Saturday, September 8, 2012

ಕತೆ [ಪತ್ತೆದಾರಿ] : ಸುಳಿ

ಕಾರು  ಓಡಿಸುತ್ತಿರುವಂತೆ ಹಿಂದೆ ನೋಡಿದ ಡಾಕ್ಟರ್ ಗಿರಿಧರ್ . ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದ ಹಿಂದಿದ್ದ ವ್ಯಕ್ತಿ, ಅವನ ಪಕ್ಕದಲ್ಲಿದ್ದ ಆಕೆಯನ್ನು ತನ್ನ ಮುಂದಿದ್ದ ಕನ್ನಡಿಯಲ್ಲಿ ನೋಡಲು ಪ್ರಯತ್ನಿಸಿದ, ಆಕೆಯು ಧರಿಸಿದ್ದ ಕಪ್ಪುವರ್ಣದ ಬುರ್ಕಾ ಕಂಡಿತೆ ವಿನಾಃ ಆಕೆಯ ಮುಖ ಕಾಣಲಿಲ್ಲ.

 
"ಮುಂದೆ ನೋಡಿ ಗಾಡಿ ಓಡುಸ್ರಿ  , ಅದೇನ್ ಪದೆ ಪದೆ ಹಿಂದೆ ನೋಡೋದು, ಇನ್ನೆಲ್ಲಿಯಾದರು ಗುದ್ದಿಬಿಟ್ಟೀರ"
 
ಗಿರಿಧರ್ ಗೊಣಗಿದ ಇದೆಲ್ಲಿಯ ವ್ಯವಹಾರ ತನಗೆ ಗಂಟು ಬಿತ್ತು, ಇಲ್ಲೆ ಸ್ವಲ್ಪ ದೂರ ಡ್ರಾಪ್ ಕೊಡಿ ಯಾವುದಾದರು ಡಾಕ್ಟರ್ ಶಾಪ್ ಹತ್ತಿರ ಇಳಿತೀನಿ ಅಂತ ಹತ್ತಿದವನು , ಕೆಳಗೆ ಇಳಿಯೋ ಲಕ್ಷಣವೆ ಇಲ್ಲ.
"ರೀ ಎಲ್ಲಿ ಇಳಿತೀನಿ ಅಂತ ಸರಿಯಾಗಿ ಹೇಳಿಬಿಡಿ, ನಿಲ್ಲಿಸಿಬಿಡ್ತೀನಿ, ನನ್ನ ಮನೆ ಹತ್ತಿರ ಬರ್ತಾ ಇದೆ, ನಿಮ್ಮ ಜೊತೆ ಸುತ್ತಕ್ಕೆ ನನಗೆ ಆಗಲ್ಲ"   ಸ್ವಲ್ಪ ಜೋರಾಗಿಯೆ ಹೇಳಿದ ಗಿರಿಧರ
 
" ಹರಾಮ್ ಕೋರ್, ನಿಂಗೆ ಹೇಳಿಲ್ವ ನಂಗೆ ಎಲ್ಲಿ ಬೇಕೊ ಅಲ್ಲಿ ಇಳಿತೀನಿ, ಗಾಡಿ ಓಡಿಸು ಅಂತ, ಜಾಸ್ತಿ ಮಾತನಾಡಬೇಡ, ತಲೆ ಚೂರು ಚೂರಾಗುತ್ತೆ ಅಸ್ಟೆ " 
 ಕುತ್ತಿಗೆಯ ಹತ್ತಿರ ತಣ್ಣನೆಯ ಲೋಹವೊಂದು ತಾಕಿದಂತಾಗಿ ತಿರುಗಿನೋಡಿದರೆ, ಹಿಂದಿದ್ದ ವ್ಯಕ್ತಿ ತನ್ನ ಕೆಂಪನೆಯ ಕಣ್ಣುಗಳನ್ನು ಮತ್ತು ಕೆಂಪಾಗಿಸಿ, ಪಿಸ್ತೂಲನ್ನು ಅವನ ಕುತ್ತಿಗೆಗೆ ಹಿಡಿದಿದ್ದಾನೆ. ಬೆವೆತುಹೋದ, ಗಿರಿಧರ, ಏನು ಮಾತನಾಡಲು ತೋಚಲಿಲ್ಲ. ಗಾಭರಿಯಿಂದ ಕಾರು ನಿಲ್ಲಿಸಲು ಹೋದ. 
"ಗಾಡಿ ನಿಲ್ಲಿಸಬೇಡ ಓಡಿಸುತ್ತ ಇರು, ಬೇವಕೂಫ್ ,  ನಿಲ್ಲಿಸಿದರೆ ಅಷ್ಟೆ, ಇಲ್ಲಿ ಕೇಳು, ನನಗೆ ಸರಿಯಾದ ಡಾಕ್ಟರ್ ಬೇಕು, ಇವಳಿಗೆ ಇಲಾಜ್ ಮಾಡಿಸಲು,  ಕಾಲು ಒಳಗೆ ಬುಲ್ಲೆಟ್ ಹೋಗಿದೆ, ತೆಗೆಸಬೇಕು,  ಅದಕ್ಕೆ ನಂಬಿಕೆ ಇರೊ ಡಾಕ್ಟರ್ ಆಗ್ಬೇಕು" ಅವನ ದ್ವನಿ ಕರ್ಕಶವಾಗಿತ್ತು. 
 
" ಗಾಡಿ ಹತ್ತುವಾಗ,  ಆಕ್ಸಿಡೆಂಟ್ ಆಗಿದೆ, ಮೋಟರ್ ಬೈಕಿನಿಂದ ಬಿದ್ದುಬಿಟ್ಳು ಅಂತ ಹೇಳಿದೆ, ಈಗ ನೋಡಿದ್ರೆ ಹೀಗಂತಿ " 
ಗಿರಿಧರ ಕೊಂಚ ಕೋಪದಿಂದ ನುಡಿದ
"ಮತ್ತೇನು , ಸತ್ಯ ನುಡಿದು ಬಿಟ್ರೆ, ನೀನು ಹತ್ತಿಸಿಬಿಡ್ತಿದ್ದ, ದೊಡ್ಡ ಮನಿಶ, ಅದೇನು ನಿನ್ನ ಕಾರಿನ ಮೇಲೆ, ಡಾಕ್ಟರ್ ಅಂತ ಮಾರ್ಕ್ ಇದೆ, ನಿನಗೆ ಬುಲ್ಲೆಟ್ ತೆಗ್ಯಕ್ಕೆ ಬರುತ್ತಾ"  ಅವನು ಕೇಳಿದ.
 ಗಿರಿಧರ್ ಬೆಚ್ಚಿದ, ಗಾಡಿ ಹತ್ತುವವರೆಗು ಮರ್ಯಾದಿಯಿಂದ ಮಾತನಾಡಿಸಿದ ಮನುಷ್ಯ ಈಗ ತನ್ನ ಹೊಸ ರೂಪ ತೋರುತ್ತಿದ್ದಾನೆ, ಇವನ ಹಿನ್ನಲೆ ಏನು , ಸೀದ ಪೋಲಿಸ್ ಸ್ಟೇಶನ್ ಹತ್ತಿರ ಗಾಡಿ ಓಡಿಸಿಬಿಡಲ ಅಂದುಕೊಂಡ, 
"ನೋಡು ಇದೆಲ್ಲ ಪೋಲಿಸ್ ಕೇಸ್ , ನನಗೆ ಇಂತದೆಲ್ಲ ಆಗಲ್ಲ,  ನಾನು ಸರ್ಜನ್ ಅಲ್ಲ , ಬರಿ ಡಾಕ್ಟರ್, ನನಗೆ ತೊಂದರೆ ಕೊಡಬೇಡ, ಎಲ್ಲಾದರು ಇಳಿದುಕೊಂಡುಬಿಡು,ಅವಳನ್ನು ಕರೆದುಕೊಂಡು ನರ್ಸಿಂಗ್ ಹೋಂ ಹೋಗು ಬೇಕಾದಲ್ಲಿ ನಾನೆ ತೋರಿಸುತ್ತೆನೆ" ಗಿರಿಧರ ಹೇಳಿದ ಅನುನಯದ ದ್ವನಿಯಲ್ಲಿ.
"ಏಯ್ ಡಾಕ್ಟರ್ , ನಿನ್ನ ಬುದ್ದಿ ತೋರಿಸಬೇಡ, ಇಂತದೆಲ್ಲ ನನ್ನ ಹತ್ರ ನಡೆಯಲ್ಲ, ನಾನು ಸಾಮಾನ್ಯ ಡಾಕು ಅಲ್ಲ ಉಶಾರ್, ನಿನಗೆ ಹೆಚ್ಚಿನ ವಿವರ ಬೇಡ, ಈಗ ಕೇಳು, ನಾನು ನಿನ್ನ ಮನೆಗೆ ಬರುತ್ತೇನೆ ಅಲ್ಲಿ, ನೀನೆ ಇವಳ ಕಾಲಿನಲ್ಲಿರುವ ಬುಲೆಟ್ ತೆಗೆಯಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದ್ರು ನಾಳೆ ನಿನ್ನ ಹೆಸರು ಪೇಪರಿನಲ್ಲಿರುತ್ತೆ, ನಿನ್ನ ಹೆಣದ ಫೋಟೊ ಜೊತೆ"  ಗಹಗಹಿಸಿ ನಗುತ್ತಿದ್ದ ಹಿಂದಿದ್ದ ವ್ಯಕ್ತಿ. 
 ಗಿರಿಧರ ಚಿಂತಿಸುತ್ತಿದ್ದ ಇದೆಂತ ಬಲೆಯಲ್ಲಿ ನಾನು ಸಿಕ್ಕಿಬಿದ್ದೆ, ಕನಕಪುರದಿಂದ ಸಂಜೆ ಹೊರಟವನು, ಬೆಂಗಳೂರು  ಹದಿನೈದು ಕಿಲೊಮೀಟರ್ ಇದೆ ಅನ್ನುವಾಗ ರಸ್ತೆಯ ಪಕ್ಕ  ಬುರ್ಕಾ ಧರಿಸಿದ್ದ ಹೆಣ್ಣೊಬ್ಬಳ ಜೊತೆ ನಿಂತಿದ್ದ ಕುರ್ಚಲುಗಡ್ಡದ ವ್ಯಕ್ತಿಯೂಬ್ಬ ಕಾರಿಗೆ ಅಡ್ಡಬಂದ , ತಾನು ಕಾರು ನಿಲ್ಲಿಸಲೆ ಬೇಕಾಯಿತು, ಅವನ ಮೇಲೆ ರೇಗಲು ಹೊರಟರೆ
"ಸಾಹೇಬ್ರ ನೀವೆ ನನಗೆ ಸಹಾಯ ಮಾಡಬೇಕು, ಪಕ್ಕದ ಹಳ್ಳಿಯಿಂದ ಮೋಟರ್ ಬೈಕನಲ್ಲಿ ಬರ್ತಾ ಬ್ಯಾಲೆನ್ಸ್ ತಪ್ಪಿ ಬಿದ್ದುಬಿಟ್ಟೆ, ಇವಳ ಕಾಲಿಗೆ ಏಟು ಬಿದ್ದು ಬಿಡ್ತು, ನೋಡಿ ಹೇಗೆ ರಕ್ತ ಸುರೀತ ಇದೆ, ಯಾವ ಬಸ್ಸು ನಿಲ್ಲಿಸ್ತ ಇಲ್ಲ,  ಬನಶಂಕರಿ ಹತ್ತಿರ ಇಳಿಸಿಬಿಡಿ, ಯಾವುದೊ ಆಟೋ ಹಿಡಿದು, ಅಸ್ಪತ್ರೆಗೆ ಸೇರಿ ಇವಳಿಗೆ ತೋರಿಸ್ತೀನಿ " ಎಂದಿದ್ದ
ಅವನು ಹೇಳಿದ್ದು ನಿಜ, ಆಕೆಯ ಕಾಲಿನಿಂದ ರಕ್ತ ಸುರಿಯುತ್ತ ಇತ್ತು, ಸುಸ್ತಾಗಿ ಆಕೆ ಹೆಚ್ಚು ಕಡಿಮೆ ಜ್ಞಾನ ತಪ್ಪುವಂತಿದ್ದಳು, ತಕ್ಷಣ ಏನು ಮಾಡುವದೆಂದು ತೋಚಲಿಲ್ಲ,. ಅಲ್ಲದೆ ವೃತ್ತಿಯಲ್ಲಿ ಡಾಕ್ಟರ್ ಆದ ತನಗೆ ಇದು ಕರ್ತವ್ಯದಂತೆ ಎಂದು ಭಾವಿಸಿ, ಸರಿ ಹತ್ತಿ ಎಂದ . ಒಳಗೆ ಸೇರಿದ ಆ ವ್ಯಕ್ತಿ ಈಗ ಎಲ್ಲಿಯು ಇಳಿಯಲು ಒಪ್ಪದೆ ಗಿರಿಧರನನ್ನು ಸತಾಯಿಸುತ್ತಿದ್ದ. ಪೋಲಿಸ್ ಸ್ಟೇಷನ್ ಹತ್ತಿರ ಹೋಗದಂತೆ, ಒಳಗಿನಿಂದ ಹೆದರಿಸಿ ಕೂಡಿಸಿದ್ದ. ಆ ಪಿಸ್ತೂಲು ನಿಜವೊ ಸುಳ್ಳೊ ಅದು ಬೇರೆ ಅದರಲ್ಲಿ ಬುಲೆಟ್ ಇದೆಯೊ ಇಲ್ಲವೊ ತಿಳಿದಿಲ್ಲ ಆದರೆ ಹಾಗೆಂದು ಅವನು ಯಾವುದೆ ರಿಸ್ಕ್ ತೆಗೆದುಕೊಳ್ಳಲು ಸಾದ್ಯವಿರಲಿಲ್ಲ,
 
ಕಾರಿನ ಒಳಗೆ ಹತ್ತಿರುವ ವ್ಯಕ್ತಿ ಪಕ್ಕ ಪ್ರೊಫೆಷನಲ್ ತರ ಕಾಣುತ್ತಿದ್ದ.
 
"ನನ್ನ ಮನೆಗೆ   ಸಾದ್ಯವಿಲ್ಲ, ಅಲ್ಲಿ ಬುಲೆಟ್ ತೆಗೆಯಲು ಬೇಕಾದ ಯಾವುದೆ ವ್ಯವಸ್ತೆಯಿಲ್ಲ, ಅಪರೇಟ್ ಮಾಡಬೇಕಾದ ಸಾಮಾಗ್ರಿಗಳಾಗಲಿ, ಔಷದಿಗಳಾಗಲಿ, ಅಥವ ಸಹಾಯಕರು ಇಲ್ಲ, ಅಲ್ಲದೆ ಅಪರೇಷನ್ ಮಾಡಿ ಬುಲೆಟ್ ತೆಗೆಯಲು ಬೇಕಾದ ಅನುಭವ ನನಗಿಲ್ಲ, ನಾನು ಬೇರೆ ತರದ ಡಾಕ್ಟರ್ " 
 ಎಂದ ಗಿರಿಧರ. ಆದರೆ ಆ ವ್ಯಕ್ತಿ ಅದನ್ನೆಲ್ಲ ಕೇಳಿಸಿಕೊಳ್ಳಲು ಸಿದ್ದನಿಲ್ಲ.
"ನೋಡು ಅದೆಲ್ಲ ನನಗೆ ತಿಳಿಯದು,  ಬುಲೆಟ್ ತೆಗೆಯಲು ಬೇಕಾದ ಎಲ್ಲವಸ್ತುಗಳನ್ನು ಇಲ್ಲಿ ಸರ್ಜಿಕಲ್ನಲ್ಲಿ   ಎಲ್ಲಿಯಾದರು ತೆಗೆದುಕೋ, ನಿನಗೆ ಬೇಕಾದರೆ ನಾನೆ ಸಹಾಯ ಮಾಡುವೆ, ನರ್ಸಿಂಗ್ ಹೋಂಗೆ ಹೋಗಲು ಸಾದ್ಯವಿಲ್ಲ" ಎಂದ ಅವನು
 ಇದೇನು ಗ್ರಹಚಾರ ತಾನು ಈ ಬಲೆಯಲ್ಲಿ ಸಿಕ್ಕಿಕೊಂಡೆ, ಅಲ್ಲ ಇವರಿಬ್ಬರನ್ನು ಮನೆಗೆ ಕರೆದುಕೊಂಡು ಹೋದರೆ ಸುತ್ತಮುತ್ತಲ ಜನರೆಲ್ಲರ ಕಣ್ಣಿಗೆ ಬೀಳುವದಿಲ್ಲವೆ, ಪೋಲಿಸರಿಗೆ ತಿಳಿದರೆ, ಯಾರೊ ಅಪರಾದಿಗಳಿಗೆ ಸಹಾಯ ಮಾಡಿದೆ ಎಂದು ತನ್ನನ್ನು ಅರೆಷ್ಟ್ ಮಾಡುವದಿಲ್ಲವೆ, ಎಂದೆಲ್ಲ ಯೋಚನೆ ಬಂದಿತು, ಆದರೆ ಪರಿಸ್ಥಿಥಿ  ಕೆಟ್ಟದಾಗಿತ್ತು, ಇವನಿಂದ ತಪ್ಪಿಸಿಕೊಳ್ಳುವಹಾಗಿರಲಿಲ್ಲ. 
 ಸರ್ಜಿಕಲ್  ಸಾಮಾಗ್ರಿಗಳನ್ನು ಮಾರುವ ಅಂಗಡಿಯೊಂದು ಕಂಡಿತು, ಕಾರನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದ, ಗಿರಿಧರ, ಆಂಗಡಿಯವನು ತನ್ನ ಕಾರನ್ನು ನೋಡಿ , ನಂಬರ್ ಏನಾದರು ಗುರುತಿಟ್ಟುಕೊಂಡರೆ ಸುಮ್ಮನೆ ಅಪಾಯ.  
"ನೋಡು ಅಲ್ಲಿ ಮೆಡಿಕಲ್ ಎಕ್ವಿಪಿಮೆಂಟ್ ಗಳನ್ನು ಮಾರುವ ಅಂಗಡಿ ಇದೆ, ನಾನು ಕೆಲವು ವಸ್ತುಗಳನ್ನು ಕಾಗದದಲ್ಲಿ ಬರೆದುಕೊಡುವೆ, ನೀನು ಹೋಗಿ ತಾ " 
 ಎನ್ನುತ್ತ , ಕಾರಿನ ಡ್ಯಾಶ್ ಬೋರ್ಡಿನಿಂದ ಕಾಗದ ಪೆನ್ನು ತೆಗೆದು , ಅಗತ್ಯವಸ್ತುಗಳ ಹೆಸರನ್ನೆಲ್ಲ ಬರೆದು, ಅ ಅವ್ಯಕ್ತಿಯ ಕೈಗೆ ಕೊಟ್ಟ. ಅವನು
"ಅದೆಲ್ಲ ಸರಿ , ಇದಕ್ಕೆ ಎಷ್ಟು ಹಣ ಬೇಕಾಗಬಹುದು" ಎಂದ ಅವನು 
ಅದಕ್ಕೆ  ಗಿರಿಧರ
"ಎಷ್ಟು ಅಂದರೆ, ಆಗುತ್ತೆ ಒಂದುವರೆ ಸಾವಿರ ಎರಡು ಸಾವಿರ ಹತ್ತಿರ" ಎಂದ ಅಲಕ್ಷದಿಂದ. 
ಅವನು ನಗುತ್ತ
"ಸರಿ ಈಗ ಎರಡು ಸಾವಿರ ತೆಗಿ ನಿನ್ನ ಜೋಬಿನಿಂದ ನನ್ನ ಹತ್ತಿರ ಒಂದು ಪೈಸೆ ಸಹ ಇಲ್ಲ " ಎಂದ
 
ಗಿರಿಧರ ಅವಕ್ಕಾದ, ಇದೆಂತಹ ಬಂಡತನ,ನವಿರಾಗಿ ಮಾತನಾಡಿ ಗಾಡಿ ಏರಿದವನು, ಕೆಳಗೆ ಇಳಿಯಲು ತಕರಾರು ಮಾಡುತ್ತ, ಈಗ ಅವನ ಹೆಂಡತಿಯ ಚಿಕಿತ್ಸೆಗೆ ಹಣ ಕೇಳುತ್ತಿರುವ, ಅವನ ಕೈಲಿ ಪಿಸ್ತೂಲು ಬೇರೆ, ಬೆಳಗ್ಗೆ ಯಾವ ಗಳಿಗೆಯಲ್ಲಿ ಎದ್ದೆನೊ ಅನ್ನುತ್ತ  ನುಡಿದ
 
"ಗಾಡಿಯಲ್ಲಿ ಹತ್ತುವಾಗ ನೈಸಾಗಿ ಮಾತನಾಡಿ, ಈಗ ಗಂಡಾಗುಂಡಿ ಮಾಡುತ್ತಿದ್ದೀಯ, ಅದಕ್ಕೆ ಈಗ ಯಾರು ಯಾರಿಗು ಹೆಲ್ಪ್ ಮಾಡೋಲ್ಲ,  ಅಲ್ಲಿಂದ ಗಾಡಿಯಲ್ಲಿ ಡ್ರಾಪ್ ಕೊಟ್ಟಿರುವುದು ಅಲ್ಲದೆ, ನಿನ್ನ ಹೆಂಡತಿ  ಚಿಕಿತ್ಸೆಗೆ ಹಣ ಸಹ ನಾನೆ ಪೀಕಬೇಕ" ಎಂದ ಕುದಿಯುತ್ತಿರುವ ಕೋಪದಿಂದ 
 
"ಏಯ್ ಡಾಕ್ಟರ್, ಇದೆಲ್ಲ ಕತೆ ನನ್ನ ಹತ್ತಿರ ಹೇಳಬೇಡ,  ಯಾಕೆ ನೀನೆ ಆಕ್ಸಿಡೆಂಟ್ ಮಾಡಿದ್ದು ಅಂತ ಅಂದುಕೊ ಎಲ್ಲ ಸರಿಹೋಗುತ್ತೆ, ಈಗ ಹಣ ತೆಗೆ, ಅಮೇಲೆ ನಿನ್ನ ಮನೆಗೆ ಹೋಗಿ, ದೂಸ್ರ ಮಾತನಾಡದೆ , ಅಪರೇಶನ್ ಮಾಡಿ ಕಾಲಿನಲ್ಲಿರುವ ಬುಲೆಟ್ ತೆಗಿ,  ಬೇಕಾದ್ರೆ ಇವಳನ್ನು ನಿನ್ನ ಹೆಂಡತಿ ಅಂತ್ಲೆ ಅಂದುಕೊ, ನಾನೇನು ಬೇಡ ಅನ್ನಲ್ಲ , ಅದು ಬಿಟ್ಟು ತರ್ಲೆ ಎಲ್ಲ ತೆಗಿಬೇಡ" ಎಂದ.  
ಇಂತ ವ್ಯಕ್ತಿಯ ಜೊತೆ ಮಾತಿನಿಂದ ಏನು ಉಪಯೋಗವಿಲ್ಲ ಎಂದು ಅರಿವಾಗಿ ಗಿರಿಧರ ಮಾತನಾಡದೆ ಹಿಪ್ ಪ್ಯಾಕೆಟ್ ನಿಂದ ಪರ್ಸ್ ತೆಗೆದು ಎರಡುಸಾವಿರ ಹಣ ತೆಗೆದುಕೊಟ್ಟು, ಸಪ್ಪೆಯಾಗಿ ಕೇಳಿದ
"ಬುಲೆಟ್ ಯಾಕೆ ತಾಕಿತು"  , 
ಆ ವ್ಯಕ್ತಿ ಭಯಂಕರವಾಗಿ ನಗುತ್ತ ಹೇಳಿದ
"ಹೇಗೆ ಅಂದ್ಯಾ? ನಮ್ಮಂತವರಿಗೆ ಹೇಗೆ ತಾಕುತ್ತೆ, ಹಾಳು ಪೋಲಿಸರು ನುಗ್ಗಿಬಿಟ್ರು, ತಪ್ಪಿಸಿಕೊಳ್ಳುವಾಗ,  ಇವಳಿಗೆ ಬುಲೆಟ್ ತಗಲಿ ಬಿಡ್ತು, ಹಲ್ಕಮುಂಡೆ, ಈಗ ಇವಳ ಜೊತೆ ನಾನು ಸಾಯಬೇಕು" 
ಕೆಟ್ಟದಾಗಿ ಬೈದ.  ಹಣ ಪಡೆದು ಕೆಳಗೆ ಇಳಿಯುವಾಗ ತನ್ನ ಪಕ್ಕದಲ್ಲಿದ ಆಕೆಯ ಕೈಗೆ ಪಿಸ್ತೂಲು ಕೊಡುತ್ತ ಹೇಳಿದ 
"ಏಯ್, ಹತ್ತು ನಿಮಿಷ ಹೀಗೆ ಹೋಗಿ ಹಾಗೆ ನಿನಗೆ ಬೇಕಾದ ಮೆಡಿಸನ್ ತಂದು ಬಿಡುತ್ತೇನೆ, ಈ ಡಾಕ್ಟರ್ ಅಲ್ಲಾಡದಂತೆ ನೋಡಿಕೊ,  ಸ್ವಲ್ಪ ಅಲುಗಾಡಿದರು, ಸರಿ ತಲೆಗೆ ಗುಂಡು ಹಾರಿಸು "  ಎಂದವನು ಬಾಗಿಲು ತೆಗೆದು ಕೆಳಗಿಳಿದು,  ಸರ್ಜಿಕಲ್  ಕಡೆಗೆ ನಡೆಯುತ್ತ ಹೊರಟ. 
 ರಾತ್ರಿಯ ಬೆಳಕಿನಲ್ಲಿ ಗಿರಿಧರ ಕಾರಿನಿಂದಲೆ ಗಮನಿಸಿದ, ಆಸಾಮಿ ಕಡಿಮೆ ಅಂದರು ಆರು ಅಡಿ ಎತ್ತರವಿದ್ದಾನೆ, ತಿಂದು ಬೆಳಸಿದ ಮೈ,  ಮುಖದ ತುಂಬ ಮುಚ್ಚಿಕೊಂಡ ಕುರುಚಲು ಗಡ್ಡ ಮುಖಕ್ಕೆ ಎಂತದೊ ಕ್ರೌರ್ಯವನ್ನು ಕೊಟ್ಟೆದೆ, ಹಾಳಾದವನು ಈಕೆಯ ಕೈಗೆ ಪಿಸ್ತೂಲು ಕೊಟ್ಟು ಹೋಗಿರುವ, ಇಲ್ಲದಿದ್ದರೆ ಹೇಗೆ ಇಲ್ಲಿಂದ ಪಾರಾಗಲು ಪ್ರಯತ್ನಪಡಬಹುದಿತ್ತು, ಈ ಹೆಣ್ಣೊ ಒಂದು ಪದವನ್ನು ಆಡುತ್ತಿಲ್ಲ,   ಸ್ವಲ್ಪ ಓರೆಗಣ್ಣಲ್ಲಿ ನೋಡಿದ, ತೊಡೆಯ ಮೇಲೆ ಪಿಸ್ತೂಲು ಇಟ್ಟು, ಕೈಯನ್ನು ಪಿಸ್ತೂಲಿನ ಮೇಲೆ ಇಟ್ಟು ಕುಳಿತ್ತಿದ್ದಾಳೆ ಆಕೆ,  ಏನಾದರು ಆಕೆಯನ್ನು ಮಾತನಾಡಿಸಲ ಅಂದುಕೊಂಡ, ಬೇಡ ನನಗೇಕೆ ಬೇಕು ಈಗಲೆ ತೊಂದರೆಯಲ್ಲಿದ್ದೇನೆ. ಅಲ್ಲ ಅಷ್ಟು ಗುಂಡು ತಾಕಿ ನೋವು ಅನುಭವಿಸುತ್ತಿರುವ ಈಕೆ, ಕಾರು ಹತ್ತಿದ್ದಾಗ ಸ್ವಲ್ಪ ಒಂದೆರಡು ಬಾರಿ ನೋವಿನ ದ್ವನಿ ಹೊರಡಿಸಿದವಳು ನಂತರ ಶಾಂತವಾಗಿ ಕುಳಿತ್ತಿದ್ದಾಳೆ ಎಂದರೆ ಇನ್ನೆಂತ ಗಟ್ಟಿ ಹೆಂಗಸು, ನಮ್ಮ ಹೆಂಗಸರಾದರೆ, ಚಿಕ್ಕ ಗಾಯಕ್ಕು ಅರಚಾಡಿ ಆಕಾಶ ಭೂಮಿ ಒಂದು ಮಾಡುತ್ತಾರೆ ಅಂದುಕೊಂಡ. 
 ಅವನು ಹೋಗಿ ಹತ್ತು  ನಿಮಿಷ ದಾಟಿ ಹದಿನೈದು ನಿಮಿಶವಾಗುತ್ತಿತ್ತು, ಅದೇನು ಇಷ್ಟು ಹೊತ್ತು ಅಂತ ಅಸಹನೆಯಿಂದ ಮಿಡುಕಿದ, ಹಿಂದಿದ್ದ ಆಕೆಗೆ
"ಎಲ್ಲಿ ಹೋಗ ನಿನ್ನ ಗಂಡ ಇಷ್ಟು ಹೊತ್ತಾದರು , ಬರಲಿಲ್ಲ,  ನಾಲಕ್ಕು ಮೆಡಿಸನ್ ತರಕ್ಕೆ ಇಷ್ಟು  ಹೊತ್ತಾ"  ಎಂದ . 
ಅವಳಿಂದ ಎಂತದೂ ಉತ್ತರವಿಲ್ಲ.  ಥೂ ದರಿದ್ರ ಈಕೆಗೆ ಕನ್ನಡ ಬರುವುದೊ ಇಲ್ಲವೊ ಯಾರಿಗೆ ಗೊತ್ತು ಅಂದು ಕೊಂಡ .ನಿದಾನಕ್ಕೆ ತಲೆ ತಿರುಗಿಸಿ ನೋಡಿದ, ಆಕೆ ತನ್ನ ಬಂಗಿಯನ್ನು ಸ್ವಲ್ಪವು ಬದಲಿಸದೆ ಕುಳಿತ್ತಿದ್ದಳು.  ಮುಂದೆ ನೋಡುತ್ತ  ಕುಳಿತ ಈಗ ಹೇಗಿದ್ದರು ಅವನು ಇಲ್ಲ ಸೀದಾ  ಪೋಲಿಸ್ ಸ್ಟೇಷನ್ಗೆ ಗಾಡಿ ಓಡಿಸಿಬಿಡಲ ಅಂದು ಕೊಂಡ, ಮತ್ತೆ ಆಕೆಯ ಕೈಲಿದ್ದ ಪಿಸ್ತೂಲು ನೆನಪಿಗೆ ಬಂದಿತು.
ಇದೇನು ಅವನು ಹೋಗಿ ಅರ್ದಗಂಟೆಗೆ ಹತ್ತಿರವಾಗುತ್ತ ಬಂದಿತು, ಇನ್ನು ಬರಲಿಲ್ಲ
ಈಗ ಗಿರಿಧರನಿಗೆ ಅನ್ನಿಸಿತು, ಮೆಡಿಸನ್ ತರಲು ಹೋದ ಅವನೇನು ಸಧ್ಯ ಬರುವಂತೆ ಕಾಣುತ್ತಿಲ್ಲ ಈ ಬುರ್ಕಾದ ಹೆಣ್ಣು ತುಟಿ ಬಿಚ್ಚುತ್ತಿಲ್ಲ, ಸುಮ್ಮನೆ ಕೈಯಲ್ಲಿ ಪಿಸ್ತೂಲು ಹಿಡಿದು ಕುಳಿತಿದ್ದಾಳೆ
ಮತ್ತೆ ಹಿಂದೆ ತಿರುಗಿ ನೋಡಿದ, ಆಕೆಯದು ಅದೆ ಬದಲಾಗದ ಭಂಗಿ, ತೆರೆದ ಕಣ್ಣು, ಸ್ವಲ್ಪ ಆಶ್ಚರ್ಯವಾಗಿತ್ತು ಗಿರಿಧರನಿಗೆ
ಜೋರಾಗಿ ಕೂಗಿದ 
"ನಿನ್ನ ಗಂಡ ಹತ್ತು ನಿಮಿಷ ಅಂತ ಹೋದವನು ಅರ್ದಗಂಟೆ ಆಯ್ತು ಬರಲೆ ಇಲ್ಲ, ಎಲ್ಲಿ ಹೋದ, ಪೋನ್ ಮಾಡಿ ನೋಡು" 
ಅವಳಿಂದ ಯಾವುದೆ ಪ್ರತಿಕ್ರಿಯೆ ಇಲ್ಲ.
 
ಏಕೊ ಅನುಮಾನವಾಗಿ, ಅವಳ ಮುಖದ ಬಳಿ ತನ್ನ ಕೈ ಆಡಿಸಿದ, ಅವಳು ತನ್ನ ಕಣ್ಣನ್ನು ಸಹ ಪಿಳುಕಿಸುತ್ತಿಲ್ಲ,  ಅವಳಿಗೆ ಜ್ಞಾನ ಏನಾದರು ತಪ್ಪಿತ. ಒಳ್ಳೆಯದೆ ಆಯಿತು, ಸೀದ ಪೋಲಿಸ್ ಹತ್ತಿರ ಹೋಗಿಬಿಡುವುದು ಒಳ್ಳೆಯದು ಅಂದುಕೊಂಡವನು. ಕೆಳಗೆ ಇಳಿದ. ರಸ್ತೆಯಲ್ಲಿ ಟ್ರಾಫಿಕ್ ಸ್ವಲ್ಪ ತೆಳುವಾಗಿತ್ತು, ಹರಿಯುತ್ತಿರುವ ವಾಹನದಲ್ಲಿರುವ ಕೆಲವರು ಇವನತ್ತಲೆ ನೋಡುತ್ತಿದ್ದರು. ಗಿರಿಧರ ಹಿಂದಿನ ಬಾಗಿಲು ತೆರೆದ, ಅವಳ ಬುಜ ಹಿಡಿದು ಅಲುಗಿಸಿದ, 
 
"ಏಯ್ ಎದ್ದೇಳು, ಕೆಳಗೆ ಇಳಿ" ಅವಳು ಹಾಗೆ ಪಕ್ಕಕ್ಕೆ ಒರಗಿದಳು,
 
ಗಿರಿಧರ ಗಾಭರಿಯಿಂದ ಅವಳ ಎಡಕೈ ನಾಡಿ ಹಿಡಿದು ನೋಡಿದ ,  ನಾಡಿ ನಿಂತು ಬಹಳ ಕಾಲವಾಗಿದೆ ಅನ್ನಿಸಿತು. ಆಕೆಯ ಮುಖದ ಹತ್ತಿರ ಕೈ ಹಿಡಿದು ನೋಡಿದ ಉಸಿರು ನಿಂತು ಹೋಗಿತ್ತು. ಅವನಿಗೆ ಎದೆಯಲ್ಲಿ ಭಯ ಎನ್ನುವುದು ತುಂಬಿ ಬಂತು. ರಸ್ತೆಯಲ್ಲಿ ಎಲ್ಲರು ಅವರ ಪಾಡಿಗೆ ಅವರು ಸಾಗುತ್ತಿದ್ದರು,  ಕಾರಿನಲ್ಲಿ ಡ್ರೈವರ್ ಸೀಟಿನಲ್ಲಿ ಕುಳಿತ, ಸುತ್ತಲ ಗಾಜುಗಳನ್ನು ಇಳಿಸಿಬಿಟ್ಟ. ಹೊರಗಿನವರಿಗೆ ಒಳಗಿನದೇನು ಕಾಣುವಂತಿಲ್ಲ. ಅಲ್ಲದೆ ಕಾರು ರಸ್ತೆ ದೀಪ ಇಲ್ಲದ ಕಡೆ ನಿಂತಿತ್ತು. ಅವನಿಗೆ ಎಂತದೊ ಗಾಭರಿ ತುಂಬಿತ್ತು, ಡಾಕ್ಟರ್ ಆದವನಿಗೆ ಸಾವನ್ನು ನೋಡುವುದು ಹೆದರಿಕೆ ಏನು ಅಲ್ಲ ಆದರೆ ಇದು ವಿಚಿತ್ರ ಪರಿಸ್ಥಿಥಿ ಆಗಿತ್ತು. ಯಾರೊ ಅಪರಿಚಿತ ಹೆಣ್ಣು ಗಂಡು ತನ್ನ ಕಾರಿನಲ್ಲಿ ಹತ್ತಿ, ಗಂಡು ಕೆಳಗೆ ಇಳಿದು ಹೋಗಿದ್ದಾನೆ, ಹೆಣ್ಣು ಪ್ರಾಣ ಬಿಟ್ಟಿದ್ದಾಳೆ
 ಡ್ಯಾಷ್ಬೋರ್ಡಿನಲ್ಲಿದ್ದ ಬ್ಯಾಟರಿ ಹುಡುಕಿದ ಗಿರಿಧರ ಅವಳ ಮುಖ ಮೈಮೇಲೆ ಬೆಳಕು ಹರಿಸಿದ. ನೀಲಿಗಟ್ಟಿದ್ದ ತುಟಿ ಹಾಗು ಮುಖ ಮತ್ತೇನನ್ನೊ ಹೇಳುತ್ತಿತ್ತು. ಬ್ಯಾಟರಿ ಬೆಳಕಲ್ಲಿ ಸೀಟಿನ ಮೇಲೆ ಬಿದ್ದಿದ್ದ, ಇಂಜೆಕ್ಶನ್ ಟ್ಯೂಬ್ ಗಮನಿಸಿದ, ಹಾಗೆ ಎಂತದೊ   ರಾಪರ್, ಬಗ್ಗಿ ಕೈಯಿಂದ ತೆಗೆದು ನೋಡಿ ಬೆಚ್ಚಿಬಿದ್ದ. ಪಾಯಿಸನ್, ಅಂದರೆ ಅವಳಿಗೆ ಪಾಯಿಸನ್ ಇಂಜೆಕ್ಟ್ ಮಾಡಲಾಗಿದೆ, ಅವಳು ಕುಳಿತಲ್ಲೆ ಮರಣ ಹೊಂದಿದ್ದಾಳೆ.

ಅವನಲ್ಲಿ ನಿಂತು ಹತ್ತಿರ ಒಂದು ಗಂಟೆಗೆ ಹತ್ತಿರವಾಗುತ್ತಿತ್ತು, ಅವನು ನಿರ್ದರಿಸಿದ, ಇನ್ನು ಕೆಳಗೆ ಹೋದ ಅವನು ಹಿಂದೆ ಬರಲಾರ. ಬೇಕೆಂದೆ ಸಾಯಿಸಿರುವ ಹೆಣ ಇಲ್ಲಿ ಬಿಟ್ಟು, ತನ್ನನ್ನು ಮೂರ್ಖನನ್ನಾಗಿ ಮಾಡಿ, ಹಣ ಕಿತ್ತು ಪರಾರಿಯಾಗಿದ್ದಾನೆ. ಅವನ ಹಿಂದೆ ಬರುವುದು ಅಸಂಭವ. ಅಲ್ಲಿ ಇರುವುದು ಅಪಾಯ ಎಂದು ನಿರ್ದರಿಸಿ ಕಾರನ್ನು ಚಲಾಯಿಸತೊಡಗಿದ. ಈಗ ಅವನಿಗೆ ಗೊಂದಲ ಎಲ್ಲಿ ಹೋಗುವುದು ಏನು ಮಾಡುವುದು. ಕಾರಿನ ಒಳಗೆ ಅಪರಿಚಿತ ಹೆಣ. ಪೋಲಿಸ್ ಸ್ಟೇಷನ್ ಗೆ ಹೋಗಲ ಅಂದುಕೊಂಡ. ಮರುಕ್ಷಣವೆ ಭಯ ಆವರಿಸಿತು. ಒಂದು ವೇಳೆ ಅವರು ನಂಬದೆ ಹೋದರೆ ತನಗೆ ಅಪಾಯ. ಪೋಲಿಸ್ ಎಂದರೆ ಎಂತದೊ ಭಯ ಅವನನ್ನು ಕಾಡುತ್ತಿತ್ತು

ತಾನೀಗ ಏನು ಮಾಡಬಹುದು. ಉತ್ತಮ ನಿರ್ದಾರವೆಂದರೆ ಯಾರಿಗು ಕಾಣದಂತೆ ಕಾರಿನಲ್ಲಿರುವ ಹೆಣವನ್ನು ಕಾಣದಂತೆ ಮಾಡಿ ಸುಮ್ಮನಾಗಿ ಬಿಡುವುದು. ಸರಿ ಎನ್ನಿಸಿತು ಅದು ಬಿಟ್ಟು ಎಲ್ಲವು ಅಪಾಯಕಾರಿಯೆ. ಹೆಣವನ್ನೀಗ ಏನು ಮಾಡಬಹುದೆಂದು ಚಿಂತಿಸಿದ ಅವನಿಗೆ ಉಪಾಯ ಮಿಂಚಿತು. ಅದರಲ್ಲಿ ಕಡಿಮೆ ರಿಸ್ಕ್  , ತನ್ನ ಹೆಸರು ಈ ಘಟನೆಯಲ್ಲಿ ಒಳಗೊಳ್ಳದಂತೆ ಮಾಡಲು ಅದೆ ಸರಿಯಾದ ಉಪಾಯ ಎಂದು ನಿರ್ದರಿಸಿ. ಕಾರನ್ನು ಸ್ಟಾರ್ಟ್ ಮಾಡಿ , ಬನಶಂಕರಿ ಮೂರನೆ ಘಟ್ಟದ ತನ್ನ ಮನೆಗೆ ಹೊರಟ.
 
.
ಬೆಳಗಿನ ಸಮಯ ಡಾಕ್ಟರ್ ಗಿರಿಧರ, ನಲ್ಲಿಗೆ ಪೈಪ್ ಸಿಕ್ಕಿಸಿ ಕಾರನ್ನು ತೊಳೆಯುತ್ತ ಇದ್ದ. ಹಿಂದಿನ ಎರಡು ಬಾಗಿಲುಗಳನ್ನು ತೆಗೆದು ಒಳಗಿನ ಸೀಟಿನ ಮೇಲೆ, ಹಾಗು ಸಿಟಿನ ಕೆಳಗೆ ಪಾದಗಳನ್ನು ಇಡುವ ಹತ್ತಿರ, ಹೊರಗಡೆ ಹೀಗೆ ಎಲ್ಲ ಕಡ ನೀರನ್ನು ರಬಸವಾಗಿ ಬಿಟ್ಟು ಕಾರನ್ನು ಸ್ವಚ್ಚ ಗೊಳಿಸಿ ತೃಪ್ತಿಯಿಂದ ನೋಡಿದ.
"ನಮಸ್ಕಾರ ಸಾರ್, ಏನು ಬೆಳಗೆ ಬೆಳಗ್ಗೇನೆ ಕಾರ್ ತೊಳಿತ ಇದ್ದೀರ , ಇವತ್ತು ರಜಾ ಎಂದ?" 
ಗಟ್ಟಿಯಾದ ದ್ವನಿಗೆ ತಲೆ ತಿರುಗಿಸಿ ನೋಡಿದ ಗಿರಿಧರ,. ಕಾನ್ಸ್ ಟೇಬಲ್  ಚಂದ್ರಪ್ಪ. ಕೈಯಲ್ಲಿ ಹಾಲಿನ ಪ್ಯಾಕೇಟ್ ಹಿಡಿದು ಗೇಟಿನ ಹತ್ತಿರ ನಿಂತಿದ್ದ. ಜಿಗಣೆಯಂತ ಮನುಷ್ಯ ಮಾತಿಗೆ ನಿಂತರೆ ಆಯ್ತು ತಪ್ಪಿಸಿಕೊಳ್ಳಲು ಕಷ್ಟ. ಸಾಮಾನ್ಯ ದೂರ ಕಾಣುವಾಗಲೆ ಒಳಗೆ ಹೋಗಿಬಿಡುವನು ಗಿರಿಧರ, ಆದರೆ ಇಂದು ಅವನಿಗೆ ಬೆನ್ನು ಮಾಡಿ ನಿಂತಿದ್ದು ಮೊದಲೆ ಗಮನಿಸಲಾಗಲಿಲ್ಲ ಅಂತ ಮನದಲ್ಲಿಯೆ ಪೇಚಾಡಿದ.
"ಹೌದ್ರಿ , ಅದೇನೊ ತುಂಬಾನೆ ಗಲೀಜು ಆಗಿಬಿಟ್ಟಿತ್ತು,  ಇನ್ನು ನಾಳೆ ಆಗಲ್ಲ ಅಂತ ತೊಳೆದೆ"
ಗಿರಿಧರ ನುಡಿಯುತ್ತಿರುವಂತೆ, ಯಾವ  ಸ್ವಾಗತವನ್ನು ನಿರೀಕ್ಷಿಸಿದವನಂತೆ, ಗೇಟನ್ನು ತೆಗೆದು ಒಳಗೆ ಅಡಿಯಿಟ್ಟ. ಚಂದ್ರಪ್ಪ.

"ಈಗೇನು ಡಾಕ್ಟ್ರೆ. ಬೀದಿಗೊಂದು ಆಗಿದೆ ವೆಹಿಕಲ್ ವಾಷ್  ಸೆಂಟರ್ ಸರ್ವಿಸ್ ಗಳು, ಮನೆಯಲ್ಲೇಕೆ ಕಷ್ಟ ಪಡಬೇಕು ಬಿಡಿ, ಅದೇನು ಬಾಗಿಲು ತೆರೆದಿಟ್ಟೆ, ನೀರು ಬಿಟ್ಟು ಬಿಟ್ಟಿದ್ದೀರ್, ಒಳಗೆ ಸೀಟೆಲ್ಲ ನೀರಾಗುವದಿಲ್ಲವೆ, ಒಳಗೆ ಸುಮ್ಮನೆ  ಒದ್ದೆ ಬಟ್ಟೆಲಿ ಒರಸಿದರಾಯಿತಪ್ಪ, ನೀವೊಳ್ಳೆ ಅದೇನೊ ಹೇಳ್ತಾರಲ್ಲ, ಹೆಣಸಾಗಿಸಿದ  ವ್ಯಾನನ್ನು ತೊಳೆಯೋದು ಅಂತ ಹಂಗೆ ಒಳಗೆಲ್ಲ ನೀರು ಬಿಟ್ಟಿದ್ದೀರಿ ಬಿಡಿ"

ತನ್ನ ಜೋಕಿಗೆ ತಾನೆ ಗಹಗಹಿಸಿದ ಚಂದ್ರಪ್ಪ, ಒಂದು ಕ್ಷಣ ಬೆಚ್ಚಿದ ಗಿರಿಧರ. 

ಅವನಿಗೆ ಏನನ್ನು ಉತ್ತರ ಕೊಡಲು ಹೋಗಲಿಲ್ಲ, ಗಿರಿಧರ, ಸುಮ್ಮನೆ ಏನೇನೊ ಮಾತನಾಡಿ ಮೈಮೇಲೆ ಎಳೆದುಕೊಳ್ಳೊದೇಕೆ, ಮೊದಲೆ ಜಿಗಣೆ ಎಂದು ಸುಮ್ಮನಾದ. 

"ಇದೇನು ಕಾಂಪೋಡ್ ಒಳಗೆಲ್ಲ ನೆಲ ಅಗಿಸಿಬಿಟ್ಟಿದ್ದೀರಿ, ಏನು ವ್ಯವಸಾಯ ಜೋರು ಅನ್ನಿಸ್ತುತ್ತೆ, ಒಳ್ಳೆ ಬೆಳೆ ಬಿಡಿ ಈ ವರ್ಷ"

ಗಿರಿಧರ ಸುತ್ತಲು ನೋಡಿದ, ನಂಜಬಟ್ಟಲ ಗಿಡದ ಪಕ್ಕದಿಂದ ಗೇಟಿನವರೆಗಿನ ನೆಲ ಅಗೆದಂತೆ ಆಗಿ ಹೊಸಮಣ್ಣು ಹರಡಿತ್ತು. 

"ಹಾಗೇನು ಇಲ್ಲ,  ಅದೇನೊ ಎರಡು ತೆಂಗಿನ ಗಿಡ ಹಾಕಿಸೋಣ ಅಂತ ಮನಸ್ಸು ಆಯಿತು, ಸುಮ್ಮನೆ ಅಗದೆ , ಅಮೇಲೆ ಅದೇಕೊ ಬೇಡ ಅನ್ನಿಸಿ, ಹಾಗೆ ಸುಮ್ಮನೆ ಹರಡಿದಂತೆ ಬಿಟ್ಟೆ, ಏನಾದರು ಹೂವಿನ ಗಿಡ ಹಾಕಿದರಾಯಿತು. ನಮ್ಮ ಮನೆ ಕೆಲಸದ ನಿಂಗಮ್ಮನಿಗೆ ಹೇಳಿದ್ದೇನೆ,  ನಾಲ್ಕಾರು ಒಳ್ಳೆಗುಲಾಬಿ ಕಡ್ಡಿಗಳನ್ನು ತರಲು "  ಗಿರಿಧರ ಅಂದ

"ಹೌದೇಳಿ ಆ ನಿಂಗಮ್ಮ ನನ್ನ ಹತ್ರನು ಹೇಳಿದಳು, ನಮ್ಮ ಸ್ಟೇಶನ್ ಮುಂದೇನೆ ಇದೇ ಬಿಡಿ ತರಾವರಿ ಗುಲಾಬಿ, ಅದರ ಕಡ್ಡಿನೆ ತಂದು ಹಾಕಿದ್ರಾಯ್ತು, ಯಾವುದೊ ಹಿಂದಿ ಸಿನಿಮಾ ಬಂದಿತ್ತಲ್ಲಪ್ಪ,  ಅವನು ಗುಲಾಬಿ ಕೊಡ್ತಾನಲ್ಲ ಎಲ್ಲರಿಗು, ಹಂಗೆ ನಾವು ಕೈದಿಗಳಿಗೆ ಗುಲಾಬಿ ಕೊಟ್ಟು ಬದಲಾಗು ಅಂತೆ ಕೇಳಿ ಅಂತ ಹಾಕಿದ್ದಾರೆ" 
ಎಂದು ಮತ್ತೆ ಗಹಗಹಿಸಿ ನಕ್ಕ.

ಗಿರಿಧರನಿಗೆ ಅದೇನು ಹೇಳಬೇಕೆಂದು ಹೊಳೆಯಲಿಲ್ಲ, ಇವನದೊಳ್ಳೆ ಪಂಚಾಯಿತಿ ಆಯಿತು ಅಂತ ನೀರು ನಿಲ್ಲಿಸಿ ಪೈಪನೆಲ್ಲ ಎತ್ತಿಟ್ಟ.

"ಅದೇನು ನಿಲ್ಲಿಸಿಬಿಟ್ರೆ ಕಾರು ಶುದ್ದವಾಗೋಯ್ತೇನೊ, ಹಂಗೇಯ ಒಳಗೆ  ಊದುಬತ್ತಿ ಹಚ್ಚಿಬಿಡಿ ಸರಿಹೋಯ್ತದೆ"  ಅಂದವನು , 

" ಅದು ಸರಿ ಅದೇನು ನಿಮಗೆ ತೆಂಗಿನ ಗಿಡದ ಹುಚ್ಚು, ಎಲ್ಲರು  ಮನೆಮುಂದಿನ ತೆಂಗಿನ ಗಿಡ ತೆಗಿಸುತ್ತಿದ್ದರೆ, ನೀವು ಹಾಕಿಸಲು ಹೊರಟಿದ್ದೀರಿ ಡಾಕುಟ್ರು " ಎಂದ ವಿಚಿತ್ರವಾಗಿ ಚಂದ್ರಪ್ಪ 

"ಹುಚ್ಚು ಅಂತ ಏನಿಲ್ಲ , ಹಾಕೋಣ ಅನ್ನಿಸಿತು ಆಮೇಲೆ ಸುಮ್ಮನಾದೆ "  ಎಂದ ಗಿರಿಧರ.

"ಅ ರಿಯಲ್ ಎಸ್ಟೇಟ್  ರಂಗಪ್ಪ  ಹೇಳ್ತಿದ್ದ, ಏನು ಬೆಳಗ್ಗೆ ನಾಲಕ್ಕು ಗಂಟೆಗೆ ಎದ್ದು ಗುಂಡಿ ತೆಗಿತಿದ್ದಾರೆ ಡಾಕ್ಟ್ರು , ಒಳ್ಳೆ ಸ್ಮಶಾನದಲ್ಲಿ ಹೆಣಕ್ಕೆ ಗುಂಡಿ ತೆಗೆದಂತೆ ಅಂತ ನಗಾಡುತ್ತಿದ್ದ,  ಅ ಪರಿಮಳ ಕಾಫಿ ಹತ್ರ "

ಚಂದ್ರಪ್ಪನ ಮಾತಿಗೆ , ಗಿರಿಧರ ನಗುತ್ತ, 
"ಸ್ವಲ್ಪ ಹುಚ್ಚೆ ಆಯಿತೇನೊ ಬಿಡಿ,  ಬೆಳಗ್ಗೆ ಬೆಳಗ್ಗೆ ಮೂರುಗಂಟೆಗೆ ಎಚ್ಚರವಾಗಿಬಿಡ್ತು, ಹಾಳಾದ್ದು ನಿದ್ದೆನೆ ಹತ್ತಲಿಲ್ಲ, ನಾಲಕ್ಕಕ್ಕೆ ಹೊರಬಂದೆ ಏನು ಮಾಡಲು ತೋಚದೆ ಅಗೆಯುತ್ತಿದ್ದೆ, ಅದೇನೊ ನಂತರ ಬೇಸರವೆನಿಸಿ ಮುಚ್ಚಿಬಿಟ್ಟೆ" ಎಂದ

"ಮತ್ತೆ ನೀವೇನೊ ಮೂರುತಿಂಗಳ ಮೊದಲೊಮ್ಮೆ ಹೀಗೆಯೆ ಯಾರನ್ನೊ ಕರೆದು ತಂಗಿನ ಗಿಡ ನೆಡೆಸುತ್ತೀನಿ ಅಂತ ಗುಂಡಿ ತೆಗೆಸಿ, ನಂತರ ಮನಸು ಬದಲಾಯಿಸಿ ಮುಚ್ಚಿಬಿಟ್ಟರಂತೆ  ರಂಗಪ್ಪ ಅಂದ , ನಿಮದೇನು ಮೂರುತಿಂಗಳಿಗೊಮ್ಮೆ ಅಗೆಯೊ ಕೆಲಸ ವಿಚಿತ್ರ " ಚಂದ್ರಪ್ಪನ ಕುಹಕದ ಮಾತಿಗೆ ಬೆಚ್ಚಿಬಿದ್ದ ಗಿರಿಧರ, ಇವನನ್ನು ಹೀಗೆ ಬಿಟ್ಟರೆ ಮಾತು ಆಡುತ್ತಲೆ ಇರುತ್ತಾನೆ ಅನ್ನಿಸಿ, ಒಳಗೆ ಹೊರಟ.

ಹಿಂದೆಯೆ ಬಂದ ಚಂದ್ರಪ್ಪ " ಅದೇನು ಡಾಕ್ಟ್ರೆ, ಹಂಗೆ ಅರ್ಜೆಂಟ್ ಆಗಿ ಒಳ ಹೊರಟಿರಿ,  ಇರ್ಲಿ ಬಿಡಿ, ಇವತ್ತಿನ ಪೇಪರ್ ಇನ್ನು ಬರಲಿಲ್ಲವ, ಈ ನಡುವೆ ಅಂತು, ಪೇಪರ್ ಹುಡುಗರು ಬೆಳಗ್ಗೆ ಎಂಟು ಗಂಟೆ ಆದ್ರು ಪೇಪರ್ ಹಾಕಲ್ಲ, ಅಷ್ಟಕ್ಕು ಈಗ ಪೇಪರ್ ಓದೋರು ಯಾರಿದ್ದಾರೆ ಬಿಡಿ, ಎಲ್ಲ ಮೊದಲೆ ಟೀವಿಲಿ ಸುದ್ದೀನೆಲ್ಲ ನೋಡಿ ಬಿಟ್ಟಿರ್ತಾರೆ"ಅಂದ.

ಗಿರಿಧರ ಯೋಚಿಸುತ್ತಿದ್ದ , ಇವನನ್ನು ಹೇಗೆ ಹೊರಹಾಕುವುದು, ನೋಡಿದರೆ ನೂರು ಇನ್ನೂರು ಸಾಲ ಕೇಳುವ ಹಾಗಿದ್ದಾನೆ, ಹಿಂದೊಮ್ಮೆ ಇದೇ ರೀತಿ ಬಂದವನು ಐದುನೂರು ಪಡೆದು , ವಾರದಲ್ಲಿ ಕೊಡುವದಾಗಿ ಹೇಳಿ ಹೋಗಿದ್ದ  ಅಂದುಕೊಂಡ.

ಚಂದ್ರಪ್ಪನಿಗೆ ಮಾತನಾಡೊ ಲಹರಿ 
"ಅದೇನೊ  ಕೇಳಿದ್ರ ಡಾಕ್ಟ್ರೆ,  ನಿನ್ನೆ ಕನಕಪುರ ರಸ್ತೆಯ ಕಗ್ಗಲಿಪುರದ ಹತ್ತಿರ, ಸೆಂಟ್ರಲ್ ನಿಂದ ಬಂದ  ಕ್ರೈಮ್ ಪೋಲಿಸರು, ಒಂದು ಮನೆ ಸುತ್ತುವರೆದು ನುಗ್ಗಿದ್ದಾರೆ, ಅದರಲ್ಲಿ ಅದ್ಯಾರೊ ಪಾಕಿಸ್ತಾನದಿಂದ ಬಂದ ಟೆರರಿಷ್ಟ್ ಇದ್ದರಂತೆ, ಕೆಲವರು ನಮ್ಮವರು ಇದ್ದರು ಅನ್ನಿ, ಸಿನಿಮಾ ತರಾ ಶೂಟಿಂಗ್ ಫೈರಿಂಗ್ ಎಲ್ಲ ನಡೆದು ಆರು ಮಂದಿ ಅಲ್ಲೆ ಸತ್ತಿದ್ದಾರೆ, ಒಂದಿಬ್ಬರು ತಪ್ಪಿಸಿಕೊಂಡಿದ್ದಾರಂತೆ,  ಒಂದು ಗಂಡು ಒಂದು ಹೆಣ್ಣು ಬೈಕಿನಿಂದ ಪರಾರಿಯಾಗಿ, ಮುಖ್ಯರಸ್ತೆಗೆ ಬಂದು ಅಲ್ಲಿ ಯಾವುದೊ ವಾಹನ ಹತ್ತಿ ಪರಾರಿಯಾಗಿದ್ದಾರೆ ಅಂತ ಸುದ್ದಿ ನಮ್ಮವರು ಜಾಲಾಡುತ್ತಿದ್ದಾರೆ, ಅದನ್ನು ನೋಡೋಣ ಅಂದ್ರೆ ನಮ್ಮನೇಗೆ ಪೇಪರ್ ಬರಲ್ಲ ನೋಡಿ" ಅಂತ ನಕ್ಕ. 

ಗಿರಿಧರನಿಗೆ ಭಯ ಆಯಿತು, ಅಂದರೆ ಅಲ್ಲಿ ತಪ್ಪಿಸಿಕೊಂಡ ಇಬ್ಬರೆ ನನ್ನ ಜೊತೆ ಬಂದವರು, ಅಂತ ಅನ್ನಿಸಿ, ಮೈಯೆಲ್ಲ ಬಿಸಿಯಾಯಿತು, ಇವನಿಗೆ ಗೊತ್ತಿಲ್ಲ ಅವರು ತನ್ನ ಕಾರಿನಲ್ಲಿಯೆ ಬಂದವರು ಎಂದು , ಗೊತ್ತಾದರೆ ಏನು ಮಾಡುವನೊ 

ಚಂದ್ರಪ್ಪನ ಮಾತು ಮತ್ತೆಲ್ಲೊ ತಿರುಗಿತು "ಅದು ಸರಿ ಡಾಕ್ಟರೆ, ನೀವು ಅದೇನೊ ಮನೆಯನ್ನು ಮಾರಿಬಿಡ್ತೀನಿ ಅಂತಿದ್ದೀರಂತೆ, ಯಾಕೆ ಬೆಂಗಳೂರಿನಲ್ಲಿ ಇಂತ   ಜಾಗದಲ್ಲಿ ಇರೋ ಮನೆ ಒಮ್ಮೆ ಕೊಟ್ಟರೆ ಅಷ್ಟೆ,  ಮತ್ತೆ ಸಿಕ್ಕಲ್ಲ, ಸಿಕ್ಕರು ಅಷ್ಟು ದುಡ್ಡು ಕೊಡಲಾಗುತ್ತ,  ರಿಯಲ್ ಎಷ್ಟೇಷ್ಟ್ ರಂಗಪ್ಪ ಹೇಳಿದ, ನನಗು ಹೇಳಿದ್ದಾನೆ ಅನ್ನಿ ಯಾರಾದರು ಗಿರಾಕಿ ಹುಡುಕು ಅಂತ, ಅದಿರ್ಲಿ ಅದೇನು ನೀವು ಮನೆ ಮಾರುತ್ತೇನೆ ಅನ್ನುತ್ತೀರಿ, ಮತ್ತೆ ತೆಂಗಿನ ಗಿಡ ಹಾಕುತ್ತೀನಿ ಅನ್ನುವಿರಿ, ನಿಮ್ಮ ಮಾತೆ ಒಂದಕ್ಕೊಂದು ಕೂಡಲ್ವೆ " ಎಂದ

ಗಿರಿಧರನಿಗೆ ತಕ್ಷಣ ಉತ್ತರ ಕೊಡಲಾಗಲಿಲ್ಲ. 

"ನೀವು ಸ್ವಲ್ಪ ಕೂತಿರಿ ಮುಖ ಕೈಕಾಲು ತೊಳೆದು ಬಂದು ಬಿಡುತ್ತೇನೆ " 

ಅವನಿಂದ ತಪ್ಪಿಸಿಕೊಂಡು ಬಚ್ಚಲು ಮನೆ ಹೊಕ್ಕ.  ಇವನು ಇನ್ನು ಹೊರಡಲ್ಲ ನಾನೆ ವಿಚಾರಿಸಿ ಒಂದಿಷ್ಟು ದುಡ್ಡು ಕೊಡಬೇಕು ಇಲ್ಲದಿದ್ದರೆ ತಲೆ ತಿನ್ನುತ್ತಲೆ ಇರುತ್ತಾನೆ ಅನ್ನಿಸಿತು ಮುಖ ತೊಳೆಯಬೇಕಾದರೆ,  ರಾತ್ರಿ ಯೆಲ್ಲ ನಿದ್ದೆ ಗೆಟ್ಟಿದ್ದು, ಜೋಪು ಎಳೆಯುತ್ತಿತ್ತು, ಒಂದು ಕಾಫಿ ಕುಡಿದು ಸ್ವಲ್ಪ ಮಲಗಿಬಿಡಬೇಕು ಅಂದುಕೊಂಡ,

ಹೊರಗೆ ಬರುವಾಗ ನೋಡಿದರೆ  ಕಾನ್ ಸ್ಟೇಬಲ್ ಚಂದ್ರಪ್ಪ ಆರಾಮವಾಗಿ ಸೋಫದಲ್ಲಿ ಕುಳಿತು, ಪೇಪರ್ ನೋಡುತ್ತಿದ್ದ, ಅಂದರೆ ಪೇಪರ್ ಹುಡುಗ ಪೇಪರ್ ಹಾಕಿ ಹೋಗಿರಬೇಕು. 
"ಇದೇನು ಸುದ್ದೀನೊ ಡಾಕ್ಟರೆ ಬರಿ ಕೊಲೆ ಹೆಣ  ರಕ್ತ ಇದೇ ಆಗಿ ಹೋಯ್ತು, ನಮಗು ನಿಮಗು ಇದು ಸಾಮಾನ್ಯ ಬಿಡಿ ಅಲ್ವೆ " ಎಂದ.
ಗಿರಿಧರ್ ನಗುತ್ತ
"ಅದು ಸರಿಯೆ ಚಂದ್ರಪ್ಪನವರೆ, ಏನು ಮಾಡೋದು, ಕಾಲವೆ ಹಾಗೆ, ಏನು ಬೆಳಗ್ಗೆ ಬಂದಿರಿ, ಏನಾದರು ಹಣದ ಅವಶ್ಯಕತೆ ಇತ್ತೆ " ಎಂದ. 
ಚಂದ್ರಪ್ಪ ಆಶ್ಛರ್ಯದಿಂದ , 
"ಅಯ್ಯೊ ಹಾಗೇನು ಇಲ್ಲಪ್ಪ ಸುಮ್ಮನೆ ಹಾಗೆ ತಲೆ ಹಾಕಿದೆ, ಅದೇನು ನಿಮಗೆ ತೊಂದರೆ ಆಯಿತೇನೊ ಬೆಳಗ್ಗೆನೆ ವಕ್ಕರಿಸಿದೆ ಎಂದು, ಎಲ್ಲಿ ನಿಮ್ಮವರು ಕಾಣೋಲ್ಲ, ತುಂಬಾ ದಿನಾ ಆಯ್ತು, ಅಯಮ್ಮನ ನೋಡಿ, ಆವರು ನೋಡಿ ನಾನು ಇಷ್ಟೊತ್ತು ಕುಳಿತಿದ್ರೆ, ಇಷ್ಟುಹೊತ್ತಿಗೆ ಒಂದು ಕಾಫಿ ಕಾಣಿಸಿಬಿಟ್ಟಿರೋರು " ಎಂದ ನಗುತ್ತ

"ಅದಕ್ಕೇನು ಬಿಡಿ, ನಾನೆ ಕಾಫಿ ಮಾಡುತ್ತೇನೆ ಕುಡಿದು ಹೊರಡಿ, ನಾನು ನೆಲ ಅಗೆದು, ಕಾರ್ ತೊಳೆದು ಸುಸ್ತಾದೆ, ಹಂಗೆ ಸ್ವಲ್ಪ ಹತ್ತು ನಿಮಿಷ ಮಲಗಿ ನಂತರ ಸ್ನಾನ ಮಾಡುತ್ತೇನೆ" ಎನ್ನುತ್ತ , ರೆಫ್ರಿಜಿರೇಟರ್ ಹತ್ತಿರ ಹೋಗಿ, ಒಳಗೆ ಹಾಲಿನ ಪ್ಯಾಕೆಟ್ ತೆಗೆದುಕೊಂಡು, ನಂತರ ಬಾಗಿಲು ಮುಚ್ಚಿ ಒಳಗೆ ಹೊರಟ
"ನೀವೆ ಕಾಫಿ ಮಾಡ್ತೀರ ಪರವಾಗಿಲ್ವೆ, ಡಾಕ್ಟರ್ ಅಡುಗೆನು ಕಲಿತ ಹಾಗಿದೆ" ಎಂದವನು
"ನಮ್ಮಾಕೆ ಅದೇನೊ ಕೊತ್ತಂಬರಿ ಸೊಪ್ಪು ಮೆಣಾಸಿನಕಾಯಿ ತಾ ಎಂದಳು ಅಷ್ಟೆ ಬೇಗ ಯಾರು ಬಾಗಿಲು ತೆರೆಯುತ್ತಾರೆ ಹೇಳಿ , ನಿಮ್ಮ ಪ್ರೀಜಿನಲ್ಲಾದರು ಇದೆಯಾ" ಎನ್ನುತ್ತ ಎದ್ದು ಬಂದ
ಅಡುಗೆ ಮನೆಯಿಂದಲೆ ಗಿರಿಧರ 
"ಅಯ್ಯೊ ಇಲ್ಲ ಅನ್ನಿಸುತ್ತೆ, ನಾನಂತು ಈ ನಡುವೆ ಹೋಟೆಲಿನಲ್ಲಿಯೆ ಊಟ, ನೀವೆ ಪ್ರೀಜ್ ತೆಗೆದುನೋಡಿ, ನಿಮ್ಮ ಪುಣ್ಯ ಏನಾದರು ಇದ್ದರೆ ತೆಗೆದುಕೊಳ್ಳಿ " ಎಂದ ಜೋರಾಗಿ. 

ಎದ್ದು ಬಂದ ಚಂದ್ರಪ್ಪ, ಪ್ರೀಜ್ ನ ಬಾಗಿಲು ತೆಗೆದ, ಒಳಗೆ ಲೈಟಿನ ಬೆಳಕಿನಲ್ಲಿ, ಎಲ್ಲ ತೆರೆದು ಕಾಣುತ್ತಿತ್ತು, ಹಾಲಿನ ಪ್ಯಾಕೇಟ್, ಕಾಗದದ ಪೊಟ್ಟಣ ಹೊರತು ಪಡಿಸಿ ಏನು ಇರಲಿಲ್ಲ, ಕೆಳಗಿನ  ಕವರ್ ನಲ್ಲಿ ಕೆಲವು ಟಮೋಟ ಕಾಣಿಸಿತು
"ಸರಿ ಇಲ್ಲ ಅನ್ನಿಸುತ್ತೆ " ಎಂದು ಬಾಗಿಲು ಮುಚ್ಚ ಹೊರಟ ಚಂದ್ರಪ್ಪನ ದೃಷ್ಟಿ ಪ್ರೀಜ್ ಮೇಲೆ ಹಾಗೆ ನಿಂತಿತ್ತು, 
ಹತ್ತಿರದಿಂದ ವೀಕ್ಷಿಸಿದ , ಅನುಮಾನವೆ ಇಲ್ಲ ಅದು ಪಿಸ್ತೂಲ್ , ನೋಡುವಾಗಲೆ ಅವನ ಪೋಲಿಸ್ ಜ್ಞಾನಕ್ಕೆ ತಿಳಿಯುತ್ತಿದೆ, ಅದು ದೀಪಾವಳಿ   ಪಿಸ್ತೂಲ್ ಅಲ್ಲ , ಅತ್ಯಾಧುನಿಕವಾದ ವಿದೇಶಿದಿಂದ ಅಮದಾದ ಟೆರರಿಷ್ಟ್ ಗಳು ಉಪಯೋಗಿಸಬಹುದಾದಂತ ಕೋಲ್ಟ್ ಮಾಡೆಲ್ ಪಿಸ್ತೂಲ್ . ಅದು ಡಾಕ್ಟರ್ ಮನೆಯಲ್ಲಿ

ಚಂದ್ರಪ್ಪ ಜೋರಾಗಿ ಕರೆದ "ಡಾಕ್ಟರೆ ಒಂದು ನಿಮಿಷ ಹೊರಬನ್ನಿ"

ಗಿರಿಧರ ಸ್ವಲ್ಪ ಅಸಮಾದಾನದಿಂದಲೆ ಹೊರಬಂದ
"ಡಾಕ್ಟ್ರೆ ಇದೇನು ನಿಮ್ಮ ಮನೆಯಲ್ಲಿ ಪಿಸ್ತೂಲ್, ನೀವು ಉಪಯೋಗಿಸುತ್ತೀರ, ಇದೆಲ್ಲಿಂದ ಬಂತು, ಅದು ಕಾಟ್ರೆಡ್ಜ್ ಲೋಡ್ ಆಗಿದೆ" ಎಂದ ಸ್ವಲ್ಪ   ಜೋರಾಗಿ
ಗಿರಿಧರನಿಗೆ ತಕ್ಷಣಕ್ಕೆ ಏನು ಉತ್ತರಿಸಬೆಕೆಂದು ತಿಳಿಯಲಿಲ್ಲ. ಅವನು ಪಿಳಿ ಪಿಳಿ ನೋಡಿದ ಚಂದ್ರಪ್ಪನನ್ನು 

ಗಿರಿಧರನಿಗೆ ತಕ್ಷಣಕ್ಕೆ ಏನು ಉತ್ತರಿಸ ಬೇಕೆಂದು ತಿಳಿಯಲಿಲ್ಲ. ಅವನು ಮನಸಿನಲ್ಲಿ  ಅಂದು ಕೊಂಡ ಇದೆಂತ ಕೆಲಸ ಮಾಡಿದೆ, ಕಾರಿನಲ್ಲಿದ್ದ ಶವವನ್ನು ಕಣ್ಮರೆ ಮಾಡಿದವನು , ಹಿಂದಿನ ಸೀಟಿನಲ್ಲಿದ್ದ ಈ ಪಿಸ್ತೂಲ್ ಮಣ್ಣಿನಲ್ಲಿ ಹಾಕಿ ಮುಚ್ಚಲು ಮರೆತುಬಿಟ್ಟೆ. ಆಮೇಲೆ ಒಳಗೆ ಎತ್ತಿಡೋಣ ಎಂದು ಅದನ್ನು ಪ್ರೀಜ್ ಮೇಲೆ   ಇಟ್ಟು ಹೊರಗೆ ಕಾರು ತೊಳೆಯಲು ಹೊರಟುಹೋದೆ, ಮಧ್ಯೆ ಈ ಪೋಲಿಸ್ ಚಂದ್ರಪ್ಪ ಬರುವನೆಂದು ನಿರೀಕ್ಷಿಸಲಿಲ್ಲ,. ಹೋಗಲಿ ಅಮೇಲಾದರು ಉಪಾಯವಾಗಿ ಪಿಸ್ತೂಲನ್ನು ಎತ್ತಿಡಬೇಕಾದವನು , ಮರೆವಿಗೆ ಬಲಿಯಾಗಿ, ಅಲ್ಲೆ ಬಿಟ್ಟು ಇವನ ಕಣ್ಣಿಗೆ ಬೀಳುವಂತೆ ಮಾಡಿರುವೆ, ಇದರಿಂದ ಏನಾಗುತ್ತೆ ಅನ್ನಿಸಿ ಭಯವಾಯಿತು, ಹೊರಗೆ ತೋರಗೋಡದೆ
 
"ಅದು ನನ್ನ ಸ್ನೇಹಿತರದು, ಇಲ್ಲಿ ಬಂದವರು ಬಿಟ್ಟು ಹೋಗಿದ್ದಾರೆ ಹಿಂದೆ ಕೊಡಬೇಕು"  ಎಂದ
"ಹೌದೆ ಯಾರದು, ಇದು ಸಾಮಾನ್ಯದ್ದಲ್ಲ , ವಿದೇಶದಿಂದ ತಂದಿರುವಂತೆ ಕಾಣುತ್ತೆ, ನಿಮ್ಮ ಸ್ನೇಹಿತರ ಹೆಸರೇನು "  ಎಂದು ಹತ್ತಿರದಿಂದ ಬಗ್ಗಿ ನೋಡಿದ. 
"ನೋಡಿ ಇದರ ಒತ್ತು ಗುಂಡಿಯ ಮೇಲೆ, ರಕ್ತದ ಗುರುತಿದೆ, ಪಕ್ಕದಲ್ಲು ಸ್ವಲ್ಪ ರಕ್ತ ಮೆತ್ತಿದೆಯಲ್ಲ, ಏನು ಗಡಿಬಿಡಿ ನಡೆದಿರುವಂತಿದೆ"
 
ಗಿರಿಧರನಿಗೆ ಉತ್ತರಿಸಲು ಕಷ್ಟವಾಯಿತು. "ಒಂದು ನಿಮಿಷ   ಬಂದು ಹೇಳುವೆ, ಒಳಗೆ ಕಾಫಿಗೆ ಎಂದು ಹಾಲು ಬಿಸಿಗೆ ಇಟ್ಟಿರುವೆ" ಎನ್ನುತ್ತ ಒಳಗೆ ಹೋಗಲು ನೋಡಿದ
 
ಚಂದ್ರಪ್ಪ "ಡಾಕ್ಟರೆ ಈಗ ಆ ಕಾಫಿ ವಿಷಯ ಬಿಟ್ಟುಬಿಡಿ, ಸ್ಟೌ ಆರಿಸಿ ಹೊರಬನ್ನಿ , ನೀವು ಪಿಸ್ತೂಲಿನ ಜೊತೆ , ನಮ್ಮ ಪೋಲಿಸ್ ಸ್ಟೇಷನ್  ಹೋಗೋಣ ಬನ್ನಿ" ಎಂದ. ಈಗ ಚಂದ್ರಪ್ಪನಲ್ಲಿ  ಪಕ್ಕದ ಮನೆಯಾತ ಹೋಗಿ ನಿಜವಾದ ಪೋಲಿಸ್ ಅವಾಹನೆಯಾಗಿದ್ದ. 
 
"ಅಂತದೇನು ಗಂಭೀರವಲ್ಲ, ನನ್ನ ಸ್ನೇಹಿತನಿಗೆ ಹಿಂದೆ ಕೊಟ್ಟುಬಿಡುತ್ತೇನೆ ಬಿಡಿ, ಅಂದ ಹಾಗೆ ನೀವು ಅದೇನು ಹಣ ಬೇಕು ಅಂದಿರಲ್ಲ ಎಷ್ಟು"
ಎಂದ ಗಿರಿಧರ  ಸ್ವಲ್ಪ ಅಳುಕುತ್ತಲೆ. ಅವನಿಗೆ ಅರಿವಾಗಿತ್ತು ನಾನು ತೊಂದರೆಯಲ್ಲಿ ಸಿಕ್ಕಿಬಿದ್ದೆ.
 
"ಡಾಕ್ಟರೆ ನಾನು ನಿಮ್ಮ ಬಳಿ ಹಣ ಕೇಳಲಿಲ್ಲ. ಮಾತು ಬದಲಾಯಿಸಬೇಡಿ, ನನಗೇನೊ ಅನುಮಾನ ಕಾಡುತ್ತಿದೆ, ನಿಮ್ಮ ನಡೆನುಡಿ ನೇರವಾಗಿಲ್ಲ, ಎಂತದೊ ಮರೆಸಲು ಪ್ರಯತ್ನಪಡುತ್ತಿರುವಿರಿ ಅನ್ನಿಸುತ್ತೆ, ನಾನು ಹೇಳಿದ ಹಾಗೆ ಮಾಡಿ ಬನ್ನಿ ಬಟ್ಟೆ ಧರಿಸಿ ಹೊರಡಿ, ನಾನು ಬಲವಂತವಾಗಿ ಕರೆದೊಯ್ಯುವಂತೆ ಮಾಡಿಕೊಳ್ಳಬೇಡಿ " ಎಂದ ಚಂದ್ರಪ್ಪ ತುಸು ಗಡಸು ದ್ವನಿಯಲ್ಲಿ
 
  ಗಿರಿಧರನಿಗೆ ಏನು ಮಾಡಲು ತೋಚಲಿಲ್ಲ. ಅವನು ಹೇಳಿದಂತೆ ಹೊರಡಲು ಸಿದ್ದನಾದ . ಅವನು ಸಿದ್ದನಾಗುವದರಲ್ಲಿ ಚಂದ್ರಪ್ಪ ಗಿರಿಧರನ ಮನೆಯಿಂದಲೆ,  ಬನಶಂಕರಿಯ ತನ್ನ ಪೋಲಿಸ್ ಠಾಣೆಗೆ ಹಾಗು ತನ್ನ  ಸಬ್ ಇನ್ಸ್ ಪೆಕ್ಟರ್ ಕರಿಯಪ್ಪನ ಮೊಬೈಲ್ ನಂಬರಿಗೆ ಕಾಲ್ ಮಾಡಿ ವಿಷಯವನ್ನೆ ಲ್ಲ ತಿಳಿಸಿ ಅನುಮಾನದಿಂದ ಕರೆತರುತ್ತಿರುವದಾಗಿ ತಿಳಿಸಿದ್ದ. ಹೊರಡುವ ಮುಂಚೆ ಗಿರಿಧರ ಮತ್ತೆ ಕೇಳಿದ
"ಚಂದ್ರಪ್ಪನವರೆ ನೀವು ತಪ್ಪು ತಿಳಿದು ಕರೆದೊಯ್ಯುತ್ತಿದ್ದೀರಿ , ಸುಮ್ಮನೆ ಯಾಕೆ ಇದೆಲ್ಲ"
" ಬನ್ನಿ ಡಾಕ್ಟರೆ , ಏನಾದರು ನಿಮ್ಮ ತಪ್ಪಿಲ್ಲ ಅಂದರೆ ನಾನೆ ನಿಮ್ಮನ್ನು ಮತ್ತೆ ಮನೆಗೆ ಕರೆತಂದು ಬಿಡುತ್ತೇನೆ , ಈಗಂತು ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸುಮ್ಮನೆ ಇಲ್ಲಿ ಗಲಾಟೆ ಬೇಡ ಸುತ್ತಮುತ್ತಲು ಗೊತ್ತಿರುವ ಮನೆಗಳಿವೆ" 
 
ಗಿರಿಧರ ಅಸಹಾಯಕನಾಗಿ ಅವನ ಹಿಂದೆ ಹೊರಟ. ಜೊತೆಯಲ್ಲಿ  ಪ್ರೀಜ್ ಮೇಲಿದ್ದ ಪಿಸ್ತೂಲನ್ನು ಚಂದ್ರಪ್ಪ ಎಚ್ಚರಿಕೆಯಿಂದ  ಮೇಲೆ ಕರ್ಚಿಪ್ ಹಾಕಿ ಸುತ್ತಿಕೊಂಡು ಹಿಡಿದುಕೊಂಡ.
 
==============================
 
ಠಾಣೆಯಲ್ಲಿ ಡಾಕ್ಟರ್ ಗಿರಿಧರನ ಮುಖವನ್ನೆ ನೋಡುತ್ತ ಕುಳಿತಿದ್ದ ಇನ್ಸ್ ಪೆಕ್ಟರ್ , ಮೌನವನ್ನು ಮುರಿಯುತ್ತ ಕೇಳಿದ
"ನೀವು ನಮ್ಮ ಚಂದ್ರಪ್ಪನ ಮನೆ ರಸ್ತೆಲಿ ಅಂತೆ ಇರುವುದು ಅಂದರೆ ನಮ್ಮ ಸ್ಟೇಷನ್ ಹಿಂಬಾಗಕ್ಕೆ ಮೂರನೆ ರಸ್ತೆ, ಅದೇನು ಎಂತದೋ ತಕರಾರು"
"ತಕರಾರು ಏನಿಲ್ಲ ಸಾರ್ ಅವರು ಏನೊ ತಪ್ಪು ಅಭಿಪ್ರಾಯದಲ್ಲಿ ಕರೆತಂದಿದ್ದಾರೆ"  ಗಿರಿಧರ್ ಮೆತ್ತಗೆ ಹೇಳಿದ
"ಡಾಕ್ಟರೆ ನಿಮ್ಮ ಹತ್ತಿರ ಪಿಸ್ತೂಲ್ ಇದೆ, ಅದರ ಮೇಲೆ ರಕ್ತದ ಕಲೆ ಇದೆ ಅಂದರೆ ತಪ್ಪು ಅಭಿಪ್ರಾಯ ಹೇಗೆ ಆಗುತ್ರಿ, ಹೇಳಿ ನಿಮಗೆಲ್ಲಿ ಸಿಕ್ಕಿತು ಅದು" ಇನ್ಸ್ ಪೆಕ್ಟರ್ ಕರಿಯಪ್ಪನ ದ್ವನಿ ಯಾವಾಗಲು ಹೆದರಿಕೆ ಹುಟ್ಟಿಸುವಂತದೆ.
ಗಿರಿಧರ್ ಯೋಚಿಸುತ್ತಿದ್ದ ಏನು ಹೇಳಲಿ ಎಂದು
"ಸಾರ್ ಅದು ನನ್ನ ಸ್ನೇಹಿತರದು, ನಿನ್ನೆ ನಮ್ಮ ಮನೆಗೆ ಬಂದಿದ್ದವರು ಮರೆತು ಹೋಗಿದ್ದಾರೆ, ಮತ್ತೆ ಅವರಿಗೆ ಕೊಟ್ಟು ಬಿಡುವೆ ಬಿಡಿ"
ಅಂದ 
"ಸರಿ ಏನವರ ಹೆಸರು, ಫೋನ್ ಏನಾದರು ಇದೆಯ, ಅಡ್ರೆಸ್ ಗೊತ್ತ "
"ಅವರ ಫೋನ್ ನಂಬರ್ ತಿಳಿದಿಲ್ಲ, ಪೋಸ್ಟಲ ಅಡ್ರೆಸ್ ಗೊತ್ತಿಲ್ಲ ಅದೆಲ್ಲೊ ಚಾಮರಾಜಪೇಟೆ ಅನ್ನಿಸುತ್ತೆ ಅವರ ಮನೆ"
ಗಿರಿಧರ ಉತ್ತರಿಸಿದ
"ಸರಿ ಈಗ ಅವರನ್ನು ನೀವು ಕಾಂಟ್ಯಾಕ್ಟ್ ಮಾಡಿ ತಿಳಿಸಿ, ಈ ರೀತಿ ಆಗಿದೆ ಎಂದು ಬರುತ್ತಾರೆ"  ಇನ್ಸ್ ಪೆಕ್ಟರ್ ಹೇಳಿದ
"ಸಾರ್ ನಿಜ ಹೇಳಬೇಕು ಅಂದ್ರೆ ಅವರು ನನ್ನ ಪೇಷೆಂಟ್, ಅವರಾಗೆ ನನ್ನ ಹತ್ತಿರ ಬಂದಿದ್ದವರು ನಾನು ಅವರ ಮನೆಗೆ ಹೋಗಿಲ್ಲ" ಗಿರಿಧರ ಹೇಳಿದ
 
"ಅಂದ ಹಾಗೆ ನಿಮ್ಮದು ಯಾವ ವಿಭಾಗ ಡಾಕ್ಟರೆ ,ಚಿಕಿತ್ಸೆಯಲ್ಲಿ " ಇನ್ಸ್ ಪೆಕ್ಟರ್ ಕೇಳಿದ ಕುತೂಹಲದಲ್ಲಿ 
ಸ್ವಲ್ಪ ದ್ವನಿ ತಗ್ಗಿಸಿ ಹೇಳಿದ ಗಿರಿಧರ 
"ಗೈನಕಾಲಜಿ ವಿಭಾಗ" 
ಕಣ್ಣು ಚೂಪು ಮಾಡುತ್ತ ಕೇಳಿದ ಇನ್ಸ್ ಪೆಕ್ಟರ್
"ಅಂದರೆ ನಿಮ್ಮ ಪೇಷೆಂಟ್ ಯಾರೊ ಹೆಂಗಸರು, ಆಸಕ್ತಿಧಾಯಕವಾಗಿದೆ, ಹೆಂಗಸರೇಕೆ ನಿಮ್ಮ ಮನೆಗೆ ಬಂದಿದ್ದರು, ಪಿಸ್ತೂಲಿನ ಜೊತೆ "
 
ಸ್ವಲ್ಪ ಗಲಿಭಿಲಿಗೊಂಡ ಗಿರಿಧರ್
"ಅದು ಹಾಗಲ್ಲ ಕಾರಿನಲ್ಲಿ ಜೊತೆಗೆ ಬಂದಿದ್ದರು,  ಬಹುಷ ಇಳಿಯುವಾಗ ಪಿಸ್ತೂಲನ್ನು ನನ್ನ ಕಾರಿನಲ್ಲೆ ಮರೆತು ಹೋಗಿದ್ದಾರೆ ಅನ್ನಿಸುತ್ತೆ ಮತ್ತೆ ಸಿಗುತ್ತಾರೆ ಬಿಡಿ"
"ನೀವು ಕೆಲಸ ಮಾಡುವದೆಲ್ಲಿ ಸ್ವಂತ ಶಾಪೊ ನರ್ಸಿಂಗ್ ಹೋಮ್ ಇದೆಯ "  ಕೇಳಿದ
"ಇಲ್ಲ ಚಿಕ್ಕ ಶಾಪ್ ಅಷ್ಟೆ , ಕನಕಪುರದಲ್ಲಿ ನಡೆಸುತ್ತಿರುವೆ,  ದಿನ ಹೋಗಿ ಬಂದು ಮಾಡುತ್ತಿರುವೆ " ಗಿರಿಧರ ನುಡಿದ
"ಕೇಳಿದ್ದೀನಿ ಬಿಡಿ,  ನಿಮ್ಮನ್ನು ಅಭಾರ್ಷನ್ ಡಾಕ್ಟರು ಅಂತಲೆ ಅನ್ನುತಾರಂತೆ ಕನಕಪುರದಲ್ಲಿ "  ಗಹಗಹಿಸಿ ನಕ್ಕ ಇನ್ಸ್ ಪೆಕ್ಟರ್
ಗಿರಿಧರ ಪೇಚಿಗೆ ಸಿಲುಕಿದ , ಇಂತಹ ಮಾತಿಗೆಲ್ಲ ಏನೆಂದು ಉತ್ತರಿಸುವುದು ಸುಮ್ಮನಿದ್ದ 
"ಅದೇನು ನೀವು ಪದೆ ಪದೆ ತೆಂಗಿನಗಿಡ ಹಾಕಿಸುವೆ ಎಂದು ಮನೆ ಮುಂದೆ ಅಗಿಸುತ್ತಿರಂತೆ. ಏನದು ಸಮಾಚಾರ"  ಎಂದ 
ಗಿರಿಧರ ಬೆಚ್ಚಿ ಬಿದ್ದ, ಏನಿವನ ಪಶ್ನೆ ಎಲ್ಲಿಂದ ಎಲ್ಲಿಗೊ ಹೋಗುತ್ತಿವೆ, ಅವನ ಮುಖ ಗಾಭರಿಗೆ ಬೆವರುತ್ತಿತ್ತು
" ಆ~~, ಅವೆಲ್ಲ ಏನಿಲ್ಲ ಏನೊ ಗಿಡ ಹಾಕಿಸೋಣ ಅಂತ ಅಗೆದೆ ಅದು ತಪ್ಪೆ "  ಗಿರಿಧರ ಅಂದ  ಸಣ್ಣ ದ್ವನಿಯಲ್ಲಿ 
"ತಪ್ಪೆಲ್ಲ ಏನು ಇಲ್ಲ ಬಿಡಿ,  ಚಂದ್ರಪ್ಪ ಅದೇನೊ ಅಂತಿದ್ದ ಬೆಳಗ್ಗೆ ಬೆಳಗ್ಗೆನೆ ಕಾರು ತೊಳೆಯುತ್ತಿದ್ದೀರಿ ಎಂದು , ಅದೇನು ಡಾಕ್ಟರ್ ಅಂತೀರಿ ಒಬ್ಬ ಕೆಲಸದವ್ನು ಇಲ್ಲವೆ ನಿಮ್ಮ ಮನೇಲಿ"
ಗಿರಿಧರ ಅಸಾಹಯಕನಾಗಿ ಕುಳಿತ. ಎಲ್ಲ ಪ್ರಶ್ನೆಗಳು ಒಟ್ಟೊಟ್ಟಿಗೆ ಅಪ್ಪಳಿಸುತ್ತಿತ್ತು.
ಕಡೆಗೆ ಇನ್ಸ್ ಪೆಕ್ಟರ್ ನುಡಿದ ನಿಧಾನವಾಗಿ
" ಡಾಕ್ಟರೆ ನಾನೆ ಒಂದು ಕತೆ ಹೇಳಿಬಿಡ್ತೀನಿ, ಸರಿನಾ ತಿಳಿಸಿ, ನಿನ್ನೆ ಸಂಜೆ ಯಾರೊ ಹೆಣ್ಣು ಗಿರಾಕಿ ನಿಮಗೆ ಸಿಕ್ಕಿದ್ದಾಳೆ, ಅದೇನೊ ವ್ಯವಹಾರ ಹೆಚ್ಚುಕಡಿಮೆ ಯಾಗಿ ನೀವೆ ಅವಳನ್ನು  ಅವಳದೆ ಪಿಸ್ತೂಲಿನಲ್ಲಿ ಗುಂಡಿಟ್ಟು ಕೊಂದುಬಿಟ್ಟಿದ್ದೀರಿ, ನಂತರ ಅವಳ ಶವ ಏನು ಮಾಡುವುದು ತಿಳಿಯದೆ ನಿಮ್ಮ ಮನೆಯ ಕಾಂಪೋಡಿನಲ್ಲಿ ಗುಂಡಿ ತೆಗೆದು ಹೂತುಬಿಟ್ಟಿದ್ದೀರಿ. ಪಿಸ್ತೂಲನ್ನು ಬಚ್ಚಿಡುವುದು ಮರೆತು ನಮ್ಮ ಚಂದ್ರಪ್ಪನ ಕೈಲಿ ಸಿಕ್ಕಿಬಿದ್ದಿದ್ದೀರಿ ಅಲ್ಲವೆ "  ನಗುತ್ತ ಕೇಳಿದ
ಗಿರಿಧರ ಹೆದರಿಕೆಯಿಂದ ನಡುಗುತ್ತಿದ್ದ 
"ಇಲ್ಲ ಅವೆಲ್ಲ ಸುಳ್ಳು , ನೀವು ಹುಟ್ಟು ಹಾಕುತ್ತಿರುವ ಕತೆ, ನಾನು ಯಾರನ್ನು ಕೊಂದಿಲ್ಲ , ಪಿಸ್ತೂಲು ಸಹ ನನ್ನದಲ್ಲ, ಇದನ್ನು ನಂಭಿ ಇನ್ಸ್ ಪೆಕ್ಟರ್ "
ಇನ್ಸ್ ಪೆಕ್ಟರ್ ನಗುತ್ತ ಸಮಾದಾನವಾಗಿಯೆ ಹೇಳಿದ. ಅವನು ಕತ್ತಲೆಯಲ್ಲಿ ಬಾಣ ಬಿಡುತ್ತಿದ್ದ,
"ಡಾಕ್ಟರೆ ನಾನು ಸಹನೆ ಇರುವ ಮನುಷ್ಯ ಅಲ್ಲ , ಇಷ್ಟು ಹೊತ್ತಿಗೆ ನಿಮ್ಮ ಕೆಲವು ಮೂಳೆಯಾದರು ಮುರಿದಿರೋದು , ನನ್ನ ವಿಚಾರಣೆ ಅಂದ್ರೆ, ಆದ್ರೆ ಚಂದ್ರಪ್ಪ ಅದೇನೊ ನಮ್ಮ ರಸ್ತೆಯೋರು , ಅಕ್ಕಪಕ್ಕದೋರು, ಸ್ವಲ್ಪ ಸ್ಮೂತಾಗಿ ವಿಚಾರಿಸಿ ಅಂತ ರಿಕ್ವೆಷ್ಟ್ ಮಾಡಿದ್ದಾನೆ, ಸರಿ ಡಾಕ್ಟರ್ ನೀವೆ ಅದೇನಾಯಿತು ಅಂತ ಹೇಳಿಬಿಡಿ, ನಮಗೆ ಏಕೆ ತೊಂದರೆ ಕೊಡುತ್ತಿದ್ದೀರಿ, ಈಗ ನೋಡಿ ಆ ಚಂದ್ರಪ್ಪ ಆಗಲೆ ನಾಲಕ್ಕು ಜನದ ಜೊತೆ ನಿಮ್ಮ ಮನೆಗೆ ಹೋಗಿದ್ದಾನೆ, ಕಾಂಪೋಡಿನಲ್ಲಿ  ಗಿಡದ ಪಕ್ಕ ಅಗೆಸಿ ನೋಡುತ್ತೀನಿ ಅಂತ , ಅವನು ಕೆಲಸಕ್ಕೆ ಬಿದ್ದರೆ ಮಹಾ ಜಿಗುಟು ಸ್ವಭಾವ ಬೇಗ ಬಿಡುವನಲ್ಲ. ನಿಜ ಹೇಳದೆ ಇದ್ದರೆ ನೀವು ಮತ್ತಷ್ಟು ತೊಂದರೆಗೆ ಸಿಕ್ಕುವಿರಿ ಅಷ್ಟೆ"
ಕರಿಯಪ್ಪ ಒಂದು ಸುಳ್ಳು ಒಗೆದ 
 
" ಅಯ್ಯೊಯ್ಯೊ ನಿಜವೆ ಚಂದ್ರಪ್ಪ ಅಲ್ಲಿ ಹೋಗಿ ಅಗೆಸುತ್ತಿದ್ದಾನೆಯೆ"  ಬೆಚ್ಚಿ ಬಿದ್ದ ಡಾಕ್ಟರ್  ಗಿರಿಧರ
ತಾನೀಗ ನಿಜವಾದ ತೊಂದರೆಯಲ್ಲಿ ಸಿಕ್ಕಿ ಬಿದ್ದೆ ಎಂದು ಅವನಿಗೆ ಅನ್ನಿಸಿತು, ಈಗ ತಪ್ಪು ಒಪ್ಪಿಕೊಳ್ಳುವುದು ಸರಿಯಾದ ನಿರ್ದಾರ, ಇಲ್ಲದಿದ್ದರೆ ಮತ್ತೇನು ಆಗುವುದೊ ಅನ್ನಿಸಿ
 
" ಸರಿ ಇನ್ಸ್ ಪೆಕ್ಟ್ರರ್ ಎಲ್ಲವನ್ನು ಮೊದಲಿನಿಂದ ಹೇಳಿಬಿಡುವೆ, ಇದರಲ್ಲಿ ನನ್ನ ತಪ್ಪು ಏನು ಇಲ್ಲ ಏನೊ ಹೆದರಿ ಈ ರೀತಿ ಮಾಡಿಬಿಟ್ಟೆ ಈಗ ಅನವಶ್ಯಕ ಸಿಕ್ಕಿಕೊಂಡೆ "  ಎಂದ ದ್ವನಿಯನ್ನು ಇಳಿಸುತ್ತ.
 " ಅದು ಬುದ್ದಿವಂತರ ರೀತಿ ಎಷ್ಟಾದರು ನೀವು ಓದಿಕೊಂಡವರು ಬೇಗ ಪರಿಸ್ಥಿಥಿ ಅರ್ಥಮಾಡಿಕೊಂಡಿರಿ " 
ಎಂದು ಆಸಕ್ತಿಯಿಂದ ಕುಳಿತ  ಪೋಲಿಸ್ ಅಧಿಕಾರಿ
 
ಈಗ ಗಿರಿಧರ ತಾನು ನೆನ್ನೆ ಸಂಜೆ ಕನಕಪುರದಿಂದ ಬರುವಾಗ, ಬೆಂಗಳೂರಿನ ಹತ್ತಿರ   ಬರುತ್ತಿರುವಂತೆ, ರಸ್ತೆಯ ಪಕ್ಕ ಸಿಕ್ಕ ಅಪರಿಚಿತ ವ್ಯಕ್ತಿಯನ್ನು ಆವನ ಜೊತೆಗಿದ್ದ ಬುರ್ಕಾದವಳನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದು, ನಂತರ ಅವರು ಹೆದರಿಸಿ ರಸ್ತೆಯಲ್ಲೆಲ್ಲ ಸುತ್ತಿಸಿದ್ದು, ನಂತರ ತನ್ನ ಕೈಲಿಂದ ಹಣ ಕಿತ್ತು, ರಸ್ತೆಯಲ್ಲಿ ಆವಳ ಹೆಣ ಬಿಟ್ಟು ಹೋಗಿದ್ದು, ಆಗ ಸಿಕ್ಕಿದ ಪಿಸ್ತೂಲನ ವಿಷಯ ಎಲ್ಲವನ್ನು ತಿಳಿಸಿದ. ಎಲ್ಲವನ್ನು ಸಹನೆ ಯಿಂದ ಕೇಳಿದ, ಇನ್ಸ್ ಪೆಕ್ಟರ್ , ಮತ್ತೆ ಕೆಲವು ಪ್ರಶ್ನೆಗಳ ಮೂಲಕ ಕಾರು ಹತ್ತಿದವರ ವಿವರ , ಅವರು ಹೇಗಿದ್ದರು, ಬಾಷೆ ಯಾವುದು , ಅವರ ನಡುವಳಿಕೆ, ಎಲ್ಲವನ್ನು ಕೇಳಿ  ತಿಳಿದ
ಗಿರಿಧರ ಹೇಳಿದ ನಾನು ಹೆದರಿ ಬಿಟ್ಟೆ,  ಅನವಶ್ಯಕ ನನ್ನ ಹೆಸರು ಅಪರಾಧಿಗಳ ಜೊತೆ ಸೇರಿಸಿ ಎಲ್ಲವು ಒಮ್ಮೆ ವಿರುದ್ದವಾದರೆ ನನಗೆ ತೊಂದರೆ ಎಂದು, ಅದಕ್ಕೆ ಆ ಹೆಣವನ್ನು ತಂದು ನಮ್ಮ ಮನೆಯ ಕಾಂಪೋಂಡಿನಲ್ಲಿ ಮಣ್ಣು ಅಗೆದು ಹೂತುಹಾಕಿದೆ ಅಷ್ಟೆ ಹೊರತು ನಾನು ಅವರ ಕೊಲೆಯನ್ನು ಮಾಡಲಿಲ್ಲ .  ಪಿಸ್ತೂಲನ್ನು  ಮುಚ್ಚಿಡುವುದು ಮರೆತುಹೋಗಿತ್ತು ಹಾಗಾಗಿ ಚಂದ್ರಪ್ಪನ ಕಣ್ಣಿಗೆ ಬಿದ್ದಿತು ಎಂದು ನಿಲ್ಲಿಸಿದ
" ನೋಡಿದರ ಡಾಕ್ಟರ್ ನಿಮ್ಮಂತ ಓದಿದ ಜನವೆ ಹೇಗೆ ಕಾನೂನಿಗೆ ವಿರುದ್ದವಾಗಿ ವರ್ತಿಸಿದಿರಿ, ಆಕೆ ಸತ್ತ ತಕ್ಷಣ ನೀವಾಗಿಯೆ ಪೋಲಿಸ್ ಹತ್ತಿರ ಬಂದಿದ್ದರೆ, ಈ ದಿನ ನೀವು ಎಲ್ಲರ ಎದುರಿಗೆ ಹೀರೋ ಆಗುತ್ತಿದ್ದೀರಿ, ಈಗ ನೋಡಿ ಅಪರಾದಿ ಜಾಗದಲ್ಲಿ ನಿಲ್ಲುವಂತಾಯಿತು. ಎಷ್ಟು ಓದಿದರೇನು ವಿವೇಕವಿಲ್ಲದಿದ್ದರೆ "  ಎಂದು ಹೊರಗೆ ಎದ್ದು ಹೋದ ಇನ್ಸ್ ಪೆಕ್ಟರ್. 

 ಸುಮಾರು ಒಂದು ಗಂಟೆಯೊ ಎರಡು ಗಂಟೆಯೊ ಕಳೆಯಿತು, ಗಿರಿಧರ ವಾಚ್ ಸಹಿತ ಕಟ್ಟಿರಲಿಲ್ಲ. ಅವನನ್ನು ಕೂಡಿಸಿದ ರೂಮಿನಲ್ಲಿ ಗಡಿಯಾರವು ಇರಲಿಲ್ಲ. ಕಿಟಕಿ ಸಹಿತ ಇರದ ರೂಮದು , ಹೊರಗೆ ಹೋಗಲು ಇದ್ದ ಒಂದು ಬಾಗಿಲಲ್ಲಿ ಸ್ಟೂಲ್ ಮೇಲೆ ಪೋಲಿಸ್ ಪೇದೆಯೊಬ್ಬ ಕುಳಿತಿರುವುದು ಕಾಣಿಸುತ್ತ ಇತ್ತು.  

ಅದೆ ಪೋಲಿಸ್ ಇನ್ಸ್ ಪೆಕ್ಟರ್ ಮತ್ತೆ ಒಳ ಬಂದು ಕುಳಿತ , ಗಿರಿಧರಿನಿಗೆ ಎದೆಯಲ್ಲಿ ಎಂತದೊ ನಡುಕ

“ಮತ್ತೆ ಹೇಗಿದ್ದೀರಿ ಡಾಕ್ಟರ್, ಹೋಗಲಿ ಬಿಡಿ ಏನೊ ಆಗಿ ಹೋಯಿತು,  ಹಣೆಬರಹ, ಅಂದ ಹಾಗೆ ಮನೆಯಲ್ಲಿ ಮತ್ತೆ ಯಾರ್ಯಾರು ಇದ್ದಾರೆ” ಪ್ರಶ್ನೆ ಕೇಳುತ್ತ ಸಿಗರೇಟ್ ಹಚ್ಚಿದ. ಗಿರಿಧರನಿಗೆ  ಸಿಗರೇಟ್ ಅಂದರೆ ಆಗದು ಆದರೆ ಮಾತನಾಡುವಂತಿಲ್ಲ
“ಮನೆಯಲ್ಲಿ ಈಗ ಯಾರು ಇಲ್ಲ ಬೀಗ ಹಾಕಿದೆ” ನುಡಿದ ಗಿರಿಧರ .
“ಅಂದರೆ ನಿಮ್ಮದು ಒಂಟಿ ಜೀವನವೊ,  ಮದುವೆ , ಮಕ್ಕಳು ?” ಎಂದ
“ಮಕ್ಕಳಿಲ್ಲ, ಹೆಂಡತಿ ಸಧ್ಯಕ್ಕೆ ಊರಿನಲ್ಲಿ ಇಲ್ಲ, ಅವಳ ಚಿಕ್ಕಪ್ಪನ ಮನೆಗೆ ಹೋಗಿದ್ದಾಳೆ “ ಎಂದ ಗಿರಿಧರ
“ಊರಿಗೆ ಅಂದರೆ ಯಾವ ಊರು “ ಪೋಲಿಸ್ ಅಧಿಕಾರಿ ಕೇಳಿದ
“ವಾರಂಗಲ್ ತಮಿಳುನಾಡು”
ಹೇಳಿ ತುಟಿ ಕಚ್ಚಿದ ಗಿರಿಧರ್ ಅವನು ಯಾವಾಗಲು ಅದೇ ತಪ್ಪು ಮಾಡುತ್ತಿದ್ದ , ಆ ಪ್ರಶ್ನೆಗೆ ಉತ್ತರ ಹೇಳುವಾಗ
ಇನ್ಸ್ ಪೆಕ್ಟರ್ ಕಣ್ಣು ಚೂಪು ಮಾಡಿದ
“ರೀ ಡಾಕ್ಟರೆ ವಾರಂಗಲ್ ಇರುವುದು  ಆಂದ್ರ ಪ್ರದೇಶ ಅಲ್ಲವೇನ್ರಿ ಇಲ್ಲು ನಮ್ಮ ಕಾಲೆಳೆಯುತ್ತೀರ , ನಿಮ್ಮ ಹೆಂಡತಿ ಇರುವ ಊರು ಎಲ್ಲಿ ಎನ್ನುವದನ್ನು ತಪ್ಪಾಗಿ ಹೇಳುತ್ತೀರಪ್ಪ , ಇರಲಿ ಯಾರಿದ್ದಾರೆ ವಾರಂಗಲ್ ನಲ್ಲಿ , ನಿಮ್ಮಾಕೆಯ ಅಪ್ಪ ಅಮ್ಮ ಎಲ್ಲ ಎಲ್ಲಿದ್ದಾರೆ” ಎಂದು ಕೇಳಿದ
“ಇಲ್ಲ ಅವಳಿಗೆ ಅಪ್ಪ ಅಮ್ಮ   ಇಲ್ಲ, ಅವಳ ಅಣ್ಣ ಇರುವುದು ದೂರದ ಅಮೇರಿಕಾದಲ್ಲಿ, ಅವಳ ಹತ್ತಿರದ ನೆಂಟರು ಚಿಕ್ಕಪ್ಪ ಒಬ್ಬರೆ ಅವರನ್ನು ನೋಡಲು ವಾರಂಗಲ್ ಹೋಗಿದ್ದಾಳೆ “  ಗಿರಿಧರ ಹೇಳಿದ ಎಚ್ಚರಿಕೆಯಿಂದ

“ಆಕೆಯ ಫೋನ್ ನಂಬರ್ ಇದ್ದರೆ ಕೊಡಿ ಕರೆಸೋಣ” ಎಂದ ಪೋಲಿಸ್ ಅಧಿಕಾರಿ ಕರಿಯಪ್ಪ

“ಏಕೆ ಅದೆಲ್ಲ ಏನು ಬೇಡ,  ನನ್ನ ಈ ಪರಿಸ್ಥಿಥಿಯಲ್ಲಿ ಆಕೆ ಬರೋದು ನೋಡೋದು ಬೇಡ ಪ್ಲೀಸ್ ” ಎಂದ ಗಿರಿಧರ
“ಸರಿ ಆಕೆ ಮೊಬೈಲ್ ಇಟ್ಟಿಲ್ಲವೆ “  ಪೋಲಿಸ್ ಅಧಿಕಾರಿ ಕೇಳಿದ
“ಇಲ್ಲ ಇಲ್ಲ ಆಕೆಯ ಹತ್ತಿರ ಮೊಬೈಲ್ ಇಲ್ಲ , ಅಷ್ಟಕ್ಕು ಆಕೆ ಈಗ ಬರುವುದು ಬೇಡಬಿಡಿ “ ಎಂದ ಗಿರಿಧರ ಗಾಬರಿಯಾಗಿ

“ಸರಿ ಆಗಲಿ ಬಿಡಿ, ಅದಿರಲಿ ಡಾಕ್ಟರ್ , ಹೆಣವನ್ನು ಕಣ್ಮರೆ ಮಾಡೋದು , ಹೂತುಬಿಡೋದು , ನಿಮಗೆ ಇಂತಾ ಯೋಚನೆ ಎಲ್ಲ ಹೇಗೆ ಬಂದಿತು, ಇವೆಲ್ಲ ಪಕ್ಕಾ ಕ್ರಿಮಿನಲ್ ಗಳು ಇರುತ್ತಾರಲ್ಲ ಅವರಿಗೆ ಹೊಳೆಯೊ ಪ್ಲಾನ್ ಗಳು,  ಇಂತವನ್ನೆಲ್ಲ ನಾವು ಕೈದಿಯ ನಡುವಳಿಕೆಗೆ ಸೇರಿಸುತ್ತೇವೆ, ನೀವು ಯಾವ ಕ್ರಿಮಿನಲ್  ಬ್ಯಾಗ್ರೌಂಡ್ ಇಲ್ಲದವರು , ನೀವು ಹೇಗೆ ಈ ರೀತಿ ಚಿಂತಿಸಿದಿರಿ  “
ಪೋಲಿಸ್ ಅಧಿಕಾರಿ ಪ್ರಶ್ನೆಗೆ ಉತ್ತರಿಸಲು ಆಗದೆ ಸುಮ್ಮನೆ ಮೌನವಾಗಿದ್ದ  ಗಿರಿಧರ

“ಸರಿಯಪ್ಪ ಅದೇನೊ ನೀವು ನೇರವಾದ ವ್ಯಕ್ತಿಯಲ್ಲ ಡಾಕ್ಟರೆ, ನಿಮ್ಮ ಮನಸಿನ ಆಳ ತೆಗೆಯೋದು ಕಷ್ಟವೆ,  ಇನ್ನು ಸಮಯವಿದೆಯಲ್ಲ  ಯೋಚಿಸೋಣ , ಈಗ ಇರಲಿ ಬನ್ನಿ ಹೊರಡೋಣ , ನಿಮ್ಮ ಮನೆಯ ಹತ್ತಿರ ಹೋಗೋಣ,  ನೀವು ಮುಚ್ಚಿರುವ ಗುಂಡಿ ಅಗೆಯಲು ಎಲ್ಲರು ಸೇರಿದ್ದಾರೆ, ನಮ್ಮ ಬಾಸ್ ಗಳು ಎಲ್ಲ ಬಂದಿದ್ದಾರೆ ಹೊರಡಿ “ ಎಂದು ಎದ್ದು ನಿಂತ ಇನ್ಸ್ ಪೆಕ್ಟರ್ ಕರಿಯಪ್ಪ
“ಈಗಲೆ ಹೋಗಬೇಕೆ  ಅಲ್ಲಿಗೆ “ ಆತಂಕದಿಂದ ಪ್ರಶ್ನಿಸಿದ ಗಿರಿಧರ
“ಮತ್ತೆ ಇನ್ನೇನು ಡಾಕ್ಟರೆ, ಟಿವಿಯಲ್ಲಿ ಬರೋ ನರೇಂದ್ರ ಶರ್ಮರನ್ನು ಕರೆಸಿ ಮಹೂರ್ತವಿಡಿಸಿ ಹೋಗಲು ಇದೇನು ಸತ್ಯನಾರಾಯಣ ಪೂಜೆನ  ಸುಮ್ಮನೆ ನಕರಾ ಮಾಡದೆ ಹೊರಡಿ “ ಎಂದು ಎದ್ದು ಹೊರಟವನ ಹಿಂದೆ ನಡೆಯುತ್ತ ಹೊರಟ
ಗಿರಿಧರ್, ಅವನ ಹಿಂದೆ ಮತ್ತಿಬ್ಬರು ಪೋಲಿಸರು, ಅವನಿಗೆ ಅರ್ಥವಾಯಿತು ಅದು ಅವನಿಗೆ ಕಾವಲು.
==================

ಗಿರಿಧರನಿಗೆ ಮನೆಯ ಹತ್ತಿರ ಬರುವಾಗಲೆ ಗಾಭರಿಯಾಯಿತು. ಮನೆಯ ಮುಂದೆ ಜನಸಾಗರವೆ ಸೇರಿತ್ತು, ಪೋಲಿಸರು ಎಲ್ಲರನ್ನು ದೂರ ತಳ್ಳುತ್ತಿದ್ದರು. ಅವನ ಮನೆಯ ಕಾಂಪೋಡಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು, ನ್ಯಾಯವಾದಿಗಳು , ರಸ್ತೆಯ ಅಕ್ಕಪಕ್ಕದ ಮನೆಯವರು, ಅಲ್ಲದೆ ಕೆಲವು ಒಬ್ಬ ಪೋಲಿಸ್ ಡಾಕ್ಟರ್ ಹೀಗೆ ಬಹಳಷ್ಟು ಜನ ಸಿದ್ದವಿದ್ದರು. ಅಕ್ಕ ಪಕ್ಕದ ಜನರೆಲ್ಲ ಗಿರಿಧರನನ್ನು ಕುತೂಹಲದಿಂದ ನೋಡುತ್ತಿದ್ದರು.  ಸುತ್ತಲು ಟರೇಸ್ ಮೇಲಿಂದ ,  ಕಿಟಕಿಗಳಿಂದ  ಎಲ್ಲರು ಇಣುಕುತ್ತಿದ್ದರು. ಅದೇಗೊ ಮಾಧ್ಯಮದವರು ಆಗಲೆ ಬಂದು ನೆರದಿದ್ದರು,  ಅವರೆಲ್ಲರ  ಕ್ಯಾಮರ  ತನ್ನ ಮೇಲೆ  ಫೋಕಸ್ ಆಗಿದ್ದು ಗಿರಿಧರನಿಗೆ  ಕುತ್ತಿಗೆ ಹಿಸುಕಿದಂತೆ ಆಗುತ್ತಿತ್ತು.

ಗಿರಿಧರ ನಿಧಾನವಾಗಿ ಪೋಲಿಸರ ಜೊತೆ ಒಳಗೆ ಬಂದ . ಇವನ ಜೊತೆ ಬಂದ ಇನ್ಸ್ ಪೆಕ್ಟರ್ ಅಲ್ಲಿದ್ದ , ಹಿರಿಯ ಅಧಿಕಾರಿಗೆ ವಂದನೆ ಸಲ್ಲಿಸಿ , ಇವನೆ ಡಾಕ್ಟರ್ ಗಿರಿಧರ ಎಂದು ತಿಳಿಸಿದ, ಅಲ್ಲಿಗೆ ಬರುವ ಮುಂಚೆಯೆ ಎಲ್ಲ ವಿಷಯವು ಹಿರಿಯ ಪೋಲಿಸ್ ಅಧಿಕಾರಿಗಳಿಗೆ ನಿವೇದನೆಯಾಗಿತ್ತು. ಪೋಲಿಸ್ ಅಧಿಕಾರಿ ಮನೆಯ ಬೀಗ ತೆಗೆಯುವಂತೆ ತಿಳಿಸಿದ. ಗಿರಿಧರ ತನ್ನ ಜೇಬಿನಲ್ಲಿದ್ದ ಕೀ ಬಳಸಿ ಮನೆ ಬಾಗಿಲು ತೆಗೆದ. ಕೆಲವೆ ಅಧಿಕಾರಿಗಳ ಜೊತೆ ಗಿರಿಧರನು ಮನೆಯ ಒಳಗೆ ಹೋದರು, ಪೋಲಿಸ್ ಅಧಿಕಾರಿಗಳು   ಮತ್ತೇನಾದರು ಸಾಕ್ಷಿಗಳು ಸಿಕ್ಕೀತ ಎಂದು ತಡಕಾಡಿದರು
ಹೊರಗೆ ಬಂದು ಎಲ್ಲ ಪಂಚರ ಎದುರಿಗೆ , ಗಿರಿಧರ ಇದೆ ಜಾಗ ಎಂದು ನೆಲವನ್ನು ಗುರುತಿಸಿದ. ನೆಲವನ್ನು ಅಗೆಯಲು ಪ್ರಾರಂಬಿಸಿದರು. ಹೆಚ್ಚು ಕಷ್ಟವೇನಿರಲಿಲ್ಲ. ಬೆಳಗ್ಗೆ ಇನ್ನು ಮುಚ್ಚಿದ ಹಸಿ ಮಣ್ಣು ಸುಲುಭವಾಗಿಯೆ   ಹೊರಬರುತ್ತಿತ್ತು. ಕ್ಯಾಮರಾ ಕಣ್ಣುಗಳು , ಸುತ್ತಲ ಪೋಲಿಸರು, ಅಧಿಕಾರಿಗಳು ಕಾಯುತ್ತಿರುವಂತೆ ದೊಡ್ಡ ಪ್ಲಾಸ್ಟಿಕ್ ಕವರ್ ಗೋಚರಿಸಿತು.   ಅಗೆಯುವುದನ್ನು ನಿಲ್ಲಿಸಿ ಹುಷಾರಾಗಿ   ಮಣ್ಣು ತೆಗೆಯುತ್ತಿದ್ದರು. ಸುತ್ತಲ ಮಣ್ಣನ್ನು ತೊಲಗಿಸಿ, ದೊಡ್ಡ ಪ್ಲಾಸ್ಟಿಕ್ ಬ್ಯಾಗನು ಬಟ್ಟೆಯ ಗಂಟಿನಂತೆ ಎತ್ತಿ ಹೊರಗೆ ನೆಲದ ಮೇಲೆ ಇಟ್ಟರು ಅಗೆಯುತ್ತಿದ್ದ ಇಬ್ಬರು. ಗಿರಿಧರ ಆ ಬುರ್ಕಾದಾರಿ ಹೆಣ್ಣಿನ  ಹೆಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಪ್ಯಾಕ್ ಮಾಡಿ ನೆಲದಲ್ಲಿ ಸೇರಿಸಿದ್ದ. ಎಲ್ಲರ ಸಮಕ್ಷಮದಲ್ಲಿ   ಸಾಯುವ ಸಮಯದಲ್ಲಿ ಆಕೆ ಇದ್ದಂತೆ ಬುರ್ಕಾ ಸಮೇತ ಆಕೆಯ ದೇಹ ಪ್ಲಾಸ್ಟಿಕ್ ಕವರಿನಿಂದ ಹೊರತೆಗೆದು ಮಲಗಿಸಿದರು. ಅಲ್ಲಿಯೆ ಇದ್ದ ಪೋಲಿಸ್ ಡಾಕ್ಟರ್ ಗಳು ಶವವನ್ನು ಹೊರತೆಗೆದಾಗ ಇರುವ ಸ್ಥಿಥಿಯ ಬಗ್ಗೆ  ಗುರುತಿಸಿಕೊಳ್ಳುತ್ತಿದ್ದರು. ವಿಡಿಯೋ ಕ್ಯಾಮರ ಜೊತೆ ಜೊತೆಗೆ ಪೋಲಿಸರು ಪೋಟೋಗಳನ್ನು    ತೆಗಿಯುತ್ತಿದ್ದರು.   ಹಿರಿಯ ಅಧಿಕಾರಿಗಳು, ಕೇಂದ್ರದ ಅಪರಾದ ಪಡೆಯ   ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಒಬ್ಬ ಟೆರರಿಸ್ಟ್ ಬಾಡಿ ಸಿಕ್ಕಿರುವ ಬಗ್ಗೆ ಮಾಹಿತಿ ಕೊಡುತ್ತಿದ್ದರು.

ಹೆಣವನ್ನು ಹೊರಗೆ ನಿಂತಿದ್ದ ಸರ್ಕಾರಿ ಆಂಬ್ಯುಲೆನ್ಸ್ ಗೆ ಸಾಗಿಸಲಾಯಿತು. ಪೋಲಿಸ್ ಇನ್ಸ್ ಪೆಕ್ಟರ್ ಗುಂಡಿಯ ಮೇಲ್ಬಾಗದಲ್ಲಿ ಕುಳಿತು ಕೆಳಗೆ ಇರುವ ಅಗೆಯುವರಿಗೆ ಸೂಚನೆ ಕೊಡುತ್ತಿದ್ದ. ಇನ್ನೇನಾದರು ಸಾಕ್ಷಿಗಳು, ಬಟ್ಟೆ , ಒಡವೆ ಚಪ್ಪಲಿ ಮತ್ತೇನಾದರು ಸಿಕ್ಕರೆ ಕೆದಕಿನೋಡಿ, ನಂತರ ಮಣ್ಣು ಮುಚ್ಚುವಂತೆ ತಿಳಿಸಿ ಎದ್ದ. ಅವನು ತನ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತಿರುವಂತೆ ಗುಂಡಿಯ ಒಳಗಿದ್ದ  ನೆಲ ಅಗೆಯುವ ಕೆಲಸಗಾರ ಕೂಗಿದ
“ಸಾರ್ ಇಲ್ಲೆ , ಸೀರೆಯ ಗಂಟು ಒಂದು ಇರುವ ಹಾಗಿದೆ “  
ಮತ್ತೆ ಹತ್ತಿರ ಬಂದ  ಇನ್ಸ್ ಪೆಕ್ಟರ್ ಕರಿಯಪ್ಪ ಹೇಳಿದ,
“ಸ್ವಲ್ಪ ಹುಷಾರಾಗಿ ಹಾಗೆ ಕೆದಕಿ ಏನು ಹಾಳಾಗದಂತೆ ನಿದಾನವಾಗಿ ಹೊರತೆಗೆಯಿರಿ. ರೀ ಚಂದ್ರಪ್ಪ ನೀವೆ ಕೆಳಗಿಳಿದು ಸ್ವಲ್ಪ ಸೂಪರ್ವೈಸ್ ಮಾಡಿ” ಎನ್ನುತ್ತಿದ್ದಂತೆ, ಉತ್ಸಾಹದಿಂದ ಒಳಗೆ ದುಮಿಕಿದ ಪೋಲಿಸ್ ಪೇದೆ ಚಂದ್ರಪ್ಪ.  

“ಸಾರ್, ಇಲ್ಲೆನೊ ಮರ್ಮವಿದೆ, ಇಲ್ಲಿ ಮತ್ತೊಂದು ಬಾಡಿ ಇದೆ ಅನ್ನಿಸುತ್ತಿದೆ ಯಾವುದೋ  ಹೆಣ್ಣಿನ  ದೇಹ!! “ ಗುಂಡಿಯ ಒಳಗಿನಿಂದ ಚಂದ್ರಪ್ಪ ಅಚ್ಚರಿಯಿಂದ ಕೂಗಿದ.

ಮೇಲೆ ಸ್ವಲ್ಪ ದೂರದಲ್ಲಿ ಮಾತನಾಡುತ್ತ ನಿಂತಿದ್ದ  ಪೋಲಿಸ್ ಅಧಿಕಾರಿಗಳೆಲ್ಲ ಅಲರ್ಟ್ ಆದರು. ಕುತೂಹಲದಿಂದ ಎಲ್ಲರು ಮತ್ತೆ ಗುಂಡಿಯ ಹತ್ತಿರ ಬಂದರು.
ಇನ್ಸ್ ಪೆಕ್ಟರ್ ಕರಿಯಪ್ಪ ಸಹ ದಂಗಾಗಿದ್ದ, ಇದೇನು ಮುಗಿಯಿತು ಅಂದುಕೊಂಡ ಕೇಸ್ ಮತ್ತೆ   ತೆರೆದುಕೊಳ್ಳುತ್ತಿದೆ ತಿರುವು ಪಡೆಯುತ್ತಿದೆ ಅಂದುಕೊಂಡವನು
“ರೀ ಚಂದ್ರಪ್ಪ ಅದೇನು ಸರಿಯಾಗಿ ನೋಡಿ “ ಎನ್ನುತ್ತ ಗುಂಡಿಯ ಪಕ್ಕ ಕುಳಿತು ಬಗ್ಗಿ ನೋಡಿದ . ಅನುಮಾನವೆ ಇರಲಿಲ್ಲ ಸೂರ್ಯನ ಬಿಸಿಲಿನಲ್ಲಿ , ಸ್ವಷ್ಟವಾಗಿ ಕಾಣುತ್ತಿತ್ತು, ಸೀರೆ ಧರಿಸಿದ್ದ ಹೆಣ್ಣೊಬ್ಬಳ ಶವ. ಸ್ವಲ್ಪ ಆಳದಲ್ಲಿದ್ದು, ಇನ್ನು ಪೂರ್ಣವಾಗಿ ಕೊಳೆತಿರದೆ ಪ್ಲಾಸ್ಟಿಕ್ ಕವರಿನಲ್ಲಿ ಸ್ವಷ್ಟವಾಗಿ ಕಾಣುತ್ತಿತ್ತು.

ಎದ್ದು ನಿಂತ ಇನ್ಸ್ ಪೆಕ್ಟರ್ ಕರಿಯಪ್ಪ ಹಿಂದೆ ನಿಂತಿದ್ದ ಗಿರಿಧರನತ್ತ ತಿರುಗಿದ
“ಏನ್ರಿ ಡಾಕ್ಟರೆ , ನಿಮ್ಮ ವಿಷಯ , ಗುಂಡಿ ಅಗಿದರೆ ಹೆಣದ ಮೇಲೆ ಹೆಣ ಸಿಗುತ್ತಿದೆ, ಅದೆಷ್ಟು ಹೆಣ ಮುಚ್ಚಿಟ್ಟಿದ್ದೀರಿ ಇಲ್ಲಿ ಹೇಳಿಬಿಡಿ , ಯಾರದು ಈ ಎರಡನೆ ಹೆಣ,  ಮತ್ತೆ ಕಾಲೆಳೆದರೆ ಇದೆ ಗುಂಡೀಲಿ ನಿಮ್ಮನ್ನು ಹಾಕಿ ತದುಕಿಬಿಡ್ತೀನಿ ಬಾಯಿಬಿಡಿ “ ಕೋಪದಿಂದ ನುಡಿದ.
ಗಿರಿಧರನ ಮುಖ ಸೋತು ಹೋಗಿತ್ತು, ಅವನು ಏನನ್ನು ಮಾತನಾಡುವ ಸ್ಥಿಥಿಯಲ್ಲಿ ಇರಲಿಲ್ಲ, ಎರಡು ಕೈಯನ್ನು ತಲೆಯ ಮೇಲಿಟ್ಟು ಕುಸಿದು ಕುಳಿತ.  ತಲೆ ತಗ್ಗಿಸಿಬಿಟ್ಟ

“ ಈ ನಾಟಕ ಎಲ್ಲ ಬೇಡ, ಒಂದೆ ಸಾರಿ ಒದರಿ ಬಿಡು ಇಲ್ಲದಿದ್ದರೆ ಪೋಲಿಸ್ ಅಂದರೆ ಏನಂತ ನಿನಗೆ ಗೊತ್ತಾಗುವಂತೆ ಮಾಡ್ತೀನಿ , ಸುವರ್ “ ಸುತ್ತಲು ಜನವಿರುವದನ್ನು ಮರೆತು ಏಕವಚನದಲ್ಲಿ ಬೈದ ಪೋಲಿಸ್ ಅಧಿಕಾರಿ ಕರಿಯಪ್ಪ.

ಪಕ್ಕದಲ್ಲಿದ್ದ ಹಿರಿಯ ಐ ಪಿ ಎಸ್ ಅಧಿಕಾರಿ ಕರಿಯಪ್ಪನ ಬುಜ ಅದುಮಿಧರು ಅವನಿಗೆ ಅರ್ಥವಾಯಿತು ಜನರಿದ್ದಾರೆ ಶಾಂತಿಯಿಂದ ಇರು ಎಂದು ಅದರ ಅರ್ಥ

ಗಿರಿಧರ ನಿದಾನವಾಗಿ ತಲೆ ಎತ್ತಿ  “ಇಲ್ಲ ಎಲ್ಲ ಹೇಳಿಬಿಡ್ತೀನಿ, ಅದು ನನ್ನ ಹೆಂಡತಿ ಸುನೀತಳದು, ಆಕೆಯನ್ನು ನಾನೆ ಕೊಂದು ಇಲ್ಲಿ ಹೂತುಬಿಟ್ಟಿದ್ದೆ, ಮೂರುತಿಂಗಳ ಹಿಂದೆ” ಬಾಯಿ ಬಿಟ್ಟ ಗಿರಿಧರ . ಎಲ್ಲರು ದಂಗಾಗಿದ್ದರು.

“ ಮತ್ತೆ ವಾರಂಗಲ್ ಚಿಕ್ಕಪ್ಪ ನ ಮನೆ ಅಂತೆಲ್ಲ ಬೊಗಳಿದೆ “  ಪೋಲಿಸ್ ಅಧಿಕಾರಿ ಕರಿಯಪ್ಪ ಕೇಳಿದ ಉರಿಮುಖದಿಂದ.

ಗಿರಿಧರ ತಲೆ ತಗ್ಗಿಸಿ ನಿಂತ , ಅವನಿಗೆ ಅರ್ಥವಾಗಿ ಹೋಗಿತ್ತು, ತಾನು ಪೂರ್ತಿ ಸುಳಿಯಲ್ಲಿ ಸಿಕ್ಕಿಬಿದ್ದೀದ್ದೀನಿ ಇನ್ನು ತಪ್ಪಿಸಿಕೊಳ್ಳಲು ಸಾದ್ಯವೆ ಇಲ್ಲ ಎಂದು.
 ಹಿರಿಯ ಅದಿಕಾರಿಗಳು ಹೇಳಿದರು “ ಸಧ್ಯಕ್ಕೆ ಮನೆಯನ್ನು ಸೀಲ್ ಮಾಡಿ ಮತ್ತೆ ಏನಾದರು ಸಾಕ್ಷಿಗಳಿರಬಹುದು , ಹಾಗೆ
ಈ ಶವವನ್ನು ಪಂಚನಾಮೆ ಮಾಡಿಸಿ , ಡಾಕ್ಟರ್ ಹತ್ತಿರ ಬರೆಸಿ, ವ್ಯಾನ್ ತರಿಸಿ, ಪೋಸ್ಟ್ ಮಾರ್ಟಮ್ ಗೆ ಕಳಿಸಿ, ಇದಕ್ಕು ಆ ಟೆರರಿಷ್ಟ್ ಕೇಸಿಗು ಸಂಭಂದವಿಲ್ಲ “
ಎಲ್ಲವು ಅವರು ಹೇಳಿದಂತೆ ನಡೆಯಿತು, ಗಿರಿಧರನನ್ನು ತಕ್ಷಣಕ್ಕೆ ಇಬ್ಬರು ಕಾನ್ಸ್ ಟೇಬಲ್ ಹಾಗು ಚಂದ್ರಪ್ಪ ನ ಸಮೇತ ಪೋಲಿಸ್ ಠಾಣೆಗೆ ಕಳಿಸಲಾಯಿತು

ಠಾಣೆಯ  ಒಳ ಕೊಠಡಿಯಲ್ಲಿ ಗಿರಿಧರನನ್ನು ಕೂಡಿಸಿದ ಚಂದ್ರಪ್ಪ ನುಡಿದ

“ನಾನು ಏನೊ ಮಾಡಲು ಹೋಗಿ ಏನೆಲ್ಲ ಆಯ್ತು ನೋಡಿ ಡಾಕ್ತ್ರೆ, ನಿಮ್ಮಂತ ಓದಿದ ಮಂದಿನೆ ಹೀಗೆ  ಅಪರಾದ ಮಾಡಿದರೆ, ಓದದ ಜನ ಮಾಡುವದರಲ್ಲಿ  ಏನು ಆಶ್ಚರ್ಯ,  ಈಗ ಪುನಃ ಪ್ರಾರಂಬವಾಗುತ್ತೆ ನೋಡಿ,  ಎರಡನೆ ಕೊಲೆ ವಿಚಾರಣೆ , ಮಾಡಿದ್ದು ಅನುಭವಿಸಲೆ ಬೇಕು ಬಿಡಿ , ನೀವೇಕೆ ಅ ಬುರ್ಕಾದಾರಿ ಹೆಣ್ಣಿನ ಶವದ ಜೊತೆ ಪೋಲಿಸ್ ಹತ್ತಿರ ಬರಲಿಲ್ಲ ಇವೆಲ್ಲ ಬೇಕಿತ್ತ   “
ಎಂದು ಕರುಣೆಯಿಂದ ನುಡಿದ.


“ಮೊದಲು ಅದೆ ಚಿಂತಿಸಿದೆ, ಕಾರು ಅಲ್ಲಿ ಬಿಟ್ಟು ಪೋಲಿಸ್ ಹತ್ತಿರ ಹೋಗೋಣ ಎಂದು, ಆದರೆ ಮನದಲ್ಲಿ ಬೇರೆ ಯೋಚನೆ ಬಂದಿತ್ತು, ಒಂದು ವೇಳೆ ನನ್ನ ಹೆಸರು ಎಲ್ಲ ಕಡೆ ಬಂದು ಇಲ್ಲದ  ಉಪದ್ರವ ಪ್ರಾರಂಬವಾಗುತ್ತೆ,  ಟೀವಿನೋರೊ, ಪೋಲಿಸ್ನೋರು ಯಾರಾದರು ನಿನ್ನ  ಮನೆ ಎಲ್ಲಿ ಹೆಂಡತಿ ಎಲ್ಲಿ , ಹೆಸರೇನು ಎಂದು ಕೆದಕಲು ಪ್ರಾರಂಬಿಸಿದರೆ ಸುಮ್ಮನೆ ಇಲ್ಲದ ತಂಟೆ ಎಂದು ಅನ್ನಿಸಿತು, ಆದಷ್ಟು ಪೋಲಿಸ್ , ಪೇಪರ್ ಇವುಗಳಿಂದ ದೂರವಾಗಿರುವುದು ಕ್ಷೇಮ , ಅಪಾಯ ಕಡಿಮೆ ಎಂದು ಯೋಚಿಸಿದೆ”
ಗಿರಿಧರ ಚಿಂತಿಸುತ್ತ ನುಡಿದ

ಮತ್ತೆ ಸ್ವಲ್ಪ ಹೊತ್ತಾಯಿತು, ಅದೇನೊ ತೋಚಿ ಕೇಳಿದ ಚಂದ್ರಪ್ಪ ,

“ಅಲ್ಲ ಡಾಕ್ಟರೆ ನನಗೊಂದು ಡೌಟು,  ನಿಮ್ಮ ಕಾಂಪೋಡು ಸಾಕಷ್ಟು   ದೊಡ್ಡದಾಗಿದೆ, ಎಲ್ಲ ಬಿಟ್ಟು ನೀವು ಮೂರು ತಿಂಗಳ ಹಿಂದೆ ಅಗೆದಿದ್ದ ಗುಂಡಿಯನ್ನೆ ಮತ್ತೆ ಅಗೆದು ಈ ಹೊಸ ಹೆಣ ಯಾಕೆ ಇಟ್ರಿ, ಬೇರೆ ಕಡೆ ಅಗೆದಿದ್ದರೆ,  ಮೊದಲ ಹೆಣ ಸಿಗ್ತಿರಲಿಲ್ಲ ಅಲ್ವೆ “
ಕುತೂಹಲದಿಂದ ಪ್ರಶ್ನಿಸಿದ.

ಗಿರಿಧರ ಈಗ ಎಲ್ಲಕ್ಕು ಸಿದ್ದನಾಗಿ ಬಿಟ್ಟಿದ , ಅವನು ಬಿಡಿಸಿಕೊಳ್ಳಲಾರದ  ಸುಳಿಗೆ  ಸಿಲುಕಿದ್ದ .   ಅವನು ನಿದಾನವಾಗಿ ನುಡಿದ

“ಹೌದು ಚಂದ್ರಪ್ಪ , ನನ್ನ ಗ್ರಹಚಾರ , ಕೊಲೆಯ ಮಾಡುವ  ಉದ್ದೇಶವಿಲ್ಲದೆಯೆ  ಆಕಸ್ಮಿಕವಾಗಿ ಮೊದಲ ಕೊಲೆ ಮಾಡಿದೆ ನನ್ನ ಪತ್ನಿ ಸುನೀತಳದು, ಯಾರಿಗು ತಿಳಿಯದಂತೆ ತೆಂಗಿನ ಗಿಡದ ಗುಂಡಿಯ ನೆಪದಲ್ಲಿ ಒಳಗೆ ಸೇರಿಸಿ ಮುಚ್ಚಿದೆ, ಆದರೆ ವಿಧಿ ಆ ಅಪರಾದವನ್ನು ಹೊರಗೆ ತಂದು ನನಗೆ ಶಿಕ್ಷೆ ಕೊಡಿಸಲು ಕಾಯುತ್ತ ಇದ್ದು, ಈ ಟೆರರಿಷ್ಟ್ ಹೆಣ್ಣಿನ ರೂಪದಲ್ಲಿ  ನನ್ನ ಆಕ್ರಮಿಸಿತು,  ಬೇರೆ ಕಡೆ  ಎಸೆದು ಸುಮ್ಮನಿದ್ದರೆ ಯಾರಿಗು ಗೊತ್ತಾಗುತಿರಲಿಲ್ಲವೇನೊ, ಆದರೆ ಮೂರು ತಿಂಗಳ ಹಿಂದೆ ನೆಲದಲ್ಲಿ ಹೂತಿಟ್ಟ ಅನುಭವ ಮತ್ತೆ ಅದನ್ನು ಮಾಡುವಂತೆ ಮನಸಿಗೆ  ಪ್ರೇರೆಪಿಸಿತು,  ಮತ್ತೆ ನೆಲ ಅಗೆಯುವುದು ಕಷ್ಟ ಆಗುತ್ತೆ , ಗಟ್ಟಿ ನೆಲ ಇರುತ್ತೆ ಅನ್ನಿಸಿ, ಮೊದಲೆ ಅಗೆದಿದ್ದ ಗುಂಡಿಯನ್ನು ಮತ್ತೆ ಅಗೆದರೆ, ಮಣ್ಣು ಲೂಸ್ ಆಗಿರುತ್ತೆ, ಅಗೆಯೋದು ಸುಲುಭ ಅಂತ ಭಾವಿಸಿದೆ , ನನ್ನ ಎಲ್ಲ ತಪ್ಪುಗಳು ಒಟ್ಟಿಗೆ ಮೇಲೆ ಬಂದವು”
ಗಿರಿಧರ ಮಾತು ನಿಲ್ಲಿಸಿ,  ಗೋಡೆಗೆ ಒರಗಿ ಕಣ್ಣು ಮುಚ್ಚಿಕುಳಿತ,  ಕರುಣೆ ಹಾಗು ವಿಷಾದದಿಂದ ಅವನನ್ನು ನೋಡಿದ ಚಂದ್ರಪ್ಪ ಹೊರಗೆ ಹೊರಟ.

ಮುಗಿಯಿತು.




No comments:

Post a Comment

enter your comments please