Wednesday, February 27, 2013

ಕಥೆ : ಕಂಸ


ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು ನಭವನ್ನು ಸೀಳಿದಾಗ ಆ ಬೆಳಕಲ್ಲಿ ಅರಮನೆಯ ಮುಂಬಾಗದಲ್ಲಿರುವೆ ಹೆಬ್ಬಾಗಿಲು ಕಂಡು ಮರೆಯಾಗುತ್ತಿದೆ. ಮಿಂಚಿನ ಜೊತೆ ಜೊತೆಗೆ ಕರ್ಣಪಟಲವನ್ನು ಸೀಳಿಬಿಡುವುದೆ ಎನ್ನುವಂತೆ ಎದೆಯನ್ನೆ ನಡುಗಿಸುತ್ತಿರುವ ಗುಡುಗಿನ ಶಬ್ದ. ಸಂಜೆ ಪ್ರಾರಂಬವಾದ ಮಳೆ ಸರಿರಾತ್ರಿಯಾದರು ನಿಲ್ಲುವ ಯಾವ ಸೂಚನೆಯು ಇಲ್ಲ.

 ಅರಮನೆಯ ಮಹಡಿಯ ಮುಂದಿನ ಪೌಳಿಯಲ್ಲಿ ಸುಖಾಸನದ ಮೇಲೆ ಕುಳಿತು ಕತ್ತಲೆಯಲ್ಲಿ ಕಣ್ಣು ನೆಟ್ಟಿದ್ದಾನೆ ಮಹಾರಾಜ ಕಂಸ. ಇಂದೇತಕೊ ಮಲಗಿದರು ನಿದ್ದೆಯೆ ಸನಿಹ ಬರುತ್ತಿಲ್ಲ ಅವನಿಗೆ. ಮನದಲ್ಲಿ ಎಂತದೊ ಆತಂಕ, ಭಯ!.  ಈಗ ಬರುತ್ತಿರುವುದು ಯಾವ ಮಳೆಯೊ ಎಂದುಕೊಂಡ ಕಂಸ, ಅದೆಲ್ಲ ಅವನ ತಲೆಗೆ ಹೊಳೆಯುವದಿಲ್ಲ,  "ಈದಿನ ಅಷ್ಟಮಿಯೊ ನವಮಿಯೊ ಇರಬಹುದು" ಅಂದು ಕೊಂಡ. ಕಪ್ಪುಮೋಡಗಳು ಆಕಾಶವನ್ನೆಲ್ಲ ತುಂಬಿ ಸುರಿಯುತ್ತಿರುವ ಮಳೆಯಲ್ಲಿ ಚಂದ್ರನಾಗಲಿ ನಕ್ಷತ್ರವಾಗಲಿ ಕಾಣುವುದು ಅಸಾದ್ಯವಾಗಿತ್ತು.

  ಮಳೆಯ ಸತತ ಶಬ್ದವನ್ನು ಸೀಳಿದಂತೆ ಎಲ್ಲಿಯೊ ಒಂದು ಸಣ್ಣ ಶಬ್ದ ಕೇಳುತ್ತಿದೆ, ಕಿವಿಗೊಟ್ಟು ಆಲಿಸಿದ, "ಹೌದು ಯಾವುದೊ ಸಣ್ಣ ಮಗು ಅಳುವ ಶಬ್ದ" ಅನ್ನಿಸಿದಾಗ ಕನಲಿ ಹೋದ. ಏಕೊ ಅವನಿಗೆ ಮಗು ಅಳುವ ಶಬ್ದ ಎಂದರೆ ಮನಸ್ಸು ಕದಡಿ ಹೋಗಿ ಭಯವೊ ಕೋಪವೊ ಆವರಿಸುತ್ತದೆ ಆಗ ಏನೊ ಮಾಡುತ್ತಾನೆ ಅವನಿಗೆ ತಿಳಿಯುವದಿಲ್ಲ. ತಕ್ಷಣ ಪಕ್ಕದಲ್ಲಿದ್ದ ಕರೆಗಂಟೆ ಬಾರಿಸಿದ. ಸ್ವಲ್ಪ ಹೊತ್ತಿನಲ್ಲಿ ಯಾರೊ ಮರದ ಮೆಟ್ಟಿಲು ಹತ್ತಿಬರುತ್ತಿರುವ ಶಬ್ದ. ಕಂಸನ ಮುಂದು ಕಾವಲುಗಾರನೊಬ್ಬ ಬಂದು ನಿಂತ, ಮಳೆಯಲ್ಲಿ ಅವನ ಬಟ್ಟೆಗಳು ತೋಯಿದಿದ್ದವು. ತಲೆಯ ಕೂದಲಿಂದ ನೀರು ಇಳಿಯುತ್ತಿತ್ತು, ಅದನೆಲ್ಲ ಗಮನಿಸುವಷ್ಟು ಸಹನೆ ಅವನಿಗಿಲ್ಲ, ಅಲ್ಲದೆ ಹಚ್ಚಿರುವ ಒಂದು ಹಣತೆ ಹೊರತು ಪಡಿಸಿ ಯಾವ ದೀಪವು ಇಲ್ಲ, ಅದು ಯಾವ ಘಳಿಗೆಯಲ್ಲು ನಂದ ಬಹುದು.
"ಯಾವ ಮಗುವದು ಅಳುತ್ತಿರುವುದು ನನಗೆ ಮಗುವಿನ ಅಳುವ ಶಬ್ದ ಆಗದೆಂದು ತಿಳಿಯದೆ" ಎಂದ.
"ಮಹರಾಜ, ಹೆಬ್ಬಾಗಿಲ ಹತ್ತಿರ ಕಾವಲುಗಾರರ ಮನೆಗಳಿವೆ, ಅಲ್ಲಿಂದ ಬರುತ್ತಿರುವ ಯಾವುದೊ ಮಗುವಿನ ಅಳುವಿರಬಹುದು "ಎಂದ
"ನನಗದೆಲ್ಲ ಬೇಕಿಲ್ಲ ತಕ್ಷಣ ಅಳುವಿನ ಶಬ್ದ ನಿಲ್ಲ ಬೇಕು, ಆಗದಿದ್ದರೆ ಈಗಲೆ ಹೋಗಿ ಆ ಮಗುವಿನ ಕತ್ತು ಕತ್ತರಿಸಿ ಬಾ, ಇದು ರಾಜಾಜ್ಞೆ ಎಂದು ತಿಳಿ ಓಡು" ಎಂದ.
ಕಾವಲುಗಾರ ಒಟ್ಟಿಗೆ ಎರಡೆರಡು ಮೆಟ್ಟಿಲುಗಳನ್ನು ಇಳಿಯುತ್ತ ಓಡಿದ, ಮಗುವಿನ ಅಳುವನ್ನು ನಿಲ್ಲಿಸಲು. ಅವನಿಗೆ ಚೆನ್ನಾಗಿ ತಿಳಿದಿತ್ತು ಅದು ಅವನದೆ ಮನೆಯಿಂದ ಬರುತ್ತಿರುವ ಮಗುವಿನ ಅಳುವಿನ ಶಬ್ದ, ಅವನದೆ ಮಗು, ಸಂಜೆಯಿಂದ ಹೊಟ್ಟೆನೋವಿಗೊ ಏನೊ ಅಳುತ್ತಲೆ ಇತ್ತು. ಅರೆ ಕ್ಷಣದಲ್ಲಿಯೆ ಮಗುವಿನ ಅಳುವಿನ ಶಬ್ದ ಕೇಳದಾಯಿತು.
---------------------------------------------------------------------------------------------------------------

ಮಗುವಿನ ಅಳು......
ಕಂಸನ ಮನಸನ್ನೆ ಅಲ್ಲೋಲ ಕಲ್ಲೋಲ ಮಾಡಿತ್ತು.... ಮನಸ್ಸು ಎತ್ತಲೊ..
"ಎಲವೊ ಕಂಸ ನೀನು ಯಾರ ಮದುವೆಯನ್ನು ಸಂಭ್ರಮದಿಂದ ನಡೆಸಿದ್ದೀಯ, ನಿನ್ನ ತಂಗಿ ದೇವಕಿ, ಅವಳ ಗರ್ಭದಲ್ಲಿ ಜನಿಸುವ ಎಂಟನೆ ಮಗುವಿನಿಂದಲೆ ನಿನಗೆ ಮರಣ ಇದು ಸತ್ಯ.."
ಯಾರ ದ್ವನಿಯದು, ಅರಿವೆ ಆಗಲಿಲ್ಲ, ದೇವಕಿ ಮದುವೆಯ ಸಂಭ್ರಮ  ಮನಸನ್ನೆಲ್ಲ ಆಕ್ರಮಿಸಿದ್ದಾಗ ,ತನ್ನ ತಂಗಿ ದೇವಕಿ ಹಾಗು ತಾನೆ ಆಸ್ಥೆಯಿಂದ ಆರಿಸಿ ತಂದ ಅವಳ ವರ ವಸುದೇವ ಗಂಡು,ಇಬ್ಬರನ್ನು ಕೂಡಿಸಿ ಮೆರವಣಿಗೆಯ ರಥವನ್ನು ತಾನೆ ನಡೆಸಿದ್ದಾಗ, ಆಕಾಶದಿಂದ ಎಂಬಂತೆ ಆ ದ್ವನಿ ಜೋರಾಗಿ ಕೇಳಿಬಂದಿತು, ಯಾರೋ ಕಹಳೆಯೊಳಗೆ ಮುಖವಿಟ್ಟು ನುಡಿದಂತೆ ದೊಡ್ದ ದ್ವನಿ. ಒಂದು ಕ್ಷಣ ನಾನು ಸ್ಥಬ್ದನಾದೆ, ಸುತ್ತಲಿನ ಜನರೆಲ್ಲ ಅಶರೀರವಾಣಿ, ನಭಮಂಡಲದಿಂದ ಮೂಡಿಬಂದಿತು ಅನ್ನುವಾಗ ತನ್ನನ್ನು ಪೂರ್ಣವಾಗಿ ಆವರಿಸಿದ ಜೀವಭಯ ತಕ್ಷಣ ತನ್ನನ್ನು ನಂಬುವಂತೆ ಮಾಡಿತು.

  ಕಂಸನ ಮನಸು ಈಗ ಚಿಂತಿಸುತ್ತಿದೆ, ಅದು ನಿಜವಾಗಿಯು ಅಶರೀರವಾಣಿಯ?, ನಭದಿಂದಲೆ ಮೂಡಿಬಂದಿತ ಅಥವಾ ಯಾರಾದರು ಶತ್ರುಗಳ ಕುಚೋದ್ಯವ, ತನ್ನನ್ನು ಜೀವಭಯ ಹುಟ್ಟಿಸಿ ಕುಗ್ಗಿಸುವ ಉಪಾಯವ? ಈಗ ನಿರ್ದರಿಸಲಾಗುತ್ತಿಲ್ಲ.ಆಗಲೆ ಸಾವದಾನವಹಿಸಿ ಸರಿಯಾಗಿ ಶೋದ ನಡೆಸಿದ್ದಲ್ಲಿ ನಿಜ ಸಂಗತಿ ಬಯಲಾಗುತ್ತಿತ್ತು. ಇಷ್ಟು ವರ್ಷಗಳ ನಂತರ ಅದನ್ನು ವಿಚಾರಿಸಲು ಹೊರಟರೆ ತಾನು ನಗೆಪಾಟಲಿಗೆ ಈಡಾಗುತ್ತೀನಿ. ಆಗ ವಿವೇಕಿಯಂತೆ ವರ್ತಿಸದೆ ಅತಿಯಾಗಿ ಬೆದರಿಬಿಟ್ಟೆ ಅನ್ನಿಸಿತು.

  ನಂತರದ ಘಟನೆಗಳೆಲ್ಲ ಅವನ ಎದುರು ನೆರಳಿನಂತೆ ಹಾದುಹೋದವು,ಮದುವೆಯ ಸಂಭ್ರಮ ಕಳೆದು ಮಸಣದ ಮನೆಯಂತಾಯಿತು,ಹೆತ್ತ ತಂದೆಯನ್ನು ಸೆರೆಗೆ ತಳ್ಳಿ ತಾನು ರಾಜನಾಗಿದ್ದರು, ಹೆತ್ತವರೆ ತನ್ನನ್ನು ರಕ್ಕಸನೆಂದು ನಿರ್ದರಿಸಿದ್ದರು, ತಂಗಿಯ ವಿಷಯಕ್ಕೆ ತನ್ನ ಮನಸ್ಸು ಮೃದುವಾಗುತ್ತಿತ್ತು.ಅವಳ ನಿಲುವು ರೂಪಗಳೆ ಅಂತಹುದು. ಸೋತು ನಡೆಯುವ ಸ್ವಾಭಾವದವಳು.ತನ್ನ ಬಗ್ಗೆ ಅವಳಿಗೆ ಪ್ರೀತಿಯಿತ್ತೊ,ಭಯವೊ ತಿಳಿಯದು, ಆದರೆ ತಂದೆಯನ್ನು ಸೆರೆಗೆ ಹಾಕುವಾಗಲು ಅವಳು ತನ್ನ ಬಳಿ ಆ ವಿಷಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಅಂತಹ ತಂಗಿಯನ್ನು ಅವಳ ಗಂಡನನ್ನು ಕೊಲ್ಲಲ್ಲು ಕತ್ತಿ ಎತ್ತಿದೆ.

 ಅವಳು ಕಣ್ತುಂಬಿದಳು,ಅವಳ ಗಂಡನಾದರೊ ಜೀವ ಉಳಿಸುವಂತೆ ಬೇಡಿದ, ಅವಳು ಒಮ್ಮೆಯಾದರು ತನ್ನನ್ನೆ ಉಳಿಸೆಂದು ಬೇಡಲಿಲ್ಲ ಎಂದು ನೆನೆಯಿತು ಅವನ ಮನ.ಕಡೆಗೆ ದೇವಕಿಯ ಗಂಡನೆ ಒಪ್ಪಿಕೊಂಡಂತೆ, ತನ್ನ ಮಕ್ಕಳನ್ನೆಲ್ಲ ಒಪ್ಪಿಸುವ ಒಪ್ಪಂದದಂತೆ ತಂಗಿ ಹಾಗು ಅವಳ ಗಂಡನನ್ನು ಸೆರೆಗೆ ತಳ್ಳಲಾಯಿತು.ಹತ್ತು ಹನ್ನೊಂದು ವರ್ಷಗಳ ಅವದಿಯಲ್ಲಿ ಅವಳನ್ನು ನೋಡಲು ಹೋಗಿದ್ದು, ಅವಳು ಮಗುವಿಗೆ ಜನ್ಮ ಕೊಟ್ಟಾಗ ಮಾತ್ರ, ಅದು ಆ ಮಗುವನ್ನು ಸೆಳೆದು ಕೊಂದುಹಾಕಲು.

 ಮೊದಲೆಲ್ಲ ತಾನು ಮಗುವನ್ನು ಕೊಲ್ಲಲ್ಲು ಸೆರೆಮನೆಗೆ ಹೋದಾಗ ಅಳುತ್ತಿದ್ದಳು,ಶಪಿಸುತ್ತಿದ್ದಳು, ತನ್ನ ಮಗುವನ್ನು ಕೊಲ್ಲಬೇಡವೆಂದು ಬೇಡುತ್ತಿದ್ದಳು. "ಕೇವಲ ಎಂಟನೆ ಮಗುವಿನಿಂದ ತಾನೆ ನಿನಗೆ ಮರಣ ಇವನ್ನೆಲ್ಲ ಉಳಿಸು" ಎನ್ನುತ್ತಿದ್ದಳು.ಸಾಲು ಸಾಲಾಗಿ ನಾನು ಅವಳ ಮಗುವನ್ನು ಕೊಲ್ಲುತ್ತ ಹೋದಂತೆ ಕಡೆಗೆ ಅವಳು ಅಳು ನಿಲ್ಲಿಸಿದಳು.ಇದು ತನ್ನ ಕರ್ಮ ಎಂದು ನಿರ್ಣಯಿಸಿದ್ದಳೇನೊ. ಯಾವುದೊ ನರಭಕ್ಷಕ ಹುಲಿಬಂದು ಮಗುವನ್ನು ಹೊತ್ತೋಯ್ದಂತೆ ಇರುತ್ತಿದ್ದಳು.ಇನ್ನು ವಸುದೇವನೊ, ಅವನ ಪ್ರತಿಭಟನೆಯನ್ನು ತಾನು ಲೆಕ್ಕಿಸಲಿಲ್ಲ.

ಕಂಸನ ಮನ ಚಿಂತಿಸಿತು, ನನ್ನ ಮನಸ್ಸು ಹೇಗೆ ಅಷ್ಟೊಂದು ಕ್ರೂರವಾಯಿತು. ಒಡಹುಟ್ಟಿದವಳ ಮಕ್ಕಳನ್ನು, ಆಗ ತಾನೆ ಹುಟ್ಟಿದ ಬೊಮ್ಮಟೆಗಳನ್ನ ಯಾವ ಕರುಣೆಯು ಇಲ್ಲದೆ ಸೆರೆಮನೆಯ ಗೋಡೆಗೆ ಅಪ್ಪಳಿಸಿ, ಕತ್ತರಿಸಿ ಕೊಂದು ಹಾಕಿದೆ, ಅದು ಹೆಣ್ಣೊ ಗಂಡೊ ಎಂದು ಕೂಡ ನೋಡದೆ.ತನ್ನಲ್ಲಿ ಆಳವಾಗಿ ಹುದುಗಿದ್ದ ಮರಣದ ಭಯ ತನ್ನನ್ನು ಇಷ್ಟೊಂದು ಕಾಡಿಸಿತೆ.ತಾನು ನಿಜಕ್ಕು ನೆಮ್ಮದಿಯಾಗಿ ಮಲಗಿ ನಿದ್ದೆ ಮಾಡಿದ್ದಾದರು ಯಾವಾಗ?.
ಈಗ ದೇವಕಿ ಪುನಃ ಗರ್ಭಿಣಿ, ಅವಳ ಎಂಟನೆ ಮಗು, ಕಂಸನ ಮರಣಕ್ಕೆ ಕಾರಣವಾಗಬಹುದಾದ ಮಗು ಒಂದೆರಡು ದಿನದಲ್ಲಿ ಹುಟ್ಟಲಿದೆ. ಸೆರೆಮನೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ, ಪ್ರತಿಗಂಟೆಗೊಮ್ಮೆ ಅವಳ ಸ್ಥಿಥಿ ತಿಳಿಸಬೇಕೆಂದು. ಮಗುವಿಗೆ ಜನ್ಮ ನೀಡುವ ಕಾಲಕ್ಕೆ ಒಡನೆಯೆ ಅವನಿಗೆ ಸುದ್ದಿ ಕಳಿಸಬೇಕೆಂದು.ಪ್ರತಿದಿನ ಅವನು ಹೋಗಿ ನೋಡಿ ಬರುತ್ತಿದ್ದಾನೆ ಯಾವುದೆ ಮೋಸಕ್ಕೆ ಅವಕಾಶವಿರಬಾರದೆಂದು.

  ಮತ್ತೊಂದು ಮಿಂಚು ಆಕಾಶವನ್ನೆಲ್ಲ ಆವರಿಸಿತು. ಹಿಂದೆಯೆ ಬಂದ ಕರ್ಣಕಠೋರ ಗುಡುಗಿನ ಶಬ್ದ ಕಂಸನ ಎದೆಯನ್ನೆಲ್ಲ ವ್ಯಾಪಿಸಿ, ಒಳಗೆ ನಡುಕ ಹುಟ್ಟಿತ್ತು.ಗುಡುಗಿನ ಶಬ್ದ ಪೂರ್ತಿ ಅಡಗುವ ಮುನ್ನವೆ ಯಾರೊ ದಡ ದಡ ಮೆಟ್ಟಿಲು ಹತ್ತಿ ಬರುತ್ತಿರುವ ಶಬ್ದ. ದೀವಟಿಗೆಯ ಬೆಳಕಲ್ಲಿ ಹಿಂದೆ ನೋಡಿದ ಅವನು,ಸೆರೆಮನೆಯ ಇಬ್ಬರು ಕಾವಲುಗಾರರು, ಮಳೆಯಲ್ಲಿ ತೋಯ್ದು ನಡುಗುತ್ತಿದ್ದರು. ಇವನನ್ನು ಕಂಡು ವಂದಿಸಿ ನಿಂತರು. ಇವನು ಅವರತ್ತ ನೋಡಿದ.ಅವರಲ್ಲೊಬ್ಬ ನುಡಿದ "ಪ್ರಭು ದೇವಕಿ ದೇವಿಯವರು ಮಗುವಿಗೆ ಜನ್ಮವಿತ್ತರು", ಎದೆಯ ಮೂಲೆಯಲ್ಲಿ ಪ್ರಾರಂಬವಾದ ನೋವು ಎದೆಯನ್ನೆಲ್ಲ ಆಕ್ರಮಿಸುತ್ತಿರುವಂತೆ,ಭಯ ಅನ್ನುವುದು ದೇಹ ಮನಸ್ಸುಗಳನ್ನೆ ಆಕ್ರಮಿಸಿತು.ಕಾಲು ಕುಸಿಯುತ್ತಿದೆ ಅನ್ನಿಸಿದರು ಎದ್ದುನಿಂತ ಕಂಸರಾಜ. ಕೈಯಲ್ಲಿ ಕತ್ತಿ ಸಿದ್ದವಾಗಿಯೆ ಇತ್ತು, ಅವರ ಮಾತಿಗೆ ಏನನ್ನು ಹೇಳದೆ ತಾನೆ ಸೆರೆಮನೆಯತ್ತ ಹೊರಟ ಅವನನ್ನು ಕಂಡ ಸೆರೆಮನೆಯ ಕಾವಲುಗಾರರು ತಮ್ಮೊಳಗೆ ನಡುಗಿದರು.
--------------------------------------------------------------------------------------------------------------

 ನಡುರಾತ್ರಿ ಕಳೆದು ಕೆಲವು ಸಮಯವಾಗಿರಬಹುದು.ಸೆರೆಮನೆಯೆಲ್ಲ ಪಿಸುಮಾತಿನಿಂದ ತುಂಬಿದೆ. ಅಲ್ಲಲ್ಲಿ ದೀಪಗಳನ್ನು ಹಚ್ಚಿಡಲಾಗಿದೆ. ಹೊರಗೆ ಮಿಂಚು ಗುಡುಗಿನ ಆರ್ಭಟ. ಯಾವುದೆ ಪರಾಕುಗಳಿಲ್ಲದೆ, ಬೆಂಗಾವಲು ಪಡೆ ಜೊತೆಗಿಲ್ಲದೆ, ಕಂಸ ಒಬ್ಬನೆ ನುಗ್ಗಿಬಂದ. ಅವನ ಮುಖದಲ್ಲಿ ತುಂಬಿದ ಕ್ರೌರ್ಯವನ್ನು ನೋಡಲಾರದೆ ಕಾವಲುಗಾರರು ಮುಖ ಪಕ್ಕಕ್ಕೆ ತಿರುಗಿಸಿದರು.
ದೇವಕಿಯ ಕೋಣೆಗೆ ಅವನು ನುಗ್ಗಿದಂತೆ ಎದುರಿಗೆ ಬಂದ ವಸುದೇವ ,. ತನ್ನ ಭಾವಮೈದುನನ ಕಾಲಿನಹತ್ತಿರ ಬಗ್ಗಿ ಕುಳಿತು ಅವನನ್ನು ಪ್ರಾರ್ಥಿಸಿದ
"ಬೇಡ ಕಂಸ ಕ್ರೂರನಾಗಬೇಡ, ನಿನಗೆ ಎಲ್ಲ ಮಕ್ಕಳನ್ನು ಒಪ್ಪಿಸಿದ್ದೇನೆ, ಈಗ ಹುಟ್ಟಿರುವುದು ಹೆಣ್ಣು ಮಗು ಅದು ನಿನ್ನನ್ನೇನು ಮಾಡೀತು? ಅದನ್ನಾದರು ಉಳಿಸು"
ಕಂಸ ಕೊಂಚ ಆಶ್ಚರ್ಯಪಟ್ಟ "ಹೆಣ್ಣು ಮಗುವೆ!",  ಆದರೆ ಅವನು ಯಾರ ಮಾತು ಕೇಳಲು ಸಿದ್ದನಿರಲಿಲ್ಲ. ತನ್ನ ಸಾವಿಗೆ ಕಾರಣವಾಗಲಿರುವ ದೇವಕಿಯ ಸಂತಾನವೆ ಉಳಿಯಕೂಡದು. ಆಗ ತಾನೆ ಜನಿಸಿ ಕಣ್ಣುಮುಚ್ಚಿ ಮಲಗಿದ್ದ ಮಗುವಿನ ಮೇಲೆ ಹೊದೆಸಿದ್ದ ವಸ್ತ್ರವನ್ನು ಕಿತ್ತೆಸೆದ. ಎಚ್ಚೆತ್ತು ಕುಳಿತ ದೇವಕಿ ಕ್ರೂರದೃಷ್ಟಿಯಿಂದ ಅವನನ್ನು ದಿಟ್ಟಿಸಿದಳು.ತನ್ನ ಮಗುವನ್ನು ರಕ್ಷಿಸುವಂತ ತನ್ನ ಎರಡು ಕೈಯನ್ನು ಅದರ ಮೇಲೆ ಅಡ್ಡತಂದಳು.ಕಂಸ ಅಟ್ಟಹಾಸದಿಂದ ಅವಳ ಎರಡು ಕೈಯನ್ನು ಪಕ್ಕಕ್ಕೆ ಸರಿಸಿ, ಮಗುವಿನ ಬಲಬುಜಕ್ಕೆ ಕೈ ಹಾಕಿ ತನ್ನ ಒಂದೆ ಕೈಯಿಂದ ಮಗುವನ್ನು ಮೇಲೆ ಎತ್ತಿದ.
 
   ಕಣ್ಣು ಬಿಡದ ಮಗು ಯಾವ ಶಬ್ದವನ್ನು ಮಾಡಲಿಲ್ಲ,ಅದರ ನಾಲಿಗೆ ಮಾತ್ರ ತುಟಿಯನ್ನು ಸವರುತ್ತಿತ್ತು.ದೇವಕಿಯ ಯಾವ ಗೋಳನ್ನು ಕಿವಿಗೆ ಹಾಕಿಕೊಳ್ಳದೆ ಹೊರಬಂದ ಕಂಸ ವೇಗವಾಗಿ ಮೆಟ್ಟಿಲು ಹತ್ತುತ್ತ ಮೇಲಿನ ಅಂತಸ್ತಿಗೆ ಹೊರಟ. ಅವನನ್ನು ಯಾರು ಹಿಂಬಾಲಿಸಲಿಲ್ಲ, ಅಲ್ಲಿ ಏನು ನಡೆಯುತ್ತದೆ ಎಂದು ಎಲ್ಲರಿಗು ತಿಳಿದಿತ್ತು. ಮೇಲಿನ ಅಂತಸ್ತಿನ ಬಿಸಿಲುಚಾವಣಿಗೆ ಬಂದ ಕಂಸ , ಎಲ್ಲೆಲ್ಲು ಕತ್ತಲು ಆವರಿಸಿತ್ತು, ಮಿಂಚಿನ ಬೆಳಕು ಆಗಾಗ ಕಾಣಿಸುತ್ತಿತ್ತು.ಕ್ರೂರತನದಿಂದ ಮಗುವಿನ ಎರಡು ಕಾಲನ್ನು ಜೋಡಿಸಿ ತನ್ನ ಕೈಯಿಂದ ಬಲವಾಗಿ ಹಿಡಿದ, ಜೋರಾಗಿ ತಿರುಗಿಸಿ ತೂಗಿ, ಮಗುವನ್ನು ಗೋಡೆಗೆ ಆಪ್ಪಳಿಸುವಂತೆ ಎಸೆದ.....

ಆಶ್ಚರ್ಯ! ಗೋಡೆಗೆ ಬಡಿಯಬೇಕಿದ್ದ ಮಗು ಅವನ ಕೈಯಿಂದ ತಪ್ಪಿ, ಮೇಲೆ ಹಾರಿದಂತಾಯಿತು, ಮೇಲೆ ಹೋದಂತೆ ಮಗುವಿನ ಬದಲು ಇನ್ಯಾವುದೊ ರೂಪ ಗೋಚರಿಸುತ್ತಿದೆ! ಅವನ ಮನಸು ವಿಭ್ರಮೆಗೆ ಒಳಗಾಯಿತು. ಎದುರಿಗೆ ಕಾಣುತ್ತಿರುವ ದೇವತೆಯಂತ ರೂಪ ನಿಜವ ಇಲ್ಲ ತನ್ನ ಭ್ರಮೆಯ.ನಿಜವಾದರೆ ಅವಳು ಯಾರು ಮತ್ತು ಏಕೆ ಬಂದಿದ್ದಾಳೆ?. ತನ್ನ ಮರಣದ ಕ್ಷಣ ಈಗಲೆ ಬಂದಿತಾ? ಎಂದು ಕತ್ತಿಯನ್ನು ಎತ್ತಿ ಹೂಂಕರಿಸುತ್ತ ಕೇಳಿದ "ಯಾರು ನೀನು ನನ್ನ ಎದುರಿಗೆ ಹೇಗೆ ಬಂದೆ?"
ಸಂಪೂರ್ಣ ಖಾಲಿಯಾಗಿ ಬರಿ ಕತ್ತಲೆಯ ತುಂಬಿದ್ದ ಅಂತಸ್ತದು, ಅವಳ ನಗು ಉರುಳು ಉರುಳಾಗಿ ಅವನ ಕಿವಿಯನ್ನು ತುಂಬುತ್ತ ಅವನಲ್ಲಿ ಭಯವನು ಹುಟ್ಟಿಸುತ್ತಿದೆ.
"ಎಲವೊ ಕಂಸ ನಾನು ಮಾಯ, ವಿಷ್ಣುಮಾಯ. ನನ್ನನ್ನು ದುರ್ಗಿ ಎಂದು ಕರೆಯುವರು. ನಾನು ಯಾರು ಎಂಬುದಕ್ಕಿಂತ ಏಕೆ ಬಂದೆ ಎಂದು ತಿಳಿ,ನಿನ್ನ ಕಡೆಗಾಲ ಹತ್ತಿರ ಬಂದಾಯ್ತು.ನಿನ್ನ ಕೊಲ್ಲುವ ಶಿಶು ಭೂಮಿಗೆ ಆಗಲೆ ಬಂದಾಯ್ತು, ತುಂಬಿಹರಿಯುತ್ತಿರುವ ಯಮುನೆಯನ್ನು ದಾಟಿ ತನ್ನ ಮನೆ ಸೇರಿಯಾಯ್ತು. ನಿನ್ನ ದುಷ್ಟತನಕ್ಕೆ , ಕ್ರೌರ್ಯಕ್ಕೆ ಕೊನೆ ಹಾಕಲು ಇಲ್ಲಿಗೆ ಬರಲಿದೆ"
ಕಂಸ ಮತ್ತೆ ಕೃದ್ರನಾದ "ಎಲೆ ಮಾಯೆ, ನನ್ನನ್ನು ಕೊಲ್ಲುವ ಶಿಶು ಹುಟ್ಟಿದ ಮಾತ್ರಕ್ಕೆ ನಾನು ಅದರ ಬರವನ್ನು ನಿರೀಕ್ಷಿಸುತ್ತ ಕೂಡಲಾರೆ, ಹುಡುಕಿ ಆ ಮಗುವನ್ನು ಹುಡುಕಿ ಕೊಲ್ಲುವೆ. ಕಂಸನ ಶಕ್ತಿಗೆ ಆ ಮಗು ಎದುರೆ? ನಿನ್ನ ಮಾಯ ಶಕ್ತಿ ನನ್ನನ್ನೇನು ಮಾಡಲಾಗದು ಎಂದು ತಿಳಿ"

"ಅಯ್ಯೋ ಮೂರ್ಖ ನನ್ನ ಮಾಯೆಯ ಪರಿಯನ್ನು ನೀನು ಅರಿಯಲಾರೆ,ನಿನ್ನ ಸಾವನ್ನು ತಡೆಯುವೆ ಎಂಬ ಭ್ರಮೆಯಲ್ಲಿ ವಸುದೇವ ದೇವಕಿಯರನ್ನು ಸೆರೆಯಲ್ಲಿರಿಸಿದೆಯ? ಬುದ್ದಿಹೀನನೆ ಅವರನ್ನು ಒಂದೆ ಕೋಣೆಯಲ್ಲಿರಿಸಿ ಸಂಸಾರ ಮಾಡಲು ಏಕೆ ಬಿಟ್ಟೆ?, ಅವರಿಗೆ ಹುಟ್ಟುವ ಮಗುವನ್ನು ಕಾಯುತ್ತ ಏಕೆ ಕುಳಿತೆ?. ಅವರಿಬ್ಬರನ್ನು ಬೇರೆ ಬೇರೆ ಸೆರೆಮನೆಯಲ್ಲಿರಿಸಿ ಅವರಿಗೆ ಸಂತಾನವೆ ಆಗದಂತೆ ತಡೆಯಬಹುದಿತ್ತಲ್ಲವೆ. ನಿನಗೇಕೆ ಹೊಳೆಯಲಿಲ್ಲ ಅಥವ ನಿನ್ನ ಆಪ್ತರಾರು ಆ ಸಲಹೆ ಕೊಡಲಿಲ್ಲ ಏಕೆ?"
"ಹೌದು ನನಗೆ ಏಕೆ ಹೊಳೆಯಲಿಲ್ಲ " ಮಾಯೆಯನ್ನು ಪುನಃ ಕೇಳಿದ ಕಂಸ ಅಮಾಯಕನಂತೆ. ನಕ್ಕಳು ವಿಷ್ಣು ಮಾಯ ನಗುತ್ತ ಅಂದಳು "ಅದೇ ನಾನು ಎಂದು ತಿಳಿ".

   ಅವಳ ರೂಪ ಮಸುಕು ಮಸುಕಾಗಿ ಕರಗುತ್ತಿತ್ತು, ನಿದಾನವಾಗಿ ಮತ್ತೇನೊ ಹೊಳೆಯಿತು ಕಂಸನಿಗೆ " ತಡೆ ತಡೆ ಮಾಯ ಹೋಗಬೇಡ ನನ್ನನ್ನು ಕ್ರೂರಿ ಎಂದೆಯಲ್ಲವೆ, ದುಷ್ಟ ಎಂದು ಬಿರುದು ನೀಡಿದೆಯಲ್ಲವೆ? ಆದರೆ ಅದಕ್ಕೆ ನಾನು ಕಾರಣನೆ ಹೇಳು? ಪ್ರಕೃತಿಯಲ್ಲಿ ಹುಟ್ಟು ಸಾವನ್ನು ರಹಸ್ಯವೆನ್ನುತ್ತಾರೆ ಅದು ಮನುಷ್ಯನ ಅರಿವಿಗೆ ನಿಲುಕುವದಿಲ್ಲ. ಹೀಗಿರುವಾಗ ವಿಶ್ವದಲ್ಲಿ ಯಾರಿಗು ಇರದೆ ನನ್ನೊಬ್ಬನಿಗೆ ಮಾತ್ರ ಮರಣದ ಭವಿಷ್ಯವನ್ನು ಏಕೆ ಹೇಳಿದೆ?ದೇವಕಿಯ ಮಗನಿಂದಲೆ ನನಗೆ ಮರಣವೆಂದು ನೀನು ಮುಂದಾಗಿ ತಿಳಿಸದಿದ್ದರೆ ನಾನು ರಕ್ಕಸನಂತೆ ವರ್ತಿಸುತ್ತಿರಲಿಲ್ಲ ಅಲ್ಲವೆ?. ಅವಳನ್ನು ಸೆರೆಗೆ ತಳ್ಳಿ ಅವಳ ಮಕ್ಕಳನ್ನು ಕೊಲ್ಲುತಲು ಇರಲಿಲ್ಲ. ಮಾಯ, "ಜೀವ ಪ್ರತಿಯೊಬ್ಬರಿಗು ಪ್ರಿಯವಲ್ಲವೆ". ನನ್ನ ಜೀವ ಕಾಪಾಡಿಕೊಳ್ಳೂವುದು ನನ್ನ ಹಕ್ಕಲ್ಲವೆ , ಹೇಳು ನನಗೆ ಯಾವ ಕಾರಣಕ್ಕಾಗಿ ಮರಣದ ಭವಿಷ್ಯವನ್ನು ನುಡಿದೆ?"

ಮಾಯೆಯ ಸ್ವರೂಪ ಕರಗಿ ಕತ್ತಲಲ್ಲಿ ಒಂದಾಗಿ ಬೆರೆಯುತ್ತಿರುವಂತೆ ಕಂಸ ಜೋರಾಗಿ ಕೂಗಿತ್ತಿದ್ದ ಮತಿಗೆಟ್ಟವನಂತೆ "ನಿಲ್ಲು ಮಾಯ ಹೋಗಬೇಡ , ನನಗೆ ವಿಷಯ ತಿಳಿಸಿ ಹೋಗು". ಅವನ ದ್ವನಿ ಕೀರಲಾಗುತ್ತ ಹೋಗಿ ನಿಂತು ಹೋಯಿತು. ಸಂಪೂರ್ಣ ಕತ್ತಲಾವರಿಸಿತು. ಹೊರಗೆ ಮಳೆ ನಿಂತುಹೋಗಿ ಆಕಾಶ ಶುಭ್ರವಾಗುತ್ತಿತ್ತು. ಕಂಸ ಅಲುಗಾಡದಂತೆ ನಿಂತೆ ಇದ್ದ ಬೊಂಬೆಯಂತೆ.
---------------------------------------------------------------------------------------------

ನಿದಾನವಾಗಿ ಕತ್ತಲೆ ಕರಗಿ ಬೆಳಕು ಹರಿಯುತ್ತಿತ್ತು.ಮರಗಿಡಗಳಲ್ಲಿ ಪಕ್ಷಿಗಳ ಕಲವರ, ಹಾದಿಯಲ್ಲಿ ಹಸುಗಳ ಅಂಬಾ ಎಂಬ ಕೂಗು ಕೇಳುತ್ತಿರುವಂತೆ ಪೂರ್ವದಲ್ಲಿ ನಿದಾನವಾಗಿ ಕೆಂಪು ಮೂಡಿ ಬಾಲಸೂರ್ಯ ಹೊರಬರಲು ತಯಾರಿ ನಡೆಸಿದ್ದ. ಯಮುನಾ ನದಿಯನ್ನು ದಾಟಿ ಅತಿ ದೂರದಲ್ಲಿ , ಗೋಕುಲದಲ್ಲಿ ನಂದಗೋಪನ ಮನೆಯಲ್ಲಿ ಪುಟ್ಟ ಮಗುವಿನ ಅಳುವೊಂದು ಕೇಳುತ್ತಿದೆ. ಆಲಿಸಿ.... ... ನೀವು ಕೇಳಿ ಆ ಪುಟ್ಟ ಮಗುವಿನ ಅಳು....

No comments:

Post a Comment

enter your comments please