Friday, March 1, 2013

ಕಥೆ : ಸರ್ಪಸುತ್ತು


                              
 ನಡುರಾತ್ರಿಯು ಸನಿಹ ಬಂದರು ಬಾರದ ನಿದ್ರೆ, ಮತ್ತೊಮ್ಮೆ ಬಲಬದಿಗೆ ಹೊರಳಿದ ಶಶಿ. ತೊಡೆಯ ಸಂದಿಯಲ್ಲಿ ಪ್ರಾರಂಬವಾದ ನೋವಿನ ಸೆಳೆತ ದೇಹವನ್ನೆಲ್ಲ ವ್ಯಾಪಿಸಿ ಅವನಿಗರಿವಿಲ್ಲದೆ 'ಅಮ್ಮಾ,,,,' ಎಂಬ ಉದ್ಗಾರ ಅವನ ಬಾಯಿಯಿಂದ ಹೊರಟಿತು. "ಸರ್ಪಸುತ್ತು"    ವೈದ್ಯರು ಕೊಟ್ಟಿದ ಹೆಸರು,ಔಷದಿ ಕೊಡದೆ ಗುಣವಾಗಬೇಕಾದ ಕಾಯಿಲೆ. ಎದೆಯ ಹತ್ತಿರ ಪ್ರಾರಂಬವಾದ ಸಣ್ಣ ಗಾಯದಂತೆ ಕಾಣಿಸಿಕೊಂಡ ಕಾಯಿಲೆ ನಿದಾನವಾಗಿ ದೇಹದ ಬಲಬಾಗವನ್ನು ಆಕ್ರಮಿಸುತ್ತ, ಸೊಂಟವನ್ನೆಲ್ಲ ಬಳಸಿ ಈಗ ಬಲಕಾಲಿನತ್ತ ಇಳಿಯುತ್ತಿದೆ. ಮೈಮೇಲೆ ದರಿಸಿರುವ ಬಟ್ಟೆ ಸೋಕಿದರು ಸಾಕು ನರವನ್ನೆಲ್ಲ ಯಾರೊ ಚಾಕುವಿನಿಂದ ಕತ್ತರಿಸಿದಂತೆ ಅಮರಿಕೊಳ್ಳುವ ನೋವು ಅವನನ್ನು ಹಣ್ಣುಮಾಡಿ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿತ್ತು. ಶಶಿ ಯೋಚಿಸುತ್ತಿದ್ದಾನೆ "ಆ ಸೃಷ್ಟಿಕರ್ತ ಯಾತಕ್ಕಾಗಿ ಈ ರೀತಿಯ ಕಾಯಿಲೆಗಳನ್ನೆಲ್ಲ ಕಲ್ಪಿಸಿ ಭೂಮಿಯಲ್ಲಿ ಬಿಟ್ಟಿದ್ದಾನೆ' ಎಂದು.

    ಅವನ 'ಅಮ್ಮಾ' ಎಂಬ ಕೂಗು , ನಡುರಾತ್ರಿಯಲ್ಲು ನಡುಮನೆಯಲ್ಲಿ ಮಲಗಿದ್ದ ಸುನಂದಳನ್ನು ಎಚ್ಚರಿಸಿತ್ತು. "ಏಕೊ ಶಶಿ ತುಂಬಾ ನೋವಿದೆಯೇನೊ?" , ಅವಳ ದ್ವನಿಯಲ್ಲಿ ಎಂತದೊ ಕಕ್ಕುಲಾತಿ, ತಾನೆ ನೋವನ್ನು ಅನುಭವಿಸುತ್ತಿರುವ ತಾಯಿಯ ಹೃದಯ. ಅವಳಿಗೆ ಯಾವ ಉತ್ತರವನ್ನು ಕೊಡಲಿಲ್ಲ ಮಗ.ಸಣ್ಣಗೆ ಒಮ್ಮೆ 'ಅಮ್ಮಾ' ಎನ್ನುವ ದ್ವನಿ ನಡುರಾತ್ರಿಯಲ್ಲು ಅವಳನ್ನು ಎಚ್ಚರಿಸುತ್ತದೆ, ತನ್ನೊಳಗೆ ಯೋಚಿಸುತ್ತಿದ್ದಾನೆ ಶಶಿ, 'ಅಮ್ಮ ತನಗಾಗಿ ಹೀಗೆ ಒದ್ದುಕೊಳ್ತಾಳೆ, ನನ್ನ ಜೀವನದ ಸಫಲತೆ ಉಳಿದು ಬೇರೆನು ಬಯಸದ ಅವಳಿಗೆ ತಾನು ಒಂದು ಮಾನಸಿಕ ಹೊರಯಷ್ಟೆ' ಅನ್ನಿಸಿತು.

   ತಾನೊಬ್ಬನೆ ಅವಳಿಗೆ ಜೀವನಕ್ಕೆ ಮನಸಿಗೆ ಆದಾರವೆಂದು ತಿಳಿದಿದೆ, ಓದು ಮುಗಿಸಿ ಕೆಲಸಕ್ಕೆ ಸೇರುವವರೆಗು ಅವಳು ಆರೋಗ್ಯ ಅನಾರೋಗ್ಯ ಅಂತ ನೋಡದೆ ದುಡಿದಳು. ನನ್ನನ್ನು ಜೀವನದ ಒಂದು ಸ್ಥಿರವಾದ ದಡಕ್ಕೆ ಸೇರಿಸುವದಷ್ಟೆ ಅವಳ ಜೀವನದ ಪರಮಗುರಿ ಎಂಬಂತೆ ಜೀವಿಸಿದಳು.ಮಗನಾಗಿ ತಾನು ಎಂದ ಅವಳ ಮನಸಿಗೆ ನೆಮ್ಮದಿ ಶಾಂತಿ ಒದಗಿಸಲಿಲ್ಲ ಎಂದುಕೊಂಡ ಶಶಿ. "ಚಿಕ್ಕ ವಯಸ್ಸಿನಿಂದಲು ಏಕೊ ಪ್ರತಿವಿಷಯಕ್ಕು ಹಟಮಾಡುವುದು ಅವಳು ಅಸಹಾಯಕಳು ಎಂದು ತಿಳಿದು ನನ್ನ ಅಗತ್ಯಗಳಿಗೆ ಅವಳನ್ನು ಪೀಡಿಸುವುದು. ನನ್ನ ಜೀವನ ಧರ್ಮವಾಗಿಹೋಗಿತ್ತು, ಆದರು ಅವಳೆಂದು ದ್ವನಿ ಎತ್ತಿ ಮಾತಡಲಿಲ್ಲ, ದರ್ಪದಿಂದ ನನ್ನನ್ನು ಗದರಿಸಿಲಿಲ್ಲ.ಇಂತಹ ತಾಯಿಗೆ ಮಾನಸಿಕ ಅಘಾತ ನೀಡಲು ಆ ಲೀಲಾಜೊಸೆಫ್ ಕಾರಣಳಾದಳು" ಅನ್ನಿಸಿತು.

   ಲೀಲಾಳ ಹೆಸರು ನೆನಪು ಬಂದಂತೆ ಶಶಿ ಹೃದಯ ನೋವಿನಿಂದ ಚೀರಿಟ್ಟಿತು. ತನ್ನದು ಎಂತಹ ದೈನ್ಯದ ಸ್ಥಿಥಿ ನೋವು ಅನ್ನುವುದು ಒಳಗೆ ಹೊರಗಿನಿಂದ ಒಟ್ಟಿಗೆ ಹುರಿದುಮುಕ್ಕುವ ವಿದಿಯ ರೀತಿ ಅವನಲ್ಲಿ ಅವನ ಬಗ್ಗೆಯೆ ಕರುಣೆ ಹುಟ್ಟಿಸಿತ್ತು. ಲೀಲಜೋಸೆಫ್ ಎಂಬ ಮಾಯೆ ಅವನ ಬೆನ್ನು ಬಿದ್ದಿದ್ದು ಅವನು ಕೆಲಸಕ್ಕೆ ಸೇರಿದ ದಿನದಿಂದ. ಓದುಮುಗಿಸಿ ಸ್ಪರ್ದಾಪರೀಕ್ಷೆಯನ್ನು ಮುಗಿಸಿ ಮೌಕಿಕ ಪರೀಕ್ಷೆಯನ್ನು ಎದುರಿಸುವಾಗ ಇದ್ದ ಆತ್ಮವಿಶ್ವಾಸ ಬ್ಯಾಂಕಿನಲ್ಲಿ ಕೆಲಸಕ್ಕೆ ಹಾಜರಾದ ಮೊದಲ ದಿನ ಇರಲಿಲ್ಲ. ಅಲ್ಲಿನ ನೌಕರರ ಧಿಮಾಕು,ಮ್ಯಾನೇಜರನ ಬಿಗಿಮುಖ ಅವನಲ್ಲಿ ಅಳುಕು ಹುಟ್ಟಿಸಿತ್ತು. ಲೀಲಾಳನ್ನು ಕರೆದ ಮ್ಯಾನೇಜರ್ ಶಶಿಯನ್ನು ತೋರಿಸಿ "ಇವರು ಈದಿನ ಜಾಯಿನ್ ಆಗ್ತಿದ್ದಾರೆ, ಶಶಿಧರ ಎಂದು, ನಿಮ್ಮ ಸೆಕ್ಷನ್ಗೆ ಕಳಿಸ್ತೀನಿ, ಟ್ರೈನ್ ಮಾಡಿ" ಎಂದರು.
 "ಹೊಸಬರಾದರೆ ಮ್ಯಾನೇಜ್ ಮಾಡೋದು ಕಷ್ಟ ಸಾರ್, ನೀವು ನನ್ನ ತಲೆಗೆ ಇವರನ್ನೆಲ್ಲ ಕಟ್ಟುತ್ತೀರಿ" ಎನ್ನುತ್ತ ಹೊರಟ ಅವಳ ಹಿಂದೆ ವಿದಿಯಿಲ್ಲದ ಹೊರಟ ಶಶಿ.ಎರಡನೆ ಮಹಡಿಯ ಅವಳ ವಿಭಾಗ ಬಂದಾಗ ಆಕೆ "ನಿಮ್ಮ ಹೆಸರೇನು" ಎಂದು ಕೇಳಿದಳು, ಆಗತಾನೆ ಮ್ಯಾನೇಜರ್ ಪರಿಚಯಿಸಿದ್ದನು ಮರೆತ್ತಿದ್ದಳು. ಕುಳಿತುಕೊಳ್ಳಲ್ಲು ಕುರ್ಚಿತೋರಿಸುತ್ತ "ಏನ್ರಿ ತಪ್ಪಿಲ್ಲದಂತೆ ಬರೆಯಕ್ಕೆ ಬರುತ್ತಾ" ಎಂದಳು, "ಬಿಕಾಂ ಮಾಡಿ ಈಗಷ್ಟೆ ಸಿಎಗೆ ಸಿದ್ದವಾಗುತ್ತಿರುವ ನನಗೆ ಇವಳು ಕೇಳುವ ಪ್ರಶ್ನೆ" ಅಂದು ಕೊಂಡ ಶಶಿ.

   ನಂತರ ಆರು ತಿಂಗಳಲ್ಲೆ ಶಶಿ ಕೇಳಿದ ಅವಳನ್ನು "ಲೀಲ ನನ್ನ ಮದುವೆ ಆಗ್ತೀಯಾ?", ಅವಳು ನಕ್ಕು ಹೇಳಿದ್ದಳು  "ಅದು ಆಮೇಲೆ ನಿರ್ದಾರಮಾಡಬಹುದು, ಮೊದಲು ನಿಮ್ಮ ತಾಯಿ ಒಪ್ಪುತ್ತಾರ ವಿಚಾರಿಸಿ"

   ಅಂದು ಸಂಜೆಯೆ ಶಶಿ ಅವನ ತಾಯಿ ಸುನಂದಳ ಹತ್ತಿರ ವಿಶಯ ಪ್ರಸ್ತಾಪ ಮಾಡಿದ. ಆಕೆ ಏನು ಉತ್ತರ ಹೇಳಿಯಾಳು, ಮಂಕಾದಳು, ಗಂಡ ಹೋದ ನಂತರ ಮುಚ್ಚಟ್ಟೆಯಿಂದ ಕಷ್ಟಬಿದ್ದು ಬೆಳೆಸಿದ ಮಗ, ಅವನ ಹೊರತು ಅವಳಿಗೆ ಯಾವ ಆದಾರವು ಇಲ್ಲ, ಅನ್ಯಜಾತಿಯ ಹುಡುಗಿಯನ್ನು ಮದುವೆಯಾಗಲು ಸಿದ್ದನಾಗಿ ನಿಂತಿದ್ದಾನೆ. ಅವಳಿಗೆ ಹುಡುಗಿಯ ಗುಣಸ್ವಭಾವಗಳೇನು ತಿಳಿದಿಲ್ಲ,ಎಂತದೊ ಆತಂಕ. ಮಗನಾದರು ಎಂದು ತಾಯಿಯ ಮಾತು ಕೇಳದೆ ಬೆಳೆದವನು, ಈಗ ಮದುವೆಯ ವಿಷಯ!. ವಾರ ಹತ್ತುದಿನ ಕಣ್ಣೀರು ಸುರಿಸಿದಳು, ಕಡೆಗೆ ಮಗ ಚೆನ್ನಾಗಿದ್ದರೆ ಸಾಕು ಎಂಬ ಹಂಬಲದೊಂದಿಗೆ ಮದುವೆಗೆ ಒಪ್ಪಿಗೆ ಸೂಚಿಸಿದಳು.

   ಶಶಿ ಉತ್ಸಾಹದಿಂದಲೆ ಓಡಿಬಂದ, ಹೊಟೆಲ್ ನಲ್ಲಿ ಮಾತು ತೆಗೆಯುತ್ತ ತಿಳಿಸಿದ" ಲೀಲಾ ನಮ್ಮ ತಾಯಿ ಒಪ್ಪಿಗೆ ಕೊಟ್ಟರು ಈಗ ನಿನ್ನದೇನು ಹೇಳು" ,"ಯಾವುದಕ್ಕೆ ಒಪ್ಪಿಗೆ" ಲೀಲ ಕೇಳಿದಳು ಅಮಾಯಕಳಂತೆ, "ನೀನೆ ಹೇಳಿದ್ದಿಯಲ್ಲ ಲೀಲ ನಮ್ಮ ಮದುವೆಗೆ ತಾಯಿ ಒಪ್ಪುತ್ತಾರ ಕೇಳು ಎಂದು" ಶಶಿ ನುಡಿದ ಆತಂಕದಲ್ಲಿ. ದೀರ್ಘಮೌನ, ನಂತರ ಲೀಲ ನುಡಿದಳು. "ನೀನು ತಪ್ಪು ತಿಳಿದೆ ಶಶಿ, ನಾವಿಬ್ಬರು ಬೇರೆಯೆ ಧರ್ಮ ಆಚಾರ ಸಂಪ್ರದಾಯಗಳಿಗೆ ಸೇರಿದವರು,ಮನೆಯಲ್ಲಿ ಪರಸ್ಪರ ಹೊಂದಿಕೆ ಬರಲು ಸಾದ್ಯವ?,ನಿನಗೆ ಮತ್ತು ಒಂದು ವಿಷಯ ತಿಳಿಸಲಿಲ್ಲ, ಕಳೆದವಾರ ನನ್ನ ನೋಡಲು ಹುಡುಗನೊಬ್ಬ ಬಂದಿದ್ದ, ನಾನು ಒಪ್ಪಿಗೆ ಸೂಚಿಸಿ ಆಗಿದೆ. ಮದುವೆಗೆ ಮೊದಲು ನಾನು ಬ್ಯಾಂಕಿನ ಕೆಲಸಕ್ಕೆ ರಾಜಿನಾಮೆ ಕೊಡುವಳ್ಳಿದ್ದೇನೆ, ಇನ್ನುಯಾರಿಗು ತಿಳಿಸಿಲ್ಲ, ನಿನಗೆ ಮೊದಲು ಹೇಳುತ್ತಿರುವುದು" ಅಂದಳು.

 ತಲೆಯಮೇಲೆ ಕಲ್ಲು ಬಿದ್ದಂತೆ ಆಯಿತು ಶಶಿಗೆ."ಇವಳು ಏನು ಹೇಳುತ್ತಿದ್ದಾಳೆ,ಇವಳ ಮಾತು ನಂಬಿ ಅಮ್ಮನ ಮನಸ್ಸು ಮುರಿದೆ, ಅನ್ನಬಾರದ ಮಾತನ್ನೆಲ್ಲ ಅಂದೆ, ಈಗ ಈರೀತಿ ಅನ್ನುತ್ತಿದ್ದಾಳೆ" ಅಂದುಕೊಂಡು "ಮತ್ತೆ ನೀನೆಕೆ ಅಮ್ಮನ ಬಳಿ ಕೇಳು ಅಂತ ಹೇಳಿದೆ" ಅಂದ ಕನಲಿ, ಅದಕ್ಕೆ ಲೀಲ "ನಾನು ಕೇಳು ಅನ್ನಲಿಲ್ಲ ನಿಮ್ಮ ತಾಯಿ ಒಪ್ಪಲಾರರು ಅಂದೆ" ಎಂದಳು. ಏನೆ ವಾದ ಮಾಡಿದರು, ಲೀಲಾಳ ಮನಸ್ಸು ಕರಗಲಿಲ್ಲ ಅವಳು ಸ್ವಷ್ಟವಾಗಿಯೆ ಹೇಳಿದಳು "ಶಶಿ ನಿಮ್ಮನ್ನು ಮದುವೆಯಾಗಿ ಜೀವನ ಪೂರ್ತಿ ಹೀಗೆ ಬ್ಯಾಂಕಿನ ಕೆಲಸಮಾಡುತ್ತ ಕೊಳೆಯಲಾರೆ, ನನಗೆ ನನ್ನದೆ ಆದ ಆಸೆಗಳಿವೆ, ಅದೆಲ್ಲ ನಿನ್ನ ಜೊತೆ ಇದ್ದಲ್ಲಿ ನೆರೆವೇರದು, ಕ್ಷಮಿಸು" ಎನ್ನುತ್ತ ಎದ್ದು ಹೋದಳು.

ನಂತರ ಶಶಿಗೆ ತಿಳಿದುಬಂದಿತ್ತು, ಈಗ ಗೊತ್ತಾಗಿರುವ ಹುಡುಗನಾದರು ಹತ್ತಾರು ಕೋಟಿಗಳ ಒಡೆಯನಾಗಿರುವ ಅಪ್ಪನ ಒಬ್ಬನೆ ಮಗ. ಲೀಲಾಳ ನಿರ್ದಾರ ಸ್ವಷ್ಟವಾಗಿಯೆ ಇತ್ತು, ಮರೀಚಿಕೆಯ ಬೆನ್ನು ಬಿದ್ದವನು ಶಶಿ. ಬ್ಯಾಂಕಿನಲ್ಲಿ ಎಲ್ಲರ ಅಪಹಾಸ್ಯಕ್ಕೆ ಒಳಗಾಗಿದ್ದ. ಶಶಿಗೆ ಲೀಲ ಅವನನ್ನು ತಿರಸ್ಕರಿಸಿದಳು ಎನ್ನುವದನ್ನು ಅರಗಿಸಿಕೊಳ್ಳಲೆ ಆಗಿರಲಿಲ್ಲ, ಆ ಕಿತ್ತು ತಿನ್ನುವ ನೋವಿನ ಜೊತೆಗೆ ಅಂಟಿಕೊಂಡಿತ್ತು ದೇಹವನ್ನು ಹಿಂಡುತ್ತಿರುವ ಈ ಕಾಯಿಲೆ.

ಏಕೊ ಶಶಿಗೆ ಅವನ ಅಪ್ಪನ ನೆನಪು ಬಂದಿತು. ಅವನಿಗೆ ಅವರ ಮುಖನೋಡಿದ ನೆನಪೆ ಇಲ್ಲ. ಚಿತ್ರದಲ್ಲಿ ನೋಡಿರುವದಷ್ಟೆ. ತಾಯಿ ಮಲಗಿದ್ದಾಳೊ ಇಲ್ಲವೊ ಕತ್ತಲಿನಲ್ಲಿ ತಿಳಿಯುತ್ತಿಲ್ಲ.ಆದರು ಕೇಳಿದ "ಅಮ್ಮ ಏಕೊ ಶೃಂಗೇರಿಗೆ ಹೋಗಿಬರಬೇಕೆನ್ನಿಸಿದೆ ನಾಳೆ ಹೋಗಲ"
ಸುನಂದಳ ಹೃದಯ ಸ್ಥಬ್ದವಾಯಿತು. ಆದರು ಕಷ್ಟದಿಂದ ಅಂದಳು "ಈಗ ಏಕಪ್ಪ ಆಮಾತು, ನನಗೆ ಆ ಸ್ಥಳದ ಹೆಸರು ಹೇಳಲು ಇಷ್ಟವಿಲ್ಲ, ನಾನೆಂದು ಅಲ್ಲಿಗೆ ಬರಲಾರೆ" ಅವಳ ಮಾತಿನಲ್ಲಿ ಇಡಿ ಜೀವಮಾನದ ನೋವೆಲ್ಲ ಇಣುಕಿತು.
"ಸರಿಯಮ್ಮ ಆದರೆ ನನಗೆ ಏಕೊ ಅಲ್ಲಿಗೆ ಹೋಗಬೇಕಿನಿಸಿದೆ ನಾಳೆ ಹೊರಡಲಿದ್ದೇನೆ" ಎಂದ. ಸುನಂದ ಏನು ಹೇಳಿಯಾಳು, ಅವಳ ಹೃದಯ ಹೆದರಿ ರೋದಿಸಿತು. ಮಗನನ್ನು ತಡೆಯಲಾಗುವದಿಲ್ಲ, ತನ್ನ ಬಾಳಿನಲ್ಲಿ ಬರಿ ಕತ್ತಲೆ ತುಂಬಿದ ಪುಟಗಳೆ, ಇದು ಯಾವ ಅನಾಹುತಕ್ಕೆ ಮುನ್ನುಡಿಯೊ ಎಂದು ಅಳುಕಿದಳು.ಕಾಲವೆ ಎಲ್ಲವನ್ನು ನಿರ್ದರಿಸಲಿ ಎನ್ನುತ್ತ "ತಾಯಿ ಶಾರದಾಂಬೆ ಮಗನು ನಿನ್ನ ಮಡಿಲಿಗೆ ಬರುತ್ತಿದ್ದಾನೆ ಅವನ ರಕ್ಷಣೆ ನಿನ್ನ ಹೊಣೆ" ಎಂದು ಕತ್ತಲಿನಲ್ಲಿಯೆ ಕೈಮುಗಿದಳು.
****************************** ೧

 ಬಸ್ಸು ಶೃಂಗೇರಿ ತಲುಪುವಾಗ ಬೆಳಗಿನ ಸೂರ್ಯ ದಟ್ಟವಾದ ಮಂಜಿನಿಂದ ಮೇಲೆದ್ದು ಶ್ರಮಪಡುತ್ತಿದ್ದ,ದೇವಾಲಯದ ಪಕ್ಕದಲ್ಲಿಯೆ ಇದ್ದ ಸ್ವಾಗತ ಕೊಠಡಿಯಲ್ಲಿ ಬಸ್ಸಿನಲ್ಲಿ ಬಂದ ಪ್ರಯಾಣಿಕರೆಲ್ಲ ತಮ್ಮ ವಿಳಾಸ ಹೆಸರು ಬರೆದು ರೂಮು ಪಡೆಯುತ್ತಿದ್ದರು. ಶಶಿಯು ಕೊನೆಯಲ್ಲಿ ನಿಂತ,ಕೌಂಟರಿನಲ್ಲಿ ಕುಳಿತ್ತಿದ್ದ ನೀಳವಾದ ಗಡ್ಡ ಬಿಟ್ಟ ವ್ಯಕ್ತಿ ಹಣಪಡೆದು ರೂಮಿನ ಕೀಲಿ ಕೊಡುತ್ತಿದ್ದ.ಇವನ ಸರದಿ ಬಂದಾಗ ವಿಳಾಸ ಬರೆಯಲು ಪೆನ್ನು ತೆಗೆದುಕೊಂಡ, ಆ ನೀಳಗಡ್ಡದಾರಿ ಇವನನ್ನು "ಎಷ್ಟು ಜನರಿದ್ದೀರಿ" ಎಂದ.
"ನಾನು ಒಬ್ಬನೆ" ಎಂದ ಶಶಿ,
"ಕ್ಷಮಿಸಿ ಒಂಟಿಯಾಗಿ ಬರುವವರಿಗೆ ರೂಮುಕೊಡಲಾಗುವದಿಲ್ಲ" ಎನ್ನುತ್ತ, ಪುಸ್ತಕ ಹಿಂದೆ ಎಳೆದುಕೊಂಡ.
"ಏಕೆ ಏನು ತೊಂದರೆ" ಶಶಿ ಆಶ್ಚರ್ಯದಿಂದ ಕೇಳಿದ.
"ಅದು ಇಲ್ಲಿಯ ನಿಯಮ" ಗಡ್ಡದಾರಿ ನಿರ್ಲಿಪ್ತನಾಗಿ ನುಡಿದು ಮುಖ ತಿರುಗಿಸಿದ.
ಶಶಿ ಅವನ ಜೊತೆ ವಾದಮಾಡುವ ಮನಸ್ಥಿಥಿಯಲ್ಲಿರಲಿಲ್ಲ,ಬ್ಯಾಗ್ ಹಿಡಿದು ಹೊರಬಂದವನು, ಎದುರುಸಾಲಿನ ಅಂಗಡಿಗಳ ಮುಂದಿನ ಕಲ್ಲುಬೆಂಚಿನ ಮೇಲೆ ಕುಳಿತ.  ನಡುಗಿಸುವ ಚಳಿ,ಮುಸುಕ್ಕಿದ ಮಂಜಿನಂತೆಯೆ ಶಶಿಯ ಮನದಲ್ಲಿ ಎಂತದೊ ಶೂನ್ಯ ಕವಿದಿತ್ತು.ಏನು ಮಾಡಬೇಕೆಂಬ ನಿರ್ದಾರವಿಲ್ಲದೆ ಜಡನಾಗಿ ಸುಮ್ಮನೆ ತಲೆತಗ್ಗಿಸಿ ಕುಳಿತ್ತಿದ್ದ. ಎದುರಿಗೆ ಯಾರೊ ನಿಂತಂತೆ ಆಯಿತು.
"ಏಕೆ ನಿಮಗು ರೂಮು ಸಿಗಲಿಲ್ಲವೆ" ಇಂಪಾಗಿ ಬಂದ ದ್ವನಿಗೆ ತಲೆ ಎತ್ತಿದ್ದ.ತಿಳಿಹಸಿರು ಅಂಚಿನ ಬಿಳಿಯ ಸೀರೆ ಧರಿಸಿ,ಹಣೆಯಲ್ಲಿ ಅಗಲವಾದ ಕುಂಕುಮ,ತಲೆಯ ಹಿಂಬಾಗದಲ್ಲಿ ಹರಡಿದ್ದ ನೀಳಕೇಶರಾಶಿ, ನೋಡುವಾಗಲೆ ಗೌರವ ಮೂಡಿಸುವ ಮುಖಭಾವ. ಅವಳ ಪ್ರಶ್ನೆ ಅರ್ಥವಾಗದೆ ಮುಖವನ್ನೆ ದಿಟ್ಟಿಸಿದ.
"ನೀವು ಒಂಟಿಯಾಗಿ ಬಂದಿರುವ ಹಾಗಿದೆ,ಇರಲು ರೂಮಿನ ಅನುಕೂಲವಾಗಲಿಲ್ಲ ಅನ್ನಿಸುತ್ತೆ" ಅಂದಳು,ಅವನು ಶೂನ್ಯ ದೃಷ್ಟಿಬೀರಿದ.ಏನು ಹೇಳದೆ ನಗುಬೀರಿದ.ಅಕೆಯ ಮುಖದಲ್ಲಿ ಎಂತದೊ ನಗು
"ನನಗು ಅದೆ ಸಮಸ್ಯೆ ನಾನು ಒಂಟಿಯಾಗಿ ಬಂದಿರುವೆ, ನೀವು ಒಪ್ಪುವದಾದಲ್ಲಿ ಇಬ್ಬರು ಸೇರಿ ರೂಮು ಪಡೆಯೋಣ" ಶಶಿ ವಿಭ್ರಾಂತನಾದ, ಆಕೆ "ಬನ್ನಿ ಕೇಳೋಣ" ಎಂದಳು.ಶಶಿಗೆ ಏನು ತೋಚದೆ ಎದ್ದು ಹೊರಟ. ಈಗ ಸ್ವಾಗತದ ಕೌಂಟರಿನಲ್ಲಿ ಮತ್ತಾರೊ ಯುವಕ ಕುಳಿತ್ತಿದ್ದ. ಶಶಿಯನ್ನು ಅವನ ಹಿಂದೆ ಬಂದ ಆಕೆಯನ್ನು ಕಂಡು,
"ಎಲ್ಲಿಂದ ಬರುತ್ತಿದ್ದೀರಿ ರೂಮು ಬೇಕ ಇಲ್ಲಿ ವಿವರ ಬರೆಯಿರಿ"ಎನ್ನುತ್ತ ಪುಸ್ತಕ ತೋರಿದ. ಶಶಿ ಹೆಸರು ವಿಳಾಸವನ್ನೆಲ್ಲ ಬರೆದು, ಹಣ ನೀಡಿದ  .ಅವನು ಕೀಲಿ ಕೊಡುತ್ತ "ಇದೆ ರಸ್ತೆಯಲ್ಲಿ ಮುಂದೆಹೋಗಿ ಎಡಬಾಗದ ಗುಡ್ಡದ ಮೇಲಿದೆ ಟಿ.ಟಿ.ಡಿ ಯ ರೂಮುಗಳು" ಎಂದು ತಿಳಿಸಿದ.
ಹೊರಗೆ ಬಂದ ಶಶಿಗೆ ಎಂತದೊ ಗಲಿಬಿಲಿ ಅವಳು ಯಾರು ಎಂದು ಅವನಿಗೆ ತಿಳಿಯುತ್ತಿಲ್ಲ. ಹೆಚ್ಚುಕಡಿಮೆ ಅವನ ತಾಯಿಯಷ್ಟು ಅಥವ ಸ್ವಲ್ಪ ಕಡಿಮೆ ವಯಸ್ಸಿರಬಹುದೇನೊ. ಏಕೊ ಅವನಿಗೆ ಯಾವ ಕುತೂಹಲವು ಮೂಡಲಿಲ್ಲ,ಸುಮ್ಮನೆ ತಲೆತಗ್ಗಿಸಿ ಹೊರಟ.ಹಿಂದೆ ... ಹಿಂದೆ ..ಆಕೆಯ ಗೆಜ್ಜೆಯ ಶಬ್ದ. ಆರು ಏಳೂ ನಿಮಿಷದಲ್ಲಿ ರೂಮುಸೇರಿದ. ನಿದಾನವಾಗಿ ಬಾಗಿಲಿನಿಂದ ಒಳಬಂದ ಆಕೆ ರೂಮಿನಲ್ಲೆಲ್ಲ ಒಮ್ಮೆ ಕಣ್ಣಾಡಿಸಿದಳು. ಬ್ಯಾಗನ್ನು ಕುರ್ಚಿಯ ಮೇಲಿಟ್ಟ ಶಶಿ ಮತ್ತೊಂದು ಕುರ್ಚಿಯಲ್ಲಿ ಕುಳಿತ.ಆಕೆ ಶಶಿಯತ್ತ ನೋಡುತ್ತ "ಬಸ್ ಪ್ರಯಾಣ ಆಯಾಸವಾಗಿದೆ ಅನ್ನಿಸುತ್ತೆ, ಮೊದಲು ಒಂದು ಸ್ನಾನ ಮುಗಿಸಿ ಬಂದು ಬಿಡಪ್ಪ, ನನ್ನದಂತು ಆಗಿದೆ, ಏಕವಚನದಲ್ಲಿ ಕರೆದರೆ ಬೇಸರವಿಲ್ಲ ತಾನೆ, ನಾನು ನಿನಗಿಂತ ದೊಡ್ಡವಳು" ಎಂದಳು.
ಶಶಿ ಯಾವ ಉತ್ತರವನ್ನು ಕೊಡಲಿಲ್ಲ, ಸರಿ ಎಂದುಕೊಂಡು, ಟವೆಲ್ ಬಟ್ಟೆ ಬ್ರಶ್ ಎಲ್ಲ ತೆಗೆದುಗೊಂಡು ಸ್ನಾನದ ಕೊಠಡಿ ಹೊಕ್ಕು ಬಾಗಿಲು ಹಾಕಿದ. ನಲ್ಲಿ ತಿರುಗಿಸಿ ನೋಡಿದ ತಣ್ಣನ್ನೆಯ ನೀರು, ಪರವಾ ಇಲ್ಲ ಅನ್ನಿಸಿತು. ನಿದಾನವಾಗಿ ಎಲ್ಲ ಮುಗಿಸಿ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡ.
ಶಶಿ ಹೊರಬಂದಾಗ ಆಕೆ ಅಲ್ಲಿಯೆ ಇದ್ದ ಮಂಚದ ಮೇಲೆ ಪದ್ಮಾಸನದಲ್ಲಿ ಕುಳಿತು ಕಣ್ಣುಮುಚ್ಚಿದ್ದರು, ಬಹುಷಃ ಧ್ಯಾನ ಮಾಡುತ್ತಿದ್ದರೇನೊ,ಇವನು ಓಡಿಯಾಡಿದ ಸಪ್ಪಳಕ್ಕೆ ಕಣ್ಣುಬಿಟ್ಟು ಇವನತ್ತ ನೋಡಿ ಮುಗುಳ್ನಕ್ಕರು
"ಸ್ನಾನ ಆಯಿತ ಸ್ವಲ್ಪ ಪ್ರಯಾಣದ ಆಯಾಸವೆಲ್ಲ ಹರಿಯಿತು ಅನ್ನಿಸುತ್ತೆ, ನೀನು ಬೇಗ ಸಿದ್ದನಾಗಿ ಹೊರಗೆ ಎಲ್ಲಿಯಾದರು ಉಪಹಾರ ಮುಗಿಸಿ, ನಂತರ ದೇವಾಲಯಕ್ಕೆ ಹೋದರೆ ದೇವರ ದರ್ಶನ ಪಡೆದು ಸುತ್ತಮುತ್ತ ನೋಡಲು ಹೋಗಬಹುದು. ನೀನು ಹೊರಟಿರು ನಾನು ಸ್ವಲ್ಪ ನಿದಾನವಾಗಿ ಬರುತ್ತೇನೆ, ದೇವಾಲಯದಲ್ಲಿ ನಿನಗೆ ಸಿಗುತ್ತೇನೆ" ಎಂದರು.

ಸ್ವಲ್ಪ ಆಲಸ್ಯದಿಂದಲೆ ಸಿದ್ದನಾಗಿ,ಆಕೆಯತ್ತ ನೋಡಿದ ಶಶಿ, ಇವನ ಕಡೆ ಅವರಿಗೆ ಗಮನವಿದ್ದಂತಿಲ್ಲ, ಏನಾದರು ಮಾಡಿಕೊಳ್ಳಲ್ಲಿ ಎನ್ನುತ್ತ ಹೊರಗೆ ಬಂದು ಬಾಗಿಲು ಹೊರಗಿನಿಂದ ಮುಂದೆ ಎಳೆದುಕೊಂಡ.ರಸ್ತೆಯಲ್ಲಿ ನಡೆಯುತ್ತ ಹೊರಟಂತೆ ಹೋಟಲಿನ ಬೋರ್ಡ್ ಕಾಣಿಸಿತು, ಒಳಗೆ ಹೋದರೆ, ಮನೆಯಂತೆ ನೆಲದಮೇಲೆ ಚಾಪೆಯಲ್ಲಿ ಕೂಡಿಸಿ ಉಪಹಾರ ಕೊಡುತ್ತಿದ್ದರು. ಇವನನ್ನು ಕಂಡು, "ಕುಳಿತುಕೊಳ್ಳಿ" ಎನ್ನುತ್ತ, ಎದುರಿಗೆ ಬಾಳೆ ಎಲೆ ಹಾಸಿ ನೀರು ಬಡಿಸಿ ಒಳಹೋದರು. ಒಳಗಿನಿಂದ ಬಿಸಿಬಿಸಿ ಇಡ್ಲಿ ಬಂತು, ಹೊಟ್ಟೆ ತುಂಬುವಂತೆ ನಿದಾನವಾಗಿ ತಿಂದು, ಕಾಫಿಕುಡಿದು , ಹಣನೀಡಿ ಹೊರಬಂದ ಶಶಿ.

ಎಂದೊ ಸಣ್ಣ ವಯಸ್ಸಿನಲ್ಲಿ ಕಂಡ ನೆನಪು ಎತ್ತ ಹೋಗಬೇಕೆಂಬ ನಿರ್ದಾರವಿಲ್ಲ.ದೇವಾಲಯದ ಮಹಾದ್ವಾರ ಕಾಣಿಸಿತು,ಒಳಗೆ ಹೋಗಲಿಲ್ಲ. ಹಾಗೆಯೆ ಕಾಲೆಳೆಯುತ್ತ ಮುಂದೆ ಸಾಗಿದವನಿಗೆ ಎದುರಾಗಿದ್ದು ತುಂಗಾನದಿ. ಅದರ ದಡದಲ್ಲಿಯೆ ನಡೆಯುತ್ತ ಹೊರಟ. "ನಾನು ಇಲ್ಲಿ ಏಕೆ ಬಂದೆ ನಾನು ನಿರೀಕ್ಷಿಸಿದ ನೆಮ್ಮದಿ ಶಾಂತಿ ಇಲ್ಲಿ ಸಿಕ್ಕೀತೆ? ನನ್ನ ಮನಸ್ಸೆ ಕದಡಿಹೋಗಿರುವಾಗ ಹೊರಗಿನಿಂದ ಸಮಾದಾನ ಎಲ್ಲಿ ದೊರಕೀತು, ಅಡಿಗಡಿಗೆ ಕಾಡುತ್ತಿರುವ ಈ ನೋವು ಎಲ್ಲಕ್ಕು ಮೂಲ ಕಾರಣ ಅವಳೆ ರಾಕ್ಷಸಿ ಲೀಲ ಜೋಸೆಪ್" ಅನ್ನಿಸಿಬಿಟ್ಟಿತು. ಅವಳ ನೆನಪು ಮನವನ್ನು ಆಕ್ರಮಿಸಿದಂತೆ ಪುನಃ ಅತ್ಮ ಕುಸಿದುಹೋಯಿತು. ಬೆಂಗಳೂರಿನಿಂದ ಇಷ್ಟು ದೂರಬಂದರು ಕಾಡುವ ನೆನಪುಗಳ ಹಿಂಸೆ ಶಶಿಯನ್ನು ಹೈರಾಣವಾಗಿಸಿತು "ಲೀಲಾ ಏಕೆ ಹೀಗೆ ನನ್ನ ಕಾಡಿಸುತ್ತೀಯ ನನ್ನನ್ನು ಬಿಟ್ಟುಬಿಡು" ಅಂದುಕೊಂಡ. ನಡೆಯುತ್ತಿದ್ದಂತೆ ಗಾಯಕೆರಳಿ ನೋವಿನ ಹಿಂಸೆ ಪ್ರಾರಂಬವಾಯಿತು ಹಾಗೆಯೆ ಒಂದು ಜಾಗ ಅರಸಿ ಹುಲ್ಲಿನ ಮೇಲೆ ಕುಳಿತ.ಹರಿಯುತ್ತಿದ್ದ ನದಿಯನ್ನು ದಿಟ್ಟಿಸುತ್ತಿದ್ದ. ಶಶಿಗೆ ಏಕೊ ಅಲಸ್ಯವೆನೆಸಿ, ಕಣ್ಣುಮುಚ್ಚಿ ಕುಳಿತ. ಬಿಸಿಲು ಮೇಲೆರುತ್ತಿತ್ತು, "ಲೀಲಾ ನಾನು ಯಾವ ತಪ್ಪು ಮಾಡಿದೆ ಎಂದು ನನ್ನನ್ನು ನಿರಾಕರಿಸಿದೆ ಮೊದಲು ನನ್ನನ್ನೇಕೆ ನಿನ್ನ ಆಕರ್ಷಣೆಯಲ್ಲಿ ಕೆಡವಿಕೊಂಡೆ , ನನ್ನ ಮನಸ್ಸನ್ನೇಕೆ ದುರ್ಬಲಗೊಳಿಸಿದೆ" ಅವನ ಮನ ರೋದಿಸುತ್ತಿತ್ತು. "ನನಗೆ ಸುಖವೆಂಬುದೆ ಇಲ್ಲವೆ ಜೀವನದಲ್ಲಿ" ಅವನು ಚಿಂತಿಸಿದ. ಲೀಲ ಜೊತೆ ಕಳೆದ ದಿನಗಳ ನೆನಪು ಅವನ ಮನವನ್ನು ತುಂಬಿತು.ಸಮಯ ಎಷ್ಟು ಕಳೆಯಿತೊ ಅವನಿಗೆ ತಿಳಿಯಲ್ಲಿಲ್ಲ ಗಡಿಯಾರವನ್ನು ಕಟ್ಟಿರಲಿಲ್ಲ ರೂಮಿನಲ್ಲಿಯೆ ಮರೆತ್ತಿದ್ದ.ಪುನಃ ಊರೊಳಗೆ ಹೋಗುವುದೆ ಬೇಡ ಅಂದುಕೊಂಡ ಒಮ್ಮೆ, ಅಷ್ಟೆ ಏಕೆ ಬೆಂಗಳೂರಿಗೆ ಮರಳುವುದೆ ಬೇಡ ಅನ್ನಿಸಿತು. ಬಿಸಿಲು ಇಳಿಮುಖವಾಗುತ್ತಿತ್ತು.
****************************************** ೨
ತುಂಗೆಯ ದಡವನ್ನು ಬಿಟ್ಟು ಮೇಲೆದ್ದ, ತಕ್ಷಣ ಮೇಲೆ ಎದ್ದಿದ್ದಕ್ಕೊ ಕಾಡುತ್ತಿರುವ ಸರ್ಪಸುತ್ತಿನ ಪ್ರಭಾವವೊ ನೋವು ದೇಹದಲ್ಲೆಲ್ಲ ಒಮ್ಮೆ ಸಂಚಾರಮಾಡಿತು. ನಿದಾನಕ್ಕೆ ನಡೆಯುತ್ತ ಹೊರಟವನು ದೇವಾಲಯದ ಮುಂಬಾಗಕ್ಕೆ ಬಂದ.ಒಳಗೆ ಹೋದರೆ ಶಾರದ ದೇವಾಲಯ ನಂತರ ನದಿಯ ಪಾತ್ರಕ್ಕೆ ಇಳಿಯಲು ಮೆಟ್ಟಿಲುಗಳು ನೀರಿನಲ್ಲಿ ಮೀನುಗಳು ಚಿಕ್ಕವಯಸ್ಸಿನಲ್ಲಿ ನೋಡಿದ ನೆನಪಾಯಿತು ಶಶಿಗೆ. ಒಳಗೆ ಹೊರಟ ಬಿಸಿಲಿನ ಜಳಕ್ಕೆ ಒಳಗೆ ಹಾಸಿದ್ದ ಕಲ್ಲು ಕಾದು ಸುಡುತ್ತಿತ್ತು. ಶಾರದ ದೇವಿಯ ದೇವಾಲಯ ಕಾಣಿಸಿತು, ಕೆಲವರು ಒಳಗಿನಿಂದ ಹೊರಬರುತ್ತಿದ್ದರು, ಅವನು ಒಳಹೋಗದೆ ಮುಂದೆ ನಡೆದ, ಎದುರಿಗೆ ನಕ್ಷತ್ರಾಕಾರದಲ್ಲಿ ಕಟ್ಟಿದೆ ಹಳೆಯ ಕಲ್ಲಿನ ದೇವಾಲಯ, ಯಾವುದು ಈ ದೇವಾಲಯ, ಹೆಸರು ಮರೆತ್ತಿತ್ತು, ಶಿವದೇವಾಲಯ ಅಂತ ನೆನಪ್ಪಿತ್ತು. ಹಾಗೆಯೆ ಹಿಂದೆ ಬಂದರೆ, ಕೆಳಗೆ ಇಳಿಯಲು ಮೆಟ್ಟಿಲುಗಳು, ಎಡಕ್ಕೆ ಸೇತುವೆ ಮೇಲೆ ನದಿಯನ್ನು ದಾಟಿ ಇನ್ನೊಂದು ಬದಿಗೆ ದಾಟಿಹೋಗುವ ದಾರಿ ಕಾಣಿಸಿತು.
 ಮೆಟ್ಟಿಲು ಇಳಿಯುತ್ತ ನದಿಯತ್ತ ಇಳಿದ ಶಶಿ , ಕೆಲವರು ಮೀನಿಗೆ ಪುರಿ ಹಾಕುತ್ತ ಆನಂದಿಸುತ್ತಿದ್ದರು. ಏಕೊ ಬೇಸರವೆನಿಸಿ ಪುನಃ ಮೇಲೆ ಬಂದು ಸೇತುವ ಮೇಲೆ ಹೊರಟ. ಸೇತುವೆ ಮೇಲಿನಿಂದ ನದಿಯ ದಡದಲ್ಲಿ ಮೆಟ್ಟಿಲುಗಳ ಮೇಲಿರುವ ಜನ ಕಾಣುತ್ತಿದ್ದರು. ಮುಳುಗಲು ಸಿದ್ದನಾಗಿದ್ದ ಸೂರ್ಯನ ಓರೆ ಕಿರಣಗಳು ಕಣ್ಣು ಚುಚ್ಚುತ್ತಿದ್ದವು. ಮೊದಲ ಸಲ ಬಂದಾಗ ಇಲ್ಲಿ ಸೇತುವೆ ಇರಲಿಲ್ಲ, ಬಿದುರು ಮರದಿಂದ ಕಟ್ಟಿದ ತಾತ್ಕಲಿಕ ಸೇತುವೆ ಇತ್ತು ಈಗ ಇದು ಹೊಸದಾಗಿ ಆಗಿರುವ ಸೇತುವೆ ಅಂದುಕೊಂಡ.ನದಿಯನ್ನು ದಿಟ್ಟಿಸುತ್ತಿರುವಂತೆ ಅನ್ನಿಸಿತು "ನಿಜ ಇದೆ ಜಾಗ ನನ್ನ ತಂದೆ ನೀರಿನಲ್ಲಿ ಕೊಚ್ಚಿಹೋಗಿ ನನ್ನನ್ನು ಅಮ್ಮನನ್ನು ಜೀವನಪೂರ್ತಿ ಅನಾಥಭಾವ ತುಂಬುವಂತೆ ಮಾಡಿದ ಜಾಗ"

   ಆದಿನ ಕಣ್ಣಮುಂದೆ ಬಂದಿತು, ಬೆಳಗಿನ ಆರುಗಂಟೆ ಸಮಯವೇನೊ, ಬೇಡವೆಂದು ಅಮ್ಮ ತಡೆಯುತ್ತಿದ್ದರು ಮೊಂಡುತನ ಮಾಡಿ ಸ್ನಾನಕ್ಕೆ ಇಳಿದ ಅಪ್ಪ, ಇದೇ ಶ್ರಾವಣಮಾಸವಿರಬಹುದೇನೊ ತುಂಗಾನದಿ ಕೆಂಪು ಬಣ್ಣದ ಹೊಸನೀರಿನಿಂದ ತುಂಬಿ ಹರಿಯುತ್ತಿದ್ದಳು. ಹೆಜ್ಜೆ ಜಾರಿದ ಅಪ್ಪ ಕಣ್ಣೆದುರೆ ಕೊಚ್ಚಿಹೋದರು, ಅಮ್ಮ ಜೋರಾಗಿ ಕೂಗುತ್ತಿದ್ದಳು. ನಂತರ ಜನ ಸೇರಿದರು. ಪೋಲಿಸರಿಗು ತಿಳಿಸಲಾಯಿತು. ಕಡೆಗೂ ಅಪ್ಪ ಸಿಕ್ಕಿದ್ದು ಎಷ್ಟೋ ದೂರದಲ್ಲಿ ಅದು ಹೆಣವಾಗಿ, ಎಲ್ಲ ಕರ್ಮಗಳನ್ನು ಇಲ್ಲಿಯೆ ಮುಗಿಸಲಾಯಿತು. ಶಾರದೆಯ ದರ್ಶನಮಾಡಲು ಬಂದವರು ಬದುಕಿನ ಆದಾರವನ್ನು ಕಳೆದುಕೊಂಡು ಹಿಂದಿರುಗಿದರು, ಆಕೆಯ ದರ್ಶನ ಪಡೆಯದೆ.
****************************************   ೩

ವಿಷಾದಭಾವ ತುಂಬಿಕೊಂಡಿತ್ತು ಶಶಿಯ ಮನದಲ್ಲಿ ಯೋಚಿಸುತ್ತಿದ್ದ ಇನ್ನೆಂದು ನನ್ನ ಜೀವನದಲ್ಲಿ ಒಳ್ಳೆಯ ದಿನಗಳು ಬರಲಾರವು. ಏಕೆ ಬದುಕಬೇಕು ಈ ಬದುಕು, ಯಾರಿಗಾಗಿ?, ಅಪ್ಪ ಸತ್ತ ಜಾಗಕ್ಕೆ ತಲುಪಿರುವೆ ಸರಿಯಾಗಿ. ಈ ಸೇತುವ ಇರುವ ಸ್ಥಳದಲ್ಲಿಯೆ ಅನ್ನಿಸುತ್ತೆ , ಕೆಳಗೆ ಹರಿಯುತ್ತಿರುವ ನೀರಿನಲ್ಲಿ  ಅಪ್ಪನ  ಆತ್ಮ ಮನ ದೇಹಗಳು ಬೆರೆತು ಹೋಗಿವೆ. ನಾನು ಅಲ್ಲಿಯೆ ಸೇರಿಬಿಡಬೇಕು ಈ ಜೀವನವನ್ನು ಕೊನೆಮುಟ್ಟಿಸಿಬಿಡಬೇಕು. ಈಗ ನೋಡುತ್ತಿರುವ ಸೂರ್ಯಾಸ್ತವೆ ನನ್ನ ಜೀವನದ ಕಡೆಯ ಸೂರ್ಯಾಸ್ತವಾಗಲಿ ಅಂದುಕೊಂಡ ಶಶಿ.

ಅವನ ಕಣ್ಣುಗಳು ಸೂರ್ಯನನ್ನೆ ದಿಟ್ಟಿಸುತ್ತಿರಲು ಮತ್ತೇನು ಕಾಣದಾಯಿತು. ಮನಸ್ಸು ಕುಸಿದುಹೋಗಿ ಶೂನ್ಯವನ್ನು ತಲುಪಿತು. ಮತ್ತೇನು ತುಂಬಿ ಹರಿಯುತ್ತಿರುವ ರುದ್ರೆ ತುಂಗೆಯ ಸುಳಿಯಲ್ಲಿ ಸೇರಿಹೋಗಲಿ ನನ್ನ ಜೀವ ದೇಹಗಳು. ಯಾರಿಗು ಬೇಡದ ನನಗು ಬೇಡದ ಈ ಜೀವನ ಕೊನೆಗಾಣಲಿ. ಕೈಯಲ್ಲಿ ಹಿಡಿದಿದ್ದ ಸೇತುವೆಯ ಮೇಲಿನ ಹಿಡಿತ ಬಿಗಿಯಾಯ್ತು, ಕಾಲುಗಳು ನಿದಾನವಾಗಿ ನೆಲದಿಂದ ಮೇಲೇಳುತ್ತಿವೆ, ಕಣ್ಣಲ್ಲಿ ಮುಳುಗುಸೂರ್ಯನ ಕೆಂಪುವರ್ಣ ತುಂಬಿದೆ....ಎಲ್ಲ ಮುಗಿಯಿತು...ಅಂದುಕೊಂಡ
.....
...
ಬಲಗಡೆಯ ಹೆಗಲ ಮೇಲೆ ಯಾವುದೊ ಒತ್ತಡ ಬಿದ್ದಂತೆ ಅನುಭವವಾಯಿತು, ಮೃದುವಾದ ಸ್ಪರ್ಶ , "ದೇವಸ್ಥಾನಕ್ಕೆ ಹೋಗಲಿಲ್ಲವೆ ಇಲ್ಲಿ ಏಕಪ್ಪ ನಿಂತಿದ್ದೀಯ" , ಮನ ಒಲೈಸುವ ಮದುರ ನುಡಿ. ನಿದಾನವಾಗಿ ಕಣ್ಣು ತೆರೆದ. ಎದುರಿಗೆ ಯಾರೊ ನಿಂತಿದ್ದಾರೆ. ಯಾರೊ ಹೆಂಗಸು, "ಏಕೆ ಇಲ್ಲಿ ಒಬ್ಬನೆ ನಿಂತೆ, ದೇವಾಲಯಕ್ಕೆ ಹೋಗಲಿಲ್ಲವೆ".  ಶಶಿ ಉತ್ತರ ಕೊಡಲಿಲ್ಲ ಯಾರೀಕೆ ಎನ್ನುತ್ತ ದಿಟ್ಟಿಸಿದ. ತಕ್ಷಣ ನೆನಪಿಗೆ ಬಂದಿತು! , ಬೆಳಗ್ಗೆ ನನ್ನ ಜೊತೆ ರೂಮು ಪಡೆದವರು, ಏನು ಉತ್ತರ ಕೊಡಲು ತೋಚದೆ ಆಕೆಯನ್ನು ದೃಷ್ಟಿ ಶೂನ್ಯನಾಗಿ ಆಕೆಯನ್ನು ದಿಟ್ಟಿಸಿದ.  ಸಣ್ಣ ಮುಗುಳ್ನಗು ಆಕೆಯ ಮುಖವನ್ನು ತುಂಬಿತು. ಸೂರ್ಯನ ಕಡೆಯ ಕಿರಣಗಳು ಅವಳ ಮುಖದ ಮೇಲೆ ಬಿದ್ದು ಅವಳ ಮುಖದ ಸೊಭಗನ್ನು ನೂರ್ಮಡಿ ಹೆಚ್ಚಿಸಿತ್ತು. " ನಡೆ  ದೇವರ ದರ್ಶನ ಪಡೆಯುವಿಯಂತೆ " ಆಕೆಯ ದ್ವನಿಯಲ್ಲಿದ್ದ ಅಗೋಚರ ಅಪ್ಪಣೆಯ ದ್ವನಿಗೆ ಎದುರಾಡಲು ತೋಚದೆ ನಿದಾನಕ್ಕೆ ಅವಳ ಹಿಂದೆ ಹೊರಟ ಶಶಿ.

***************************************  ೪

ದೇವಾಲಯದ ಬಾಗಿಲವರೆಗು ಬಂದ ಆಕೆ "ನೀನು  ಹೋಗಿ ದೇವಿಯ ದರ್ಶನ ಮಾಡಿ ಬಾ, ನಂತರ ಊಟ ಮಾಡಿ ಊರಿಗೆ ಹೊರಡಲು ಅನುಕೂಲವಾಗುತ್ತೆ, ನನಗೆ ಇನ್ನು ರೂಮಿನ ಅವಶ್ಯಕತೆಯಿಲ್ಲ ನಾನು ಹೊರಡುವಳೆ, ಹಿಡಿ" ಎಂದು ರೂಮಿನ ಕೀಲಿಯನ್ನು ಅವನಿಗೆ ನೀಡಿದರು.. ಅವಳ ಮುಖ ನೋಡಿದ ಶಶಿ , ಆಕೆ  " ನಾನಿಲ್ಲಿಯೆ ಇರುತ್ತೇನೆ ನೀನು ಒಳ ಹೋಗಿ ದೇವರ ದರ್ಶನ ಮಾಡಿ ಬಾ" ಎಂದರು.. ನಿದಾನವಾಗಿ ಒಳಬಂದ ಶಶಿ. ದೇವಾಲಯದ ಒಳ ಅಂಗಳ ಅವನ ಕಣ್ಣುಮನಸನ್ನು ತುಂಬಿತು. ಹಳೆಯ ದೇವಾಲಯ. ದೇವಿಯ ವಿಗ್ರಹದ ಕಾಣುವಂತೆ ಮುಂದೆ ನಿಂತ. ಒಳಗೆ ಕುಂಕುಮಾರ್ಚನೆ ನಡೆದಿತ್ತು. ಅರ್ಚಕರು ಮಂಗಳಾರತಿ ತಂದು ಕೊಟ್ಟರು, ತೆಗೆದುಕೊಂಡ, ಅವರು ಕೊಟ್ಟ ಪ್ರಸಾದ ಕುಂಕುಮ ತೆಗೆದುಕೊಂಡು ನಮಸ್ಕರಿಸಿ,ಒಳಗಿನ ಪ್ರಾಂಗಣದಲ್ಲಿ ಸುತ್ತು ಬಂದ. ತುಂಬಾ ಹಳೆಯ ದೇವಾಲಯ ಅನ್ನಿಸಿತು ಅವನಿಗೆ. ಪುನಃ ಮುಂದೆ ಬಂದು ಶಾರದದೇವಿ ಕಾಣುವಂತೆ ಕಂಬಕ್ಕೆ ಒರಗಿ ಕುಳಿತ. ಕಣ್ಣುಮುಚ್ಚಿದ.
ಯಾರೊ ಒಬ್ಬಾಕೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು ಶಾಸ್ರ್ತೀಯ ಗಾಯನ "ನಮ್ಮಮ್ಮ ಶಾರದೆ...." .ಬೆಳಗಿನಿಂದ ಆದ ಆಯಾಸಕ್ಕೊ ಆಕೆಯ ಹಾಡಿನಲ್ಲಿದ್ದ ಮಾಧುರ್ಯಕ್ಕೊ, ದೇವಾಲಯದ ವಾತವರಣವೊ,ಶಶಿಯ ಕಣ್ಣು ಎಳೆಯುತ್ತಿತ್ತು ಅವನ ಮನಸ್ಸು ಏಕೊ ಹಗುರವಾಗಿ ಮನದ ದುಗುಡವೆಲ್ಲೆ ಕರಗಿ ನೀರಾದಂತೆ ಭಾವ. ದೇಹ ಮನಸ್ಸುಗಳನ್ನೆಲ್ಲ ತುಂಬಿದ್ದ ನೋವು ತನ್ನನ್ನ ಬಿಟ್ಟು ಹೊರಟುಹೋಯಿತೇನೊ ಅನ್ನುವ ಭಾವ ಮನಸ್ಸು ತುಂಬಿತು. ಮತ್ತೊಮ್ಮೆ ನಮಸ್ಕರಿಸಿ ಹೊರಬಂದ.
ಈಗ ಇಲ್ಲಿದ್ದು ಇನ್ನೇನು ಮಾಡುವುದು, ಹೊರಟುಬಿಡೋದು ಅಷ್ಟೆ, ಸುತ್ತಲ್ಲು ದಿಟ್ಟಿಸಿದ. ಎಲ್ಲಿಯು ಆಕೆಯ ಸುಳಿವಿಲ್ಲ. ಹೊರಬಂದು ಹತ್ತಿರದ ಹೋಟೆಲಿನಲ್ಲಿ ಊಟ ಮುಗಿಸಿ ರೂಮಿಗೆ ಹೋದ. ತಣ್ಣನೆಯ ನೀರಿನಲ್ಲಿ ಮುಖ ತೊಳೆದು ಬ್ಯಾಗಿನಲ್ಲಿ ಬಟ್ಟೆಯಲ್ಲ ತುರುಕಿ ಸಿದ್ದನಾಗಿ,ಸಮಯ ನೋಡಿದ ರಾತ್ರಿಯ ಒಂಬತ್ತು ಗಂಟೆಯಾಗಿತ್ತು. ರೂಮಿನ ಕೀಲಿಯನ್ನು ಮೇಟಿಯನ್ನು ಹುಡುಕಿ ಕೊಟ್ಟು , ಕೆಳಗೆ ಬಂದ. ರಸ್ತೆಗೆ ಬರುವಾಗಲೆ ಬೆಂಗಳೂರಿಗೆ ಹೋಗುವ ಬಸ್ಸು ಬಂದಿತು, ನೋಡೋಣ ಅಂತ ಕೈಹಿಡಿದರೆ, ಅವನ ಅದೃಷ್ಟ ಬಸ್ಸು ಅಲ್ಲಿಯೆ ನಿಲ್ಲಿಸಿದ ಡ್ರೈವರ್. ಬಸ್ಸನ್ನು ಹತ್ತಿ ಟಿಕೆಟ್ ಪಡೆದು ಕಿಟಕಿಯ ಪಕ್ಕದ ಖಾಲಿಯಿದ್ದ ಸೀಟನ್ನು ಆರಿಸಿ ಕುಳಿತ. ಬಸ್ಸು ಪುನಃ ದೇವಾಲಯದ ಮುಂದೆ ಬಂದಿತು. ಕಿಟಕಿ ಯಿಂದ ದೇವಾಲವನ್ನು ದಿಟ್ಟಿಸಿದ. ದೇವಾಲಯದ ಹೆಬ್ಬಾಗಿಲಿನ ಮುಂದೆ, ನಿಂತಿದ್ದಾರೆ, ಯಾರಾಕೆ "ಹೌದು ನನ್ನ ಜೊತೆ ಇದ್ದವರೆ" ಅಂದುಕೊಂಡ. ಆದರೆ ಅವರು ಯಾರು? , ನಾನು ಅವರ ಹೆಸರು ಕೇಳಲಿಲ್ಲವಲ್ಲ, ಅಷ್ಟೆ ಏಕೆ ಅವರ ಹತ್ತಿರ ಒಂದೆ ಒಂದು ಮಾತನ್ನು ಆಡಲಿಲ್ಲವೆ ಅಂತ ನೆನಪಿಗೆ ಬಂದಿತು. ಬಸ್ಸು ಮುಂದೆ ಹೊರಟಂತೆ, ತಲೆ ಹಿಂದೆ ಒರಗಿಸಿ ಕಣ್ಣು ಮುಚ್ಚಿದ ಶಶಿ. ಮನದಲ್ಲಿ ಅದೇ ಪ್ರಶ್ನೆ, ಯಾರಿರಬಹುದು ಆಕೆ..? , ನಿಧಾನಕ್ಕೆ ನಿದ್ದೆಗೆ ಜಾರಿದ ಶಶಿ.
********************************** ೫

3 comments:

  1. ನಮಸ್ತೆ, ಪಾರ್ಥರೇ. ಓದುತ್ತಿದ್ದಂತೆ ಶೃಂಗೇರಿಯ ಘಟನೆಯ ಉಲ್ಲೇಖ ಹಿಂದೊಮ್ಮೆ ಓದಿದ್ದಂತೆ ಭಾಸವಾಯಿತು. ಮದುವೆಯ ಪ್ರಸ್ತಾಪದ ಹಂತದಲ್ಲೇ ಮುರಿದುಹೋದದ್ದು ಒಳ್ಳೆಯದಾಯಿತು. ಮುಂದುವರೆದಿದ್ದರೆ ನಿಜ ಸರ್ಪ ಸುತ್ತಿಕೊಳ್ಳುತ್ತಿತ್ತೇನೋ! ಸುಂದರ ಕಥೆ! ಧನ್ಯವಾದ.

    ReplyDelete
  2. ಕಥೆ ಹಾಗೂ ಹೇಳುವ ರೀತಿ ತುಂಬಾ ಚೆನ್ನಾಗಿದೆ, ಧನ್ಯವಾದಗಳು - ರಾಘವೇಂದ್ರ ಪುರಾಣಿಕ್

    ReplyDelete
  3. ವಂದನೆಗಳು ತಮ್ಮ ಪ್ರತಿಕ್ರಿಯೆಗೆ ಹಾಗು ಈ ಬ್ಲಾಗಿಗೆ ಸ್ವಾಗತ

    ReplyDelete

enter your comments please