗೆ ಕಟಿಂಗ್ ಶೇವಿಂಗ್ ಗೆ ಕತ್ತಿ ಹಿಡಿದು ಗೊತ್ತು ಹೊರೆತು, ಕುತ್ತಿಗೆ ಕತ್ತರಿಸಲು ಅಲ್ಲ" 

    ಸೀನ ನಗುತ್ತಿದ್ದ , "ಯಾಕೆ ಮಾದು ನಾಟಕ? ನನಗೆ ತಿಳಿಯದು ಅಂತಲ, ನೀನು ನಿನ್ನ ಹೆಂಡತಿಯ ಕುತ್ತಿಗೆ ಕತ್ತರಿಸಿದವನೆ ಅಲ್ಲವೆ? ಅದಕ್ಕೆ ನಿನಗೆ ಜೈಲು ಆಗಿದೆ, ನನಗೆಲ್ಲ ತಿಳಿದಿದೆ.ಸುಮ್ಮನೆ ನನ್ನ ಮಾತು ಒಪ್ಪಿದರೆ ನಿನಗೆ ಒಳ್ಳೆಯದು, ಇಲ್ಲ ಅಂದರೆ ಅದರ ಪರಿಣಾಮ ಬೇರೆ" ಎಂದ. ಮಾದುವಿಗೆ ಅರ್ಥವಾಯಿತು ಅಂಗಡಿಗೆ ತನ್ನ ಗೆಳೆಯನಂತೆ ಬರುತ್ತಿದ್ದವನು ಈಗ ಕುತ್ತಿಗೆ ಕತ್ತರಿಸಲು ಸಿದ್ದನಾಗೆ ಬಂದಿದ್ದಾನೆ, ಅವನ ದ್ವನಿಯಲ್ಲಿಯ ಬೆದರಿಕೆ ಕಂಡು ಸ್ಥಬ್ದನಾದ. ತನ್ನ ವಿಷಯ ಇವನಿಗೆ ಹೇಗೆ ತಿಳಿಯಿತು ಅನ್ನಿಸಿ  " ಥೂ ಎಂತ ಬದುಕು! " ಎಂದುಕೊಂಡ.

  ಮಾದುವಿನ ಸ್ವಂತ ಸ್ಥಳ ಕೊಯಮತ್ತೂರು. ಅವನ ಹೆಸರು ಮಾದವನ್, ಕೇರಳದವನು, ಹೆಂಡತಿ ಜೊತೆ ಸಂಭಂದ ಹದಗೆಟ್ಟು, ಅವಳ ದುರ್ನಡತೆಗೆ ರೋಸಿ ಕಡೆಗೆ ಪರಿಸ್ಥಿಥಿಯ ಒತ್ತಡಕ್ಕೆ ಸಿಲುಕಿದಾಗ ಮಾದು ಅವನ ಕೈಯಲ್ಲಿದ್ದ ಕತ್ತಿಯಿಂದ ಅವಳ ಕುತ್ತಿಗೆ ಕತ್ತರಿಸಿ, ತಾನೆ ಪೋಲಿಸರಿಗೆ ಶರಣಾಗಿದ್ದ. ನಂತರ ಎಂಟುವರ್ಷಗಳ ಜೈಲು ಶಿಕ್ಷೆಯನ್ನು ಮುಗಿಸಿ, ಅಲ್ಲಿರಲು ಮನಸಾಗದೆ ಬೆಂಗಳೂರು ಸೇರಿದ. ತನಗೆ ಗೊತ್ತಿದ್ದ ವೃತ್ತಿ ತಾನು ಗೌರವವಾಗಿ ಕಾಣುತ್ತಿದ್ದ ಕುಲಕಸುಬು ಕ್ಷೌರಿಕನ ಕೆಲಸ, ಹಾಗಾಗಿ ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ಕಟಿಂಗ್ ಶಾಪ್ ತೆಗೆದು ನೆಲೆಸಿದ್ದ. ಅಂಗಡಿಯ ಹಿಂಬಾಗದಲ್ಲಿಯೆ ರೂಮಿನಲ್ಲಿ ವಾಸ ಒಂಟಿಜೀವನ. ಈಗ ಈ ಅತಂಕ.

   ಸುಮ್ಮನೆ ಕುಳಿತ ಮಾದುವನ್ನು ಸೀನ ಭುಜ ಹಿಡಿದು ಅಲುಗಿಸಿದ "ಏನು ಹೇಳಲಿಲ್ಲ ಮಾದು" ಎಂದ. ಈಗವನ ದ್ವನಿ ಇಳಿದಿತ್ತು "ನನಗೆ ಏನು ಹೇಳಲು ತಿಳಿಯದು, ನಾನೇನು ಬೇಕಂತಲೆ ಮಾಡಿದ ಕೊಲೆಯಲ್ಲ, ನನ್ನ ಗ್ರಹಚಾರ ಈಗೆಲ್ಲ ಮುಗಿಯಿತಲ್ಲ " ಎಂದ. ಅದಕ್ಕೆ ಸೀನ "ನೋಡು ಮಾದು ಈಗ ಆ ಮಾತೆಲ್ಲ ಬೇಡ, ನೀನು ಒಪ್ಪಿಕೊ ಈಗ ಅಡ್ವಾನ್ಸ್ ಅಂತ ತಗೋ " ಎಂದು, ಐವತ್ತು ಸಾವಿರ ರೂಪಾಯಿಗಳನ್ನು ಅವನ ಕೈಯಲ್ಲಿ ಇಟ್ಟ. ಮಾದು ಏನು ಮಾತಾಡಲಿಲ್ಲ ಈಗ ಏನು ಮಾತಾಡಿದರು ಕಷ್ಟವೆಂದು ಅವನಿಗೆ ಅರಿವಾಗಿತ್ತು. ತಾನು ಈ ಕೆಲಸ ಆಗುವದಿಲ್ಲವೆಂದರೆ ಯಾವ ಕರುಣೆಯು ಇಲ್ಲದ ಈಗಲೆ ಕತ್ತರಿಸಿ ಹಾಕಿ ಹೋಗುತ್ತಾರೆ!  ಮಾಫಿಯ ಜಗತ್ತೆ ಹಾಗೆ. 

   ಸುಮ್ಮನೆ ಕುಳಿತಿದ್ದ ಮಾದುವಿಗೆ ಸೀನನೆಂದ "ಈಗ ನೀನು ಮಾಡಬೇಕಾದ ಕೆಲಸ ಕೇಳಿಸಿಕೊ. ನಾಳೆ ಗುರುವಾರ ನಿನಗೂ ಗೊತ್ತಿದೆ, 'ಆಣ್ಣ' ನಿನ್ನ ಅಂಗಡಿಗೆ ಬರುತ್ತಾನೆ, ಅವನು ಶೇವಿಂಗಿಗೆ ಕುಳಿತಾಗ ಅವನ ಕೈಯಲ್ಲಿ ಏನು ಇರಲ್ಲ ನಿನ್ನ ಕೈಯಲ್ಲಿ ಕತ್ತಿ ಇರುತ್ತೆ, ನೀನು ಅವನ ಕುತ್ತಿಗೆಯನ್ನು ಸೀಳಿ ಹಾಕಬೇಕು, ನಿನಗೇನು ಮೋಸವಿಲ್ಲ ಇನ್ನು ಎರಡು ಲಕ್ಷ ಸಿಗುತ್ತೆ" ಅಂದ. ಮಾದು ಕುಳಿತಲ್ಲೆ ನಡುಗಿದ, 'ಅಣ್ಣ' ಎನ್ನುವಾಗಲೆ ಅವನಿಗೆ ತಿಳಿಯಿತು, ಇದು ಮಾಫಿಯಾ ಯುದ್ದ, ತಾನು ಇವರ ನಡುವೆ ಆಯುಧವಾಗುತ್ತಿದ್ದೀನಿ. ನಂತರ ಪೋಲಿಸರು ತನ್ನನ್ನು ಹಿಡಿಯದಿದ್ದರು, 'ಅಣ್ಣ'ನಕಡೆಯವರು ತನ್ನನ್ನು ಉಳಿಸರು, ಕೋಳಿಯಂತೆ ತನ್ನ ಕುತ್ತಿಗೆ ಮುರಿದುಬಿಡುತ್ತಾರೆ. ಭಯ ಅವನ ಕಣ್ಣನ್ನು ತುಂಬಿತು.

   ಸೀನ ಹೇಳಿದ "ನೀನೇನು ಹೆದರಬೇಕಿಲ್ಲ, ಒಂದೆ ಎಳೆತ ಅಷ್ಟೆ ಕೊರಳನ್ನು ಕತ್ತರಿ ಈಚೆ ಓಡಿಬಂದು ಬಿಡು, ನಾನು ಕಾರು ತಂದು ನಿಲ್ಲಿಸುತ್ತೇನೆ, ನಿನ್ನನ್ನು ಸೀದಾ ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತೇನೆ, ನೀನು ಊರಿಗೆ ಹೋಗಿಬಿಡು, ಯಾರಿಗಾದರು ತಿಳಿಯುವ ಮುಂಚೆ ನಿನ್ನ ಊರು ಸೇರಿಬಿಡುತ್ತಿ. ನೀನು ಯಾರು ಅಂತಲು ಇಲ್ಲಿ ಯಾರಿಗು ತಿಳಿಯದು" ಅಂದ. ಮಾದುವನ್ನು ಅವನ ಮನೆಯ ಹತ್ತಿರ ಇಳಿಸುವ ಮುಂಚೆ ಮತ್ತೆ ಹೇಳಿದ "ನೀನೇನಾದರು ಕೆಲಸ ಕೆಡಸಿದಲ್ಲಿ, ಡಬ್ಬಲ್ ಕ್ರಾಸ್ ಮಾಡಿದಲ್ಲಿ ನಾಳೆಯೆ ನಿನ್ನ ಕಡೆಯ ದಿನ ನೆನಪಿರಲಿ"..........

  ಅವನ ಮನಸಲ್ಲಿ ಹಿಂದಿನ ನೆನಪು ಹಾದು ಹೋಗುತ್ತಿರುವಂತೆ ಅಣ್ಣನನ್ನು ಗಮನಿಸಿದ. ಅವನು ಹಿಂದೆ ಒರಗಿ ಕಣ್ಣು ಮುಚ್ಚಿದ್ದ. ಕಟಿಂಗ್ ಮುಗಿಸಿದ ಮಾದು " ಅಣ್ಣ ಸರಿಯಾಯ್ತ ನೋಡಿ,ಶೇವಿಂಗ್ ಮಾಡಲ?" ಎಂದ.ಕನ್ನಡಿಯಲ್ಲಿ ತನ್ನ ತಲೆಯನ್ನು ನೋಡಿದ ಅಣ್ಣ ತೃಪ್ತಿಯಿಂದ ತಲೆಯಾಡಿಸಿ ಮಾದುವಿನತ್ತ ಒಂದು ಚೂಪು ನೋಟ ಬೀರಿದ "ಶೇವಿಂಗ್ ಮಾಡ್ತೀಯಾ? ಮಾಡಿಬಿಡು" ಅಂದ. ಮಾದು ಅಣ್ಣನ ಮೇಲೆ ಬಿದ್ದಿದ್ದ ಕೂದಲನ್ನೆಲ್ಲ ತೆಗೆದು ಸ್ವಚ್ಚಗೊಳಿಸಿ ತಲೆಯನ್ನೊಮ್ಮೆ ಬಾಚಿ ಸರಿ ಮಾಡಿ ಬಿಳಿಯ ಬಟ್ಟೆ ತೆಗೆದು, ಶೇವಿಂಗೆಗೆ ಬೇರೆ ಬಟ್ಟೆ ಹೊದಿಸಿದ. ಕ್ರೀಮ್ ತೆಗೆದು ಕೆನ್ನೆಯ ಮೇಲೆ ಬಳಿದು, ಬ್ರಶನ್ನು ಬಿಸಿನೀರಿನಲ್ಲಿ ಅದ್ದಿ, ಮುಖ ಕೆನ್ನೆ ಹಾಗು ಗಲ್ಲದ ಮೇಲೆಲ್ಲ ನೊರೆ ಬರುವಂತೆ ಚೆನ್ನಾಗಿ ಆಡಿಸಿದ. ಅಣ್ಣ ತಲೆ ಹಿಂಬಾಗದಲ್ಲಿ ಕುರ್ಚಿಯ ಒರಗುಕೋಲಿಗೆ ಮುಖ ಆನಿಸಿ, ಮಾದುವಿನ ಮುಖ ನೋಡುತ್ತ ಕಣ್ಣು ಮುಚ್ಚಿದ.

   ಚಾಕುವಿನ ಬ್ಲೇಡ್ ಬದಲಾಯಿಸಿದ ಮಾದು, ಎಡಕೈಯಿಂದ ಅಣ್ಣನ ಕೆನ್ನೆಯನ್ನು ಸ್ವಲ್ಪ ಒತ್ತಿ ಬಲದ ಕೈಯಿಂದ ಶೇವಿಂಗ್ ಪ್ರಾರಂಬಿಸಿದ.ಸಾವಿರಾರು ಯೋಚನೆಗಳು ಅವನ ಮನಸನ್ನು ಒಟ್ಟಿಗೆ ಹಣ್ಣು ಮಾಡುತ್ತಿದ್ದವು. ಹೊರಗೆ ಶಾಂತನಂತೆ ತೋರುತ್ತಿದ್ದರು,ಮನಸು ಗೊಂದಲದ ಗೂಡಾಗಿತ್ತು. ಕೆನ್ನೆಯನ್ನು ಮುಗಿಸಿ ಈಗ ಅಣ್ಣನ ಗಂಟಲಿನ ಹತ್ತಿರ ಬ್ಲೇಡ್ ಆಡಿಸುತ್ತಿದ್ದ ಮಾದು, ತಲೆ ಹಿಂದಕ್ಕೆ ಮಾಡಿದ್ದರಿಂದ ಗಂಟಲಿನ ನಾಳಗಳು, ನರಗಳು ಎದ್ದು ಕಾಣುತ್ತಿದ್ದವು. ಅವನು ಹೇಳಿದಂತೆ ಕೇಳಿ ಸ್ವಲ್ಪ ಒತ್ತಿದ್ದರೆ ಸಾಕು ಕೆಲಸ ಮುಗಿಯುತ್ತದೆ, ನಾನು ವರ್ಷಗಳಲ್ಲಿ ದುಡಿಯುವ ಹಣವು ತನ್ನ ಕೈಸೇರುತ್ತದೆ. ಆದರೆ ಯಾವುದೊ ವಿವೇಕವೊಂದು ಅವನ ಮನಸನ್ನು ತುಂಬುತ್ತಿತ್ತು. ಅರಿಯದ ಭಾವವೊಂದು ಎಚ್ಚಿತ್ತು, ಅವನ ಮನಸಿನಲ್ಲಿ ಎಂತದೊ ಶಾಂತಿ ನೆಲಸುತ್ತಿತ್ತು. ತನ್ನ ಕರ್ತವ್ಯವೇನೆಂದು ತಕ್ಷಣ ನಿರ್ದರಿಸಿದ ಮಾದು. ಪರಿಣಾಮ ಏನೆ ಆಗಲಿ ತಾನು ಈ ಹೀನ ಕೆಲಸ ಮಾಡಬಾರದು. ನಿದಾನವಾಗಿ ಶೇವಿಂಗ್ ಮುಗಿಸಿ ಮುಖಕ್ಕೆ ಡೆಟಾಲ್ ಹಚ್ಚುತ್ತಿರುವಾಗ ಮಾದುವಿನ ಮುಖದಲ್ಲಿ ಎಂತದೊ ಶಾಂತಿ, ಒಂದು ಪ್ರಭೆ ತುಂಬಿಕೊಂಡಿತು. ಬಟ್ಟೆ ತೆಗೆದು ಶರ್ಟಿನ ಗುಂಡಿಗಳನ್ನು ಹಾಕುತ್ತ, ತನ್ನನ್ನೆ ನೋಡುತ್ತಿದ್ದ ಅಣ್ಣನಿಗೆ "ಅಣ್ಣ ಆಯ್ತು" ಅಂದ. 

   ನಿದಾನಕ್ಕೆ ಎದ್ದ ಅಣ್ಣ ಕನ್ನಡಿ ನೋಡಿ ಬಲಕೈಯಲ್ಲಿ ತನ್ನ ತಲೆಯ ಕೂದಲನ್ನು ಒತ್ತುತ್ತು ಹೊರಗೆ ಹೊರಟಂತೆ ಮಾದು ಅವನ ಹಿಂದೆ ಹೋದ. ಜೇಬಿನಿಂದ ನೂರರ ನೋಟನ್ನು ಅವನ ಕೈಯಲ್ಲಿರಿಸಿದ ಅಣ್ಣ ನಿದಾನವಾಗಿ ನಗುತ್ತ "ಮಾದು ಈ ಅಣ್ಣನ ಕುತ್ತಿಗೆಯ ನರ ಕತ್ತರಿಸಲು ಸುಫಾರಿ ತೆಗೆದುಕೊಂಡವನು ನೀನು, ಏಕೆ ಮಾಡಲಿಲ್ಲ ? " ಎಂದ. 

   ಭಯ ಅನ್ನುವುದು ಮಾದುವಿನ ಬೆನ್ನ ಹುರಿಯಿಂದ ಪ್ರಾರಂಬವಾಗಿ ದೇಹವನ್ನೆಲ್ಲ ವ್ಯಾಪಿಸಿತು. ಎಂಥ ಮನುಷ್ಯ ಇವನು, ತನ್ನನ್ನು ಕೊಲ್ಲಲ್ಲು ಸುಫಾರಿ ಕೊಡಲ್ಪಟ್ಟಿದೆ ಎಂದು ತಿಳಿದು ಸಹ ನನ್ನ ಎದುರಿಗೆ ಕೊರಳನ್ನು ಒಡ್ಡಿ ಕುಳಿತ ಇವನ ದೈರ್ಯವಾದರು ಎಂತದು?, ನಿನ್ನೆ ರಾತ್ರಿ ಕಾರಿನಲ್ಲಿ ಗುಟ್ಟಾಗಿ ನಡೆದ ಘಟನೆ ಇವನಿಗೆ ತಿಳಿದಿದ್ದಾರು ಹೇಗೆ? ಎಂದು ಮಂಕಾಗಿ ನಿಂತ. "ಹೇಳೂ ಮಾದು ನನ್ನನ್ನೇಕೆ ಸಾಯಿಸಲಿಲ್ಲ" ಕುತೂಹಲದಿಂದ ಕೇಳಿದ ಅಣ್ಣ. ನಿದಾನವಾಗಿ ಉಸಿರು ಎಳೆದುಕೊಂಡ ಮಾದು "ಹೇಳ್ತೀನಿ ಅಣ್ಣ ಅದಕ್ಕೆ ಕಾರಣ ವೃತ್ತಿ ಗೌರವ, ಅಣ್ಣ ,ವೃತ್ತಿ ಗೌರವ" ಎಂದ. ಅವನು ಆಶ್ಚರ್ಯದಿಂದ "ಅದೇನು" ಎಂದ.

   "ಹೌದು ಅಣ್ಣ ನನ್ನ ಮನಸಿನ ಯೋಚನೆ ಹೇಳಿಬಿಡ್ತೀನಿ,ನಾನು ಯಾವುದೋ ಅವೇಶದಲ್ಲಿ ನನ್ನ ಹೆಂಡತಿಯನ್ನು ಕೊಂದಿದ್ದೆ,ನಾನೇನು ಸುಫಾರಿ ಕೊಲೆಗಾರನಲ್ಲ. ಆದರೆ ನಿಮ್ಮನ್ನು ಕೊಲ್ಲದಿರಲು ಅದಕ್ಕಿಂತ ಮುಖ್ಯಕಾರಣವಿದೆ, ನಾನು ವೃತ್ತಿಯಲ್ಲಿ ಕ್ಷೌರಿಕ, ಈ ಕೆಲಸಕ್ಕೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆಯೊ ನನಗೆ ತಿಳಿಯದು, ಸಾವಿರಾರು ವರ್ಷಗಳಿಂದ ರಾಜಮಹಾರಾಜರಾಗಲಿ ಎಂತ ವೀರನೆ ಆಗಲಿ, ನಿರಾಯುಧನಾಗಿ ತನ್ನ ಕುತ್ತಿಗೆಯನ್ನು ತನ್ನ ಕ್ಷೌರಿಕನಿಗೆ ಒಪ್ಪಿಸಿ ನೆಮ್ಮದಿಯಾಗಿ ಕುಳಿತುಕೊಳ್ತಾನೆ ಅದು ಅವನ ಕೈಯಲ್ಲಿ ಕತ್ತಿ ಇರುವಾಗ. ಈ ಸಮಾಜಕ್ಕೆ ಅವನ ಮೇಲೆ ಎಷ್ಟು ನಂಬಿಕೆ!. ಈಗ ಹೇಳಿ ನಾನು ನಿಮ್ಮ ಕೊರಳನ್ನು ಸೀಳಿಬಿಟ್ಟರೆ, ಈ ಸುದ್ದಿ ಹೊರಗೆಲ್ಲ ಹರಡಿದರೆ, ನಾಳಿನಿಂದ ಕ್ಷೌರಿಕನನ್ನು ಈ ಸಮಾಜದಲ್ಲಿ ಯಾರು ನಂಬರು. ನಮ್ಮ ಎದುರು ಕುಳಿತುಕೊಳ್ಳಲು ಎಲ್ಲರಿಗು ಆತಂಕ. ನನ್ನಿಂದ ನಮ್ಮ ಕ್ಷೌರಿಕ ಸಮಾಜಕ್ಕೆ ಎಂತ ದ್ರೋಹವಾಗುತ್ತದೆ ಅಣ್ಣ.ನಾನು ದೈವವೆಂದು ನಂಬಿದ, ನನ್ನ ಕುಲವೃತ್ತಿಗೆ ಎಂದಿಗೂ ದ್ರೋಹಮಾಡಬಾರದೆಂದು ನಿರ್ದರಿಸಿದೆ." ಎಂದ.

   ಅಣ್ಣ ನಗುತ್ತ "ಅದು ಸರಿ ಈಗ ನಿನ್ನ ತಲೆಯ ಗತಿ ಅದನ್ನು ಆ ಭಷೀರ್ ಕಡೆಯ ಸೀನ ಹಾರಿಸಿದರೆ?" ಎಂದ. ಮಾದ "ಅಣ್ಣ ಆಗ ಅದು ದೇವರ ಇಚ್ಚೆ ಅಂದುಕೊಳ್ತೀನಿ" ಎಂದ. ಅಣ್ಣ ಅವನ ಕಡೆ ನೋಡುತ್ತ ನಗುತ್ತಲೆ ಹೋಗಿ ಬೈಕ್ ಸ್ಟಾರ್ಟ್ ಮಾಡಿದ. ದೂರದಿಂದ ಕುಂಟ ರಾಮ ಇವನ ಅಂಗಡಿಯತ್ತಲೆ ಓಡಿಬರುತ್ತಿದ್ದ. ಬಂದವನೆ " ಮಾದ ತಿಳೀತ ಪಕ್ಕದ ರಸ್ತೇಲಿ ಮರ್ಡರ್ ನಡೆದು ಹೋಯ್ತು, ನಿನ್ನ ಖಾಯಂ ಗಿರಾಕಿ ಗೊತ್ತಲ್ಲ ಸೀನ ಅವನು ಜೊತೆಗೆ ಯಾರು ಅವನ ಸ್ನೇಹಿತನಂತೆ", ಅಂದವನು ದ್ವನಿ ತಗ್ಗಿಸಿ  "ನಿನಗೆ ಗೊತ್ತ? ಜನ ಹೇಳ್ತಿದ್ದಾರೆ ಅಣ್ಣನ ಕಡೆಯವರಂತೆ ಅವರಿಬ್ಬರನ್ನು ಮುಗಿಸಿದ್ದು" ಎಂದ.ಬಹಳ ಜನ ಯಾರು ಅಣ್ಣನನ್ನು ನೋಡಿಲ್ಲ ,ಕುಂಟರಾಮನು ಸಹ!. 

   ಅಣ್ಣನ ಬೈಕ್ ಹೊರಟಂತೆ ತನ್ನ ಕಡೆ ಕಣ್ಣು ಹಾರಿಸಿದಂತಾಯ್ತು ಮಾದುಗೆ ಅಥವ ಅವನ ಭ್ರಮೆಯೊ!. ಎದುರಿನ ಹೋಟೆಲಿನಿಂದ ಮೂರು ಬೈಕ್ ಗಳು ಒಟ್ಟಿಗೆ ಹೊರಟವು ಅಣ್ಣನ ಬೈಕಿನ ಹಿಂದೆ.

No comments:

Post a Comment

enter your comments please