Saturday, August 25, 2012

ದೇವರಹಸ್ಯ


ಸಮುದ್ರದ ತೀರವೆ ಹಾಗೆ ತಟದಲ್ಲಿ  ಕುಳಿತರೆ ಸಾಕು ಮನಸು ಖಾಲಿಯಾಗಿಬಿಡುತ್ತದೆ.  ಸಮುದ್ರ ತೀರಗಳಲ್ಲಿ ಒಂಟಿಯಾಗಿ ಕುಳಿತರಂತು ಸಮಯ ಹೆಚ್ಚುಕಡಿಮೆ ಸ್ಥಗಿತವಾಗಿಬಿಡುತ್ತದೆ ಅನ್ನಿಸುತ್ತೆ.  ನಾನಲ್ಲಿ ಕುಳಿತು ಎಷ್ಟು ಹೊತ್ತಾಯಿತೊ ಅಂದಾಜು ಸಿಗಲಿಲ್ಲ. ಸುತ್ತಲು ಕತ್ತಲು ಆವರಿಸಿ ಅತ್ತ ಇತ್ತ ಓಡಾಡುತ್ತಿದ್ದ ಜನವೆಲ್ಲ ಕ್ರಮೇಣ ಕಡಿಮೆಯಾಗುತ್ತ , ನಾನು ಗಮನಿಸುವ ಹೊತ್ತಿಗೆ ನಾನು ಒಂಟಿಯಾಗಿ ಕುಳಿತಿದ್ದೆ.  ಸಮಯ ಎಷ್ಟಿರಬಹುದು ಎಂಬ ಯೋಚನೆ ಬಂದಿತು, ನನ್ನದು ಅದೊಂದು ಕೆಟ್ಟ ಅಭ್ಯಾಸ ಕೆಲವೊಮ್ಮೆ ಹೊರಗೆ ಅರಾಮವಾಗಿ ಹೋಗಬೇಕೆನಿಸಿದಾಗ ವಾಚ್ ಕಟ್ಟಲ್ಲ ಹಾಗು ಮೊಬೈಲ್ ಸಹ ಜೊತೆಗೆ ತೆಗೆದುಕೊಂಡು ಹೋಗಲ್ಲ.

ಸಂಜೆಯು ಹಾಗೆ ಆಯಿತು, ಹೋಟೆಲಿನ ರೂಮಿನಿಂದ ಸುಮ್ಮನೆ ಕಾಲಾಡಿಸಿ ಬರುವೆನೆಂದು ಹೊರಗೆ ಹೊರಟಾಗ ಬೆಳಗಿನಿಂದ ಸುತ್ತಿ  ಸುಸ್ತಾಗಿದ್ದ ಗೆಳೆಯರು, ’ನೀವು ಬೇಕಿದ್ದರೆ ಹೋಗಿ ಬನ್ನಿ ನಮಗೆ ಆಗಲ್ಲ’ ಅಂದುಬಿಟ್ಟರು.  ಬೆಂಗಳೂರಿನಿಂದ ನಾಲ್ವರು ಗೆಳೆಯರು  ಬಂದು ತಮಿಳುನಾಡಿನ ಮಹಾಬಲಿಪುರಂನ ಹೋಟೆಲ್ ನಲ್ಲಿ ರೂಮನ್ನು ಮಾಡಿದ್ದೆವು.  ಒಂದು ಬಾಡಿಗೆ ಟ್ಯಾಕ್ಸಿ ಹಿಡಿದು ಬೆಳಗಿನಿಂದ ಕಂಚಿ, ಚೆನೈ ಎಂದು ಸುತ್ತಿ ಸಂಜೆ ಬಂದ ನಂತರ ಅವರೆಲ್ಲ ರೂಮಿನಲ್ಲಿ ವಿರಮಿಸಿದರೆ ನನಗೆ ಅದೇಕೊ ಸಮುದ್ರದಡದಲ್ಲಿ ಸ್ವಲ್ಪ ಸಮಯ ಕಳೆಯಬೇಕೆಂದು ಅನ್ನಿಸಿ ಹೊರಟಿದ್ದೆ. ನಡಿಗೆಯಲ್ಲಿಯೆ ಸಮುದ್ರದಡ ಸೇರಬಹುದಾದಷ್ಟು ದೂರದಲ್ಲಿದ್ದೆವು.


ಮಹಾಬಲಿಪುರಂ ನ ಜನಬರಿತ ಸಮುದ್ರ ದಡ. ಅಲ್ಲಿಯ ಸಮುದ್ರದ ರೌದ್ರತೆ ನೋಡುವದರಲ್ಲಿ ಒಂದು ಆನಂದ. ನಾನು ಜನರಿಂದ ದೂರವಾದ ಸ್ಥಳ ಅರಸುತ್ತ   ಸುಮಾರು ಒಂದು ಕಿಲೋಮೀಟರಿಗಿಂತ ಜಾಸ್ತಿ ನಡೆದೆನೇನೊ, ಅಸ್ತಮಿಸುವ ಸೂರ್ಯನ ಬೆಳಕಿನ ಸೊಭಗಿನಲ್ಲಿ ಸಮುದ್ರವನ್ನು ದಿಟ್ಟಿಸುತ್ತ ಕುಳಿತು ಬಿಟ್ಟೆ. ಅದೆಷ್ಟು ಸಮಯವಾಗಿತ್ತೊ ತಿಳಿಯಲಿಲ್ಲ.

 ನಾನು ಎಚ್ಚೆತ್ತಾಗ ಸುಮಾರು ಕತ್ತಲೆ ಆಗಿತ್ತು. ‘ಬಹುಷಃ ತುಂಬಾ ಸಮಯವಾಯಿತು. ಹೋಟೆಲಿನಲ್ಲಿ ಗೆಳೆಯರು ಕಾಯುತ್ತ ಇರುತ್ತಾರೆ ‘ ಅನ್ನುವ ಪ್ರಜ್ಞೆಯ ಜೊತೆ ಎದ್ದು ನಿಂತೆ ವಾಪಾಸು ಹೋಗೋಣ ಎಂದು. ಅದೇಕೊ ಎಂದು ಇರದ ಗಲಿಬಿಲಿಯೊಂದು ಕಾಡಿತು. ಆದುದ್ದು ಇಷ್ಟೆ. ನಾನೀಗ ಯಾವ ದಿಕ್ಕಿಗೆ ನಡೆಯಬೇಕೆಂದು ತಿಳಿಯಲಿಲ್ಲ. ಸುತ್ತಲು ಮುತ್ತಿದ್ದ ಕತ್ತಲು. ಎದುರಿಗೆ ವಿಶಾಲ ಸಾಗರ. ನಕ್ಷತ್ರದ ಬೆಳಕಲ್ಲಿ ದಡಕ್ಕೆ ಬಂದು ಅಪ್ಪಳಿಸುತ್ತಿರುವ ಅಲೆಗಳ ದೃಷ್ಯ ಹಾಗು ಶಬ್ದ. ಯೋಚಿಸಿದೆ ನಾನು ಯಾವ ದಿಕ್ಕಿನಿಂದ ಇಲ್ಲಿ ಬಂದು ಕುಳಿತೆ ಎಂದು. ಅದೇಕೊ ಹೊಳೆಯಲೆ ಇಲ್ಲ. ಎದುರು ಸಾಗರವಿರುವದರಿಂದ ಆ ದಿಕ್ಕಂತು ಅಲ್ಲ . ಉಳಿದ ಮೂರು ದಿಕ್ಕಿನಲ್ಲಿ ನಾನು ಯಾವ ಕಡೆ ಸಾಗಲಿ. ಕಡೆಯ ಪಕ್ಷ ದೂರದಲ್ಲಿ ದೀಪದ ಬೆಳಕೇನಾದರು ಕಂಡೀತೊ ಎಂದು ಕತ್ತಲಿನಲ್ಲಿ ಕಣ್ಣರಳಿ ದೃಷ್ಟಿಸಿದೆ. ಊಹು ! ಯಾವ ಪ್ರಯೋಜನವು ಕಾಣುತ್ತಿಲ್ಲ.  ಅದೇನು ಅಲ್ಲಿ  ವಿಧ್ಯುತ್ ಕೈಕೊಟ್ಟೊತ್ತೊ ಏನೊ,    ಮತ್ತೆ ಅದೇನೊ ನಿರ್ಜನ ಯಾರನ್ನು ಕೇಳುವ ಹಾಗು ಇರಲಿಲ್ಲ. ಏನು ಮಾಡುವುದು ಎಂದು ಹೊಳೆಯಲಿಲ್ಲ. ಸರಿ ಹೇಗೆ ಯಾವ ದಿಕ್ಕು ಹಿಡಿದು ಹೋದರು ಊರಂತು ಸಿಕ್ಕೆ ಸಿಗುತ್ತದೆ, ನಂತರ ಹೋಟೆಲಿನ ದಾರಿ ಹಿಡಿದರಾಯಿತು ಎಂದು , ನಾನು ನಿಂತಿದ್ದ ದಿಕ್ಕಿನ ಬಲಕ್ಕೆ ನಡೆಯಲು ಪ್ರಾರಂಬಿಸಿದೆ.
 ಕಪ್ಪು ಕತ್ತಲಾದರು ನಕ್ಷತ್ರದ ಬೆಳಕು ಸಾಕಷ್ಟು ಇತ್ತು. ಅದೇಕೊ ಚಂದ್ರ ಸುಳಿವಿಲ್ಲ, ಅಮಾವಾಸ್ಯೆಯೊ ಅಥವ ಅವನು ಈದಿನ ಹುಟ್ಟುವ ಸಮಯ ಎಷ್ಟು ಗಂಟೆಗೆ ತಿಳಿದಿಲ್ಲ .  ಅದೇಕೊ ಮನಸ್ಸು ನೆನೆಸಿತು, ಹಿಂದೆಲ್ಲ,  ಉತ್ತರ ದಿಕ್ಕಿನಲ್ಲಿ ಇರುವ ನಕ್ಷತ್ರ  ಪೋಲ್ ಸ್ಟಾರ್ ಅಂದರೆ ದೃವನಕ್ಷತ್ರದ      ದಿಕ್ಕನ್ನು ಹಿಡಿದು ನಾವಿಕರು ತಮ್ಮ ದಾರಿಯ ದಿಕ್ಕನ್ನು ನಿರ್ದರಿಸುತ ಇದ್ದರಂತೆ   ಈಗ ನನಗೆ ಅದು ಸಹ ನೆರವಿಗೆ ಬಾರದು ಅನ್ನಿಸಿತು. ಮೊದಲಾಗಿ ನಾನು ನೆಲದ ಮೇಲೆಯೆ ಇದ್ದೆ. ಎರಡನೆಯದು ಒಮ್ಮೆ ನನಗೆ  ಆ ದೃವನಕ್ಷತ್ರ  ಕಾಣಿಸಿದರು ಸಹ ನನಗೆ ಅದು ಸಹಾಯವೇನು ಮಾಡಲಾರದು , ಏಕೆಂದರೆ ಮೂಲಭೂತವಾಗಿ ನಾನು ಎತ್ತ ಸಾಗಬೇಕೆಂದೆ ನನಗೆ ತಿಳಿದಿಲ್ಲ. ನಡೆಯುವುದು ಅಷ್ಟೇನು ಕಷ್ಟ ಅನ್ನಿಸುತ್ತಿರಲಿಲ್ಲ. ಸಮತಟ್ಟಾದ ಮರಳಿನ ನೆಲ, ಕತ್ತಲಿದ್ದರು ಸಹ ಸರಾಗವಾಗಿಯೆ ನಡೆಯುತ್ತಿದ್ದೆ.

 
  ಎಷ್ಟೋ ಹೊತ್ತು ನಡೆದ ಮೇಲೆಯೆ ಅನ್ನಿಸಿದ್ದು , ’ನಾನು ತಪ್ಪುದಾರಿಯಲ್ಲಿ ನಡೆಯುತ್ತಿದ್ದೇನೆ’ ಎಂದು, ನಾನು ಬರುವಾಗ ಕಾಣಿಸಿದ ಯಾವುದೆ ಗುರಿತಿನ ಕುರುಹುಗಲಾಗಲಿ, ಅಥವ ಅಂಗಡಿ ಸಾಲುಗಳಾಗಲಿ ಕಾಣಲಿಲ್ಲ.  ಎಂತದೊ ಹೆಚ್ಚು ಕಡಿಮೆಯಂತು ಆಗಿತ್ತು. ಅಲ್ಲದೆ ನಾನು ಸಾಕಷ್ಟು ಸಮಯ ನಡೆದಿದ್ದೆ. ಹೀಗೆ ಎಷ್ಟು ಸಮಯ ನಡೆಯುವುದು ಅರ್ಥವಾಗುತ್ತಿಲ್ಲ, ಒಬ್ಬರಾದರು ಮನುಷ್ಯರ ಕುರುಹಾಗಲಿ, ಮನೆ ಅಂಗಡಿಯ ಯಾವುದೆ ಕಟ್ಟಡಗಳಾಗಲಿ ಕಾಣುತ್ತಿಲ್ಲ. ಅಥವ ನಡೆಯುವುದು ನಿಲ್ಲಿಸಿ ನಾನು ಬಂದ ದಿಕ್ಕಿನಲ್ಲಿಯೆ ಪುನಃ  ವಾಪಸ್ಸು ನಡೆಯುವುದು ಸರಿ ಎಂದು ಅನ್ನಿಸಿತು.

 ಆದರೆ ಮತ್ತೊಂದು ಅನುಮಾನವು ಕಾಡಿತು, ಈಗ ನಾನು ಎಷ್ಟು ಕಾಲ ನಡೆದಿದ್ದೆ ಎಂದು ಅಂದಾಜು ತಪ್ಪಿತ್ತು, ಪುನಃ ನಡೆದರು ನಾನು ಕುಳಿತ್ತಿದ್ದ ಜಾಗ ಸಿಗುವುದು ಅದನ್ನು ನಾನು ಗುರುತಿಸುವುದು ದುಸ್ತರ ಎಂದು ಅನ್ನಿಸತೊಡಗಿತು.
 
ಕತ್ತಲಿನಲ್ಲಿ ಸಮುದ್ರದ ಅಲೆಗಳ ಶಬ್ದ ಹೊರತುಪಡಿಸಿದರೆ ಯಾವ ಶಬ್ದವು ಇಲ್ಲ. ನಕ್ಷತ್ರಗಳ ಮಿಣುಕು ಬೆಳಕಿನಲ್ಲಿ ಸಮುದ್ರದ ಹೊರತಾಗಿ ಮತ್ತೇನು ಕಾಣುತ್ತಿಲ್ಲ . ಬಲಬಾಗದಲ್ಲಿ ಎತ್ತರಕ್ಕೆ ಹತ್ತಿ ಹೋಗಬಹುದಾದ ದಾರಿಯೊಂದು ಕಾಣಿಸಿತು. ನುಣುಪಾದ ಕಲ್ಲಿನಿಂದ ಕಟ್ಟಿದ ಕಾಪೋಂಡಿನ ದೊಡ್ಡ ಗೋಡೆಯ ನಡುವೆ ಒಳ ಹೋಗಲು ಗೇಟನಂತಹ ಬಾಗಿಲು ಒಂದು ಕಾಣಿಸಿತು. ಸದ್ಯ ಎಂತದೊ ಒಂದು ಕಾಣಿಸಿತಲ್ಲ. ಕಡೆ ಪಕ್ಷ ಒಳಗೆ ಯಾರಾದರು ಮನುಷ್ಯರು ಎಂದು ಸಿಕ್ಕರೆ ಅವರ ಜೊತೆ ಮಾತನಾಡಿ ಮಹಾಬಲಿಪುರಂನ ಹೋಟೆಲಿನ ದಾರಿ ಹಿಡಿಯಬಹುದು.

 ಒಳಹೋದಾಗ ಅಕ್ಕ ಪಕ್ಕ ಬೆಳೆದಿರುವ ಹೂವಿನ ಹಣ್ಣಿನ ಗಿಡಗಳ ನಡುವೆ ಇರುವ ಸಣ್ಣ ದಾರಿಯಲ್ಲಿ ನಡೆಯುತ್ತಿದ್ದೆ. ಬಹುಷ ಬಂಗಲೆಯ ತರದ ಮನೆ ಇರಬಹುದು ದೊಡ್ಡದಾದ ಕಾಂಪೋಡ್ . ಅಲ್ಲದೆ ಇದ್ದಕ್ಕಿದಂತೆ ಕಾಣಿಸಿದ ಅರ್ಧ ಚಂದ್ರ ನನ್ನಲ್ಲಿ ಮತ್ತೆ ಗಲಿಬಿಲಿ ಮೂಡಿಸಿದ. ಇಲ್ಲಿಯವರೆಗು ಚಂದ್ರ ಮೋಡಗಳ ಮರೆಯಲ್ಲಿದ್ದನ ಅಥವ ಈಗ ಹುಟ್ಟಿ ಬರುತ್ತಿದ್ದಾನ ಅರ್ಥವಾಗಲಿಲ್ಲ. ಭೂಮಿ ಮತ್ತು ಗಗನ ಸೇರುವ ದಿಗಂತದ ಅಂಚಿನಿಂದ ಸುಮಾರು ಮೇಲೆ ಅರ್ಧ ಚಂದ್ರನಿದ್ದ   ಮತ್ತು ಆ ಬೆಳಕಿನಲ್ಲಿ ನಾನು ನಿರಾಂತಕವಾಗಿ ನಡೆದೆ. ಅದೇನೊ  ಆ ಆವರಣದ ಒಳಗೆ ಸಹ ವಿಧ್ಯುತ್ ಇರುವುದು ಕಾಣಲಿಲ್ಲ.

ನನಗೆ ಮೊದಲಿಗೆ ಅದೇನು ಮನೆಯೊ, ಅಥವ ಹೋಟೆಲ್ ಆವರಣವೊ , ರೆಸಾರ್ಟೋ ತಿಳಿಯಲಿಲ್ಲ. ಒಳಗೆ ಕಲ್ಲು ಹಾಸಿದ ಕಾಲುದಾರಿಯಲ್ಲಿ ಸ್ವಲ್ಪ ಕಾಲ ನಡೆದಾಗ ಎದುರಿಗೆ ಬಿಳಿಯ ಅಮೃತ ಶಿಲೆಯಲ್ಲಿ ಕಟ್ಟಿರಬಹುದು ಎನ್ನುವಂತ ಕಟ್ಟಡ ಒಂದು ಕಾಣಿಸಿತು.  ನಕ್ಷತ್ರ ಚಂದ್ರನ ಬೆಳಕಲ್ಲಿ ಹಾಗೆ ಕಾಣುತ್ತಿತ್ತು ಹೊರತಾಗಿ ಅದೇನು ಅಮೃತ ಶಿಲೆಯ ಕಟ್ಟಡವಲ್ಲ ಅನ್ನಿಸುತ್ತೆ. ನನಗೆ ಬೇರೆ ದಾರಿ ಇರಲಿಲ್ಲ, ಒಳಗೆ ಹೋಗಿ ಯಾರಾದರು ಸಿಗುತ್ತಾರೆ ಎಂದು ವಿಚಾರಿಸಲೆ ಬೇಕಿತ್ತು. ನನ್ನ ಸಹನೆ ಮೀರುತ್ತಿತ್ತು, ಕಡೆಗೆ ಮನುಷ್ಯರಲ್ಲದೆ ಹೋದರು ಯಾವುದಾದರು ದೆವ್ವವೊ ಪ್ರಾಣಿಯೊ ಮತ್ಯಾರಾದರು ಸರಿಯೆ ನನಗೆ ಮಾತನಾಡಿಸಲು ಸಿಕ್ಕರ ಸಾಕಿತ್ತು

"ತಾವು ಯಾರು?"

ಎಂಬ ಪ್ರಶ್ನೆ ನನ್ನ ಕಿವಿಗೆ  ಇದ್ದಕ್ಕಿದ್ದಂತೆ ಕೇಳಿಸಿತು. ಪಕ್ಕಕ್ಕೆ ತಿರುಗಿ ನೋಡಿದೆ. ಕಾಲುದಾರಿಯ ಪಕ್ಕ ಅಲಂಕಾರಕ್ಕೆಂದು ಬೆಳೆಸಿದ್ದ ಮರದ ಕೆಳಗೆ ವ್ಯಕ್ತಿಯೊಬ್ಬರು ನಿಂತಿದ್ದರು. ಸರಿಸುಮಾರು ನನಗಿಂತ ಅರ್ದ ಅಡಿ ಎತ್ತರದ ವ್ಯಕ್ತಿತ್ವ. ಗಿಡದ ನೆರಳು ಬಿದ್ದ ಪರಿಣಾಮ ಮುಖ ಅಸ್ವಷ್ಟವಾಗಿತ್ತು. ಯಾರೆಂದು ನನಗಂತು ತಿಳಿಯಲಿಲ್ಲ. ಆದರು ಹೇಳಿದೆ

"ಕ್ಷಮಿಸಿ, ನಾನು ದಾರಿ ತಪ್ಪಿಸಿಕೊಂಡಿದ್ದೇನೆ, ಸಮುದ್ರ ದಡಕ್ಕೆ ಎಂದು ಬಂದವನು , ಕತ್ತಲಾಗುವವರೆಗು ಕುಳಿತುಬಿಟ್ಟೆ, ಈಗ ಮಹಾಬಲಿಪುರಂ ಗೆ ಹೋಗಬೇಕಿದೆ, ಸಹಾಯ ಮಾಡುತ್ತೀರ" ನಾನು ಕನ್ನಡದಲ್ಲಿಯೆ ಕೇಳಿದ್ದೆ.

ಒಂದು ಕ್ಷಣ ಆ ಕಡೆಯಿಂದ ಎಂತದು ಉತ್ತರವಿಲ್ಲ. ನಂತರ ಎದುರಿಗಿದ್ದ ಕಟ್ಟಡದತ್ತ ಕೈತೋರಿಸುತ್ತ ನುಡಿದ ಅವ
"ಒಳಗೆ ಹೋಗಿ, ಅಲ್ಲಿರುವವರನ್ನು ಕೇಳಿ" ಶುದ್ದ ಕನ್ನಡದಲ್ಲಿ ಉತ್ತರ ಬಂದಿದ್ದು ನನಗಂತು ಜೀವ ತಣ್ಣಗಾಯ್ತು ಅನ್ನಿಸಿತು.

ಕಟ್ಟಡದ ಒಳಗೆ ಹೊರಟೆ. ವಿಶಾಲವಾದ ಮುಂಬಾಗಿಲು. ಹೆಜ್ಜೆಯನ್ನು ಒಳಗೆ ಇಡುವಾಗಲೆ , ಮನಸಿಗೆ ನಾಟಿದ್ದು ಅದರ ವೈಶಾಲ್ಯ. ಅತಿ ದೊಡ್ಡದಾದ ಹಜಾರವದು. ಅತಿ ಎತ್ತರದಲ್ಲಿರುವ ಮಾಡು. ಸಾಮಾನ್ಯ ಮನೆಯಲ್ಲಿ ಮಾಡು ಎಂಟರಿಂದ ಹತ್ತು ಅಡಿ ಎತ್ತರದಲ್ಲಿರುತ್ತದೆ ಇಲ್ಲಿ ನನಗೆ ಅದನ್ನು ಸರಿಯಾಗಿ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಮಧ್ಯದಲ್ಲಿನ ನಾಲಕ್ಕು  ಕಂಬಗಳು ಮಲೆನಾಡಿನ ತೊಟ್ಟಿ ಮನೆಯನ್ನು ನೆನಪಿಸಿದರು ಅದಕ್ಕೆ ಈ ಮನೆಯನ್ನು ಹೋಲಿಸುವಂತಿಲ್ಲ. ಹೊರಗಿನಂತೆ ಒಳಗು ಸಹ ಬಿಳಿಯ ಕಲ್ಲಿನಿಂದ ಕಟ್ಟಲ್ಪಟ್ಟಿದ್ದು. ಬಿಳಿಯ ಗೋಡೆ, ಹಾಗು ಬಿಳಿಯ ಶಿಲೆಯ ನೆಲ ಒಂದು ಅಪರೂಪದ ವಾಸ್ತುವನ್ನು ಎತ್ತಿ ತೋರಿಸುತ್ತಿತ್ತು. ಇರುವುದು ಸ್ವಲ್ಪವೆ ಬೆಳಕಾದರು, ಪ್ರಜ್ವಾಲ್ಯಮಾನವಾಗಿ ತಂಪಾಗಿ ಒಳಗೆಲ್ಲ ಹರಡಿದಂತಿತ್ತು.

 ಒಳಗೆ ಬಂದ ನಾನು ಯಾವ ಕಡೆ ಹೋಗಬೇಕು, ಯಾರನ್ನು ಕಾಣಬೇಕೆಂಬ ಯೋಚನೆಯಲ್ಲಿ ನಿಂತೆ.

"ಹೀಗೆ ಬನ್ನಿ, ತಾವು  ಹೋಗಬೇಕಾದ ದಾರಿ ತಪ್ಪಿಸಿಕೊಂಡಿದ್ದೀರಂತೆ"  ಗಂಭೀರವಾದ ಸ್ವರ ಕೇಳಿಸಿತು.

 ದ್ವನಿ ಬಂದತ್ತ ತಿರುಗಿ ನೋಡಿದೆ. ಸುಮಾರು ಆರು ಅಡಿಯಷ್ಟು ಎತ್ತರವಿರಬಹುದಾದ ವ್ಯಕ್ತಿತ್ವ, ತಿಳಿನೀಲಿ ಬಣ್ಣದ ಹೊಸವಿನ್ಯಾಸದಲ್ಲಿ ಹೊಲೆಸಿದ ಉಡುಪಿನಲ್ಲಿ , ಮುಖದಲ್ಲಿ ಆಕರ್ಷಕ ನಗುವಿನೊಡನೆ ನಿಂತಿದ್ದ. ಒಂದು ಕ್ಷಣ ನನಗೆ ಅಚ್ಚರಿಯಾಯಿತು. ನಾನು ಹೊರಗೆ ಆ ವ್ಯಕ್ತಿಗೆ ಹೇಳಿದ್ದನ್ನು, ಈತನಿಗೆ ಯಾರು ಹೇಳಿದರು ? . ಬಹುಷಃ ಹೊರಗಿರುವಾತ ಇವನಿಗೆ ಮೊಬೈಲ್ ಮೂಲಕ ತಿಳಿಸಿರಬಹುದು. ಅಥವ ಇವನೆ ಕಿಟಕಿಯ ಪಕ್ಕವೊ ಎಲ್ಲೊ ನಿಂತು ಕಿವಿಗೆ ಬಿದ್ದಿರಬಹುದು ಅನ್ನಿಸಿತು.

"ನಿಮ್ಮ ಮಾತು ನಿಜ, ನಾನು ಮಹಾಬಲಿಪುರಂಗೆ ಹೋಗಬೇಕಾದವನು. ಸಮುದ್ರದಡದಲ್ಲಿ ನಡೆಯುತ್ತ ದೂರಬಂದು ಬಿಟ್ಟಿದ್ದೀನಿ ಅನ್ನಿಸುತ್ತಿದೆ. ನನಗೆ ಹೇಗೆ ಹೋಗಬೇಕೆಂದು ತಿಳಿಯುತ್ತಿಲ್ಲ. ಸಹಾಯ ಮಾಡಬಲ್ಲಿರ?" ಎಂದೆ.

"ಆಗಲಿ ಬಿಡಿ ಅದಕ್ಕೇನು, ನಿಮಗೆ ನಾನು ಏನು ಸಹಾಯ ಮಾಡಬಲ್ಲೆ ಎಂದು ಯೋಚಿಸೋಣ. ಈಗ ಒಳಗೆ ಬನ್ನಿ " ಎನ್ನುತ್ತ ಹೊರಟ.

 ಇದೇನು ಮಹಾಬಲಿಪುರಂಗೆ ದಾರಿ ಕೇಳಿದರೆ ಏನು ಸಹಾಯ ಮಾಡಬಲ್ಲೆ ಎಂದು ಯೋಚಿಸೋಣ ಎನ್ನುತ್ತಿದ್ದಾರೆ ಈತ. ಬಹುಷಃ ನೋಡಲು ತುಂಬಾ ಒಳ್ಳೆಯವರಂತೆ ಕಾಣುತ್ತಿದ್ದಾರೆ. ತೀರ ದಾರಾಳಿಯಾದರೆ ಅವರೆ ತಮ್ಮ ವಾಹನದಲ್ಲಿ ನನ್ನನ್ನು ಬಿಟ್ಟು ಬರುವ ಏರ್ಪಾಡು ಮಾಡಬಹುದು. ಅಥವ ಕಡೆಯ ಪಕ್ಷ ಅಲ್ಲಿಗೆ ತಲುಪುವುದು ಹೇಗೆಂದು ತಿಳಿಸಬಹುದು. ಅನ್ನಿಸಿತು. ಅವರ ಹಿಂದೆ ನಡೆದೆ. ಅದು ಒಳಗಿನ ಒಂದು ಕೋಣೆ. ಅದೆ ಬಿಳಿಯದೆ ಕಲ್ಲುಗಳನ್ನು ಬಳಸಿದ್ದಾರೆ, ಅತ್ಯಂತ ಆಕರ್ಷಕ ವಿನ್ಯಾಸದ ಕೋಣೆ. ಮಧ್ಯದಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳು. ನನಗೆ ಒಂದು ಸುಖಾಸನ ತೋರುತ್ತ, ಅವರು ನಡೆದು ಒಂದು ಆಸನದಲ್ಲಿ ಕುಳಿತರು. ಅವರ ಎದುರಿನ ಮೇಜಿನ ಮೇಲೆ ಅದೆಂತದೊ ದೊಡ್ಡ ಗಾತ್ರದ ಪುಸ್ತಕ.  ಅವರ ಹಿಂಬಾಗದಲ್ಲಿನ ಮರದಹಲಗೆಯಿಂದ ಮಾಡಿದ, ಆಕರ್ಷಕ ಪುಸ್ತಕಗಳನ್ನು ಇಡುವ ಸ್ಥಳ. ಆದರೆ ಅದರಲ್ಲಿ ಕೇವಲ ನಾಲಕ್ಕು ಅವರ ಎದುರಿಗೆ ಇರುವಂತದೆ ಪುಸ್ತಕಗಳನ್ನು ಜೋಡಿಸಿ ಇಡಲಾಗಿತ್ತು.

"ಹೇಳಿ ನಿಮಗೆ ಇಲ್ಲಿಗೆ ಬರಲು ಹೇಗೆ ಸಾದ್ಯವಾಯಿತು" ನಗುತ್ತ ಕೇಳಿದರು. ನನಗೆ ಆಶ್ಚರ್ಯ ಆದರು ನುಡಿದೆ

"ಹೇಳಿದೆನಲ್ಲ ಮಹಾಬಲಿಪುರಂಗೆ ನಾವು ನಾಲ್ವರು ಗೆಳೆಯರು ಬಂದಿದ್ದೆವು. ಸಂಜೆ ನಾನೊಬ್ಬನೆ ಸಮುದ್ರದಡಕ್ಕೆ ಹೊರಟೆ. ಸ್ವಲ್ಪ ಏಕಾಂತ ಅರಸುತ್ತ, ನಡೆಯುತ್ತ ದೂರ ಬಂದು ಒಂಟಿಯಾಗಿ ಕುಳಿತೆ. ಕತ್ತಲು ಕವಿದಿದ್ದನ್ನು ಗಮನಿಸಲಿಲ್ಲ. ನಂತರ ಹಿಂದಿರುಗಿ ಹೋಗಲು ಎಂತದೊ ಗೊಂದಲ ಕಾಡಿತು. ದಾರಿ ತಪ್ಪಿಸಿಕೊಂಡೆ ಅನ್ನಿಸುತ್ತೆ"
"ದಾರಿ ತಪ್ಪಿಸಿಕೊಂಡಿರಿ ಆದರೆ ತಪ್ಪು ದಾರಿಯಲ್ಲೇನು ಬರಲಿಲ್ಲ" ಎನ್ನುತ್ತ ಅವರು ನಕ್ಕರು.

ನನ್ನ ಮನಸಿಗೆ ಏನಾದರು ಕುಡಿಯಬಹುದೆ ಎಂದು ಅನ್ನಿಸಿತು,ಅದೇನೊ ಸ್ವಲ್ಪ ಸಂಕೋಚ ಬಿಟ್ಟು ಕೇಳಿದೆ
"ಇಲ್ಲಿ ಕುಡಿಯಲು ಏನಾದರು ಸಿಕ್ಕ ಬಹುದೆ ಕಾಫಿ ಟಿ  ಏನಾದರು" ಎಂದೆ. ಅವರು ಸ್ವಲ್ಪ ಮೌನವಾಗಿದ್ದರು.
"ಅವೆಲ್ಲ ಇಲ್ಲಿ ಸಿಕ್ಕುವುದು ಸ್ವಲ್ಪ ಅನುಮಾನವೆ, ಆದರು ಸ್ವಲ್ಪ ಯೋಚಿಸಿ ಹೇಳಿ, ನಿಮಗೆ ನಿಜವಾಗಿಯು ಕಾಫಿ ಅಥವ ಟಿ ಕುಡಿಯಬೇಕು ಅನ್ನಿಸುತ್ತಿದೆಯ, ದೇಹಕ್ಕೆ ಅದರ ಅಗತ್ಯವಿದೆಯ?"
ನನಗೆ ಆಶ್ಚರ್ಯದ ಜೊತೆಗೆ ಸ್ವಲ್ಪ ಮುಖಭಂಗವಾಗಿತ್ತು. ಆದರು ಯೋಚಿಸಿದೆ ಅವರು ಹೇಳಿದಂತೆ, ನನಗೆ ಬಾಯರಿಕೆಯಾಗಲಿ, ಅಥವ ಏನಾದರು ಕುಡಿಯುವ ಅಗತ್ಯವಾಗಲಿ ದೇಹಕ್ಕೆ ಇದೆ ಅನ್ನಿಸಲಿಲ್ಲ. ಕಾಫಿ ಕುಡಿದು ತುಂಬಾ ಹೊತ್ತಾಯಿತು ಎಂದು ಮನಸಿಗೆ ಅನ್ನಿಸಿತ್ತು ಅಷ್ಟೆ. ಅದೇನೊ ದೇಹ ಹಗುರವಾಗಿದ್ದು  ಚಟುವಟಿಕೆಯಾಗಿತ್ತು.  ಬಾಯರಿಕೆಯು ಇರಲಿಲ್ಲ. ನನಗೆ ಅನ್ನಿಸಿತು ಅವನು ಹೇಳಿದ್ದರಲ್ಲಿ ಸತ್ಯವಿತ್ತು, ನನಗೆ ಯಾವುದೆ ಅಹಾರದ ಅಥವ ಪೇಯದ ಅವಶ್ಯಕತೆ ಸದ್ಯಕ್ಕೆ ಇರದೆ ನನ್ನ ಕೋರಿಕೆ ಕೇವಲ ಮಾನಸಿಕ ಅಗತ್ಯವಾಗಿತ್ತು.
ನಿದಾನಕ್ಕೆ ಹೇಳಿದೆ
"ನಿಜ ಅಗತ್ಯವಿಲ್ಲ ಅನ್ನಿಸುತ್ತೆ, ಅದೇನೊ ಕಾಫಿ ಕುಡಿದು ತುಂಬಾ ಸಮಯವಾಗಿದ್ದು ಹಾಗೆ ಬಯಕೆಯಾಯಿತು ಅನ್ನಿಸುತ್ತೆ ಬಿಡಿ"

ಅವನು ನಕ್ಕ.
"ನಿಜಕ್ಕು ಮನುಷ್ಯನ ಸಮಸ್ಯೆ ಇದೆ ನೋಡಿ. ಅವನಿಗೆ ಅಗತ್ಯವಿದೆಯೊ ಇಲ್ಲವೊ ಆದರೆ ಮನಸಿಗೆ ಬೇಕೆನಿಸಿದ ಕಾರಣಕ್ಕೆ ಕುಡಿಯುತ್ತಾನೆ ಅಥವ ತಿನ್ನುತ್ತಾನೆ. ಇದನ್ನೆಲ್ಲ ಕಾಣುವಾಗ ನಾವು ಭೂಮಿಯ ಜೀವಿಗಳನ್ನು ಸ್ಥೂಲವಾಗಿ ಎರಡು ಬಾಗವಾಗಿ ವಿಂಗಡಿಸಬಹುದು ಅನ್ನಿಸುತ್ತೆ. ದೈಹಿಕ ಅಗತ್ಯಕ್ಕೆ ಹೊಂದಿಕೊಂಡ ಚಟುವಟಿಕೆ , ಮತ್ತು ಮನಸಿನ ಅಗತ್ಯಕ್ಕೆ ಹೊಂದಿಕೊಂಡ ಚಟುವಟಿಕೆಯ ಪ್ರಾಣಿಗಳು ಎಂದು."

ನನಗೆ ಕುತೂಹಲ ಎನಿಸಿತು "ಸ್ವಲ್ಪ ಬಿಡಿಸಿ ಹೇಳಬಹುದಾ?" ಎಂದೆ. ಅವನು ನಗುತ್ತ

"ಅದಕ್ಕೇನು, ನಾನು ಹೇಳಿದ್ದು ಹೀಗೆ ನೋಡಿ, ಮನುಷ್ಯನನ್ನು ಹೊರತುಪಡಿಸಿ ಬೇರೆ ಪ್ರಾಣಿಗಳ ಚಟುವಟಿಕೆಗಳೆಲ್ಲ ದೈಹಿಕ ಅಗತ್ಯವನ್ನು ಅನುಸರಿಸಿಯೆ ಇರುತ್ತದೆ, ಅಂದರೆ ಹಸಿವಿಗಾಗಿ ಅಹಾರ ಹುಡುಕುವುದು ಅಥವ ಬೇಟೆ ಆಡುವುದು. ಬಾಯರಿಕೆಗಾಗಿ ನೀರು ಕುಡಿಯುವುದು. ಮಳೆ ಅಥವ ಬಿಸಿಲ ರಕ್ಷಣೆ ಅಥವ ಬೇರೆ ಪ್ರಾಣಿಗಳ ಆಕ್ರಮಣ ತಪ್ಪಿಸಲು ಗುಹೆ, ಪೊದೆ , ಗೂಡುಗಳಂತ ರಚನೆ. ಕೆಲವೊಮ್ಮೆ ಅಹಾರ ಸಂಗ್ರಹಣೆ, ಮತ್ತು ತಾನು ಇಷ್ಟಪಟ್ಟ ಪ್ರಾಣಿಯನ್ನು  ಕೂಡುವುದು ಅಥವ ಅದಕ್ಕಾಗಿ ಹೊಡೆದಾಟ ಇಷ್ಟಕ್ಕೆ ಮುಗಿಯುತ್ತದೆ ಅಲ್ಲವೆ ? "

ಸ್ವಲ್ಪ ಕಾಲ ಮೌನ ಮತ್ತೆ ಮುಂದುವರೆಸಿದರು ಆತ

"ಆದರೆ ಮನುಷ್ಯನನ್ನು ನೋಡಿ, ಆತ ವ್ಯವಸಾಯವನ್ನು ಕಲಿತ್ತಿದ್ದರು, ಅಹಾರವನ್ನು ಸಂಗ್ರಹಿಸುತ್ತಾನೆ,  ಅಹಾರಕ್ಕಾಗಿ ಕುರಿ, ಕೋಳಿಯಂತ ಪ್ರಾಣಿಗಳನ್ನು ಸಾಕಿದರು , ಕಾಡಿನಲ್ಲಿ ಚಟಕ್ಕೆ ಬೇಟೆಯಾಡುತ್ತಾನೆ. ತಾನಾಗಲೆ ಒಂದು ಮನೆಯಲ್ಲಿ ಸುರಕ್ಷಿತವಾಗಿದ್ದರು, ಮುಂದಿನ ಪೀಳಿಗೆಗಾಗಿ ಎಂದು ಮತ್ತೆ ಮನೆ, ಜಾಗ ಹಣ ಎಲ್ಲಕ್ಕು ಆಸೆ ಬೀಳುತ್ತಲೆ ಇರುತ್ತಾನೆ, ಅವನ ಎಲ್ಲ ಚಟುವಟಿಕೆಗಳು ಮನಸಿನ ಪ್ರೇರಣೆಯೆ ಹೊರತು, ದೈಹಿಕ ಅಗತ್ಯವಲ್ಲ. ಮತ್ತೆ ಅಹಾರವನ್ನೆ ನೋಡಿ , ಹೊಟ್ಟೆ ತುಂಬಿದ್ದರು ಸ್ನೇಹಿತರು ಸಿಕ್ಕರೆ ಮತ್ತೇನಾದರು ತಿನ್ನಬಲ್ಲ. ಹಸಿವಿಲ್ಲದಿದ್ದರು ಊಟದ ಸಮಯವಾಯಿತು ಎಂದು ಊಟಮಾಡಬಲ್ಲ. ದೇಹಕ್ಕೆ ಬೇಕೆ ಇಲ್ಲದಿದ್ದರು ಏನಾದರು ಕುಡಿಯುತ್ತ ಇರಬಲ್ಲ. ಅಷ್ಟೆ ಅಲ್ಲ ಅವನ ಹವ್ಯಾಸಗಳು, ಕಲೆಯಾಗಲಿ, ಮನೋರಂಜನೆಯಾಗಲ್ಲಿ, ರಕ್ಷಣೆಯಾಗಲಿ, ಅಹಾರವಾಗಲಿ ಎಲ್ಲವು ಬಹುತೇಕ ಅವನ ಮನಸ್ಸಿನ ಅಗತ್ಯಗಳಷ್ಟೆ , ಬಹಳಷ್ಟು ದೇಹಕ್ಕೆ ಬೇಕೆ ಇರುವದಿಲ್ಲ ಅಲ್ಲವೆ ? ಹಾಗಾಗಿ ನಮ್ಮ ವಿಂಗಡನೆ" ಎನ್ನುತ್ತ ನಕ್ಕ.

 ನನಗು ನಗು ಬಂದಿತು. ಆದರು ಅನ್ನಿಸಿತು, ಇಷ್ಟೆಲ್ಲ ಮಾತನಾಡುವ ಇವನು ಸಹ ಮನುಷ್ಯನೆ ಅಲ್ಲವೆ. ತಾನೇನೊ ಬೇರೆ ಅನ್ನುವ ರೀತಿ ಹೇಳುತ್ತಾನೆ ಅನ್ನಿಸಿತು. ಅವನ ನಡೆನುಡಿಗಳು ವಿಚಿತ್ರವೆನಿಸಿತು.

"ಇರಲಿ ಬಿಡಿ, ಅದೆಲ್ಲ ನಮ್ಮೆಲ್ಲರ ಸ್ವಭಾವವಲ್ಲವೆ. ಅದರಿಂದ ಹೇಗೆ ಹೊರಬಲ್ಲವು. ನೋಡಿ ಇಷ್ಟು ಹೊತ್ತು ನಿಮ್ಮೊಡನೆಮಾತನಾಡಿದರು ನಿಮ್ಮ ಪರಿಚಯ ಮಾಡಿಕೊಳ್ಳಲೆ ಇಲ್ಲ. ತಮ್ಮ ಹೆಸರೇನು, ಇಂತ ತಮಿಳುನಾಡಿನ ನಡುವೆ ನೀವು ಶುದ್ದ ಕನ್ನಡ ಮಾತನಾಡುತ್ತ ನನಗೆ ಆಶ್ಚರ್ಯ ಹುಟ್ಟಿಸಿರುವಿರಿ. ತಮ್ಮ ಉದ್ಯೋಗವೇನು, ಸಮುದ್ರತಟದಲ್ಲಿ ವಾಸ ನಿಜಕ್ಕು ಅಹ್ಲಾದವಲ್ಲವೆ" ಎಂದೆ.

"ನಿಮ್ಮ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುವುದು ಸದ್ಯಕ್ಕೆ ಕಠಿಣ, ಇರಲಿ, ಹೆಸರು ಸದ್ಯಕ್ಕೆ ಕಾಯಸ್ಥ ಎಂದು ಇರಲಿ, ಮತ್ತೆ ನನಗೆ ಬಾಷೆಯ ಬಂದನವೇನಿಲ್ಲ, ಮತ್ತೆ  ಉಧ್ಯೋಗವೆಂದರೆ ನೀವು ನೋಡುತ್ತಿರುವಿರಲ್ಲ, ಈ ಪುಸ್ತಕ ಇದನ್ನು ತುಂಬಿಸೋದು" ಎಂದ.

ನನಗಂತು ಅಶ್ಚರ್ಯವಾಗಿ ಹೋಯಿತು. ಇವನೆ ವರ್ತನೆ ಸಾಕಷ್ಟು ಅಸಹಜವಾಗಿತ್ತು. ಹೆಸರು ಕೇಳಿದರೆ  ಹೇಳಲು ಹಿಂಜರಿಯುವ ಉಧ್ಯೋಗವೆಂದರೆ ಪುಸ್ತಕ ತೋರುವ ಇವನಾರು ಎಂಬ ಭಾವ ನನ್ನಲ್ಲಿ ಕೌತುಕ ಪಡುವಂತೆ ಮಾಡಿತು. ಅಲ್ಲದೆ ನನಗೆ ಮತ್ತೊಂದು ವಿಚಿತ್ರ ಅನುಭವವಾಗುತ್ತಿತ್ತು. ಅವನು ಕುಳಿತುರುವ ಆ ಕೋಣೆ ಪ್ರವೇಶಿಸಿದ ಕ್ಷಣದಿಂದ ನನ್ನಲ್ಲಿ ಎಂತದೊ ಅನುಭೂತಿ ಉಂಟಾಗುತ್ತಿತ್ತು. ಅಂದರೆ ಅಲ್ಲಿ ನನ್ನ ಕಣ್ಣೆದುರು ಕಾಣುತ್ತಿರುವ ದೃಷ್ಯಕ್ಕಿಂತ ಮತ್ತೇನೊ ದೃಷ್ಯಗಳಿವೆ ಆದರೆ ನನಗೆ ಅಗೋಚರ, ಮತ್ತು ನನಗೆ ಕೇಳಿಸುವ ಅವನ ದ್ವನಿಗಿಂತ  ಪ್ರತ್ಯೇಕವಾದ ಇನ್ನೇನೊ ದ್ವನಿಗಳು ಆ ಕೋಣೆಯಲ್ಲಿದೆ ಆದರೆ ನನಗೆ ಅದು ಕೇಳಿಸುತ್ತಿಲ್ಲ ಎನ್ನುವ ಭ್ರಮೆ ನನ್ನಲ್ಲಿ ತುಂಬುತ್ತಿತ್ತು. ಆದರೆ ಅದನ್ನು ಅವನಲ್ಲಿ ಹೇಳಿದರೆ ಅವನು ಏನು ತಿಳಿಯುವನೊ ಎಂದು ಸುಮ್ಮನಿದ್ದೆ.

"ಇರಲಿ ಬಿಡಿ ನಿಮಗೆ ಹೇಳಲು ಇಷ್ಟವಿಲ್ಲದಿದ್ದರೆ, ಅಂತ ಬಲವಂತವೇನಿಲ್ಲ. ನನಗೆ ನೀವು ನಾನು ನಡೆಯಬೇಕಾದ ದಿಕ್ಕು ದಾರಿ ತಿಳಿಸಿದರೆ ಹೊರಡುವೆ" ಎಂದೆ ನಗುತ್ತ.

ಅದಕ್ಕವನು " ಬೇಸರಪಡಬೇಡಿ, ಕೆಲವು ವಿಷಯ ಹಾಗೆ ತಕ್ಷಣ ಉತ್ತರ ಹೇಳಲು ಕಷ್ಟ, ಅದನ್ನು ಎದುರಿಗೆ ಇರುವವರು ಹೇಗೆ ಸ್ವೀಕರಿಸುವರು ಎಂದು ಯೋಚನೆ ಇರುತ್ತೆ. ನೀವು ಹೊರಡಲು ಸ್ವಲ್ಪ ಕಾಯಬೇಕಾಗುತ್ತೆ ಅನ್ನಿಸುತ್ತೆ. ಮತ್ತೇನಾದರು ಕೇಳುವದಿದೆಯ, ನನ್ನ ಪರಿಮಿತಿಯಲ್ಲಿದ್ದರೆ ಉತ್ತರಿಸುವೆ" ಎಂದನಾತ. ನನಗೆ ಆಶ್ಚರ್ಯವಾಗಿಹೋಯಿತು. ಇದೆಂತಹ ಸ್ಥಳಕ್ಕೆ ನಾನು ಬಂದೆ. ನಾನು ಹೊರಡಲು ಇವನು ಯಾವ ಘಳಿಗೆ ಕಾಯುತ್ತಿರುವನು, ಅಲ್ಲದೆ ನಾನು ಬರುವದೇನು ಇವನಿಗೆ ಮೊದಲೆ ತಿಳಿದಿತ್ತೆ, ಅನ್ನುವ ಪ್ರಶ್ನೆ ಮನದಲ್ಲಿ ತುಂಬಿತ್ತು. ಆದರೆ ಹೊರಗೆ ಕೇಳಿದೆ

"ತಪ್ಪು ತಿಳಿಯಬೇಡಿ ನನಗೊಂದು ವಿಚಿತ್ರ ಅನುಭವವಾಗುತ್ತಿದೆ,  ಒಳಗೆ ಬಂದ ಕ್ಷಣದಿಂದ ಇಲ್ಲಿ ನನಗೆ ಕಾಣದ ಇನ್ನೇನೊ ಇದೆ, ಕೇಳದ ದ್ವನಿಗಳಾವುದೊ ಇದೆ ಅನ್ನಿಸುತ್ತಿದ್ದೆ  ಏಕೆ , ಅಲ್ಲದೆ ಇಲ್ಲಿಂದ ಹೊರಡಲು ನಾನೇಕೆ ಕಾಯಬೇಕು " ಎಂದೆ

"ಇಲ್ಲ ಅದರಲ್ಲಿ ವಿಚಿತ್ರ ವೇನು ಇಲ್ಲ. ನಿಮ್ಮ ಭಾವನೆ ನಿಜ, ಇಲ್ಲಿ ನೀವು ಕಾಣದ ದೃಷ್ಯಗಳಿವೆ, ಹಾಗು ದ್ವನಿಗಳಿವೆ. ಮತ್ತು ವ್ಯಕ್ತಿಗಳು ಇದ್ದಾರೆ. ನೀವು ಇಲ್ಲಿ ಬರುವಾಗ ಸಹ ನಮ್ಮ ನಿರ್ಧಾರದಂತೆ  ಬಂದಿರುವಿರಿ ಹಾಗೆ ಇಲ್ಲಿಂದ ಹೊರಡುವಾಗ ಸಹ ಕಾಯಬೇಕಾಗುತ್ತೆ,   ಗಾಭರಿ ಎನ್ನುವದೇನು ಇಲ್ಲ" ಎಂದ. ಈಗ ನನಗೆ ನಿಜಕ್ಕು ಸ್ವಲ್ಪ ಗಾಭರಿ ಎನಿಸಿತು


"ಅದು ಹೇಗೆ ಸಾದ್ಯ ಯಾವುದೊ ದೃಷ್ಯ ನನಗೆ ಕಾಣದಿರಲು ಹೇಗೆ ಸಾದ್ಯ, ದ್ವನಿಕೇಳದಿರಲು ಸಾದ್ಯವೆ, ಮತ್ತೆ ಇಲ್ಲಿ ವ್ಯಕ್ತಿಗಳು ಇದ್ದಲ್ಲಿ ನನಗೆ ಏಕೆ ಕಾಣುವದಿಲ್ಲ ಅವರೇನು ಮನುಷ್ಯರಲ್ಲವ, ನೀವು ಮನುಷ್ಯರಲ್ಲವ. ನಾನು ನಿಮ್ಮ ಇಚ್ಚೆಯಂತೆ ಇಲ್ಲಿ ಬಂದಿರಲು ಹೇಗೆ ಸಾದ್ಯ ನಾನು ದಾರಿ ತಪ್ಪಿ ಅಲ್ಲವೆ ಇಲ್ಲಿ ಬಂದಿರುವುದು, ನಿಮ್ಮ ವರ್ತವೆ ವಿಚಿತ್ರವಾಗಿದೆ, ನಾನು ಹೊರಡುವೆ " ಎನ್ನುತ್ತ ಅವಸರಿಸಿದೆ.

"ಹೇಳಿದೆನಲ್ಲ ಏಕೆ ಗಾಭರಿಪಡುವಿರಿ, ನಿಮಗೆ ಏಕೆ ಕಾಣುತ್ತಿಲ್ಲ, ಕೇಳುತ್ತಿಲ್ಲವೆಂದರೆ, ಇಲ್ಲಿರುವ ಆ ವ್ಯಕ್ತಿಗಳಿಗೆ ಅದು ಇಷ್ಟವಿಲ್ಲ, ಅಥವ ಮೇಲಿನವರ ಒಪ್ಪಿಗೆ ಇಲ್ಲ ಎಂದು ಅರ್ಥ. ಅಥವ ಅವರಿಗೆ ಸಾದ್ಯವಿಲ್ಲ. ನಾನು ಮನುಷ್ಯನಲ್ಲವ ಎನ್ನುವ ಪ್ರಶ್ನೆಗೆ ನಿಧಾನಕ್ಕೆ  ಉತ್ತರ ಕೊಡುವೆ, ನೀವು ದಾರಿ ತಪ್ಪಿ ಬಂದಿರುವುದು ನಿಜವಾದರು,  ನೀವು ಇಲ್ಲಿ ಬರುವುದು, ನಮ್ಮವರ ಒಪ್ಪಿಗೆಯಿಂದಲೆ ಸಾದ್ಯ . ಇಲ್ಲದಿದ್ದರೆ ನಿಮಗೆ ಈ ಸ್ಥಳ ಗೋಚರಿಸುವದಾಗಲಿ, ನೀವು ಬರುವದಾಗಲಿ ನಿಮಗೆ ಸಾದ್ಯವಿಲ್ಲ . ಅದಕ್ಕಾಗಿಯೆ ನೀವು ಒಳಬಂದಾಗ ನನಗೆ ಆಶ್ಚರ್ಯವೆನಿಸಿತ್ತು . ನಂತರ ನನ್ನ ಒಡೆಯರೊಡನೆ ಮಾತನಾಡಿ ವಿಷಯ ಸ್ಥಿರಪಡಿಸಿಕೊಂಡೆ. ನಿಮ್ಮನ್ನು ಇಲ್ಲಿಗೆ ಕರೆತರಲಾಗಿದೆ ಎಂದು ತಿಳಿಯಿತು. ಮೊದಲಿಗೆ ನಿಮಗೆ ಯಾವ ವಿಷಯ ತಿಳಿಸಬೇಕು ಯಾವುದು ತಿಳಿಸಬೇಡದು ಎಂಬ ಗೊಂದಲವಿತ್ತು, ಈಗ ಸ್ವಷ್ಟವಿದೆ" ಎಂದರು ಆತ.

ಅವನ ಒಂದಕ್ಕೊಂದು ಸಂಭಂದವಿಲ್ಲದ  ಮಾತು ನನ್ನನ್ನು ದೃತಿಗೆಡಿಸಿತ್ತು. ಅಲ್ಲ ಅವರಿಗೆ ಇಷ್ಟವಿಲ್ಲದಿದ್ದರೆ ನನಗೆ ಕಾಣದಂತೆ ಇರುವದೇನು. ಮತ್ತೆ ಅವನು ಒಳಬಂದ ಕ್ಷಣದಿಂದ ನನ್ನೆದುರಿಗೆ ಇದ್ದಾನೆ ಆದರೆ ಯಾರೊಡನೆಯೊ ಮಾತನಾಡಿ ಸ್ವಷ್ಟಪಡಿಸಿಕೊಂಡೆ ಅನ್ನುತ್ತಿರುವ ಇವನು ಮಾತನಾಡಿದ್ದು ಯಾವಾಗ. ಎಲ್ಲ ಪ್ರಶ್ನೆ ನನ್ನನ್ನು ಕಾಡಿತ್ತು. ಈಗ ಇವನು ಮಾತನಾಡಲು ಸಿದ್ದವೆನ್ನುತ್ತಿದ್ದಾನೆ, ನಾನು ಯಾವ ಪ್ರಶ್ನೆ ಕೇಳಲಿ ಅಸಲಿಗೆ ಇವನು ಮನುಷ್ಯನ, ಅಥವ ನನಗೆ ತಿಳಿಯಗೆ ಯಾವುದಾದರು ದೆವ್ವದ ಮನೆಯೊಳಗೆ ನುಗ್ಗಿರುವೆನ? ಅನ್ನಿಸಿತು,  ಚೀ ಅದೆಲ್ಲ ಸಾದ್ಯವಿಲ್ಲ, ದೆವ್ವ ಅದನ್ನೆಲ್ಲ ನಂಬುವುದು ಮೂರ್ಖತನ ಅನ್ನಿಸಿತು. ಅಲ್ಲದಿದ್ದರೆ, ದೇವರಿರ ಬಹುದು , ಅಂದುಕೊಳ್ಳುವಾಗ ನಗು ಬಂದಿತು, ನನ್ನೆದುರು ಪ್ಯಾಂಟ್ ಶರ್ಟ್ ನಂತ ವಿಚಿತ್ರ ವಸ್ತ್ರ ಧರಿಸಿ   ಕುಳಿತ ಇವನು ದೇವರಾಗಲು ಸಾದ್ಯವಾದರೆ ಅನ್ನಿಸಿತು. ಅಥವ ಬೇರೆ ಗ್ರಹದಿಂದ ಬಂದಿರುವ ಜೀವಿ ಇವನಿರಬಹುದಾ? ಎನೇನೊ ಯೋಚನೆ ಕಾಡಿತು.

"ನಾನು ಹೇಳಿದೆ ನೀವು ಅನಗತ್ಯ ಗಾಭರಿ ಪಡಬೇಡಿ, ಎಂದು. ಹೆದರದಿರಿ ಎಂದು. ಇರಲಿ ನಿಮ್ಮ ಒಂದೊಂದು ಪ್ರಶ್ನೆಗು ನಿದಾನವಾಗಿಯೆ ಉತ್ತರಿಸುವೆ. ಸಹನೆ ಇಟ್ಟು ಕೇಳಿ. ನಿಮಗೆ ಇಲ್ಲಿ ಮತ್ಯಾವುದೊ ದೃಷ್ಯಗಳಿವೆ ನಿಮಗೆ ಕಾಣಿಸುತ್ತಿಲ್ಲ, ಅಥವ ಕೇಳಿಸುತ್ತಿಲ್ಲ ಅಂದರೆ ಗಾಭರಿ ಏಕೆ. ಸ್ವಲ್ಪ ವೈಜ್ಞಾನಿಕವಾಗಿಯೆ ಯೋಚಿಸಿ. ನೀವು ಮತ್ತು ನಾವು ಬೇರೆ ಬೇರೆಯೆ ಆದ ಆಯಾಮದಲ್ಲಿರಬಹುದಲ್ಲವೆ. ದ್ವನಿಯ ಬಗ್ಗೆ ಯೋಚಿಸಿ, ಮನುಷ್ಯನ  ಕಿವಿಗೆ ಕೇಳಬಹುದಾದ ದ್ವನಿ ೨೦ ಡೆಸಿಬಲ್ ನಿಂದ ೨೦ ಸಾವಿರ ಡೆಸಿಬಲ್ ಅಷ್ಟೆ. ಒಂದು ವೇಳೆ ದ್ವನಿ ೨೦ ಕ್ಕಿಂತ ಕಡಿಮೆ ಅಥವ ೨೦ಸಾವಿರಕ್ಕಿಂತ ಜಾಸ್ತಿ ಇದ್ದಲ್ಲಿ ನಿಮಗೆ ಕೇಳಿಸಲ್ಲ ಅನ್ನುವುದು  ಸಹಜವಲ್ಲವೆ. ಹಾಗಿರಲು ನೀವು ದೆವ್ವ ದೇವರು ಎಂದೆಲ್ಲ ಏಕೆ ಯೋಚಿಸುವುದು" ಎಂದ.

ಅಂದರೆ ಇದೇನು ನಾನು ಯೋಚಿಸುವ ಬಗ್ಗೆ ಸಹ ಇವನು ಮಾತನಾಡುತ್ತಿದ್ದಾರೆ,  ನನ್ನ ಮನಸಿನ ಯೋಚನೆಗಳನ್ನು ಸಹ ಇವನು ಅರಿಯಬಲ್ಲನೆ. ಆದರು ಮತ್ತೆ ಪ್ರಶ್ನಿಸಿದೆ
"ಮತ್ತೆ ನಿಮಗೆ ಬೇಕೆನಿಸಿದಾಗ ನನಗೆ ಕಾಣಬಲ್ಲಿರಿ ಅಥವ ನಿಮ್ಮ ದ್ವನಿ ಕೇಳಬಲ್ಲದು ಎಂದರೆ ಹೇಗೆ ಸಾದ್ಯ , ನೀವು ಅದನ್ನು ಹೇಗೆ ನಿಯಂತ್ರಿಸಬಲ್ಲಿರಿ,  ನಾವು ಒಬ್ಬರಿಗೆ ಕಾಣದಂತೆ  ಇರಲು ಸಾದ್ಯವೆ?" ಎಂದೆ.

" ಹೌದು ಸಾದ್ಯ, ಸಾದರಣ ಕಣ್ಣಿಗೆ ಎಲ್ಲವು ಕಾಣಲು ಸಾದ್ಯವಿಲ್ಲ ಅಲ್ಲವೆ, ಉದಾಹರಣೆ ಎಕ್ಸ್ ರೇ , ಅಥವ ಅತಿ ನೇರಳೆ ಕಿರಣಗಳು, ಹಾಗೆ ದ್ವನಿಗಳು, ಒಂದು ವೇಳೆ ನಾವು ನಿಮಗೆ ಕಾಣಿಸುವ ಅಥವ ಕಾಣಿಸದಿರುವ ಎಲ್ಲ ಬೆಳಕಿನ ರೂಪದಲ್ಲಿ ಇರಲು ಸಾದ್ಯವಾದರೆ , ನಮಗೆ ಬೇಕೆಂದಾಗ ನಿಮಗೆ ಕಾಣಿಸುವುದು , ಹಾಗು ಮಾಯವಾಗುವುದು ಸಾದ್ಯ ಅಲ್ಲವೆ, ಹಾಗೆಯೆ, ಒಂದು ವೇಳೆ ನಾವು ೨೦ ಕ್ಕಿಂದ ಕಡಿಮೆ ಹಾಗು ೨೦ ಸಾವಿರಕ್ಕಿಂತ ಹೆಚ್ಚಿನ ದ್ವನಿತರಂಗಗಳಲ್ಲಿ ಸಹ ವ್ಯವಹರಿಸಲು ಸಾದ್ಯವಾದಲ್ಲಿ, ನಮಗೆ ಬೇಕೆಂದಾಗ ಮಾತ್ರ ನಿಮಗೆ ಕೇಳಿಸುವಂತೆ ಮಾತನಾಡಿ ಉಳಿದಂತೆ ನಿಮಗೆ ಕೇಳಿಸದಂತೆ ಮಾತನಾಡಬಲ್ಲೆವು ಅಲ್ಲವೆ. ಕೆಲವು ಸಾರಿ, ನಿಮಗೆ ಅದರ ವಿಚಿತ್ರ ಅನುಭವ ಸಾದ್ಯವಾಗಬಹುದು ಏಕೆಂದರೆ ನೀವು ನಮ್ಮ ಜಾಗದಲ್ಲಿ ಇರುವಿರಲ್ಲವೆ" ಎಂದ ಅವನು

ನನಗೆ ಅವನು ಹೇಳಿದ್ದು ಅರ್ಥವಾದರು ಸಹ , ಇದೆಲ್ಲ ಹೇಗೆ ಸಾದ್ಯವೆಂಬ ಭಾವ ತುಂಬಿಕೊಂಡಿತು . ನನ್ನ ವಾದ ಮುಂದುವರೆಸಿದೆ.

"ಆಯಿತು ನೀವು ಹೇಳಿದ್ದನ್ನು, ಒಂದು ಮಟ್ಟಕ್ಕೆ ನಿಜವಿರಬಹುದು ಎಂದೆ ಭಾವಿಸೋಣ. ಆದರೆ ನಾನು ಇಲ್ಲಿ ಒಳಬಂದ ಕ್ಷಣದಿಂದ ನನ್ನ ಎದುರಿಗೆ ಇರುವಿರಿ. ಆದರೆ ಯಾರೊಡನೆಯೊ ಮಾತನಾಡಿ ನನ್ನ ಬಗ್ಗೆ ಖಚಿತಪಡಿಸಿಕೊಂಡೆ ಎನ್ನುವಿರಿ. ಅದು ಹೇಗೆ ಸಾದ್ಯ, ನೀವು ನನಗೆ ಕಾಣದಂತೆ, ನನಗೆ ಕೇಳದಂತೆ, ನನ್ನ ಬಗ್ಗೆ ಯಾರೊಡನೆಯೊ ಹೇಗೆ ಮಾತನಾಡಲು ಸಾದ್ಯ.  ನೀವೇನು ಅತಿಮಾನುಷರೆ?" ಎಂದೆ ಉದ್ವೇಗದಿಂದ.

ಅವನು ನಗುತ್ತಿದ್ದ.

"ನೋಡಿ , ನೀವನ್ನುವುದು ನಿಮ್ಮ ಮಟ್ಟಿಗೆ ನಿಜ , ನಿಮಗೆ ತಿಳಿಯದಂತೆ ಮಾತನಾಡುವುದು ಸಾದ್ಯವಿಲ್ಲ. ಆದರೆ ಮನಸಿನ ಮಟ್ಟದಲ್ಲಿ, ನಾನು ನನ್ನ ಮನಸಿನ ಮೂಲಕ, ಬೇರಡೆ ಮಾತನಾಡಿದರೆ ಅದನ್ನು ನೀವು ಅರಿಯಲು ಹೇಗೆ ಸಾದ್ಯ. ಆ ಶಕ್ತಿ ನಿಮಗಿದೆಯೆ. ನಾನು ಅತಿಮಾನುಷನಲ್ಲ ಅನ್ನುವುದು ನಿಜ ಆದರೆ ನಿಮ್ಮ ಅರ್ಥದಂತೆ ಮನುಷ್ಯನು ಅಲ್ಲ" ಅಂದ.

ಅಯ್ಯೊ ಇವನು ಇದೇನು ಹೇಳುತ್ತಿರುವ. ಅಂದರೆ ಇವನು ಮನುಷ್ಯನಲ್ಲವೆ? ಹಾಗಿದ್ದಲ್ಲಿ ಏನು. ಮನಸಿನ ಮೂಲಕ ಬೇರಡೆಗೆ ಮಾತು ಅಂದರೆ 'ಟಿಲಿಪತಿ" , ಅದು ಇವನಿಗೆ ಸಾದ್ಯವೆ ? ,  ಇವನನ್ನು ನೋಡುವಾಗ ಸಾದ್ಯವಿರಬಹುದೆ ಅನ್ನಿಸುತ್ತೆದೆ. ಅಂದರೆ ಇವನು ನನ್ನ ಮನಸಿನ ಯೋಚನೆಗಳನ್ನು ಸಹ ಗ್ರಹಿಸಬಲ್ಲನೆ, ಅನ್ನುವಾಗ ಹೆದರಿಕೆ ಆಯಿತು.

"ಅಂದರೆ ನೀವು ಹೇಳುತ್ತಿರುವದೇನು, ಟೆಲಿಪತಿಯ ಬಗ್ಗೆಯೆ, ಮನಸಿನ ಯೋಚನ ತರಂಗಗಳ ಮೂಲಕ ದೂರದಲ್ಲಿರುವವರ ಕೂಡ ವ್ಯವಹರಿಸಬಲ್ಲಿರ? ಅದು ಹಿಂದೆ ಋಷಿಮುನಿಗಳಿಗೆ ಮಾತ್ರ ಸಾದ್ಯವಿತ್ತೆಂದು ನಂಬುತ್ತಾರೆ. ನೀವು ನನ್ನ ಮನಸಿನಲ್ಲಿ ನಡೆಯುವ ಯೋಚನೆಯ ಎಲ್ಲ ವಿವರಗಳನ್ನು ಗ್ರಹಿಸಬಲ್ಲಿರ" ಎಂದೆ

"ಬಹುಷಃ ಅದು ಸರಿಯಾದ ಪದ ಟಿಲಿಪತಿ, ಯಾವುದೆ ಯಾಂತ್ರಿಕ ಮಾಧ್ಯಮಗಳಿಲ್ಲದೆ, ಮನಸುಗಳ ನಡುವೆ ಅಲೋಚನೆಗಳ ವಿನಿಮಯ, ಅದನ್ನು ನೀವು ಟೆಲಿಪತಿ ಅನ್ನುವದಾದರೆ , ಅದೆ ನಿಜ. ಮತ್ತೆ ನಿಮ್ಮ ಮನಸಿನ ಎಲ್ಲ ಯೋಚನೆಗಳನ್ನು ಗ್ರಹಿಸುವುದು ಸ್ವಲ್ಪ ಕಷ್ಟ. ನನಗೆ ಸಾದ್ಯವಿಲ್ಲ, ಆದರೆ ನಮ್ಮಲ್ಲಿ ಕೆಲವರಿಗೆ ಅದು ಸಾದ್ಯವಿದೆ. ಮನಸುಗಳು ಗ್ರಾಹಕ  ಪ್ರೇಷಕದಂತೆ (Receiver Transmeter ) ಕೆಲಸಮಾಡುತ್ತದೆ, ಅಂದರೆ ನಿಮ್ಮ ಅಲೋಚನೆ ನನ್ನನ್ನು ಕುರಿತು ಹೊರಹೊಮ್ಮಿದಾಗ ಅದನ್ನು ಮಾತ್ರ ನಾನು ಗ್ರಹಿಸಬಲ್ಲೆ. ಬೇರೆ ಕೆಲವು ನಿಮ್ಮ ಅಲೋಚನೆಗಳನ್ನು ನಿಮ್ಮ  ವೈಯುಕ್ತಿಕ ಭಾವನೆಗಳು , ನನಗೆ ಅರಿವಾದರು ಪೂರ್ಣ ಅದರ ಭಾವಾರ್ಥವಾಗುವದಿಲ್ಲ. ನಿಮ್ಮ ನಂಬುಗೆಯಂತೆ ಹಿಂದಿನ ಇತಿಹಾಸದಲ್ಲಿ , ಮನುಷ್ಯರಲ್ಲಿ ಕೆಲವರು, ಅಂದರೆ ನೀವನ್ನುವಂತೆ ಕೆಲವು ಋಷಿಗಳು, ಅಥವ ಮನಶಕ್ತಿಯಲ್ಲಿ ಪಳಗಿದವರು , ಅದನ್ನು ಬಳಸಿದ್ದು ಇದೆ. ಆದರೆ ನಿಮ್ಮ ಯೋಚನೆಗಳಲ್ಲಿ ನನಗೆ ಅಡ್ರೆಸ್ ಆದಾಗ ಮಾತ್ರ ನಾನು ಗ್ರಹಿಸಬಲ್ಲೆ" ಎನ್ನುತ್ತ ನಕ್ಕ.

ನಾನು ನಗುತ್ತ "ಅಂದರೆ ನೀವು ಹೇಳುವುದು , ನಮ್ಮ  ಕಂಪ್ಯೂಟರ್   ನೆಟವರ್ಕ್ ನಲ್ಲಿ ಉಪಯೋಗಿಸುವ , ಐ.ಪಿ. ಅಡ್ರೆಸ್ ನಂತೆ ಅನ್ನಿ, ನಿಮಗೆ ಸಂಬಂದಿಸಿದ ವಿಷಯಗಳನ್ನು ಮಾತ್ರ ಗ್ರಹಿಸಿ ಪ್ರತಿಕ್ರಯಿಸಬಲ್ಲಿರಿ" ಎಂದೆ

ಅವನು ಖುಷಿಯಾಗಿ "ಎಕ್ಸಾಟ್ಲಿ. ಅದೆ, ಸರಿಯಾದ ಪದ ಪ್ರಯೋಗ, ಅದು ಹಾಗೆ ನಡೆಯುತ್ತದೆ" ಎಂದ

ನನ್ನಲ್ಲಿ ಇದ್ದಕ್ಕಿದ್ದಂತೆ ಒಂದು ಭಾವ ತುಂಬಿಕೊಂಡಿತು. ಇವನು ನನಗೆ ಏನೊ ಮೋಸ ಮಾಡುತ್ತಿದ್ದಾನೆ. ನನ್ನ ಮನವನ್ನು ಅವನ ವಶಕ್ಕೆ ತೆಗೆದುಕೊಳ್ಳುತ್ತಿದ್ದಾನೆ. ಏಕೊ ಅಲ್ಲಿರುವುದು ಅಪಾಯವೆನಿಸಿತು. ಏನಾದರು ಕಾರಣ ಹೇಳಿ ಅಲ್ಲಿಂದ ಹೊರಡುವುದು ಒಳ್ಳೆಯದು. ಇಲ್ಲಿ ಯಾವುದೊ ಸಮಾಜವಿರೋದಿ ಕಾರ್ಯ ನಡೆದಿರಲು ಸಾಕು, ನಾನು ಅನವಶ್ಯಕ ಏಕೆ ಒಳಗೊಳ್ಳಬೇಕು.
“ಕ್ಷಮಿಸಿ ನಾನು ಇಲ್ಲಿ ತುಂಬಾ ಹೊತ್ತು ಕುಳಿತು ಕಾಯಲು ಸಾದ್ಯವಿಲ್ಲ. ನನ್ನ ಸ್ನೇಹಿತರು ಹೋಟೆಲಿನ ರೂಮಿನಲ್ಲಿ ಕುಳಿತು ನನಗಾಗಿ ಕಾಯುತ್ತ ಕ್ಷೋಬೆಗೊಳಗಾಗುತ್ತಾರೆ. ಅಲ್ಲದೆ ನಾಳೆ ಬೆಳಗಿನ ಬಸ್ಸಿಗೆ ಮಹಾಬಲಿಪುರಂನಿಂದ ಬೆಂಗಳೂರಿಗೆ ಹಿಂದಿರುಗುವ ಕಾರ್ಯಕ್ರಮವಿದೆ. ನಾನು ಹೇಗೆ ದಾರಿ ಹಿಡಿದು ಹೋಟೆಲ್ ತಲುಪುತ್ತೇನೆ. ನಿಮಗೆ ತೊಂದರೆ ಕೊಟ್ಟೆ ಕ್ಷಮಿಸಿ “ ಎನ್ನುತ್ತ ಎದ್ದು ನಿಂತೆ.

ಅವನು ಗಂಭೀರನಾದ

“ಕ್ಷಮಿಸಿ, ನಿಮ್ಮನ್ನು ತಡೆಹಿಡಿಯುವುದು ನನ್ನ ಉದ್ದೇಶವಲ್ಲ. ಆದರೆ ನಿಮಗೆ ಪರಿಸ್ಥಿಥಿ ಪೂರ್ಣವಾಗಿ ಅರ್ಥವಾಗಿಲ್ಲ ಎಂದು ಎಣಿಸುತ್ತೇನೆ. ನೀವು ಬಯಸಿದರೆ, ಹೋಗಬಹುದು. ದಾರಿ ಹಿಡಿಯಲು ಪ್ರಯತ್ನಿಸಿ. ಹೊರಗೆ ಹೋಗಿ ನಿಮಗೆ ಗೊಂದಲವೆನಿಸಿದರೆ ಮತ್ತೆ ಒಳಗೆ ಬಂದು ಬಿಡಿ . ಬೇರಡಗೆ ಹೋಗಲು ಪ್ರಯತ್ನಿಸಬೇಡಿ. ನಾನು ನಿಮಗೆ ಶತೃವಲ್ಲ . ನೆನಪಿಡಿ. ನಾನು ನಿಮ್ಮ ಹಿತೈಷಿ”

ನಾನು ನಿರ್ಧರಿಸಿದೆ  ಇವನ ಮಾತು ಕುರುಡನಂತೆ ನಂಬುವದಕ್ಕಿಂತ ಒಮ್ಮೆ ಹೊರಗೆ ಹೋಗಿ ನೋಡುವುದು ಒಳ್ಳೆಯದು. ಅವನು ನನ್ನತ್ತ ನೋಡುತ್ತಲೆ ಇದ್ದ. ನಾನು ಎದ್ದು ಅವನ ಕೋಣೆಯಿಂದ ಹೊರಬಂದು , ಆ ವಿಶಾಲ ಮನೆಯಿಂದ ಹೊರಬಂದೆ. ಬಾಗಿಲು ದಾಟಿದೊಡನೆ, ನಾನು ಬಂದ ಅದೆ ಕಾಲುದಾರಿ ಎದುರಿಗಿತ್ತು. ನಡೆಯುತ್ತ ಹೊರಟೆ. ಒಮ್ಮೆ ಹಿಂದೆ ನೋಡಿದೆ. ನನ್ನ ಹಿಂದೆ ಯಾರು ಇಲ್ಲ. ಸದ್ಯ! ಎನ್ನುತ್ತ ಹೊರಗಿನ ಗೇಟಿನಂತಹ ಅಡ್ಡವನ್ನು ದಾಟಿ, ಆವರಣದಿಂದ ಹೊರಬಂದೆ. ಹೊರಗಿನ ದೃಷ್ಯವನ್ನು ಅರ್ಥಮಾಡಿಕೊಳ್ಳಲು ಆಗದೆ ಗಲಿಬಿಲಿಗೊಳ್ಳುತ್ತ ನಿಂತೆ.





================================================

ನಾನು ಮಹಾಬಲಿಪುರಂನ ಸಮುದ್ರದದ ದಂಡೆಯಲ್ಲಿದ್ದ ಗುಡ್ಡದಂತಹ ಸ್ಥಳವನ್ನು ಹತ್ತುತ್ತ , ಆ ಮನೆಯನ್ನು ಒಳಹೊಕ್ಕಿದ್ದ ನೆನಪು ಸ್ವಷ್ಟವಾಗಿತ್ತು. ಆದರೆ ಈಗ ನಾನು ಸಮುದ್ರದ ಎದುರಿನಲ್ಲಿ ಇರಲಿಲ್ಲ. ನಡುನೆತ್ತಿಯಲ್ಲಿ ಹೊಳೆಯುತ್ತಿದ್ದ ಚಂದ್ರನ ಬೆಳಕಿನಲ್ಲಿ ಎದುರಿಗೆ ಪರ್ವತಗಳ ಸಾಲು ಸಾಲು ಹಬ್ಬಿದ್ದು, ಹಿಮದಿಂದ ಮುಚ್ಚಿದ್ದ ಬೆಟ್ಟ ಗುಡ್ಡಗಳೆಲ್ಲ ಚಂದ್ರನ ಬೆಳಕಲ್ಲಿ ಬೆಳ್ಳಿಯ ಕವಚದಂತೆ ಹೊಳೆಯುತ್ತಿದ್ದವು. ನಾನು ಈ ದೃಷ್ಯವನ್ನು ನನ್ನ ನೆನಪಿನ ಜೊತೆ ಹೋಲಿಸಿನೋಡಿದೆ. ಎಲ್ಲೊ ನೋಡಿದಂತೆ ಅನ್ನಿಸುವದಲ್ಲ. ಹೌದು , ಎದುರಿಗಿರುವದೆಲ್ಲ, ಹಿಮಾಲಯದ ಸಾಲು ಸಾಲು ಪರ್ವತಗಳನ್ನು ಹೋಲುತ್ತಿವೆ. ಅಂದರೆ ನಾನೀಗ ಹಿಮಾಲಯದ ತಪ್ಪಲಿನಲ್ಲಿ ಇರುವೆನೆ? . ಹೇಗೆ ಸಾದ್ಯ. ನಾನು ಇದ್ದದ್ದು ದಕ್ಷಿಣದ ತಮಿಳುನಾಡಿನ ಮಹಾಬಲಿಪುರಂ ಸಮುದ್ರ ತೀರವಲ್ಲವೆ. ಅಷ್ಟೆ ಬೇಗ ನಡೆಯುತ್ತ ಹಿಮಾಲಯದ ಯಾವುದೊ ತಪ್ಪಲನ್ನು ತಲುಪಲು ಹೇಗೆ ಸಾದ್ಯ. ಎದುರಿಗಿದ್ದ ಸಮುದ್ರ ಏನಾಯಿತು.

 ನನಗೆ ಗೊತ್ತಾಯಿತು. ನನ್ನ ಮನ ಇವರು ಮಾಡಿರುವ ಇಂದ್ರಜಾಲವೊ ಅಥವ ಮನದ ವಶೀಕರಣಕ್ಕೊ (ಹಿಪ್ನಾಟಿಸಂ) ಒಳಗಾಗಿದೆ. ಇಲ್ಲದಿದ್ದರೆ ಹೀಗೆ ಸಾದ್ಯವಿಲ್ಲ. ನಾನು ಕಣ್ಣು ಮುಚ್ಚಿ ನಿಂತೆ. ನನ್ನ ಮನವನ್ನು ನನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತ. ಇದೆಲ್ಲ ಮೋಸ ನಂಬಬೇಡ. ಮತ್ತೊಮ್ಮೆ ನೋಡು ಎಲ್ಲವು ಸರಿಯಾಗಿದೆ. ನಾನು ಮಹಾಬಲಿಪುರಂ ಎಂಬ ಸಮುದ್ರದಡದಲ್ಲಿರುವ ಸ್ಥಳದಲ್ಲಿಯೆ ಇರುವೆನು. ಅಂದುಕೊಳ್ಳುತ್ತಿದ್ದೆ. ಎಷ್ಟೊ ಹೊತ್ತಾದ ನಂತರ ಮತ್ತೆ ಕಣ್ಣುಬಿಟ್ಟು ನೋಡಿದೆ. ಊಹೂ ಪ್ರಯೋಜನವಿಲ್ಲ. ಎಲ್ಲವು ಹಾಗೆಯೆ ಇದೆ, ನಾನು ನಿಜಕ್ಕು ಹಿಮಾಲಯದ ತಪ್ಪಲಿನ ಯಾವುದೊ ಪ್ರದೇಶದಲ್ಲಿರುವೆ ಅನ್ನುವುದು ನಿಜ. ಸುತ್ತಲು ಗಮನಿಸಿದರೆ, ನಾನು ಹೊರಬಂದ ಮನೆಯನ್ನು ಹೊರತುಪಡಿಸಿ, ಮತ್ತ್ಯಾವುದೆ ವಾಸಸ್ಥಳವಿರುವಂತಿಲ್ಲ. ಏನು ಮಾಡಬೇಕೆಂದು ಹೊಳೆಯಲಿಲ್ಲ.

ಸ್ವಲ್ಪ ಸಮಯ ಹಾಗೆ ನಿಂತಿದ್ದು ಮತ್ತೆ ನಿಧಾನವಾಗಿ  ಒಳಬಂದೆ.   ಅವನು ಅಂದರೆ ಕಾಯಸ್ಥ ಈಗ ತನ್ನ ಎದುರಿನಲ್ಲಿರುವ ಪುಸ್ತಕದಲ್ಲಿ , ಏನನ್ನೊ ಬರೆಯುತ್ತಿದ್ದ. ನಾನು ಹತ್ತಿರ ಹೋಗಿ ನೋಡಿದೆ ಅದರಲ್ಲಿ ಏನು ಬರೆಯುತ್ತಿರಬಹುದು ಎಂದು. ಅವನು ತೆರೆದ ಪುಟದಲ್ಲಿ ಏನು ಇರಲಿಲ್ಲ ಬರಿ ಚುಕ್ಕಿಗಳು. ಆಗಲು ಅವನು ಒಂದು ಕಪ್ಪು ಚುಕ್ಕಿಯನ್ನು ಇಡುತ್ತಿದ್ದ ಅವನ ಬಳಿ ಇರುವ ನವಿಲುಗರಿ ಆಕಾರದ ವಿಚಿತ್ರ ಪೆನ್ನಿನಿಂದ. ನನಗೆ ಹುಚ್ಚು ಹಿಡಿಯುವುದು ಬಾಕಿ. ನನ್ನತ್ತ ತಲೆ ಎತ್ತಿ ನೋಡಿ ನಗುತ್ತ
“ಕುಳಿತುಕೊಳ್ಳಿ  ಒಂದೊಂದೆ ವಿಶಯವನ್ನು ನೀವು ಅರಿಯುತ್ತ ಹೋದರೆ, ನಿಮ್ಮ ಮನಸಿನ ಆತಂಕ ಕಡಿಮೆಯಾಗುತ್ತದೆ.  ನಿಮಗೆ ವಿವರವಾಗಿ ಎಲ್ಲವನ್ನು ಹೇಳುವೆ , ನಿಮಗೆ ಎಷ್ಟು ಅರ್ಥವಾಗುತ್ತದೆಯೊ ಅಷ್ಟನ್ನು ಅರ್ಥಮಾಡಿಕೊಳ್ಳಿ, ನಿಧಾನವಾಗಿ ತಿಳಿಯುತ್ತದೆ. ಈಗ ಇದನ್ನು ಸ್ವೀಕರಿಸಿ”
 ಒಳಗಿದ್ದ ಹೂಜಿಯಾಕಾರದ ಪಾತ್ರೆ ಒಂದರಿಂದ , ಚಿಕ್ಕ ಲೋಟದಂತಿದ್ದ ಪಾತ್ರೆಗೆ ಏನನ್ನು ಸುರಿದು  ಕೊಟ್ಟ. ನನಗೆ ಆತಂಕವಾಯಿತು ಏನು ಕೊಡುತ್ತಿದ್ದಾನೊ
“ಇದು ಬರಿ ಜಲ, ಪರಿಶುದ್ದ ಜಲ. ಇದರಲ್ಲಿ ಏನು ಇಲ್ಲ. ನಿಮ್ಮ ದೇಹಕ್ಕೆ ಉತ್ಸಾಹ ಮನಸಿಗೆ ಉಲ್ಲಾಸ ಕೊಟ್ಟು ಆತಂಕ ಕಳೆಯಲು ಕೊಡುತ್ತಿರುವೆ ಅಷ್ಟೆ” ಎಂದ.
 ನಾನು ನನ್ನ  ಭಯಕ್ಕೆ ನಾಚಿಕೆಪಡುತ್ತ ಅವನಿಂದ ಲೋಟ ಪಡೆದು   ದ್ರವವನ್ನು ಒಂದು ಗುಟುಕು ಕುಡಿದೆ. ನಿಜ ಅದು ಸ್ವಚ್ಚವಾದ ನೀರು. ಯಾವುದೆ ವಾಸನೆ ಇಲ್ಲದ ರುಚಿ ಇಲ್ಲದ ಏನು ಬೆರೆತಿರದ ಬಣ್ಣವು ಇಲ್ಲದ ಪರಿಶುದ್ದ ನೀರು. ಅವನು ಹೇಳಿದ್ದು ನಿಜವಿತ್ತು. ನೀರು ಕುಡಿದಂತೆ. ದೇಹ ಹಗುರವಾಗಿ ಮನಸ್ಸು ಪ್ರಫುಲ್ಲವಾಯಿತು. ಅವನು ನುಡಿದ.
“ಬಹುಷಃ ಸ್ವಲ್ಪ ದಿನಗಳ ಕಾಲ ಇದೆ ನಿಮಗೆ ಅಹಾರವಾಗಬಹುದು. ಆಗ ನಿಮ್ಮ ದೇಹ ಶುದ್ದವಾಗಿ ನಮ್ಮಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತದೆ”
ಅಲ್ಲಿಗೆ ಇವನಿಗೆ ನನ್ನನ್ನು ತಕ್ಷಣ ಕಳಿಸುವ ಯೋಚನೆ ಇಲ್ಲ ಎಂದು ಅರ್ಥವಾಯಿತು. ಆದರೆ ಹೋಟೆಲಿನಲ್ಲಿ ನನ್ನ ಬಗ್ಗೆ ಕಾಯುತ್ತಿರುವ ಸ್ನೇಹಿತರು , ಆತಂಕದಿಂದ ಏನು ಮಾಡಿದ್ದಾರೊ ಅನ್ನುವ ಕಸಿವಿಸಿ ಆಯಿತು. ಅವರೊಡನೆ ನಾನು ತೆಪ್ಪಗೆ ರೂಮಿನಲ್ಲಿರದೆ ಈ ರೀತಿ ಘಟನೆಯನ್ನು ಮೈಮೇಲೆ ಎಳೆದುಕೊಂಡಿದ್ದೆ.

ಅವನು ಮತ್ತೆ ಮಾತು ಪ್ರಾರಂಬಿಸಿದ

“ನಿಮಗೆ ಮೊದಲಿನಿಂದ ತಿಳಿಸುತ್ತ ಹೋದರೆ ಗೊಂದಲವೆಲ್ಲ ಪರಿಹಾರವಾಗಬಹುದೆಂದು ಅನ್ನಿಸುತ್ತದೆ. ಕೇಳುತ್ತ ಹೋಗಿ  ಎಷ್ಟೋ ವರ್ಷಗಳ ಹಿಂದೆಯೆ ಭೂಮಿಯಲ್ಲಿ ಜೀವಿಗಳ ಉಧ್ಬವವಾಯಿತು. ಅವರ ನಾಗರೀಕತೆ ತಂತ್ರಜ್ಞಾನ ಎಲ್ಲವು ಬೆಳೆಯುತ್ತ ಹೋಯಿತು. ಎಷ್ಟೆ ವಿಜ್ಞಾನ ಪ್ರಗತಿ ಹೊಂದಿದರು ಅವರಲ್ಲಿ  ಕೆಲವು ಅನುಮಾನಗಳು ಉಳಿದೆ ಇದ್ದವು. ಆಗ   ಮುಖ್ಯಸ್ಥರೆಲ್ಲ ಸೇರಿ ಒಂದು ಹೊಸ ಪ್ರಯೋಗಕ್ಕೆ ಮುನ್ನುಡಿ ಹಾಡಿದರು. ಸಮಾಜದಲ್ಲಿ  ಅ ಪ್ರಯೋಗಕ್ಕೆ ಕೆಲವರು ವಿರೋದವು ಇತ್ತು ಅಂದುಕೊಳ್ಳಿ.  ಪ್ರಕೃತಿಯಲ್ಲಿ ಸಿಗುವ ಮೂಲವಸ್ತುಗಳನ್ನೆ ಬಳಿಸಿ ಹೊಸ ಜೀವಕೋಶಗಳನ್ನು ಸೃಷ್ಟಿಸಿ ನೋಡುವ ಪ್ರಯೋಗವದು.  ಹಲವು ನೈಸರ್ಗಿಕ ರಸಾಯನ ವಸ್ತುಗಳನ್ನು ಸಂಯೋಜಿಸಿ ಸೂರ್ಯನ ಕಿರಣವನ್ನೆ ಶಕ್ತಿಯನ್ನಾಗಿ ಬಳಸಿ ಅವುಗಳನ್ನು ಅಭ್ಯಸಿಸಲಾಯಿತು.
ನೋಡ ನೋಡುತ್ತಿರುವಂತೆ ಅವುಗಳು ಸಹಜವಾಗಿ ಜೀವಿಗಳ ಜೀವಕೋಶಗಳಂತೆಯೆ ವಿಕಾಸಹೊಂದಲು ತೊಡಗಿದವು. ಮೊದಲಿಗೆ ಅವುಗಳು  ಸಮುದ್ರದಲ್ಲಿ ಬೆಳವಣಿಗೆ ಹೊಂದಿದವು. ಮೊದಲಿಗೆ ಕೇವಲ ಸಸ್ಯಜೀವಕೋಶಗಳಾಗಿದ್ದವುಗಳು ಕೆಲವು ಬದಲಾವಣೆಗಳೊಡನೆ   ಏಕಜೀವ ಕೋಶಗಳು ಬೆಳೆದಾಗ ನಾವೆಲ್ಲ ಸಂತಸಬಿದ್ದೆವು. ನೋಡು ನೋಡುತ್ತಲೆ ಅವು ಬೆಳವಣಿಗೆ ಹೊಂದುತ್ತ ಸಣ್ಣ ಜೀವಿಗಳ ಸೃಷ್ಟಿಯಾದವು. ನಂತರ ನಮ್ಮ ಅಗತ್ಯವೆ ಇಲ್ಲದಂತೆ ಅವುಗಳ ಸೃಷಿಕ್ರಿಯೆ ನಡೆಯುತ್ತ ಹೋಗಿ ಹಲವು ತಳಿಗಳು ವಿಭಾಗಗಳಾಗಿ ಬೆಳವಣಿಗೆ ಹೊಂದುತ್ತ ಹೋದವು. ನಮಗೆ ಕುತೂಹಲ ಹುಟ್ಟಿಸುವಂತೆ ನಮ್ಮೆದುರು ನಮ್ಮ ಸೃಷ್ಟಿ ಕೆಲವೆ ಕಾಲದಲ್ಲಿ ಅಧ್ಬುತ ರೂಪತಾಳಿ ಭೂಮಿಯನ್ನೆಲ್ಲ ಆವರಿಸುತ್ತ ಹೋಯಿತು.

   ದೈತ್ಯ ಜೀವಿಗಳ ಉಗಮವಾಯಿತು. ಆದರೆ ಕೆಲವೊಮ್ಮೆ ನೈಸರ್ಗಿಕವಾಗಿಯೆ ಅವುಗಳ ನಾಶವಾಗುತ್ತಿತ್ತು. ನಾವು ಅವುಗಳನ್ನೆಲ್ಲ ದಾಖಲಿಸುತ್ತ ಸಾಗಿದೆವು. ನಮಗೆ ಅಚ್ಚರಿ ತರುವಂತೆ ಸೃಷ್ಟಿಯ ಅದ್ಬುತ ಅಥವ ಉತ್ತುಂಗ ಎನ್ನುವಂತೆ ಮನಷ್ಯರು ಅಂದರೆ ನೀವು ಜನ್ಮ ತಾಳಿದಿರಿ. ನಂತರ ಮನುಷ್ಯ ಜೀವಿಗಳ ಮನಸಿನ ಶಕ್ತಿ ಅಪಾರವಾಗಿ ಬೆಳೆಯುತ್ತ ಸಾಗಿತು. ಸೃಷ್ಟಿಯಲ್ಲಿ ಅತಿ ಬುದ್ದಿವಂತ ಪ್ರಾಣಿಯಾಗಿ ಅವನು ಬೆಳವಣಿಗೆ ಹೊಂದಿದ. ಅವನ  ಜ್ಞಾನ ನೆನಪು ಕೌಶಲ್ಯ ಎಲ್ಲವು ನಮಗೆ ಅಚ್ಚರಿ ಕೆಲವೊಮ್ಮೆ ಭಯ ತರುತ್ತಿತ್ತು.

 ಸೃಷ್ಟಿಯ ಪ್ರತಿ ವಸ್ತುವಿನಲ್ಲು ಮನುಷ್ಯನಿಗೆ ಇರುವ ಕುತೂಹಲ ಮತ್ತು  ಕಲ್ಪನೆಗಳೆ ಅವನ ಅವಿಷ್ಕಾರಗಳಿಗೆ ಮೂಲಕಾರಣವಾಯಿತು. ಯಾವ ಜೀವಿಗು ಇರದಿದ್ದ ಮಾತನಾಡುವ ಶಕ್ತಿ ತರ್ಕಬದ್ದವಾಗಿ ಯೋಚಿಸುವಶಕ್ತಿ ಸೃಷ್ಟಿಯಲ್ಲಿ ಅವನನ್ನು ಉನ್ನತ ಸ್ಥಾನಕ್ಕೇರಿಸಿತು.

 ನಿಜ ಹೇಳಬೇಕೆಂದರೆ ನಾವು ಮನುಷ್ಯನ ಸೃಷ್ಟಿಗೆ ಕಾರಣಕರ್ತರಾಗಿದ್ದರು ಸಹ ನಮಗೆ ಕೆಲವೊಂದು ಉತ್ತರ ಸಿಗದ ಪ್ರಶ್ನೆಗಳಿದ್ದವು . ಅದೆಂದರೆ ನಮ್ಮ ಸೃಷ್ಟಿ ಹೇಗೆ ಆಯಿತು ಎಂಬುದು. ಮನುಷ್ಯ ತನ್ನ ಬುದ್ದಿಶಕ್ತಿಯಿಂದ ಅಂತಹ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಸಾಗಿದ. ಅವನ ಇತಿಹಾಸ ನಮಗೆ ಪಾಠದಂತೆ ಇತ್ತು. ಅವನ ಅವಿಷ್ಕಾರಗಳಾದ ಯಂತ್ರಗಳು ನಿಸಂಶಯವಾಗಿ ಅವನ ಉನ್ನತಿಯನ್ನು ಸಾರುತ್ತಿದ್ದವು.

 ನಾವು ನೋಡು ನೋಡುತ್ತಿರುವಂತೆ ಅವನು ಪ್ರತಿ ಸೃಷ್ಟಿಗೆ ಪ್ರಯತ್ನದಲ್ಲಿ ತೊಡಗಿದ. ಇದೆಂತಹ ಕೌತುಕ. ನಮ್ಮನ್ನು ಯಾರು ಸೃಷ್ಟಿಸಿದರೆಂಬ ಅರಿವು ನಮಗಿಲ್ಲ ಅದನ್ನು ನಮ್ಮ ಸೃಷ್ಟಿಯಾದ ಮನುಷ್ಯ ಬೇಧಿಸ ತೊಡಗಿದ , ಆದರೆ ಅವನು ಸಹ ನಮ್ಮಂತೆಯೆ  ಮತ್ತೊಂದು ಸೃಷ್ಟಿಗೆ ಪ್ರಯತ್ನಿಸಲು ತೊಡಗಿದ.  ಅಂದರೆ ಇದೊಂದು ನಿರಂತರ ಚಕ್ರವೆ ಎಂಬ ಪ್ರಶ್ನೆ ನಮ್ಮನ್ನು ಕಾಡಿದೆ. ನಮ್ಮನ್ನು ಯಾರೊ ಸೃಷ್ಟಿಸುವುದು , ನಂತರ ನಾವು ನಮ್ಮದೆ ಸೃಷ್ಟಿಯಲ್ಲಿ ತೊಡಗುವುದು ನಂತರ ನಮ್ಮ ಸೃಷ್ಟಿ ಪುನಃ ಪ್ರತಿ ಸೃಷ್ಟಿಯಲ್ಲಿ ತೊಡಗುವುದು ಇದು ಹೀಗೆಯೆ ಸಾಗುತ್ತದೆಯೆ ಗೊತ್ತಿಲ್ಲ.

 ನಮಗೆ ಪ್ರಕೃತಿಯಲ್ಲಿ ಸಿಗದ ಅನೇಕ ಪ್ರಶ್ನೆಗಳಿಗೆ ಮನುಷ್ಯ ಉತ್ತರಗಳನ್ನು  ಹುಡುಕಲು ಪ್ರಯತ್ನಿಸಿದ್ದ . ಅವುಗಳಲ್ಲಿ ಮುಖ್ಯ ವೆಂದರೆ ಸೃಷ್ಟಿಯ ಕಲ್ಪನೆ, ದೇವರು ಎನ್ನುವ ವಸ್ತು.  ವಿಜ್ಞಾನ ಬೆಳೆದಂತೆ ಅವನು ಹೊರಗಿನ ಗ್ರಹಗಳತ್ತ ಸಾಗಲು ತೊಡಗಿದ.

ಆದರೆ ಪ್ರಕೃತಿಯಲ್ಲು ವಿಕೃತಿ ಎನ್ನುವಂತೆ ಅವನು ತಾನು ನಿಂತ ಮರದ ಕೊಂಬೆಯನ್ನೆ ಕಡಿಯಲು ತೊಡಗಿದಾಗ ನಮಗೆ ಗಾಭರಿ ಪ್ರಾರಂಬವಾಯಿತು. ನಿಜ ಹೇಳಬೇಕೆಂದರೆ , ನಮ್ಮಲ್ಲಿ ಮನುಷ್ಯನ ಅವಿಷ್ಕಾರಕ್ಕಿಂತ ಮುಂಚೆ ಕೆಲವು ಭಾವವಿರಬಹುದೆಂಬ ಕಲ್ಪನೆಯೆ ಇರಲಿಲ್ಲ. ಅದೆಂದರೆ ದ್ವೇಷ, ರೋಷ, ಯಾರನ್ನೊ ಕೊಲ್ಲುವುದು, ಕ್ರೌರ್ಯ, ಯುದ್ದ, ಅಣುವಿನ  ಆಯುದ. ಅಸ್ತ್ರಗಳು ಇವುಗಳು ನಮ್ಮನ್ನೆಲ್ಲ ಬೆಚ್ಚಿ ಬೀಳಿಸಿದವು. ನಮಗೆ ಆಶ್ಚರ್ಯವಾಗಲು ತೊಡಗಿತು,. ಇದು ಏಕಾಯಿತು. ಒಂದು ವೇಳೆ ಇದು ಸೃಷ್ಟಿಯ ವಿಕೃತಿಯ ಎಂದು. ಅದು ನಿಜವಾದರೆ ಅದಕ್ಕೆ ಕಾರಣವೇನು. ನಮ್ಮ ಸೃಷ್ಟಿಯ ಪ್ರಯೋಗದಲ್ಲಿ ಯಾವ ತಪ್ಪು ಇತ್ತು ನಾವು ಎಲ್ಲಿ ತಪ್ಪಿದೆವು. ನಮಗೆ ತಿಳಿಯುತ್ತಿಲ್ಲ. ಹಾಗಾಗಿ ಕೆಲವು ಮನುಷ್ಯರನ್ನು ಕರೆತಂದು ನಾವು ಅಭ್ಯಸಿಸತೊಡಗಿದೆವು. ವಿಚಿತ್ರವೆಂದರೆ ಈಗಲು ಮನುಷ್ಯನ ಸೃಷ್ಟಿಯಲ್ಲಿ ಯಾವುದೆ ದೋಷವಿಲ್ಲ. ಅಂದರೆ ಅವನು ಹುಟ್ಟು ಅದಾಗ ಸಹಜವಾಗಿಯೆ ಇರುತ್ತಾನೆ  ಆದರೆ ಬೆಳವಣಿಗೆ ಹೊಂದಿದಂತೆ , ಅವನಲ್ಲಿ ಕೆಲವು ಬದಲಾವಣೆ ಕಾಣಿಸುತ್ತದೆ ಒಬ್ಬೊಬ್ಬ ಮನುಷ್ಯನು ಒಂದೊಂದು ರೀತಿ ಬೆಳೆಯುತ್ತ ವಿಕಾರಗಳಿಗೆ ಕಾರಣವಾಗುತ್ತಿದ್ದಾನೆ. ತಾನು ನಿಂತಿರುವ ನೆಲವನ್ನೆ ಪ್ರಕೃತಿಯನ್ನು ನಾಶಮಾಡಲು ಸನ್ನದನಾಗಿದ್ದಾನೆ. ಇದಕ್ಕೆ ಹೊರಗಿನ ಕಾರಣ ಅಥವ ಪ್ರಭಾವ ಕಾರಣವಿರಬಹುದೆಂದು ಅನ್ನಿಸುತ್ತದೆ.

 ಈಗ ನಮ್ಮವರೆಲ್ಲ ಯೋಚಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಯಾವುದಾದರು ಮಾರ್ಗವಿದೆಯೆ ಎಂದು. ಇಲ್ಲವೆ ಈ ಪ್ರಯೋಗವನ್ನು ಇಲ್ಲಿಗೆ ಸ್ಥಗಿತಗೊಳಿಸಬೇಕೆ ಎಂಬ ಗೊಂದಲ. ನಮಗನ್ನಿಸುವಂತೆ ಹಲವು ಪ್ರಶ್ನೆಗಳಿಗೆ ಸಶಕ್ತವಾಗಿ ಉತ್ತರಗಳನ್ನು ಹುಡುಕಿರುವ ಮನುಷ್ಯ  ಈ ಸಮಸ್ಯೆಗೆ ಉತ್ತರ ಹುಡುಕಿಕೊಳ್ಳನೆ ಎನ್ನುವ ದೈರ್ಯವು ನಮಗಿದೆ”

ಅವನು ಮಾತು ನಿಲ್ಲಿಸಿದಾಗ ನನಗೆ ಎಂತದೊ ವಿಭ್ರಮೆ ಕಾಡಿತು. ಅಂದರೆ ಏನು ನಾವು ಇಲ್ಲಿಯವರೆಗು ಭಾವಿಸಿರುವಂತೆ ಮನುಷ್ಯನ ಸೃಷಿಗೆ ದೇವರು ಕಾರಣವೆಂಬ ನಮ್ಮ ನಂಬಿಕೆ   ಸುಳ್ಳಾಯಿತ.  ಅಥವ ಅದನ್ನು ಹೀಗೂ ಹೇಳಬಹುದ,
ನಮ್ಮ ಸೃಷಿಗೆ ಕಾರಣವಾಗಿರುವ ಇವರು ನಮ್ಮ ಪಾಲಿಗೆ ದೇವತೆಗಳೆ ಅಲ್ಲವೆ.

 ಆದರೆ ಅವನು ಹೇಳಿದ್ದರಲ್ಲಿ ನನಗೆ ಅರ್ಥವಾಗದ ಸಾಕಷ್ಟು ವಿಷಯಗಳಿದ್ದವು. ಮೊದಲನೆಯದಾಗಿ ಭೂಮಿಯ ಮೇಲಿನ ಸೃಷ್ಟಿ ಚಕ್ರದ ಕತೆ ನಡೆದಿರುವುದು ಸುಮಾರು ಐದು ಸಾವಿರ ವರ್ಷಗಳಷ್ಟು ದೀರ್ಘಕಾಲ ಅಥವ ಸ್ವಲ್ಪ ಹೆಚ್ಚೆ ಇರಬಹುದು. ಆದರೆ ಇವನಾದರು ಇದನ್ನೊ ಅದೇನೊ ಮೂರುಗಂಟೆಯ ಸಿನಿಮಾದಂತೆ ಹೇಳುತ್ತಿದ್ದಾನೆ. ಇವನ ಕಾಲಮಾನದಲ್ಲಿ ಅಂದುಕೊಂಡರು. ಸೃಷ್ಟಿಕ್ರಿಯೆ  ಪ್ರಾರಂಬವಾಗಿ ಕೇವಲ ಐವತ್ತು ಅರವತ್ತು ವರುಷಗಾಗಿದೆಯ ಅದು ಅಸಂಭವ ಅನ್ನಿಸಿತು. ಅಂದರೆ ಇವನು ಪುಸ್ತಕದಲ್ಲಿ ಬರೆಯುತ್ತ ಕುಳಿತಿರುವುದು ಅವರ ಪರಿಕ್ಷೆಯ  ದಾಖಲೆಗಳೆ. ನನಗೆ ಅರ್ಥವಾಗಲಿಲ್ಲ.

 “ನೋಡಿ ಇವರೆ ನೀವು ನಿಮ್ಮ ಹೆಸರು ಕಾಯಸ್ಥನೆಂದು ಹೇಳಿದಿರಿ ನಾನು ಹಾಗೆ ಕರೆಯುವೆ, ಕಾಯಸ್ಥರೆ, ನಿಮ್ಮ ಕತೆಯ ಪ್ರಯೋಗದ ಕಾಲಮಾನ ನಲವತ್ತು ಐವತ್ತು ವರುಷಗಳಲ್ಲಿ ಸಂಬವಿಸಿರಬಹುದು, ಆದರೆ ಮನುಷ್ಯನ ಹಾಗು ಭೂಮಿಯ ಮೇಲಿನ ಜೀವಿಗಳ ಇತಿಹಾಸ ಐದುಸಾವಿರ ವರ್ಷಕ್ಕು ಮೀರಿದೆ, ಅದನ್ನು ಹೇಗೆ ವಿವರಿಸುವಿರಿ”  ಕೇಳಿದೆ.

ಅದಕ್ಕವನು

  “ಯಾವುದೆ ಜೀವಿಗೆ ಆಗಲಿ , ಅದರ ಬುದ್ದಿಶಕ್ತಿಗೆ, ಅಥವ ಯೋಚನ ಶಕ್ತಿಗೆ ಕೆಲವು ಮಿತಿಗಳಿರುತ್ತವೆ, ಅದನ್ನು ಮೀರಿದಾಗ  ಆ ಜೀವಿಗಳಿಗೆ ಅದನ್ನು ನಾವು ವಿವರಿಸಿದರು ಅರ್ಥ ಮಾಡಿಸಲು ಕಷ್ಟ. ನಿಮಗೆ ಒಂದು ಉದಾಹರಣೆ ಕೊಡುವೆ ನೋಡಿ, ನಿಮ್ಮಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿರುವ ಚಿಕ್ಕಮಗುವನ್ನು ಕಲ್ಪಿಸಿಕೊಳ್ಳಿ, ನೀವು ಒಮ್ಮೆಲೆ ಅವನಿಗೆ ಮಾಸ್ಟರ್ ಡಿಗ್ರಿಯಲ್ಲಿ ಬರುವ ಒಂದು ಗಣಿತದ ಸಮಸ್ಯೆಯನ್ನು ಬಿಡಿಸಲು ಕೊಟ್ಟರೆ ಏನಾಗುವುದು, ಅಥವ ನೀವು ಅವನಿಗೆ ಬಲವಂತವಾಗಿ ಅದನ್ನು ಬೋದಿಸಿದರೆ ಏನಾಗುತ್ತದೆ” ಎಂದು ಕೇಳಿದ.

 ನಾನು ಉತ್ತರಿಸುತ್ತ

“ಸಾದ್ಯವಿಲ್ಲ ಅರೀತಿ ಮಾಡಿದರೆ ಸಹಜವಾಗಿಯೆ ಆ ಮಗುವಿಗೆ  ಗಣಿತದ ಸಮಸ್ಯೆಯ ಪ್ರಾಮುಖ್ಯತೆ ಅರಿವಾಗುವದಿಲ್ಲ. ಬಲವಂತದಿಂದಲು ಯಾವುದೆ ಪ್ರಯೋಜನವಿಲ್ಲ ಏಕೆಂದರೆ ಆ ಮಗುವಿನ ಮೆದುಳಿನ ಶಕ್ತಿ ಸೀಮಿತವಾಗಿರುತ್ತದೆ ಅಲ್ಲವೆ” ಎಂದೆ

ಅವನು ನಗುತ್ತ “ನೋಡಿ ಎಲ್ಲ ವಿಷಯಗಳು ಸಹ ಹಾಗೆ, ದೊಡ್ಡವರಾದ ಮಾತ್ರಕ್ಕೆ ಮನುಷ್ಯನ ಮೆದುಳು ಎಲ್ಲವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇದೆ ಅಂದುಕೊಳ್ಳಬೇಡಿ, ಈಗ ನಿಮ್ಮ ಪ್ರಶ್ನೆಗೆ ಬರುವದಾದರೆ.  ಅವಕಾಶದಲ್ಲಿ ಹೇಗೆ ಬೇರೆಬೇರೆ ಆಯಾಮಗಳಿರುತ್ತವೊ ಹಾಗೆಯೆ ಸಮಯದಲ್ಲಿ (Time)  ಬೇರೆ ಬೇರೆ ಅಯಾಮಗಳು (Dimension) ಇರುತ್ತದೆ. ಅಂದರೆ ನಮಗೆ ಐವತ್ತು ವರುಷಗಳಗಿರುವ   ಸಮಯ ನಿಮಗೆ ಐದುಸಾವಿರ ವರುಷಗಳಾಗುವ ಸಾದ್ಯತೆ ಇದೆ ಅಲ್ಲವೆ” ಎಂದ

ನನ್ನ ಬುದ್ದಿಗೆ ಮಂಕು ಕವಿಯಿತು. ಅಂದರೆ ನಮ್ಮ  ಪುರಾಣಗಳಲ್ಲಿ ಹೇಳುತ್ತಿದ್ದ ಕತೆಗಳಿದ್ದವಲ್ಲ , ಮನುಷ್ಯನಿಗೆ ಒಂದು ವರ್ಷವೆಂದರೆ   ಪಿತೃದೇವತೆಗಳಿಗೆ  ಒಂದು ದಿನವೆಂದು, ಹಾಗೆ ಪಿತೃಗಳ ಒಂದು ವರ್ಷವು ಬ್ರಹ್ಮನಿಗೆ  ಒಂದು ಹಗಲೆಂದು. ಬ್ರಹ್ಮನ ಒಂದು ವರ್ಷವು ವಿಷ್ಣುವಿಗೆ ಒಂದು ದಿನವೆಂದೆ, ಇವೆಲ್ಲ  ಕಲ್ಪನೆಗಳು ನಿಜವಾಗಿರಲು ಸಾದ್ಯವೆ ಅನ್ನಿಸಿತು. ನಮ್ಮ ಪುರಾಣದ ಕತೆಗಳನ್ನು ಇವನು ಹೇಳುತ್ತಿರುವದನ್ನು ಸಮನ್ವಯಗೊಳಿಸಿದರೆ , ಈತನು ಮತ್ತು ಇವನ ಜನಾಂಗವು ನಮ್ಮ ಪಾಲಿಗೆ ದೇವತೆಗಳು ಆದರೆ ಇವರು ಇರುವದಾದರು ಎಲ್ಲಿ. ನಾನೀಗ ದೇವಮೂಲವನ್ನು ಹುಡುಕುವ ದಾರಿಯಲ್ಲಿರುವೆ ಎಂಬ ಭಾವ ನನ್ನನ್ನು ತುಂಬಿತು.

 ನನ್ನ ಮನದಲ್ಲಿ ದೊಡ್ಡ ಆಂದೋಲನವೊಂದು ನಡೆದಿತ್ತು.  ನಾನು ಬಹುತೇಕ ಮನಸಿನ ಸಮತೋಲನ ಕಳೆದುಕೊಂಡಿದ್ದೆ . ಹಾಗಾಗಿ ನಾನು ಬಹಳಷ್ಟು  ಅರ್ಥಹೀನ  ಪ್ರಶ್ನೆಗಳನ್ನು ಕೇಳ ತೊಡಗಿದೆ.
“ನಾನೀಗ ಸತ್ತಿರುವೆನೆ?” ಎಂದೆ
“ಇಲ್ಲ ನೀವು ಸತ್ತಿಲ್ಲ , ನೀವಿಲ್ಲಿಗೆ ಬಂದಿರುವುದು ಸಜೀವರಾಗಿ, ನಿಮ್ಮದೆ ದೇಹದ ಸಮೇತ”
ನನಗೆ ಸ್ವಲ್ಪ ಸಮಾದಾನವಾಯಿತು. ಮತ್ತೆ ಕೇಳಿದೆ.
“ಈಗ ನನ್ನನ್ನು ಕರೆತಂದಿರುವ ಕಾರಣವೇನಿದೆ, ನನ್ನ ಮೇಲೆ ನಿಮ್ಮ ವಿಜ್ಞಾನಿಗಳು ತಮ್ಮ ಪ್ರಯೋಗ ನಡೆಸುತ್ತಾರೆಯೆ” ಎಂದು ಕೇಳಿದೆ ಭಯದಿಂದ.
“ಇಲ್ಲ ಖಂಡೀತ ಇಲ್ಲ ಅನ್ನಿಸುತ್ತೆ. ನಿಮ್ಮನ್ನು ಕೇವಲ ಪರೀಕ್ಷೆಗೆ , ಪ್ರಯೋಗಕ್ಕೆ ಕರೆತಂದಿದ್ದರೆ , ನನ್ನ ಬಳಿ ನಿಮ್ಮನ್ನು ಕಳಿಸಲು ಕಾರಣವಿರಲಿಲ್ಲ. ನಿಮ್ಮನ್ನು ನನ್ನ ಬಳಿ ಕಳಿಸಿ ನಿಮಗೆ ಅಗತ್ಯ ಮಾಹಿತಿಯನ್ನೆಲ್ಲ ಕೊಟ್ಟು ನಂತರ   ಪ್ರಮುಖರತ್ತ   ಕರೆದೊಯ್ಯಲಾಗುತ್ತೆ ಅನ್ನಿಸುತ್ತೆ” ಎಂದ.
ನನಗೀಗ ಆಶ್ಚರ್ಯವಾಯಿತು.
 “ ಅಂದರೆ ನನ್ನನ್ನು ಯಾವ ಕಾರಣಕ್ಕೆ ಇಲ್ಲಿಗೆ ಕರೆತಂದಿದೆ ಎಂದು ನಿಮಗು ತಿಳಿದಿಲ್ಲವೊ ಅಥವ ನೀವು ನನಗೆ ಹೇಳುತ್ತಿಲ್ಲವೊ” ಎಂದೆ
“ಇಲ್ಲ ನಿಮ್ಮನ್ನು ಯಾವ ಕಾರಣಕ್ಕಾಗಿ    ಮುಖ್ಯಸ್ಥರಲ್ಲಿಗೆ  ಕರೆದೊಯ್ಯುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ.  ಇದು ನನಗು ತಿಳಿಯದ ರಹಸ್ಯ. ನಾನು ನಿಮ್ಮಿಂದ ಮುಚ್ಚಿಡುವ ಅಗತ್ಯವೇನು ನನಗಿಲ್ಲ” ಎಂದ.

ಇದೊಳ್ಳೆ ಆಶ್ಚರ್ಯವಾಗಿದೆಯಲ್ಲ. ನನ್ನನ್ನು ಯಾವ ಕಾರಣಕ್ಕೆ ಕರೆತರಲಾಗಿದೆ ಎನ್ನುವುದು ಇಲ್ಲಿ ಮುಖ್ಯಸ್ಥನಂತಿರುವ ಇವನಿಗೆ ತಿಳಿದಿಲ್ಲ. ಅಲ್ಲಿಗೆ ನನ್ನನ್ನು ಯಾವುದೊ ಗುರುತರವಾದ ಕಾರಣಕ್ಕೆ ಕರೆತರಲಾಗಿದೆ ಅನ್ನುವುದು ಸತ್ಯ. ಏನಿರಬಹುದು ಎನ್ನುವ ಕುತೂಹಲ ನನ್ನ ಮನಸನ್ನು ತುಂಬಿತು.

ನಾನು ಸುಮ್ಮನೆ ತಮಾಷಿಗೆ “ಅಂದರೆ ಅದು ದೇವ ರಹಸ್ಯ ಎನ್ನಿ” ಎಂದೆ

ಅವನು ನಗುತ್ತ ನುಡಿದ “ನಿಜ ನಿಜ ಅದು ಖಂಡೀತ ಒಂದು ದೇವ ರಹಸ್ಯವೆ”

 ಅವನು ಮತ್ತೆ ತನ್ನ ಎದುರಿಗಿದ್ದ ಪುಸ್ತಕದಲ್ಲಿ ಅವನ ಕೈಯಲ್ಲಿದ್ದ ನವಿಲುಗರಿಯಂತ ಲೇಖಣಿಯಿಂದ ಏನನ್ನೊ ಗುರುತು ಮಾಡಿದ. ನಾನು ಆಶ್ಚರ್ಯ ಪಡುತ್ತ ಕೇಳಿದೆ
“ನೀವು ಮಾಡುತ್ತಿರುವ ಕೆಲಸವಾದರು ಏನು ನನಗೆ ಅರ್ಥವಾಗುತ್ತಿಲ್ಲ. ಇದೇನು ಹೀಗೆ ಪುಸ್ತಕದಲ್ಲಿ ಗುರುತು ಮಾಡುತ್ತಿರುವಿರಿ.ನಿಮ್ಮ ಕೆಲಸವಾದರು ಏನು” ಎಂದೆ

ಅವನು ಹೇಳಿದ “ಏನಿಲ್ಲ ನಮ್ಮ ಪ್ರಯೋಗದ  ಎಲ್ಲ ವಿವರಗಳು, ಇದರಲ್ಲಿ ದಾಖಲಾಗುತ್ತಿದೆ, ಅಂದರೆ ಭೂಮಿಯಲ್ಲಿನ ಪ್ರತಿ ಜೀವಿಯಲ್ಲಿನ್ನ ಜೀವಮಾನಕಾಲದ ಮುಖ್ಯಚಟುವಟಿಕೆಗಳು. ಅವುಗಳ ಸ್ವಭಾವ , ಅವರು ಮಾಡಿದ ಸಾಮಾಜಿಕ, ಅಥವ ಇತರೆ ಕೆಲಸಗಳು. ಒಂದು ಮಾತಿನಲ್ಲಿ ಹೇಳುವದಾದರೆ, ನಿಮ್ಮ ಮಾನವರ ಮಾತಿನಲ್ಲಿ ಬರುವ ಪಾಪ ಪುಣ್ಯಗಳ ಲೆಕ್ಕ” ಎನ್ನುತ್ತ ಜೋರಾಗಿ ನಕ್ಕ.

ನನಗೆ  ಶಾಕ್ ಆದಂತಾಯಿತು. ಅಂದರೆ ಮನುಜರ ಹಲವಾರು ಕಲ್ಪನೆಗಳು ಪೂರ್ತಿ ಸುಳ್ಳಲ್ಲ. ಅವರಿಗೆ ಅಂತ ಕಲ್ಪನೆಗಳು ಹೇಗೆ ಬಂದವು ಎಂದು ಆಶ್ಚರ್ಯವಾಯಿತು. ಮತ್ತೆ ಕೇಳಿದೆ
“ಅಂದರೆ ನೀವು ನಮ್ಮವರು ಹೇಳುವ ಯಮಲೋಕದಲ್ಲಿನ ಚಿತ್ರಗುಪ್ತ ಎನ್ನುವರೆ. ಭೂಮಿಯಲ್ಲಿ ಪ್ರತಿ ನಿಮಿಷವು ಹುಟ್ಟು ಸಾವು ಸಂಬವಿಸುತ್ತಲೆ ಇರುತ್ತದೆ. ಆದರೆ ನೀವಾದರೊ ಆಗೊಮ್ಮೆ ಈಗೊಮ್ಮೆ , ಪುಸ್ತಕದಲ್ಲಿ ಒಂದು ಗುರುತು ಮಾಡುತ್ತಿರುವಿರಿ. ಅದರ ಅರ್ಥವೇನು ಹಾಗು ಅದನ್ನು ಓದುವದು ಹೇಗೆ?”

ಅವನು ನಗುತ್ತ ನುಡಿದ

 “ನಿಮ್ಮ ಕುತೂಹಲ ನನಗೆ ಸಂತಸ ತರುತ್ತಿದೆ. ನೀವು ಹೇಳುವುದು ನಿಜ ನನ್ನ ಕಾರ್ಯ ಸ್ವಲ್ಪ ಹೆಚ್ಚು ಕಡಿಮೆ ನೀವು ಹೇಳುವ ಚಿತ್ರಗುಪ್ತನಂತೆ ಇದೆ. ಆದರೆ ನಿಮ್ಮ ಕಲ್ಪನೆಯ ಆ ಚಿತ್ರಗುಪ್ತ ಪ್ರತಿಯೊಬ್ಬರ ಜೀವನವನ್ನು ಬರೆದಿಡುತ್ತಾನೆ. ಇಲ್ಲಿ ಹಾಗಲ್ಲ ನನ್ನ ಜೊತೆಯಲ್ಲಿ ಒಂದು ದೊಡ್ಡ ಬಳಗವೆ ಇದೆ, ಅವರು ಭೂಮಿಯ ಇತಿಹಾಸ, ಪ್ರಾಣಿ ಮನುಷ್ಯರ ಚಟುವಟಿಕೆ ,  ಕೆಲವೊಮ್ಮೆ ಅವರ ಮನಸಿನ ಭಾವನೆ ಎಲ್ಲವನ್ನು ಒಂದಡೆ ಕ್ರೂಡಿಕರಿಸುತ್ತ ಇದ್ದಾರೆ. ನಮ್ಮವರು ಮಾಡುವ ಎಲ್ಲ ದಾಖಲೆಗಳು ಒಂದಡೆ ಶೇಖರ ವಾದರೆ ನಾನು ಅವುಗಳನ್ನೆ ಒಟ್ಟು ಮಾಡಿ. ಚಿಕ್ಕ ಗಾತ್ರಕ್ಕೆ ಕುಗ್ಗಿಸಿ (ZIP)  ನಂತರ ನಿಯಮಿತ ಅವದಿಯಲ್ಲಿ ಅವುಗಳನ್ನು , ಮ್ಯಾಗ್ನೆಟಿಕ್  ಹಾಳೆಗಳ ರೂಪದಲ್ಲಿರು ಈ ಪುಸ್ತಕದಲ್ಲಿ ಶೇಖರಿಸುತ್ತೇನೆ. ಮುಂದೆ ನಮಗೆ ಬೇಕಾದಾಗ  ಅವುಗಳನ್ನು ಪುನಃ ಬಳಕೆ ಮಾಡಿಕೊಳ್ಳ ಬಹುದು” ಎಂದ . ನನಗೆ ಆಶ್ಚರ್ಯವಾಯಿತು.
“  ನಿಮ್ಮ ಒಂದು ಚುಕ್ಕೆಯ ಗುರುತು. ಸರಿ ಸುಮಾರು ಎಷ್ಟು ಡೇಟಾವನ್ನು ಸಂಗ್ರಹಿಸಬಲ್ಲದು, ಅಂದರೆ ಸರಿ ಸುಮಾರು , ಒಂದು ದಿನಕ್ಕೆ ಸಮವ, ಅವುಗಳನ್ನು ಪುನ: ಓದಬೇಕೆಂದರೆ ಹೇಗೆ” ಎಂದೆ.

“ಇಲ್ಲ ಇಲ್ಲ, ಒಂದು ಚುಕ್ಕೆಯ ಗುರುತು ಮನುಷ್ಯನ  ಕಾಲಮಾನದ ಸರಿ ಸುಮಾರು ಹತ್ತು ವರ್ಷದ ಚಟುವಟಿಕೆಗಳನ್ನು ಒಳಗೊಳ್ಳಬಹುದು ಅನ್ನಿಸುತ್ತೆ.   ಆ ಲೆಕ್ಕದಲ್ಲಿ ಒಂದು ಪುಟ ಸುಮಾರು ನೂರುವರ್ಷಗಳನ್ನು, ಒಂದು ಪುಸ್ತಕ ಸುಮಾರು ಸಾವಿರ ಮನುಷ್ಯ ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಇದನ್ನು ಓದಲು ಬೇರೆಯೆ ಸಾದನವಿದೆ, ಮ್ಯಾಗ್ನಟಿಕ್ ರೀಡರ್ ಎಂದುಕೊಳ್ಳಿ “ ಎಂದ ಅವನು.
ನನಗೆ ದಿಗ್ಬ್ಱಮೆಯಾಯಿತು. ಇವನು ಹೇಳುವುದು ಅಸಂಭವ ಒಂದು ಚುಕ್ಕೆಯಲ್ಲಿ ಸಂಪೂರ್ಣ ಭೂಮಿಯ ಹತ್ತುವರ್ಷದ ಚಟುವಟಿಕೆ ಸಂಗ್ರಹಿಸಲು ಹೇಗೆ ಸಾದ್ಯ. ದತ್ತಾಂಶವನ್ನು ಅಷ್ಟು ಮಟ್ಟಿಗೆ  ಕುಗ್ಗಿಸಲು ಸಾದ್ಯವೆ ಇಲ್ಲ. ಇವನು ನನಗೇನೊ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿ ಕೇಳಿದೆ

” ಒಂದು ಚುಕ್ಕೆಗೆ ಹತ್ತು ವರ್ಷದ ಡೇಟಾವೆ ಅದು ಹೇಗೆ ಸಾದ್ಯ ಅಸಂಭವ”

ಅವನು ಹೇಳಿದ “ನೋಡಿ ನಿಮ್ಮಲ್ಲಿ ಮೊದಲಿಗೆ ಗ್ರಾಮಫೋನ್ ರೆಕಾರ್ಡ ಬಂದಾಗ , ಒಂದು ತಟ್ಟೆಯಲ್ಲಿ ಒಂದೆರಡು ಹಾಡಿಗಿಂತ ಹೆಚ್ಚು ಹಿಡಿಸಲು ಸಾದ್ಯವಿರಲಿಲ್ಲ. ಮೊದಲ ಕಂಪ್ಯೂಟರ್ ನೀವು ಮಾಡಿದಾಗ ಅದು ಸಂಪೂರ್ಣ ಕೋಣೆಯನ್ನೆ ಹಿಡಿಯುವಷ್ಟೆ ದೊಡ್ಡದಿತ್ತು ಅಲ್ಲವೆ. ಮುಂದೆ ಟೇಪ್ ರೆಕಾರ್ಡಾರ್ ಬಂದಾಗ, ಸಣ್ಣದೊಂದು ಟೇಪ್ ನಲ್ಲಿ ಹತ್ತಾರು ಹಾಡುಗಳನ್ನು ಕೇಳಿದಿರಿ . ನಂತರ ಸಿ.ಡಿ. ಗಳು ಬಂದ ನಂತರ ನಿಮಗೆ ತಿಳಿದಿದೆ. ಹಾಗೆ  mp3 mp4 DVD pendrive ಗಳು ಬಂದಹಾಗೆಲ್ಲ ಸಂಗ್ರಹ ಶಕ್ತಿ ಹೆಚ್ಚುತ್ತ ಹೋಯಿತು, ಈಗಂತು ನಿಮ್ಮಲ್ಲಿ ಅದ್ಭುತ ಪ್ರಗತಿ ಸಾದಿಸಿದೆ. ಈ ಹಿನ್ನಲೆಯಲ್ಲಿ  ಯೋಚಿಸಿ ಹೇಳಿ, ಮುಂದೆ ಎಂದೊ ಒಂದು ದಿನ ಇದು ನಿಮಗು ಸಾದ್ಯವಾಗಬಹುದು ಅಲ್ಲವೆ. ನೋಡಿ ನೀವು ಇಷ್ಟ ಪಟ್ಟರೆ ಪರೀಕ್ಷೆಮಾಡಿ ನೋಡಬಹುದು. ಆದರೆ ಸದ್ಯಕ್ಕೆ  ನೀವು ನಿಮಗೆ ಸಂಬಂದಿಸಿದ ಚಟುವಟಿಕೆ ಮಾತ್ರ ಗಮನಿಸಬಹುದು , ಬೇರೆ ಬೇರೆಯವರ ವಿವರ ನಿಮಗೆ ತಿಳಿಯಲು ಆಗಲ್ಲ” ಎಂದ.

ಇವನು ಹೇಳುತ್ತಿರುವುದು ನಿಜ. ವಿಜ್ಞಾನ ಪ್ರಗತಿ ಹೊಂದುತ್ತ ಏನು ಬೇಕಾದರು ಸಾದ್ಯವಾಗಬಹುದು ಅನ್ನಿಸಿತು. ಅಲ್ಲದೆ ಅವನು ಪರೀಕ್ಷೆ ಮಾಡಿ ಎಂಬ ಮಾತಿಗೆ ಉತ್ಸಾಹದಿಂದ ಸಿದ್ದನಾದೆ. ಅವನು ಒಳಗಿನಿಂದ ಬಳೆಯಂತಹ ಒಂದು ವಸ್ತುವನ್ನು ಹೊರತೆಗೆದ. ಅದನ್ನು ನನ್ನ ಬಲಕೈಗೆ ತೊಡಸಿದ, ಅದರಿಂದ ಹೊರಬಂದ ಸಣ್ಣದೊಂದು ವೈರ್ ಪೆನ್ನಿನಂತ ವಸ್ತು ಒಂದಕ್ಕೆ ತಗಲಿಸಲಾಗಿತ್ತು.
“ನೀವು ಈ ಪುಟದ ಕಡೆಯಲ್ಲಿರುವ ಐದು ಚುಕ್ಕಿಗಳ ಮೇಲೆ ಈ ಸಾದನವನ್ನು ಇಡುತ್ತ ಪರೀಕ್ಷಿಸಿ, ನಿಮಗ ಸಂಬಂದಿಸಿದ ಯಾವುದೆ ದೃಷ್ಯ ಮಾತುಗಳು ಕೇಳಬಹುದು “ ಎಂದ ನಗುತ್ತ ಒಂದು ಪುಟವನ್ನು ತೋರಿಸಿ.

ನಾನು ಕಡೆಯ ಐದು ಚುಕ್ಕಿಗಳಲ್ಲಿ ಮೊದಲಿನದರ ಮೇಲೆ ನನ್ನ ಕೈಲಿದ್ದ ಸಾದನವನ್ನು ಮುಟ್ಟಿಸಿದೆ.

ನನ್ನ ಕಣ್ಣೆದುರು ಯಾವುದೊ ದೃಷ್ಯ ಕಾಣುತ್ತಿತ್ತು.



ಸುಮಾರು ಎಂಟುವರ್ಷಗಳ ಹುಡುಗ , ಹೆಗಲಲ್ಲಿ ಚೀಲ ನೇತು ಹಾಕಿ, ಕೈಯಲ್ಲೊಂದು ಸ್ಲೇಟ್ ಹಿಡಿದು ಶಾಲೆಗೆ ಹೊರಟಿದ್ದ. ರಸ್ತೆಯಲ್ಲಿ ವಿರಳ ಜನಸಂಚಾರ. ನೋಡುತ್ತಿರುವಂತೆ ಎದುರಿನ ಸಂದಿಯಿಂದ ಮತ್ತೊಬ್ಬ ಹುಡುಗ ಬಂದು ಕೂಡಿಕೊಂಡ. ಓಹೊ ತಿಳಿಯಿತು ಅವನು ನನ್ನ ಪ್ರೇಮರಿ ಶಾಲೆಯ ಗೆಳೆಯ, ಹೆಸರು ಸುರೇಶಬಾಬು ಎಂದು ಶೆಟ್ಟರ ಹುಡುಗ. ಅವರ ಅಪ್ಪ ಒಂದು ದಿನಸಿ ಅಂಗಡಿ ಇಟ್ಟಿದರು. ಶನಿವಾರ ಬಂದರೆ ಬೆಳಗಿನ ತರಗತಿ  ಅವನು ಹೇಗೊ ಅವರ ಅಪ್ಪನ ಕಣ್ಣು ತಪ್ಪಿಸಿ, ಅವನ ನಿಕ್ಕರಿನ ಎರಡು ಜೋಬಿನ ತುಂಬ ಹುರಿಗಡಲೆ ಕೊಬ್ಬರಿ ಚೂರು ಬೆಲ್ಲ ತರುತ್ತಿದ್ದ. ಅಲ್ಲಿಗೆ ಆ ಶೆಟ್ಟರ ಹುಡುಗನ ಜೊತೆ ಇರುವನು ನಾನೆ , ಮುಂದೆ ಅವರಿಬ್ಬರು ಏನು ಮಾಡುತ್ತಾರೆ ಅನ್ನುವುದು ನನಗೆ ತಿಳಿದಿತ್ತು.

ನಗುತ್ತ ಆ ಚುಕ್ಕಿಯಿಂದ ಕೈ ಎತ್ತಿದೆ.

ನಂತರ ಮುಂದಿನ ಚುಕ್ಕಿಯಮೇಲೆ ಪೆನ್ನನ್ನು ಒತ್ತಿದೆ. ಮತ್ತೊಂದು ದೃಷ್ಯ ಬಿಚ್ಚಿಕೊಂಡಿತು.

ಎಲ್ಲರು ಸುತ್ತಲು ಅಳುತ್ತಿದ್ದರು. ನಡುಮನೆಯಲ್ಲಿ ಚಾಪೆಯ ಮೇಲೆ ಒಬ್ಬರನ್ನು ಮಲಗಿಸಲಾಗಿತ್ತು. ನೋಡಿದೆ ನಿಜ ನಮ್ಮ ತಂದೆಯವರ ಶವ. ಪಕ್ಕದಲ್ಲಿ ನಾನು ನಿಂತಿರುವುದು ಕಾಣಿಸುತ್ತಿತ್ತು. ನನಗಾಗ ಹದಿನೆಂಟು ವರ್ಷವಿರಬಹುದೇನೊ . ನಿದಾನಕ್ಕೆ ಹೊರಬಂದು ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನು ಹತ್ತುತ್ತ ಮನೆಯ ಮೇಲಕ್ಕೆ ಹೊರಟೆ. ಅದೇಕೊ ಸ್ವಲ್ಪ ಹೊತ್ತು ಒಬ್ಬನೆ ಕುಳಿತುಕೊಳ್ಳಬೇಕೆಂಬ ಬಯಕೆಯಾಗುತ್ತಿತ್ತು. ಮೇಲೆ ಹತ್ತಿ ಹೋದರೆ ಅಲ್ಲೊಂದು ದೃಷ್ಯ ಕಾಣಿಸಿತು. ಪ್ಯಾರಫಿಟ್ ಗೋಡೆಯ ಮೇಲೆ ಒರಗಿ   ನನ್ನ ಕಡೆಯ ತಮ್ಮ ಸುಮಾರು ಹತ್ತು ವರುಷವಿರಬಹುದು ಒಬ್ಬನೆ ಅಳುತ್ತ ಕುಳಿತಿದ್ದಾನೆ. ನನಗೆ ಕರುಳು ಚುರ್ ಎಂದಿತು, ಸಣ್ಣವರ ದುಃಖವು ಸಹ ದುಃಖವೆ ಅಲ್ಲವೆ? ನಾನು ಹತ್ತಿರ ಹೋಗಿ ಸಮಾದಾನ ಪಡಿಸಿದೆ. ಅಳಬೇಡ ಸುಮ್ಮನಿರು ಏನು ಮಾಡಲಿಕ್ಕಾಗುವದಿಲ್ಲ ಎಂದು. ಅವನು ಅಳುತ್ತಲೆ ನುಡಿದ.
“ಅದಕ್ಕಲ್ಲ ತುಂಬ ಹಸಿವು ಅದಕ್ಕೆ “ ಎನ್ನುತ್ತ ಮತ್ತೆ ಜೋರಾಗಿ ಅತ್ತ.

ನನಗೆ ಕರುಳಿನಲ್ಲಿ ಎಂತದೊ ಚುರ್ ಎಂದಿತು. ನಿಜ ತಂದೆಯವರು ಹೋದ ದುಃಖದಲ್ಲಿ ಎಲ್ಲರು ಇದ್ದಾರೆ. ನಿನ್ನೆ ರಾತ್ರಿಯಿಂದ ಇವನಿಗೆ ಯಾರು ಏನನ್ನು ಕೊಟ್ಟಿಲ್ಲ.
ಹಸಿವು ಎಂಬ ರಕ್ಕಸ ಎದುರಿಗೆ ನಿಂತು ನಗುತ್ತ ಮುಂದಿನ ದಿನಗಳ ಬಗ್ಗೆ ನನ್ನ ಎದೆಯಲ್ಲಿ ನಡುಕ ಹುಟ್ಟಿಸಿದ....

ಪಟ್ ಎಂದು ಚುಕ್ಕೆಯಿಂದ ಕೈ ಮೇಲೆ ಎತ್ತಿದೆ.

ಏಕೊ ಎಲ್ಲ ಚುಕ್ಕೆಗಳನ್ನು ಪರೀಕ್ಷಿಸುವ ಉತ್ಸಾಹ ಹೊರಟು ಹೋಯಿತು. ಅಷ್ಟಕ್ಕು ನನ್ನ ಗತವೆಲ್ಲ ನನಗೆ ತಿಳಿದಿರುವುದೆ ಅದನ್ನೆ ಪುನಃ ನೋಡುವದರಲ್ಲಿ ಯಾವ ಆನಂದವಿದೆ.
ನನ್ನ ಎದುರಿಗಿದ್ದ  ಅವನು ಕೊಟ್ಟಿದ್ದ ನೀರನ್ನು ಪುನಃ ಕುಡಿದೆ. ಮನಸಿಗೆ ನೆಮ್ಮದಿ ಅನ್ನಿಸಿತು.
ಎದುರಿಗೆ ಅದೆ ಕಾಯಸ್ಥ  ಅಂದರೆ ಚಿತ್ರಗುಪ್ತ ನಗುತ್ತಿದ್ದ.
“ಏಕೆ ಪೂರ್ಣ ನೋಡುವದಿಲ್ಲವೆ ಸಾಕೆ?” ಎಂದ.
ನನಗೆ ಎಲ್ಲ ಪ್ರಶ್ನೆಗಳು ಮುಗಿದಿದ್ದವು. ಅಲ್ಲದೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕುಳಿತರೆ ಅದಕ್ಕೆ ಕೊನೆಯೆ ಇಲ್ಲ. ಎದುರಿಗಿದ್ದ ಅವನನ್ನು ನೋಡಿದೆ ಅವನ ಮುಖ ಗಂಭೀರವಾಗಿತ್ತು.
ನಾನು ಹೇಳಿದೆ
“ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ ಅದಕ್ಕೆ ಕೊನೆಯಿಲ್ಲ ಅನ್ನಿಸುತ್ತಿದೆ. ನೀವು ಹೇಳಿದಂತೆ ಆಗಲಿ ನನ್ನನ್ನು  ಯಾವ ಕಾರಣಕ್ಕೆ ಕರೆಸಿದ್ದಾರೆ ಆ ಕಾರ್ಯ ನನಗೆ ಮಾಡಲು ಸಾದ್ಯವಾದಲ್ಲಿ  ಮುಗಿಸಿ, ನಂತರ ಹಿಂದೆ ಹೋಗುವೆ. ನನ್ನ ಸ್ನೇಹಿತರು ಸ್ವಲ್ಪ ಕಾಲ ಕಾಯಬಹುದು ಬಿಡಿ”
ಒಂದೆರಡು ಗಳಿಗೆಗಳ ಮೌನ. ಸಾಕಷ್ಟು ದೀರ್ಘ ಅನ್ನಿಸಿತು. ಅವನು ನುಡಿದ.

“ಪರಿಸ್ಥಿಥಿ ಇನ್ನು ನಿಮಗೆ ಪೂರ್ಣವಾಗಿ ಮನವರಿಕೆ ಆಗುತ್ತಿಲ್ಲ. ನೀವು ನಿಮ್ಮ ಸ್ನೇಹಿತರು ನಿರೀಕ್ಷೆ ಮಾಡುತ್ತಿರುವರು, ಊರಿನಲ್ಲಿ  ಹೆಂಡತಿ ಮಕ್ಕಳು ಕಾಯುತ್ತಿದ್ದಾರೆ ಎನ್ನುವ ಮನಸ್ಥಿಥಿಯಲ್ಲಿಯೆ ಇದ್ದೀರಿ. ನೀವು ಇಲ್ಲಿಗೆ ಬಂದು ತುಂಬಾ ಕಾಲ ಕಳೆಯಿತು. ಅಲ್ಲಿ ಮಹಾಬಲಿಪುರಂ ನಲ್ಲಿ ನಿಮ್ಮನ್ನು ಯಾರು ಕಾಯುತ್ತಿಲ್ಲ. ನಿಮ್ಮ ಸ್ನೇಹಿತರ ಹಾಗು ಮನೆಯವರಿಗೆ  ನೀವು ಸಮುದ್ರದಡದಲ್ಲಿ ಕಾಣೆಯಾದವರ ಸಾಲಿಗೆ ಸೇರಿದ್ದೀರಿ , ಅದು ಶಾಶ್ವತವಾಗಿ . ನಿಮ್ಮ  ಸ್ನೇಹಿತರೆಲ್ಲ  ಅಲ್ಲಿಂದ ಹೊರಟು ಬಹಳ ಕಾಲವಾಗಿವೆ ಅಂದರೆ ವರ್ಷಗಳು ,. ಅಷ್ಟೆ ಅಲ್ಲ ನಿಮ್ಮ ಮನೆಯಲ್ಲು ಅಷ್ಟೆ ನಿಮ್ಮನ್ನು ಯಾರು ಕಾಯುತ್ತಿಲ್ಲ.

ನಿಮ್ಮಿಂದ ಮೂರನೆ ತಲೆಮಾರಿನ ಜನ ಈಗ ನಿಮ್ಮ  ವಂಶದಲ್ಲಿ ಇದ್ದಾರೆ. ಭೂಮಿಯಲ್ಲಿ ನಿಮ್ಮ ಪರಿಚಯ ಇರುವವರು ಈಗ ಯಾರು ಇಲ್ಲ. ನೀವು ಮತ್ತೆಂದು ನಿಮ್ಮ ಕಾಲಕ್ಕೆ ಹಿಂದೆ ಹೋಗಲು ಸಾದ್ಯವಿಲ್ಲ. ಅದನ್ನು ನೀವು ಅರ್ಥ ಮಾಡಿಕೊಳ್ಳಿ. ನೀವು ಈಗ ನಮ್ಮವರಲ್ಲಿ ಒಬ್ಬರು “

ನಾನು ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತೆ. ಪರಿಸ್ಥಿತಿಯ ಗಂಭೀರತೆ ಈಗ ನನ್ನ ಮನಸನ್ನು ತುಂಬಿಕೊಂಡಿತು. ಕಣ್ಣು ಬಿಟ್ಟು ಎದುರಿಗಿದ್ದ ಅವನನ್ನು ನೋಡಿ ನಕ್ಕೆ. ಅವನು ನಸುನಕ್ಕ.
ನಾನು ಹೇಳಿದೆ “ಸರಿ ನಾನೀಗ ಹಿಂದೆ ಹೋಗಲು ಸಾದ್ಯವಿಲ್ಲ ನನಗೆ ಮನವರಿಕೆಯಾಗಿದೆ. ನಾನು ನಿಮ್ಮವರೊಡನೆ ಹೊರಡಲು ಸಿದ್ದನಿದ್ದೇನೆ” .
ನಾನು ಅಲ್ಲಿಂದ ಹೊರಡಲು ಸಿದ್ದನಾಗಿ ಕುಳಿತೆ, ನನ್ನನ್ನು ಕರೆದೊಯ್ಯಲು ಬರುತ್ತಿರುವ ಅಲ್ಲಿನ ವ್ಯಕ್ತಿಗಾಗಿ. ಸ್ವಲ್ಪ ಕಾಲದಲ್ಲಿಯೆ ನಾನು ಕುಳಿತ ಕೋಣೆಯಲ್ಲಿನ ಬೆಳಕಿನಲ್ಲಿ ಎಂತದೊ ವ್ಯತ್ಯಾಸ ಕಾಣಿಸಿತು. ಅಲ್ಲಿನ ಪ್ರಭೆ ಜಾಸ್ತಿಯಾಯಿತು ಅನ್ನಿಸುತ್ತಿರುವಾಗಲೆ, ನನ್ನ ಎದುರಿಗೆ ವೃತ್ತಕಾರದ ಬೆಳಕಿನ ಬಿಂಬವೊಂದು ಗೋಚರಿಸಿ ಅದು ಪ್ರಖರವಾಗುತ್ತ ಹೋಯಿತು. ಅದರ ಅದರ ಪ್ರಖರತೆ ನನ್ನ ಕಣ್ಣುಗಳು ತುಸು ಮುಚ್ಚಿದವು.
-- ಮುಗಿಯಿತು

No comments:

Post a Comment

enter your comments please