Wednesday, February 27, 2013

ಹುಡುಗಿಯರೆ ನೀವೇಕೆ ಹೀಗೆ ?


ಬಾನುವಾರ ಸಂಜೆ ಸದಾಶಿವನಗರದ ಪಾರ್ಕ್, ಬೆಂಗಳೂರಿನವರಿಗೆ ಪಾರ್ಕ್ ಅಂದರೆ ಅದೇನು ಹುಚ್ಚೊ, ಪಿತಪತ ಅನ್ನುವ ಜನ. ಗಣೇಶರು ನಿಂತು ಮರವೊಂದನ್ನು ನೋಡುತ್ತ ಅಂದುಕೊಂಡರು   
"ಇದು ಬುರುಡೆ ಮರ ಅನ್ನುತ್ತಾರಲ್ಲ ಅದಿರಬೇಕು". ಅಷ್ಟರಲ್ಲಿ ಯಾರೊ ಅವರ ಕೈ ಎಳೆದಂತಾಯ್ತು, 
ಕೆಳಗೆ ನೋಡಿದರೆ, ಅವರ ಐದು ವರ್ಷದ ಮಗಳು, 
"ಅಪ್ಪ ಅದೆಂತ ಮರ ಅದರ ಹೆಸರೇನು", ಗಣೇಶರು ದ್ವನಿ ತಗ್ಗಿಸಿ ನುಡಿದರು 
"ಅದಾ! ನಿಮ್ಮ ಮಾವ ಬರ್ತಾನಲ್ಲ, ಶೇಖರ ಅವನ ಮಾತಿನ ಜಾತಿಯ ಮರ" ಅಂದರು. 
ಮಗುವಿನ ಹಿಂದೆ ನಿಂತಿದ್ದ ತಾಯಿ ಸೃಷ್ಟಿಯ ಮುಖ ಕೋಪದಿಂದ ಕೆಂಪಾಯಿತು 
"ರೀ ಪಾಪ ಅವನು ನಿಮಗೇನು ಮಾಡಿದ್ದಾನೆ, ದೇಶ ಬಿಟ್ಟು ಅವನೆಲ್ಲೊ ಇದ್ದಾನೆ, ಅವನನ ಏಕ್ರಿ ಆಡಿಕೊಳ್ತೀರಿ". 

ಗಣೇಶ ನಗುತ್ತ 
"ಹೋಗ್ಲಿ ಬಿಡೇ, ಯಾಕಿಷ್ಟು ಕೋಪ ಮಾಡಿ ಕೊಳ್ತಿ, ಏನೊ ಮಗುವಿನ ಹತ್ತಿರ ತಮಾಷಿ ಮಾಡಿದೆ,ಅವನ ಹೆಸರು ಬೇಡ ಅಂದ್ರೆ ನಮ್ಮ ಕಡೆಯವರದೆ ಆಗಲಿ, ನಮ್ಮ ಮಾವ ಇದ್ದಾರಲ್ಲ, ಅವರ ಮಾತಿನ ಜಾತಿ ಅಂದರಾಯ್ತು ಬಿಡು".

ಗಣೇಶರ ಮಾತಿನ ಅರ್ಥ ನಿಧಾನವಾಗಿ ಆದಂತೆ ಸೃಷ್ಟಿ ಕೋಪದಿಂದ, ದೂರ ಹೋಗಿ ನಿಂತಳು, ಮಗುವು ಅವಳ ಜೊತೆ ಹೋಯಿತು, ಅಕಾಶದಿಂದ ಎಂಬಂತೆ ಮೇಲಿನಿಂದ ನೇತು ಬಿದ್ದಿದ್ದ ದಾಸವಾಳದ ಹೂವನ್ನು ನೋಡಿ ಮಗು 
"ಅಮ್ಮ ಹೂವು ನೋಡು ಎಷ್ಟು ಮೇಲಿದೆ" 
ಮಗುವಿನ ಮಾತಿನಿಂದ ಸೃಷ್ಟಿ  ಮೇಲೆ ನೋಡುತ್ತ, ಒಂದು ಹೆಜ್ಜೆ ಹಿಂದೆ ಇಟ್ಟಳು , ಹಿಂದಿನಿಂದ ಬರುತ್ತಿದ್ದ ಯಾರಿಗೊ ಡಿಕ್ಕಿಯಾಯಿತು
"ಏನ್ರಿ ಅಕಾಶ ನೋಡ್ತ ನಡೀತೀರಿ" ಆ ಕಡೆಯಿಂದ ಬಂದ ಹೆಣ್ಣಿನ ದ್ವನಿಗೆ, ಬೆಚ್ಚಿದ ಸೃಷ್ಟಿ
"ಕ್ಷಮಿಸಿ, ಮೇಡಂ" ಅನ್ನುತ್ತ ಪಕ್ಕಕ್ಕೆ ತಿರುಗಿದಳು , ಅವರ ಮುಖ ನೋಡುತ್ತಿದ್ದಂತೆ  ಸೃಷ್ಟಿಯ  ಕಣ್ಣಿನ ಹೊಳಪು ಹೆಚ್ಚಿತು
"ಅರೆ ನೀನು, ಲಲಿತ , ಇದೇನೆ ಇಲ್ಲಿ" 

ಸಂತೋಷದಿಂದ ಅವಳನ್ನು ಅಪ್ಪಿಕೊಂಡಳು. ಲಲಿತಳಿಗೆ ತಕ್ಷಣ ಹೊಳೆಯಿತು, ಇವಳಾರು ಎಂದು
"ಏ ಸೃಷ್ಟಿ, ಬಿಡೆ, ನೀನು ಹೀಗೆ ತಬ್ಬಿಕೊಂಡರೆ, ನನ್ನ ಯಜಮಾನರಿದ್ದಾರೆ ತಪ್ಪು ತಿಳಿಯುತ್ತಾರೆ" ಎಂದಳು.
"ಥೂ ! ನಿನ್ನ ,  ಇನ್ನು ನಿನ್ನ ಬುದ್ದಿ ಬಿಡಲಿಲ್ಲ ನೋಡು, ಎಲ್ಲಿದ್ದೀಯೆ ಈಗ, ಎಷ್ಟು ವರ್ಷವಾಯಿತು ನೋಡಿ ಮಾತಾಡಿ" ಎಂದಳು.
"ಇದೇ ಬೆಂಗಳೂರಿನಲ್ಲಿಯೆ ಇದ್ದೀನಿ, ಮಲ್ಲೇಶ್ವರದಲ್ಲೆ, ನನ್ನ ಗಂಡ ಹಾಗು ಮಗಳು ಬಂದಿದ್ದಾರೆ,ಬಾ ಅವರನ್ನು ಮಾತನಾಡಿಸುವಂತೆ,ನಿಮ್ಮ ಯಜಮಾನರೆಲ್ಲಿ" ಎಂದಳು,
"ಅವರು ಬಂದಿದ್ದಾರೆ,ನೋಡು ಇವಳೆ ನನ್ನ ಮಗಳು ಶ್ರುತಿ" ಎನ್ನುತ್ತ, ದೂರ ನಿಂತಿದ್ದ ಗಂಡನನ್ನು 

"ರೀ, ಬನ್ರಿ ಇಲ್ಲಿ" ಎಂದು ಕೂಗಿದಳು.
"ಏನೇ ಹಳೆ ಕಾಲದವರ ಹಾಗೆ ಕೂಗ್ತಿ , ನೀನು ಮಾಡ್ರನ್ ಅಲ್ಲವ, ನಿನ್ನಿ ಮಿಷ್ಟರ್ ಅನ್ನು ಹೆಸರಿಡಿದೆ ಕರೆಯೋದಪ್ಪ, ಅದರಲ್ಲೇನು" ಎನ್ನುತ್ತಿರುವಾಗ , 

ಗಣೇಶ ನಗುತ್ತ ಹತ್ತಿರ ಬಂದರು, ಅಷ್ಟರಲ್ಲಿ ಇವರಿದ್ದ ಕಡೆ, ಲಲಿತ ಗಂಡ ಶ್ರೀನಿವಾಸ ಸಹ ಬಂದ ಮಗಳು ಶ್ರೇಯ ಜೊತೆ. ಗೆಳತಿಯರಿಬ್ಬರು ನಗುತ್ತಿದ್ದರು, ಅವರಿಬ್ಬರು ಎಲ್ ಕೆ ಜಿ ಯಿಂದ ಡಿಗ್ರಿ ಮುಗಿಸುವ ತನಕ ಜೊತೆಯಲ್ಲಿ ಓದಿದವರು, ಅದೇನೊ ಮದುವೆ ನಂತರ ಇಬ್ಬರ ನಡುವೆ ಸಂಪರ್ಕವೆ ಇರಲಿಲ್ಲ, ಸಂದರ್ಭವೆ ಹಾಗಿತ್ತು.
ಸೃಷ್ಟಿ ,   ಲಲಿತ ಹಾಗು ಶ್ರೀನಿವಾಸನಿಗೆ ತನ್ನ ಗಂಡ ಹಾಗು ಮಗಳನ್ನು ಪರಿಚಯ ಮಾಡಿದಳು 

"ಇವಳೆ ನೋಡೆ ನನ್ನ ಮಗಳೆ ಶ್ರುತಿ, ಇವರು ನಮ್ಮ ಯಜಮಾನರು"
ಲಲಿತ ದಂಗಾದಳು, 

"ಇದೇನೇ ಒಳ್ಳೆ ಸಂಪ್ರದಾಯಸ್ಥೆ ಆಗಿ ಬಿಟ್ಟಿದ್ದಿ ಗಂಡನ ಹೆಸರೇಳಲು ನಾಚಿಕೆ" ಎಂದಾಗ, 
ಗಣೇಶರು ನಗುತ್ತ "ನಾನು ಗಣೇಶ " ಎಂದು ತಮ್ಮ ಸ್ವಪರಿಚಯ ಮಾಡಿಕೊಂಡರು,
ಸೃಷ್ಟಿಯನ್ನೆ ನೋಡುತ್ತಿದ್ದ ಲಲಿತಳಿಗೆ, ಮನಸ್ಸು  ತನ್ನ ಬಾಲ್ಯ ಹಾಗು ಹುಡುಗುತನದ ದಿನಗಳು ಮನಸ್ಸಿನಲ್ಲಿ ಹಾದು ಹೋಯಿತು....

..
..
ಚಿಕ್ಕ ವಯಸ್ಸಿನಿಂದಲು ಅಷ್ಟೆ ಸೃಷ್ಟಿ ಅಂದರೆ ಸ್ವಲ್ಪ ಡೇರ್ ಅಂಡ್ ಡೆವಿಲ್ ಅನ್ನುವ ರೀತಿಯ ಹುಡುಗಿಯೆ, ಯಾರಿಗೂ ಕೇರ್ ಮಾಡುತ್ತಿರಲಿಲ್ಲ.  ಅವರ ಅಪ್ಪ ಅಮ್ಮನಿಗು ಅಷ್ಟೆ, ಹುಡುಗಿ ಸ್ವಲ್ಪ ದಾಷ್ಟೀಕ ಜಾಸ್ತಿ ಮುಂದೆ ಹೇಗೊ ಅಂತ ಆತಂಕ. ವಯಸಿಗೆ ಬಂದ ಮೇಲು ಅಷ್ಟೆ ಅವಳು ತಲೆ ತಗ್ಗಿಸಿ ನಡೆದವಳೇನಲ್ಲ, ಯಾರಾದರು ಹುಡುಗರು , ಕಿಚಾಯಿಸಿದರೆ ಎದುರಿಗೆ ನಿಂತು ದಬಾಯಿಸಿಬಿಡುವವಳೆ. ಅಕ್ಕಪಕ್ಕದ ಮನೆಯವರೆಲ್ಲ ಹೆಸರಿಟ್ಟಿದ್ದರು, ಇದು "ಭಜಾರಿ ಹೆಣ್ಣು"  ಎಂದಿದ್ದರೂ  ಅಪ್ಪ ಅಮ್ಮನ ಮಾತು ಕೇಳುವವಳಲ್ಲ, ತನಗೆ ಸರಿ ಅನ್ನಿಸಿದ ಯಾವುದೋ ಹುಡುಗನನ್ನು ಹಿಡಿದು ಲವ್ ಮಾಡಿ ಓಡಿ ಹೋಗುವಳೆ ಎಂದು ಅವರೆಲ್ಲರ ಭಾವನೆ. 

ಕಾಲೇಜಿನಲ್ಲು ಓದುವದರ ಜೊತೆ ಎಲ್ಲದರಲ್ಲೂ ಅವಳೆ ಮುಂದು, ಕಾಲೇಜಿನ ಕೆಲವು ಅಧ್ಯಾಪಕರೆ ಸೃಷ್ಟಿ ಅಂದರೆ ಬೆಚ್ಚಿ ಜಾಗ ಬಿಡುತ್ತಿದ್ದವರೆ. ಪದವಿಯ ಕಡೆಯ ವರ್ಷ, ಭಾಷಣ ಸ್ಪರ್ದೆ ನಡೆದಿತ್ತು, ಸೃಷ್ಟಿ ಇಲ್ಲದೆ ಅದು ನಡೆಯುವಂತಿಲ್ಲ, ಅವಳ ಬಲವಂತಕ್ಕೆ ಲಲಿತ ಸೇರಿದ್ದಳು, ಆದರೆ ಇಬ್ಬರದು ವಿರುದ್ಧ ಸ್ವಭಾವ, ಹಾಗಾಗಿ ಇಬ್ಬರು ಭಾಷಣಕ್ಕೂ ವಿರುದ್ಧ ಪಕ್ಷವನ್ನು  ಆಯ್ದು ಕೊಂಡಿದ್ದರು, ವಿಷಯ ಸರಳ,
"ನಮ್ಮ ಸಮಾಜಕ್ಕೆ ಸಂಪ್ರದಾಯದ ಮದುವೆ ಸರಿಯೊ ಅಥವ ಪ್ರೇಮ ವಿವಾಹ ಸರಿಯೊ" . 

ಸೃಷ್ಟಿ ಸಹಜವಾಗಿ ಪ್ರೇಮ ವಿವಾಹದ ಪರ

"ನಮ್ಮ ಭಾರತೀಯ ಸಮಾಜ ಜಡ್ಡುಗಟ್ಟಿದೆ, ಸದಾ ಸಂಪ್ರದಾಯದ ಸಂಕೋಲೆಯಲ್ಲಿ ಬಂದಿ, ಹೆಣ್ಣುಮಕ್ಕಳನ್ನು "ನೀನು ದೈವ" ಎಂದು ಉಬ್ಬಿಸಿ ಚಿನ್ನದ ಸಂಕೋಲೆಯನ್ನೆ ತೊಡೆಸಿದೆ. ನಾವು ಅದರಿಂದ ಹೊರಬರಬೇಕು, ಅಪ್ಪ ಅಮ್ಮ ತೋರಿಸುವ ಗಂಡನನ್ನು ಎಲ್ಲ ಹೆಣ್ಣು ಮಕ್ಕಳು ತಿರಸ್ಕರಿಸಿ,  ಮನ ಒಪ್ಪಿದ ಗಂಡನನ್ನೆ ವರಿಸಿ, ಎಂದು ಕರೆಕೊಟ್ಟಳು,


 'ಈ ಸಂಪ್ರದಾಯದ ಮದುವೆಗಳು ವರದಕ್ಷಿಣೆ ಎಂಬ ಭೂತಕ್ಕೆ ಕಾರಣವಾಗಿದೆ ಆದ್ದರಿಂದ ಈ ಸಂಪ್ರದಾಯದ ಮದುವೆ ಅನ್ನುವ ಪದ್ದತಿಯನ್ನೆ ತಿರಸ್ಕರಿಸಬೇಕು ಅಂದಳು,  ಅಲ್ಲದೆ ಕೇವಲ ಅಪ್ಪ ಅಮ್ಮನಿಗಾಗಿ ಯಾವುದೋ ಹಣವಂತನನ್ನ, ಸರ್ಕಾರಿ ನೌಕರಿ ಇರುವನು ಎಂದೊ, ಅವನು ಹೇಗಿದ್ದರು ಸರಿ ಎಂದು,ಮದುವೆಯಾಗಿ ನಮ್ಮ ಆತ್ಮ ದ್ರೋಹ ಮಾಡಿಕೊಳ್ಳುವುದು ಬೇಡ ಎಂದಳು. ನಾನೇನೊ ಎಂದಿದ್ದರು, ಅಂತಹ ಗಂಡನನ್ನು ಒಲ್ಲೆ, ನನ್ನ ಮನಸಿಗೆ ಒಪ್ಪುವ, ಕುಡಿ ಮೀಸೆಯ ಹುಡುಗನನ್ನೆ ವರಿಸುತ್ತೇನೆ ಹೊರತು, ಅಪ್ಪ ಅಮ್ಮ ತೋರಿಸುವ ಗುಡಾಣ ಗಾತ್ರದ ಗಂಡನ್ನಲ್ಲ" ಎಂದು ಘೋಶಿಸಿದಳು, 

ಹಿಂದಿನ ಸಾಲಿನಲ್ಲಿದ್ದ ಹುಡುಗರಂತು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು, ಕೆಲವು ಪ್ರಾಧ್ಯಾಪಕರ ಮುಖ ಏಕೊ ತುಂಬಾ ಗಂಭೀರವಾಗಿತ್ತು.

 ಸಂಜೆ ಮನೆಗೆ ಬಂದಳು ಸೃಷ್ಟಿ. ಇನ್ನೆರಡು ತಿಂಗಳಿಗೆ ಪರೀಕ್ಷೆ ಇರುವದರಿಂದ, ಪರೀಕ್ಷೆಯ ನಂತರ ಅವಳಿಗೆ ಮದುವೆ ಮಾಡಲು ಸಿದ್ಧವಿದ್ಧರು ಅವಳ ಅಪ್ಪ ಅಮ್ಮ, ಆ ದಿನವೆ ಅವಳನು ನೋಡಲು ವರ ಬರುವನಿದ್ದ, ಅವರೆ ಗಣೇಶರು. ಆ ವಿಷಯವನ್ನು ಏಕೊ ಗೆಳತಿ ಲಲಿತಳಿಂದಲು ಮುಚ್ಚಿ ಇಟ್ಟಿದಳು, ಇನ್ನು ಆಗಲಿಲ್ಲ ಹೋಗಲಿಲ್ಲ ಏಕೆ ಎಂದು. 


 ತಮಾಷಿ ಅಂದರೆ ಹೊರಗೆ ಅಷ್ಟೆಲ್ಲ ನವನಾಗರೀಕ ತರುಣಿಯಂತೆ ವರ್ತಿಸಿದ ಸೃಷ್ಟಿ ಮನೆಯಲ್ಲಿ ತಂದೆ, ತಾಯಿಯ ಮಾತಿಗೆ ಯಾವುದೇ ವಿರೋದ ವ್ಯಕ್ತಪಡಿಸಲಿಲ್ಲ. ಸುಖವಾಗಿ ರೇಷ್ಮೆ ಸೀರೆಯುಟ್ಟು, ಅವಳ ಅಜ್ಜಿ ಹೇಳಿದಂತೆ, ಜಡೆ ಹಾಕಿಕೊಂಡು, ತಲೆತುಂಬಾ ಹೂವು ಮುಡಿದು. ಸಿದ್ದವಾದಳು. ಗಂಡಿನವರು ಎಲ್ಲ ಬಂದಾಗ, ಅಮ್ಮನ ಅಣತಿಯಂತೆ ತಲೆ ತಗ್ಗಿಸಿ ಅವರಿಗೆ ಕೊಬ್ಬರಿಮಿಠಾಯಿ, ಉಪ್ಪಿಟ್ಟಿನ ತಟ್ಟೆಗಳನ್ನು ಕೊಟ್ಟಳು. ಕಾಫಿಯನ್ನು ಕೊಟ್ಟು. ಚಿಕ್ಕ ವಯಸಿನಲ್ಲಿ ಪಾಸ್ ಮಾಡಿದ್ದ ಜೂನಿಯರ್ ಸಂಗೀತ ನೆನಪಿಸಿಕೊಂಡು, ಒಂದು ದೇವರನಾಮವನ್ನು ಹಾಡಿಬಿಟ್ಟಳು. 

 ಗಂಡಿನ ಮನೆಯವರಿಗೆಲ್ಲ ಸಂತಸ, ಈ ಕಾಲದಲ್ಲಿಯೂ ಸಹ ಇಂತ ಸಂಪ್ರದಾಯಸ್ತ ಹುಡುಗಿ ನೋಡಲು ಸಿಕ್ಕಳಲ್ಲ ಎಂದು. ಸುಮಾರು ತೊಂಬತ್ತು ಕೇಜಿಗು ಅಧಿಕವಿದ್ದ ಗಣೇಶರನ್ನು ಅವಳು "ಕಿಂ ಕಃ " ಎನ್ನದೆ "ಚ"ಕಾರವೆತ್ತದೆ ಮದುವೆಯಾಗಲು ಒಪ್ಪಿದ್ದು, ಸ್ವತಃ ಅವಳ ಅಪ್ಪ ಅಮ್ಮನಿಗೆ ಆಶ್ಚರ್ಯ. ಇವಳಿಗೆ ಇನ್ನೆಷ್ಟು ಗಂಡು ತೋರಿಸಿ ಒಪ್ಪಿಸಬೇಕೊ ಎಂಬ ಆತಂಕದಲ್ಲಿದ್ದ ಅವರಿಗೆ ಮೊದಲಗಂಡನ್ನೆ ಅವಳು ಒಪ್ಪಿದಾಗ ನಿಜಕ್ಕು ಖುಷಿ ಬಿದ್ದರು. ಬಹಳ ಜನ ಅಂದರು ಅವರಿಬ್ಬರಿಗೆ ಈಡು ಜೋಡಿಲ್ಲ ಎಂದು, ಅಲ್ಲದೆ ಅವರಿಬ್ಬರ ಹೆಸರುಗಳು ಅಷ್ಟೆ ಒಂದು ಮಾಡ್ರನ್ ಮತ್ತೊಂದು ಸಂಪ್ರದಾಯಬದ್ದ.

  ಪರೀಕ್ಷೆ ನಂತರ, ಗಂಡಿನವರ ಇಚ್ಚೆಯಂತೆ ಮೈಸೂರಿನಲ್ಲೆ ಮದುವೆ ನೆರವೇರಿತ್ತು, ಚಿಕ್ಕ ವಯಸ್ಸಿನಿಂದಲು ಬೆಕ್ಕಿನಂತೆ ಎಲ್ಲರನ್ನು ಪರಚಲು ಬರುತ್ತಿದ್ದ ಸೃಷ್ಟಿ ಮದುವೆ ನಂತರ ಗಂಡನಮನೆಗೆ ಹೊಂದಿಕೊಂಡ ಪರಿ ಮಾತ್ರ ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿ ಆವಳ ಅಪ್ಪ ಅಮ್ಮನೆ ಭಾವಿಸಿದ್ದರು. ಅವಳ ಗಂಡ ಗಣೇಶನಾದರು ಸರಿ, ಒಂದೆ ಒಂದು ರುಪಾಯಿಸಹ ವರದಕ್ಷಿಣೆ ಎಂದೊ ಅಥವ ವರೋಪಚಾರವೆಂದೊ ಪಡೆಯಲು ಒಪ್ಪದೆ ಇದ್ದದ್ದು, ಅವನ ಬಗ್ಗೆ ಅವಳ ಗೌರವ ನೂರ್ಪಾಲಾಗಲು ಕಾರಣವಾಗಿತ್ತು.
....
....

ನಗುತ್ತಿದ್ದ ಗಣೇಶರನ್ನು ಕಂಡ, ಲಲಿತಳ ಗಂಡ ಶ್ರೀನಿವಾಸರು ತಾವು ಕೈಮಾಡಿ 

"ನಾನು ಶ್ರೀನಿವಾಸ" ಎಂದರು, 
ಅವರ ದ್ವನಿಯಂತೆ ಅವರ ಮುಖವು ಗಂಭೀರವೆ, ಅದೇನೊ ನಕ್ಕರೆ ಏನೊ ಕಳೆದುಕೊಳ್ಳುವರಂತೆ ಎನ್ನುವ ರೀತಿಯಲ್ಲಿ. ಲಲಿತ ನಗುತ್ತ ಗೆಳತಿಗೆ ತಿಳಿಸಿದಳು 
"ಇವರು ನಮ್ಮವರು ಶ್ರೀನಿವಾಸ, ಮನೆಯಲ್ಲಿ ಸೀನ ಎನ್ನುತ್ತೇನೆ, (ನಗು), ಇವಳು ಮಗಳು, ಮೇಘ" ಎಂದಳು. 

ಲಲಿತಳ ಮುಖವನ್ನೆ ನೋಡುತ್ತಿದ್ದಳು ಸೃಷ್ಟಿ, ಕಾಲೇಜು ಓದುವಾಗ ಸಹ  ಯಾರನ್ನು ತಲೆ ಎತ್ತಿ ಮಾತನಾಡಿಸಿದವಳಲ್ಲ ಇವಳು, ಈಗ ಎಷ್ಟೆ ಡೇರ್ ಆಗಿದ್ದಾಳೆ ಅಂದುಕೊಂಡಳು. ಛೇ! ಮದುವೆ ನಂತರ ಗಂಡನನ್ನು ಹೆಸರಿಡಿದು ಕರೆದರೆ ಆಯಸ್ಸು ಕಡಿಮೆ ಅಂತಾರೆ, ಇವಳಿಗೆ ಯಾವ ಎಗ್ಗು ಇಲ್ಲವಲ್ಲ,ಇವಳ ಸಂಪ್ರದಾಯದ ವರ್ತನೆ ಎಲ್ಲಿ ಹೋಯ್ತೊ ಅಂದು ಕೊಂಡಳು, ಸೃಷ್ಟಿಯ ಮನಸ್ಸು ಸಹ ಏಕೊ ಹಿಂದಕ್ಕೆ ಓಡುತ್ತಿತ್ತು
..
..
ಕಾಲೇಜಿನ ಅಂದಿನ ದಿನಗಳಲ್ಲಿ ಲಲಿತ ಎಂದು ತಲೆಯಿತ್ತಿ ಯಾರನ್ನು ನೋಡಿದವಳಲ್ಲ, ಹುಡುಗರು ಅಷ್ಟೆ ಅವಳಿಗೆ ಹೆದರಿಕೆ ಮಿಶ್ರಿತ, ಗೌರವ ತೋರುತ್ತಿದ್ದಳು, ಅವಳೆ ಹೇಳುತ್ತಿದ್ದಳು, ನಾವು ಸರಿಯಾಗಿದ್ದಲ್ಲಿ ನಮಗೆ ಎಲ್ಲರು ಹೆದರುತ್ತಾರೆ, ನಮ್ಮ ತಂಟೆಗೆ ಯಾರು ಬರುವದಿಲ್ಲ. ನಮ್ಮ ನಡತೆ ಸರಿ ಇಲ್ಲದಿದ್ದಾಗ, ಎಲ್ಲರು ನಮ್ಮ ಲಘುವಾಗಿ ಕಾಣುತ್ತಾರೆ. ಆ ದಿನ ಬಾಷಣ ಸ್ಪರ್ದೆಯನ್ನು ನೆನಸಿತು, ಸೃಷ್ಟಿಯ ಬಾಷಣದ ನಂತರ ಲಲಿತ ನಿಧಾನಕ್ಕೆ ಎದ್ದು ಬಂದಳು, ಹುಡುಗರೆಲ್ಲ ಮೌನ

 "ನಾವು ಇರುವುದು ಭಾರತದಲ್ಲಿ, ನಾವು ನಮ್ಮ ಸಂಪ್ರದಾಯವನ್ನು ಮರೆತು ಯಾವುದೋ ದೇಶದ ಸಂಪ್ರದಾಯ ಅನುಸರಿಸುತ್ತ, ನಮ್ಮ ಮದುವೆಯನ್ನು ನಿರಾಕರಿಸಿ ಪ್ರೇಮ ವಿವಾಹ ಮಾಡಿಕೊಳ್ಳಬೇಕ? , ಅಸಲಿಗೆ ಅಲ್ಲಿ ವಿವಾಹವೆ ಇರುವದಿಲ್ಲ, ವಿವಾಹವೆಂದರೆ ಬರಿ ಧಾರ್ಮಿಕ ಕ್ರಿಯೆಗಳಲ್ಲ, ಅದು ಗಂಡು ಹೆಣ್ಣನ್ನು ಮತ್ತ್ತು ಆ ವಂಶಗಳೆರಡನ್ನು ಒಂದಾಗಿಸುವ ಪವಿತ್ರ ಘಳಿಗೆ. ಚಿಕ್ಕಂದಿನಿಂದ ನಮ್ಮನ್ನು ಸಾಕಿದ ಅಪ್ಪ ಅಮ್ಮನನ್ನು ನೆನೆಯಿರಿ, ನಾವು ಅತ್ತಾಗ ಅತ್ತು ನಕ್ಕಾಗ ನಕ್ಕು, ರೆಕ್ಕೆ ಬಲಿಯಿತು ಅಂದಾಕ್ಷಣ ಅವರನ್ನು ನಿರಾಕರಿಸಿ ಓಡಿಹೋಗಲು ನಾವೇನು ಪಶುಗಳೆ, ಬುದ್ದಿ ಇರುವ ಮನುಷ್ಯರಲ್ಲವೆ. ಪ್ರೇಮ ವಿವಾಹದಲ್ಲಿ ಒಮ್ಮೆ ಗಂಡು ಅಥವ ಹೆಣ್ಣು ತನ್ನ ಆಸೆ ತೀರಿತೆಂದು ಸಂಬಂಧ ಮುರಿದರೆ ಮುಂದಿನ ಜೀವನವೇನು, ನಮ್ಮ ಸಮಾಜ ಪೂರ್ತಿ ಈರೀತಿ ಮದುವೆ ಮುರಿದುಕೊಂಡವರಿರಬೇಕೆ. ಎಂದೆಲ್ಲ ವಾದಿಸಿದಳು, ನಾನಂತು ಪ್ರೇಮ ವಿವಾಹದ ಹೆಸರಿನಲ್ಲಿ ಅಪ್ಪ ಅಮ್ಮನಿಗೆ ದ್ರೋಹ ಮಾಡಲು ಸಿದ್ದಳಿಲ್ಲ, ಈ ಪದ್ದತಿಯನ್ನು ನಾನು ಒಪ್ಪಲು ಸಿದ್ದಳಿಲ್ಲ" ಎಂದು ವಾದಿಸಿದಳು. 


ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರಾಧ್ಯಾಪಕರು ಸಹ ಅವಳ ಮಾತುಗಳಿಗೆ ಮೆಚ್ಚಿ ಚೆಪ್ಪಾಳೆ ತಟ್ಟಿದರು.

 ವಾದಮಾಡುವಾಗ ಅವಳಿಗೆ ತನ್ಮಯತೆ ಇರಲಿಲ್ಲ ಅದಕ್ಕೆ ಕಾರಣವು ಇತ್ತು, ಆವಳು ಟೈಪಿಂಗ್ ಗೆ ಹೋಗುವಾಗ ಅಲ್ಲಿ ಅವಳ ರಸ್ತೆಯವನೆ ಆದ ಶ್ರೀನಿವಾಸನನ್ನು ಬೇಟಿ ಮಾಡುತ್ತಿದ್ದಳು, ಬೇರೆ ಬೇರೆ ಬ್ಯಾಚ್ ಆದ್ದರಿಂದ ಸೃಷ್ಟಿಗು ಇದರ ಅರಿವು ಆಗದಂತೆ ಎಚ್ಚರ ವಹಿಸಿದ್ದಳು. ಶ್ರೀನಿವಾಸ ಬೇರೆಯದೆ ಆದ ಜಾತಿ, ಈ ವಿವಾಹವನ್ನು ಅವಳ ಸಂಪ್ರದಾಯದ ಹಿನ್ನಲೆಯಲ್ಲಿ ಬಂದ ಅಪ್ಪ ಅಮ್ಮ ಒಪ್ಪುವುದು ಖಂಡೀತ ಸಾದ್ಯವಿಲ್ಲ ಎಂದು ಅವಳಿಗೆ ತಿಳಿದಿದ್ದು, ಆದರೂ ಸಹ  ಅವಳು ಮುಂದುವರೆದಿದ್ದಳು, ಅಷ್ಟಕ್ಕು ಅವಳು ಅವನನ್ನು ಏಕೆ ಮೆಚ್ಚಿಕೊಂಡಿದ್ದಳು ಅಂತ ಅವಳಿಗು ತಿಳಿಯದು. ಅವನೇನು ಸ್ಪುರದ್ರೂಪಿಯಲ್ಲ ಬುದ್ದಿಯಲ್ಲಿ ಆಗಲಿ ಹಣದಲ್ಲೆ ಆಗಲಿ ಅವಳನ್ನು ಮೀರಿಸುವನಲ್ಲ.ಪರೀಕ್ಷೆ ಮುಗಿಯಲು ಕಾಯುತ್ತಿದ್ದಳು, ಮುಗಿದ ವಾರದೊಳಗೆ, ಅವನೊಡನೆ ಗುಟ್ಟಾಗಿ ಹೋಗಿ ಮದುವೆ ಮಾಡಿಕೊಂಡು ಬಂದು ಅಪ್ಪ ಅಮ್ಮನ ಮುಂದೆ ನಿಂತಳು, ಅವರು ತಾನೆ ಏನು ಮಾಡಿಯಾರು, ಕನಸಿನಲ್ಲು ನಿರೀಕ್ಷಿಸದ ಈ ಘಟನೆಯಿಂದ ಅವರು ದೃತಿಗೆಟ್ಟರು. ಮಗಳು ಮನೆಯನ್ನು ತೊರೆದು ಬೆಂಗಳೂರಿಗೆ ಹೊರಟು ಹೋದಳು. ಅವಮಾನ ಅಕ್ಕಪಕ್ಕದ ಮನೆಗಳ ದೃಷ್ಟಿಯನ್ನು ಎದುರಿಸಲಾಗದ, ಅವರು ತಮ್ಮ ಎರಡನೆ ಮಗಳ ಹಿತದೃಷ್ಟಿಯಿಂದ ಮನೆಯನ್ನು ಮಾರಿ ಅವರ ಹಳ್ಳಿಗೆ ಹೋಗಿಸೇರಿದರು.
   ಮದುವೆಯಾದ ಕೆಲವೆ ದಿನಗಳಲ್ಲಿ ಲಲಿತ ಅರಿತಳು ತನ್ನತಪ್ಪು ಏನೆಂದು, ಅವನ ಧನದಾಹ, ಬೇರೆ ಹೆಣ್ಣುಗಳ ಬಗ್ಗೆ ಅವನು ತೋರಿಸುವ ಆಸೆ ಇವೆಲ್ಲ ಕಂಡು ಒಳಗೆ ಬೇಯುತ್ತಿದ್ದಳು, ಆದರೇನು ಜೀವನದಲ್ಲಿ ಮುಂದಿಟ್ಟ ಹೆಜ್ಜೆಯನ್ನು ಎಂದಿಗು ಹಿಂದಿಡಲಾಗದು ಎಂಬ ಅರಿವು ಅವಳಿಗೆ ಈಗ ಮೂಡಿತ್ತು.

4
-----------------------------------------------------------------------------------------
ಲಲಿತ, ಸೃಷ್ಟಿ ಸಾಕಷ್ಟು ಹೊತ್ತು ನಗುತ್ತ ಮಾತನಾಡಿದರು, ಗಣೇಶರು ಮಕ್ಕಳನ್ನು ಕರೆದುಕೊಂಡು ಹೋಗಿ ಅಮೇರಿಕನ್ ಕಾರ್ನ್ ಪಾನಿಪುರಿಯನ್ನು ಕೊಡಿಸಿ ತಾವು ತಿಂದರು. ಅವರಿಗೆ ಸಮಾದಾನ ಸದ್ಯ , ಸೃಷ್ಟಿ ಗಮನಿಸಿದರೆ ತನಗೆ ತಿನ್ನಲು ಬಿಡುವದಿಲ್ಲ, ತಡೆಯುತ್ತಾಳೆ .ಈಗ ಗೆಳತಿ ಜೊತೆ ಮಾತಿನಲ್ಲಿ ಮೈಮರೆತ್ತಿದ್ದಾಳೆ ಎಂದು.

ಸದಾಶಿವನಗರದ ಆ ಪಾರ್ಕನಲ್ಲಿ ಜನದಟ್ಟಣೆ ಕಡಿಮೆಯಾಗುತ್ತಿತ್ತು. 

"ಬನ್ನಿ ನಮ್ಮ ಮನೆಗೆ " ಲಲಿತ ಅಹ್ವಾನಿಸಿದಳು, ಹಾಗೆಯೆ, 
'ನಿನ್ನ ಮೊಬೈಲ್ ನಂಬರ್ ಕೊಡು' ಅಂದಳು ಸೃಷ್ಟಿ, 
ಲಲಿತ ತನ್ನ ವ್ಯಾನಿಟಿಬ್ಯಾಗಿನಿಂದ ಬಿಳಿ ಕಾಗದ ತೆಗೆದು , ಅವಳ ಗಂಡನಿಂದ ಪೆನ್ ಪಡೆದು ಮೊಬೈಲ್ ನಂಬರೆ ಬರೆದು ಅವಳಿಗೆ ಕೊಟ್ಟು 
"ನನಗೆ ಬರೆದುಕೊಳ್ಳಲು ಬೇಜಾರಮ್ಮ, ಮನೆಗೆ ಹೋಗಿ ನೀನೆ ನಿನ್ನ ಮೊಬೈಲ್ ನಿಂದ ನನಗೆ ಕಾಲ್ ಮಾಡು ನಿನ್ನ ನಂಬರ್ ಸೇವ್ ಮಾಡಿಕೊಳ್ತೀನಿ" ಅಂದಳು, 
ಗಣೇಶ ಏಕೊ ನಗುತ್ತಿದ್ದರು. ಲಲಿತಳ ಗಂಡ ಶ್ರೀನಿವಾಸ  ಸೃಷ್ಟಿಯ ಹತ್ತಿರ 
'ನಿಮ್ಮ ವಿಳಾಸ ಕೊಡಿ ಇವಳನ್ನು ಕರೆತರುತ್ತೇನೆ' ಅಂದರು,
ಅದಕ್ಕೆ ಲಲಿತ "ನನಗೆ ಇವರ ಮನೆ ಗೊತ್ತುರಿ, ಅಡ್ರೆಸ್ ಏನು ಬೇಡ ಬಿಡಿ, ನಾವು ಹೋಗೋಣ" ಎಂದಾಗ ಆತ ಸುಮ್ಮನಾದರು. ಸೃಷ್ಟಿಗೆ ಸ್ವಲ್ಪ ಆಶ್ಚರ್ಯವಾಯಿತು, ಇವಳಿಗೆ ನಮ್ಮ ಮನೆ ಹೇಗೆ ಗೊತ್ತು ಅಂತ. ಗಣೇಶ ಪುನಃ ನಗುತ್ತಿದ್ದರು. ಸರಿ ಬೈ ಹೇಳುತ್ತ ಲಲಿತ, ಶ್ರೀನಿವಾಸ, ಮೇಘ ಹೊರಟರು.
-------------------------------------------------------------------

ಅವರು ಹೊರಟಂತೆ, ಸೃಷ್ಟಿ ಗಂಡನಿಗೆ, 

"ಒಮ್ಮೆ ಅವರ ಮನೆಗೆ ಹೋಗ ಬೇಕು ರೀ ತುಂಬಾ ಒಳ್ಳೆಯವಳು" ಅಂದಳು, 
"ಆಗಲ್ಲ ಬಿಡು ನಿನಗೆ ಅವರ ಮನೆ ಗೊತ್ತಿಲ್ಲ" ಅಂದರು ಗಣೇಶ, 
ಅದಕ್ಕೆ ಸೃಷ್ತಿ "ಅಡ್ರೆಸ್ ಗೊತ್ತಿಲ್ಲ ಅಂದರೇನಾಯಿತು, ಪೋನ್ ನಂಬರ್  ಕೊಟ್ಟಿದಾಳಲ್ಲ ಮಾಡಿದರಾಯ್ತು ಅಥವ ಅವಳೆ ನಮ್ಮ ಮನೆಗೆ ಬರ್ತೀನಿ ಅಂತ ಹೇಳಿದ್ದಾಳಲ್ಲ ಬರ್ತಾಳೆ" ಅಂದಳು.
ಗಣೇಶರು ಜೋರಾಗಿ ನಕ್ಕು ಬಿಟ್ಟರು 
"ನೀನು ಫೋನ್ ಮಾಡಕ್ಕಾಗಲ್ಲ, ಏಕೆಂದರೆ ಅವರು ಬರೆದಿರೋದು ಬರಿ ಒಂಬತ್ತು ಡಿಜಿಟ್ ಅಷ್ಟೆ, ಮೊಬೈಲ್ಗೆ ಹತ್ತು ಸಂಖ್ಯೆ ಇರಬೇಕು, ಮತ್ತು ಅವರಿಗೆ ನಮ್ಮ ವಿಳಾಸ ಸಹ ಗೊತ್ತಿಲ್ಲ ಹಾಗಾಗಿ ಅವರು ಬರುವುದು ಸುಳ್ಳು" ಎಂದರು, 
ಗಾಭರಿಯಿಂದ ಲಲಿತ ಕೊಟ್ಟ ಚೀಟಿಯನ್ನು ತೆಗೆದು ನೋಡಿದಳು ಸೃಷ್ಟಿ. ಗಣೇಶರು ಹೇಳಿದ್ದು ನಿಜವಾಗಿತ್ತು, ಬರಿ ಒಂಬತ್ತು ಸಂಖ್ಯೆಗಳಿದ್ದವು. ಅವಳು ಚಕಿತಳಾಗಿ ನುಡಿದಳು
"ನಿಮಗೆ ಹೇಗೆ ತಿಳಿಯಿತು, ಮತ್ತು ಲಲಿತ  ಹೀಗೇಕೆ ಮಾಡಿದಳು?"

ಗಣೇಶರೆಂದರು ನಗುತ್ತ 

"ಅವಳು ಬರೆದಾಗಲೆ ನಾನು ಗಮನಿಸಿದೆ, ಮೊಬೈಲ್ ನಂಬರ್ ತಪ್ಪು ಅಂತ, ಬಹುಶಃ ಅವಳ ಗಂಡ ನಿನ್ನನ್ನು ನೋಡುತ್ತ ಇದ್ದಿದ್ದು ಅವಳಿಗೆ ಇರಿಸುಮುರುಸಾಗಿದೆ, ಅನ್ನಿಸುತ್ತೆ, ಅದಕ್ಕಾಗಿ ವಿಳಾಸ ಸಹ ಪಡೆಯಲಿಲ್ಲ, ಮತ್ತು ಎಂದೂ ಅವಳು ನಿನ್ನನ್ನು ಬೇಟಿ ಮಾಡುವದಿಲ್ಲ, ನಿನ್ನ ಗೆಳತಿ ತುಂಬಾ ಬುದ್ದಿವಂತೆ" ಅಂದರು.
  

ಒಂದು ಕ್ಷಣ ಸೃಷ್ಟಿಯ ಮುಖ ಕೆಂಪಗಾಯಿತು, ಆದರು ಕಿಚಾಯಿಸುವ ದ್ವನಿಯಲ್ಲಿ 
"ಪರವಾಗಿಲ್ಲ, ದೇಹ ದೊಡ್ಡದಾದರು ಬುದ್ಧಿ ಮಾತ್ರ ತುಂಬಾ ಚುರುಕು" ಎಂದಳು.
ಕೈ ಹಿಡಿದು ನಡೆಯುತ್ತಿದ್ದ ಮಗಳು ಶ್ರುತಿ 

"ಅಮ್ಮ ಯಾರಿಗಮ್ಮ ನೀನು ಹೇಳಿದ್ದು ದೇಹ ದೊಡ್ಡದಾದರು ಬುದ್ದಿ ಮಾತ್ರ ತುಂಬಾ ಚುರುಕು ಅಂತ" ಎಂದು ಕೇಳಿದಾಗ,
ಸೃಷ್ಟಿ ನಗುತ್ತ ನುಡಿದಳು 

"ಅದಾ ಆನೆಗೆ ಪುಟ್ಟು, ದೇಹ ತುಂಬಾ ದೊಡ್ಡದಾದರು ಅದರ ಬುದ್ದಿ ತುಂಬಾ ಚುರುಕು" ಅಂದಳು, ಗಂಡನ ಕಡೆ ತಿರುಗಿನೋಡದೆ.


No comments:

Post a Comment

enter your comments please