Showing posts with label ಸಣ್ಣಕತೆ. Show all posts
Showing posts with label ಸಣ್ಣಕತೆ. Show all posts

Monday, January 3, 2022

ನೋವಿಲ್ಲದ ಸಾವು

 

ಹೃಷಿಕೇಶ್ ಭಾರತದ ತುತ್ತ ತುದಿ ಹಿಮಾಲಯದ ಬುಡದಲ್ಲಿರುವ ಪುರಾತನ ಸ್ಥಳ. ಅನಾದಿಕಾಲದಿಂದಲೂ  ಋಷಿ ಮುನಿಗಳು ಅವದೂತರು ಸನ್ಯಾಸಿಗಳು ಅಘೋರಿಗಳು ಎನ್ನುತ್ತ ಅಧ್ಯಾತ್ಮದ ಲೋಕದಲ್ಲಿರುವ ಮನುಷ್ಯರ ಜೊತೆಗೆ ರಾಜಮಹಾರಾಜರನ್ನು ಜನಸಾಮಾನ್ಯರನ್ನು ಸೆಳೆದ ಸ್ಥಳ. ಸಾವಿರಾರು ವರ್ಷಗಳಿಂದ ಲಕ್ಷ ಲಕ್ಷ ಇಂತಹ ಜನರು ಪಾದ ಊರಿ ನಡೆದಾಡಿದ ಪುಣ್ಯಭೂಮಿ. 

ಒಂದಷ್ಟು ದಿನದಿಂದ ಅಲ್ಲೆ ಸುತ್ತಾಟ ನಡೆಸಿದ್ದವು. ಉತ್ತರದಲ್ಲಿ ಕರೆಯುವಂತೆ ಚಾರ್ ಧಾಮ್ ಯಾತ್ರ ಅಂದರೆ ಗಂಗೋತ್ರಿ ಯಮುನೋತ್ರಿ ಬದರಿನಾಥ  ಕೇದಾರನಾಥ ಯಾತ್ರೆ ಮುಗಿಸಿ ಹೃಷಿಕೇಶ್ ನಲ್ಲಿ ಒಂದಿಷ್ಟು ದಿನ ಇದ್ದೆವು. ಪರಮಾರ್ಥ ನಿಕೇತನ ಆಶ್ರಮ ದಲ್ಲಿ ನಾನು ಪತ್ನಿ ಮತ್ತೆ ನಾಲಕ್ಕು ಜನ ಬಿಡಾರ ಹೂಡಿದ್ದೆವು.


ಆ ಅರುಂಧತಿ ಗುಹೆಗಳ ಹತ್ತಿರ ಇದ್ದೆವು. ಎಲ್ಲರೂ ಸುತ್ತಾಡುತ್ತ ಇದ್ದರೆ ನನಗೇಕೊ ಸುಮ್ಮನೆ ಒಂದು ಕಡೆ ಕುಳಿತುಕೊಂಡು ಎದುರಿನ ಪ್ರಕೃತಿ ನೋಡುವ ಮನಸ್ಸು. 


"ನರಸಿಂಹರವರೆ ಹಾಗಿದ್ದರೆ ಒಂದು ಕೆಲಸ ಮಾಡಿ "


ಜೊತೆ ಇದ್ದ ಶಿವರಾಮು ನುಡಿದರು


"ನೀವು ಇಲ್ಲೆ ಕುಳಿತು ಬಿಡಿ ನಾವೆಲ್ಲ ಒಂದು ಸುತ್ತು ಹಾಕಿ ಪುನಃ ಇಲ್ಲಿಗೆ ಬರುವೆವು. ನಂತರ ಜೊತೆಯಲ್ಲಿ ಹೊರಡೋಣ ಆದೀತೆ" 


ನಾನು ಆಗಲಿ ಎಂದು ತಲೆ ಆಡಿಸಿದೆ. 


"ಏಕ್ರಿ ಆರೋಗ್ಯವಾಗಿದ್ದರಿ ತಾನೆ " ಪತ್ನಿ ಕುಸುಮ ಕಾಳಜಿ ತೋರಿದಳು. 


"ನಾನು ಆರಾಮವಾಗಿ ಇರುವೆ ಯಾವ ತೊಂದರೆ ಇಲ್ಲ. ಅದೇನೊ ಇಲ್ಲಿ ಒಬ್ಬನೆ ಕುಳಿತಿರಲು ಮನಸ್ಸಾಗುತ್ತ ಇದೆ. ನೀನು ಎಲ್ಲರ ಜೊತೆ ಹೊರಡು ಎಲ್ಲ ನೋಡಿ ವಾಪಸ್ ಹೋಗುವ ಮೊದಲು ಬನ್ನಿ ಇಲ್ಲಿಂದ ಹೊರಡೋಣ" 


ಕುಸುಮ ಸರಿ ಎಂದು ತಲೆ ಆಡಿಸಿದಳು. 


ಎಲ್ಲರೂ ಹೊರಟರು ಕನಿಷ್ಠ ಒಂದು ಗಂಟೆ ಏಕಾಂತಕ್ಕೆ ಸಿದ್ದನಾದೆ. 


ವಿಶಾಲವಾಗಿ ಹರಡಿಕೊಂಡ ಮರಗಳ ನಡುವೆ ಕುಳಿತುಕೊಳ್ಳಲು ಹಾಕಿರುವ ಕಲ್ಲಿನ ಆಸನಗಳು. ಸುಖವಾಗಿ ಕುಳಿತೆ. ಸುತ್ತಲಿನ ಪ್ರಕೃತಿ , ಹರಿವ ನದಿ. ಹಸಿರು ಬೆಟ್ಟ ಗುಡ್ಡಗಳು ಎಲ್ಲವೂ ವಿವರಣೆ ಮೀರಿದ ಸ್ವಾನುಭವ. ಮನಸ್ಸು ಪ್ರಶಾಂತ ವಾಗಿತ್ತು. ಯೋಚನೆಗಳು ತಮ್ಮ ಶೂನ್ಯ ಸ್ಥಿತಿ ತಲುಪಿದ್ದವು. ಸುಮಾರು ಅರ್ಧಗಂಟೆ ಕಳೆಯಿತೇನೊ ಎದುರಿಗೆ ಕಣ್ಣಳತೆಯ ದೂರದಲ್ಲಿ ಮರದ ಕೆಳಗೆ ಸಾಧು ಒಬ್ಬರು ಒಬ್ಬಂಟಿಯಾಗಿ ಕುಳಿತಿರುವುದು ಕಾಣಿಸಿತು. ಅವರು ಎತ್ತಲೋ ದೃಷ್ಟಿ ನೆಟ್ಟು ಕುಳಿತ್ತಿದ್ದರು ಅನ್ನಿಸುತ್ತದೆ. 


ಎದ್ದು ಹೋಗಿ ಅವರನ್ನು ಮಾತನಾಡಿಸಲೆ ಎನ್ನುವ ಯೋಚನೆ ಬಂದಿತು. ಛೇ ಬೇಡ ನನ್ನಂತೆ ಅವರು ಸಹ ಏಕಾಂತ ಬಯಸಿ ಕುಳಿತಿರುತ್ತಾರೆ. ನಾವು ಭಕ್ತಿ ಹಾಳು ಮೂಳು ಎಂದು ಹೋಗಿ ಮಾತನಾಡಿಸಿ ಅವರಿಗೆ ತೊಂದರೆ ಕೊಡುವುದು ಸರಿ ಅಲ್ಲ ಅನ್ನಿಸಿತು. 


ಎತ್ತಲೋ ನೋಡುತ್ತ ಕುಳಿತಿದ್ದವನು ಏಕೊ ಒಮ್ಮೆ ಅವರತ್ತ , ಆ ಸನ್ಯಾಸಿಯತ್ತ ತಿರುಗಿದೆ. ಅದೇ ಸಮಯಕ್ಕೆ ಅವರು ನನ್ನತ್ತ ತಿರುಗಿದರು. ಕ್ಷಣಕಾಲ ನೋಡಿದವರು 'ಹತ್ತಿರ ಬಾ' ಎನ್ನುವಂತೆ ಕೈ ಆಡಿಸಿ ಕರೆದರು. ್


"ಓಹೋ ಅವರೇ ಕರೆಯುತ್ತ ಇದ್ದಾರೆ ಹತ್ತಿರ ಹೋಗಿ ಮಾತನಾಡಿಸಿ ಬಂದರಾಯಿತು" 


ಎಂದು ಎದ್ದು ಹತ್ತಿರ ಹೋದೆ. 

"ಬಾ ಕುಳಿತುಕೋ "


ಹಿಂದೀ ಭಾಷೆ ಆಡುತ್ತ ಇರುವರು


ಅವರ ಎದುರು ಹೋಗಿ ಕುಳಿತೆ.


"ಎಲ್ಲಿಂದ ಬರುತ್ತ ಇದ್ದೀಯಾ? "


ಕೇಳಿದರು. 


"ದಕ್ಷಿಣ ಭಾರತ , ಬೆಂಗಳೂರಿನಿಂದ ಬಂದಿರುವೆನು."


"ಓಹೋ ಕನ್ನಡ , ಕನ್ನಡದವನು " ಸನ್ಯಾಸಿ ನಗೆ ಬೀರಿದರು


"ಹೌದು ಸ್ವಾಮಿ ಕನ್ನಡದವನು ಕರ್ನಾಟಕದಿಂದ ಬರುತ್ತ ಇರುವೆ."


"ಒಬ್ಬನೇ ಬಂದಿರುವೆಯಾ , ಸಂಸಾರವೆಲ್ಲಿ "


ಈಗ ಕನ್ನಡದಲ್ಲಿ ಕೇಳಿದ್ದರು ಅವರು.


"ಎಲ್ಲರೂ ಇರುವರು ಸುತ್ತಲೂ ಸುತ್ತಾಡಲು ಹೋಗಿರುವರು. ನಾನು ಒಬ್ಬನೇ ಕುಳಿತಿದ್ದೆ "


"ಹಾಗೊ ಸರಿ "


ಎಂದರು. 


ಮತ್ತೆ ಅನುಮಾನವಾಗಿ ಕೇಳಿದೆ 


"ಸ್ವಾಮಿ ತಾವು ಕನ್ನಡ ಬಾಷೆಯಲ್ಲಿ ಮಾತನಾಡುತ್ತ ಇರುವಿರಿ"  ಕೇಳಿದೆ


"ಹೌದು , ನನಗೆ ಕನ್ನಡ ಬರುತ್ತದೆ. ಹಿಂದೆ ಕರ್ನಾಟಕದಲ್ಲಿ ಹತ್ತು ವರ್ಷಗಳ ಕಾಲ ಇದ್ದೆ." ಆತ ನುಡಿದರು

"ತಾವು ಕರ್ನಾಟಕದಲ್ಲಿ ಇದ್ದಿರ ? "


ಆಶ್ಚರ್ಯದಿಂದ ಕೇಳಿದೆ.


"ಹೌದು , ಮೈಸೂರು ಪ್ರಾಂತ್ಯದ ಶೃಂಗೇರಿ ಹತ್ತಿರ , ಋಷ್ಯಶೃಂಗರ ತಪೋನೆಲದಲ್ಲಿ  ಕಾಡಿನಲ್ಲಿ ತಪ್ಪಸ್ಸು ಮಾಡಿಕೊಂಡಿದ್ದೆ. ಆಗ ಸ್ಥಳೀಯರ ಜೊತೆ ಸಂಪರ್ಕದಲ್ಲಿ ಇದ್ದೆ ಹಾಗಾಗಿ ಕನ್ನಡ ಬಾಷೆ ಕಲಿಯುವಂತೆ ಆಯಿತು."


"ಒಹೋ ಹೌದಾ ಗುರುಗಳೆ ಈಗ ತಿಳಿಯಿತು "


ಎಂದೆ. 


"ಅದೇನು ಎಲ್ಲರೂ ಸುತ್ತಾಡಲು ಹೋದರೆ ನೀನು ಒಬ್ಬ ಇಲ್ಲಿ ಕುಳಿತಿದ್ದು." 


ಕೇಳಿದರು ಆ ಸನ್ಯಾಸಿ. 


"ಹೀಗೆ ಅದೇನೊ ಒಬ್ಬನೇ ಕುಳಿತಿರಲು ಮನಸ್ಸಾಯಿತು ಅಷ್ಟೇ. ಹಾಗೆ ಕುಳಿತಿದ್ದೆ. "


"ನಿನ್ನ ಹೆಸರೇನು ? "  ಸನ್ಯಾಸಿ ನನ್ನನ್ನು ಕೇಳಿದರು


"ನರಸಿಂಹ ಎಂದು ನನ್ನ ಹೆಸರು ಗುರುಗಳೆ."


ಮತ್ತೆ ಎಂತದೊ ಮೌನ ನೆಲಸಿತು. 

"ನೀನು ಕೇಳಲು ಯಾವ ಪ್ರಶ್ನೆಯು ಇಲ್ಲವೇ? "


ಅವರು ಕೇಳಿದರು.

"ನನಗೆ ಅರ್ಥವಾಗಲಿಲ್ಲ 


ಗುರುಗಳೆ .. "


ಎನ್ನುತ್ತ ಅವರ ಮುಖ ನೋಡಿದೆ ,


ನಕ್ಕರು.

"ನಮ್ಮನ್ನು ಬೇಟಿ ಮಾಡುವ ಎಲ್ಲರೂ ಒಂದು ಪ್ರಶ್ನೆ ಸಮಸ್ಯೆ ಹೊತ್ತು ಬಂದವರು ಆಗಿರುವರು. ಹಣದ ಸಮಸ್ಯೆ ಆರೋಗ್ಯದ ಸಮಸ್ಯೆ ಸಂಸಾರದ ವಿಷಯ ಹೀಗೆ ಸಾಲು ಸಾಲು. ನಿನಗೆ ಕೇಳಲು ಯಾವ ಪ್ರಶ್ನೆಯೂ ಇಲ್ಲವೇ "

ಕುಚೋದ್ಯದ ನಗು ಅವರ ಮುಖದಲ್ಲಿ ಕಾಣಿಸಿತು.


ವಿಚಿತ್ರ ಅನ್ನಿಸಿತು. 


"ಪ್ರಶ್ನೆ ಕೇಳಲು ನಾನಾಗೆ ನಿಮ್ಮ ಬಳಿ ಬಂದವನಲ್ಲ. ನೀವಾಗೆ ಬಳಿ ಕರೆದಿರಿ 


ಎನ್ನುವ ಉತ್ತರ ಮನದಲ್ಲಿ ಮೂಡಿತು."


ಆದರೆ ಅದು ಉದ್ದಟತನ ಆಗಬಹುದು. ಸನ್ಯಾಸಿಗಳ ಹತ್ತಿರ ಹಾಗೆಲ್ಲ ಮಾತನಾಡಿದರೆ ಸರಿ ಆಗಲಾರದು ಅನ್ನಿಸಿತು.

"ಅಂತಹ ಪ್ರಶ್ನೆಗಳಿಲ್ಲ , ಗುರುಗಳೆ ಆದರೆ ನನ್ನದೇ ಆದ ಬೇರೆ ಪ್ರಶ್ನೆ ಇದೆ ಕೇಳಲೇ "


ಎಂದೆ

"ಏನದು ಕೇಳು , ಉತ್ತರಿಸುವೆನು , ಪ್ರಪಂಚದಲ್ಲಿ ಉತ್ತರಿಸಲಾಗದ ಪ್ರಶ್ನೆ ಯಾವುದು ಇದೆ."


ಎಂದರು  ಆ ಸನ್ಯಾಸಿ

"ಗುರುಗಳೆ ನೋವಿಲ್ಲದ ಸಾವನ್ನು ಪಡೆಯುವುದು ಹೇಗೆ "


ನಾನು ಕೇಳಿದೆ

ಸನ್ಯಾಸಿ ಮೌನವಾದರು , ಮತ್ತೆ ಹೇಳಿದರು.

"ಅಂದರೆ ನೀನು ಇಚ್ಚಾಮರಣದ ಬಗ್ಗೆ ಕೇಳುತ್ತ ಇರುವೆಯ. ಅಂದರೆ ಯೋಗದ ಮೂಲಕ ಪ್ರಾಣತ್ಯಾಗ ಮಾಡುವ ಬಗ್ಗೆ "

"ಅಂದರೆ ಏನು ಗುರುಗಳೆ " ಪ್ರಶ್ನಿಸಿದೆ

"ಯೋಗದ ಮೂಲಕ ಕೆಲವೇ ಜನ ಸ್ವಯಂ ಇಚ್ಛೆಯಿಂದ ಪ್ರಾಣತ್ಯಾಗ ಮಾಡಬಲ್ಲರು. ಪ್ರಾಣವಾಯುವನ್ನು ಒಳಗೆ ಸ್ತಂಭನ ಗೊಳಿಸಿ. ಸಹಸ್ರಾರದ ಮೂಲಕ ಪ್ರಾಣ ತ್ಯಾಗ ಮಾಡುವರು. ಅದು ಸನ್ಯಾಸಿಗಳು, ಹಠಯೋಗಿಗಳು  ಸಾಧಕರು ಮಾಡಲು ಸಾಧ್ಯ ಅನ್ನುವರು. ಅಂತಹವರ ನೆತ್ತಿಯ ಸೂಕ್ಷ್ಮ ಭಾಗ ಒಡೆದು ಚಿಟಿಕೆ ರಕ್ತ ಚಿಮ್ಮುತ್ತದೆ ಎಂದು ಕೇಳಿರುವೆ."

ಸನ್ಯಾಸಿ ವಿವರವಾಗಿ ಹೇಳುತ್ತಿದ್ದರು

"ಇಲ್ಲ ಅದನ್ನಲ್ಲ ನಾನು ಕೇಳುತ್ತ ಇರುವುದು. ಅದೇ ರೀತಿಯಲ್ಲಿ ಆದರೆ ಬೇರೆ."  ಹೇಳೀದೆ

"ಅಂದರೆ ಏನು ವಿವರವಾಗಿ ಹೇಳು" ಸನ್ಯಾಸಿ ಹೇಳಿದರು

"ಗುರುಗಳೆ ನಾನು ಹೆಚ್ಚು ತಿಳಿದಿಲ್ಲ. ಆದರೆ ನಾನು ಕೇಳುತ್ತ ಇರುವುದು ಬೇರೆ. ದಿನನಿತ್ಯ ಸಾವುಗಳ ಬಗ್ಗೆ ಕೇಳುತ್ತ ಇರುವೆವು. ಹೃದಯ ಸ್ತಂಭನ, ಜ್ವರ ಖಾಯಿಲೆಗಳು ಅಪಘಾತ ಹೀಗೆ .ಆದರೆ ಎಲ್ಲ ಸಾವುಗಳು ಸಹ ನೋವನ್ನು ಒಳಗೊಂಡಿದೆ. ನಾನು ಕೇವಲ ಉಸಿರಾಟ ನಿಲ್ಲಿಸಿ ಸಾಯುವ ಬಗ್ಗೆ. ಅಂದರೆ ಉಸಿರಾಡುತ್ತ ಇರುವೆವು. ಒಮ್ಮೆ ಒಳಗೆ ಉಸಿರು ಒಳಗೆ ತೆಗೆದುಕೊಂಡು. ಮತ್ತೆ ಆ ಉಸಿರನ್ನು ಹೊರಗೆ ಬಿಟ್ಟರೆ ಆಯಿತು. ಮತ್ತೆ ಒಳಗೆ ಉಸಿರು ತೆಗೆದು ಕೊಳ್ಳಬಾರದು. ಅಂತಹ ಸಾವು."


ಸನ್ಯಾಸಿ ನಿಧಾನವಾಗಿ ಹೇಳಿದರು. 


"ಏಕಿಲ್ಲ , ಎಲ್ಲ ಸಹಜ ಸಾವಿನಲ್ಲಿ ಅದೇ ತಾನೆ ನಡೆಯೋದು. ಉಸಿರು ಹೊರಹಾಕುವುದು ಕಡೆಯ ಕ್ರಿಯೆ." 

"ಹಾಗಲ್ಲ ಗುರುಗಳೆ ನೀವು ಹೇಳುತ್ತ ಇರುವುದು ಬೇರೆ. ದೇಹದ ಎಲ್ಲ ಅಂಗಗಳು ತಮ್ಮ ಕೆಲಸ ನಿಲ್ಲಿಸಿ ಕಡೆಯದಾಗಿ ಉಸಿರು ನಿಲ್ಲುವುದು. ಆದರೆ ನಾನು ಕೇಳಿದ್ದು ಅದಲ್ಲ. ಆರೋಗ್ಯವಾಗಿರುವ ಮನುಷ್ಯನೊಬ್ಬ ತೀರ ಸಹಜವಾಗಿ , ಅಂದರೆ ಒಮ್ಮೆ ಉಸಿರು ಎಳೆದು ಹೊರಗೆ ಬಿಟ್ಟನಂತರ ಪುನಃ ಉಸಿರು ಒಳತೆಗೆದುಕೊಳ್ಳದೆ ನಿರಾಕರಣೆ ಮಾಡಲು ಸಾದ್ಯವೆ , ಯಾವ ನೋವು ಇಲ್ಲದೆ ತೀರ ಸಹಜವಾಗಿ."

ಸನ್ಯಾಸಿ ಯಾವ ಮಾತು ಆಡದೆ ಮೌನವಾಗಿ ಕುಳಿತರು. ಕೆಲ ಕಾಲ ಕಳೆದಂತೆ ಕೇಳಿದೆ


"ಕ್ಷಮಿಸಿ ಸ್ವಾಮಿ ನಿಮಗೆ ಪ್ರಶ್ನೆ ಇಷ್ಟವಾಗಲಿಲ್ಲ ಅನ್ನಿಸುತ್ತದೆ"


ನನ್ನ ಮಾತನ್ನು ಅವರು ಪರಿಗಣಿಸಲಿಲ್ಲ.


 ನಿಧಾನವಾಗಿ ಸ್ವಗತ ಎನ್ನುವಂತೆ ನುಡಿದರು.


"ಇದೇ ಸ್ಥಳದಲ್ಲಿ, ಇದೇ ಮರದ ಕೆಳಗೆ ನಾನು ಅವರಲ್ಲಿ ಇದೇ ಪ್ರಶ್ನೆ ಕೇಳಿದ್ದೆ." 


ಸನ್ಯಾಸಿ ಗೊಣಗುತ್ತ ಇದ್ದರು


"ಯಾರಲ್ಲಿ ಗುರುಗಳೆ ? "


ನಾನು ಕೇಳಿದೆ.

"ನನ್ನ ಗುರುಗಳ ಹತ್ತಿರ ಸುಮಾರು ಅರವತ್ತು ವರ್ಷಗಳ ಕೆಳಗೆ ಇದೇ ಪ್ರಶ್ನೆ ಕೇಳಿದ್ದೆ ನೋವಿಲ್ಲದೆ ಸಹಜ ಸಾವು ಪಡೆಯುವುದು ಹೇಗೆ."


ನಾನು ಮೌನವಾಗಿದ್ದೆ ಸನ್ಯಾಸಿಗಳು ಮುಂದುವರೆಸಿದರು. 


"ನನ್ನ ವಯಸ್ಸು ಎಷ್ಟಿರಬಹುದು. ನಿನಗೆ ತಿಳಿಯುವುದೆ "


ಅವರ ಮುಖ ನೋಡುತ್ತ , ಕರಿ ಬಿಳಿ ಮಿಶ್ರಿತ ಗಡ್ಡ ನೋಡುತ್ತ , ಕಣ್ಣುಗಳ ಪರೀಕ್ಷಿಸಿ ನುಡಿದೆ

"ಅರವತ್ತರ ಸುತ್ತ ಮುತ್ತ ಇರಬಹುದೆ ಗುರುಗಳೆ"


ಅವರ ದ್ವನಿಯಲ್ಲಿ ಈಗ ಹೆಮ್ಮೆ ಅಥವಾ ಅಹಂಕಾರ ಇರಲಿಲ್ಲ 

"ಇಲ್ಲ ನೀವು ಊಹಿಸಲಾರಿ.ಸಾಧುಗಳು ತಮ್ಮ ವಯಸ್ಸನ್ನು ಬಹಿರಂಗ ಗೊಳಿಸುವದಿಲ್ಲ. ಬಹಳ ವರ್ಷಗಳ ಕೆಳಗೆ ನನ್ನ  ವಯಸ್ಸು ನೂರು ದಾಟಿತು ನಂತರ ದಿನ ವರ್ಷ ಎಣಿಸುವುದು ನಿಲ್ಲಿಸಿದೆ. ನನ್ನ ಗುರುಗಳನ್ನು ಇದೇ ಮರದ ಕೆಳಗೆ ಹಲವು ಬಾರಿ ಬೇಟಿ ಮಾಡಿರುವೆ. ಅದೇ ನೆನಪಲ್ಲಿ ಇಲ್ಲಿ ಬಂದು ಕುಳಿತುಕೊಳ್ಳುವ ಅಭ್ಯಾಸ ನನ್ನದು. ವಿಚಿತ್ರ ನೋಡು ನಾನು ಅವರಲ್ಲಿ ಕೇಳಿದ್ದ ಪ್ರಶ್ನೆಯನ್ನೆ ನೀನು ಸಹ ಕೇಳಿರುವೆ." 

ಇನ್ನು ನನ್ನ ಪ್ರಶ್ನೆಗೆ ಸನ್ಯಾಸಿ ಉತ್ತರ ನೀಡಿರಲಿಲ್ಲ, ಹಾಗಾಗಿ ಅವರ ಮಾತು ಸಹನೆಯಿಂದ ಕೇಳುತ್ತ ಇದ್ದೆ. 

"ನಿನ್ನ ಪ್ರಶ್ನೆಗೆ ಸರಿಯಾದ ಉತ್ತರ ಹೌದು ಸಾಧ್ಯವಿದೆ ಎಂದು. ನಮ್ಮ ಉಸಿರಾಟವನ್ನು ನಾಲಕ್ಕು ಭಾಗ ಮಾಡಬಹುದು. ಉಚ್ವಾಸ ನಿಶ್ವಾಸಗಳನ್ನು  ಪೂರಕ ರೇಚಕ ಎನ್ನುವರು. ಹಾಗೆ ಪೂರಕದ ನಂತರ ಉಸಿರು ಹಿಡಿಯುವುದನ್ನು ಅಂತರ ಕುಂಭಕ , ರೇಚಕದ ನಂತರದ ಉಸಿರು ಹಿಡಿಯುವುದು ಬಾಹ್ಯ ಕುಂಭಕ ಅಥವಾ ಬಹಿರ್ ಕುಂಭಕ. ಎನ್ನುವರು. ಅಂತರ ಕುಂಭಕದಲ್ಲಿ ಉಸಿರನ್ನು ಒಳಗೆ ನಿಲ್ಲಿಸುವ ಪರಿಣಾಮ ಶ್ವಾಸಕೋಶ ಹೃದಯದ ಮೇಲೆ ಆಗುವುದು. ರಕ್ತದಲ್ಲಿ ಇಂಗಾಲದ ಅಂಶ ಹೆಚ್ಚುವುದು. ಉಸಿರನ್ನು ಶ್ವಾಸಕೋಶದಿಂದ ನೆತ್ತಿಯತ್ತ ಏರಿಸಿ , ಪ್ರಾಣವಿಡುವ ಕ್ರಿಯೆ ಯೋಗದಲ್ಲಿದೆ. ಆದರೆ ಅದರ ವಿಲೋಮ ಕ್ರಿಯೆ ಮತ್ತೊಂದು ಇದೆ ಅದನ್ನು ಗುರುಗಳು ನನಗೆ ಭೋದಿಸಿದ್ದರು ಅದನ್ನು ನೀನು ಈಗ ಕೇಳುತ್ತ ಇರುವೆ " 

ನನಗೀಗ ಯೋಚನೆ ಆಯಿತು. ಯೋಗಿಗಳ ಬಳಿ ಆಗಲಿ , ಅವಧೂತರ ಬಳಿ ಆಗಲಿ ನಾವಾಗೆ ಏನನ್ನು ಬೇಡಬಾರದು ಅನ್ನುವರು. ಇಲ್ಲಿ ನಾನೀಗ ಕೇಳಿದ ಕ್ರಮ ಸರಿ ಇದೆಯೆ , ಅಥವಾ ಕೋಪಗೊಳ್ಳುವರೆ. ಇರಲಾರದು ಏಕೆಂದರೆ ಅವರಾಗೆ ನನ್ನನ್ನು ಕರೆದು ಪ್ರಶ್ನೆ ಕೇಳಲು ಕೇಳಿದರು. ಹಾಗಾಗಿ ಕೋಪದ ಪ್ರಶ್ನೆ ಉದ್ಭವ ಆಗದು.


ನನ್ನ ಮೌನ ನೋಡುತ್ತ ಅವರು ಮುಂದುವರೆದರು. 

"ಆದರೆ ಗುರುಗಳು ನನಗೆ ಬೋಧಿಸಿರುವ ಈ ಕ್ರಿಯೆ ಅಥವಾ  ಯೋಗದಲ್ಲಿ ಒಂದು ತಾಂತ್ರಿಕ ಸಮಸ್ಯೆ ಇದೆ. ಯಾವುದೇ ಯೋಗವೊ ಮಂತ್ರವೋ ಗುರುಗಳು ಅದನ್ನು ಬೋಧಿಸಿದ ನಂತರದಲ್ಲಿ ಅದನ್ನು ನಾವು ಅನುಷ್ಠಾನಗೊಳಿಸಿ , ಸ್ವಾನುಭವದ ನಂತರ ಅದನ್ನು ಮತ್ತೊಬ್ಬರಿಗೆ ಬೋಧಿಸುವ ಯೋಗ್ಯತೆ ಬರುತ್ತದೆ. ಆದರೆ ಈ ಪ್ರಸಂಗದಲ್ಲಿ ನಾನು ಅದನ್ನು ಅನುಷ್ಠಾನಕ್ಕೆ ತಂದರೆ ನಿನಗೆ ಬೋಧಿಸಲು ನಾನೆ ಇರುವದಿಲ್ಲ. ನಾನು ಪ್ರಯತ್ನಪಟ್ಟಿಲ್ಲ ಎಂದಲ್ಲ ಆದರೆ ಅದೇಕೊ ಎರಡು ಪ್ರಯತ್ನಗಳು ಸಹ ನಾನು ಗುರಿ ತಲುಪಲು ಆಗಲಿಲ್ಲ. ಆದರೆ ನಾನು ಇದನ್ನು ನಿನಗೆ ಬೋಧಿಸಬಲ್ಲೆ , ನೀನು ಅದನ್ನು ಪಡೆಯಲು ಸಿದ್ದ ಇರುವೆಯ? "

ನಾನು ಈಗ ಯೋಚಿಸಿದೆ. ನಾನು ಅವರಲ್ಲಿ ಕೇಳಿದೆನಾದರು ಏನು. ನೋವಿಲ್ಲದ ಸಾವು ಹೇಗೆ ಎನ್ನುವ ಪ್ರಶ್ನೆ. ಆದರೆ ಅವರು ನನಗೆ ಬೋಧನೆ ಮಾಡಲು ಸಿದ್ದ ಎನ್ನುತ್ತ ಇರುವರು. ಏನು ಹೇಳುವುದು. ಅವರೇ ಹೇಳುತ್ತ ಇರುವರು ಎರಡು ಪ್ರಯತ್ನದಲ್ಲೂ ಸಹ ಗುರಿ ತಲುಪಲಿಲ್ಲ ಅನ್ನುವಾಗ ನಾನು ಹೆದರುವದರಲ್ಲಿ ಅರ್ಥವಿಲ್ಲ. ಅಷ್ಟಕ್ಕು ಅವರು ಅದಕ್ಕೆ ಸಂಬಂಧಿಸಿದ ಮಂತ್ರವೊ ಮತ್ತೇನೊ ಹೇಳುವರು ನೋಡೋಣ ಎಂದುಕೊಂಡು ಮೌನವಾಗಿ ತಲೆ ಆಡಿಸಿದೆ. 


ನನ್ನ ಮುಖವನ್ನೆ ದೀರ್ಘವಾಗಿ ನೋಡಿದರು. 


"ಈಗ ನಿನ್ನ ಪ್ರಶ್ನೆಗೆ ಉತ್ತರಿಸುವೆ, ಬೋಧನೆಯ ರೂಪದಲ್ಲಿ. ಕೇಳಿಸಿಕೊ. 


ಮೊದಲು ಪದ್ಮಾಸನದಲ್ಲಿ ವಿರಾಮವಾಗಿ ಕುಳಿತಿಕೊ"


ನಾನು ಅದೇನೊ ಅವರು ಹೇಳಿದ ಮಾತನ್ನು ಅನುಸರಿಸುತ್ತ ಇದ್ದೆ.


"ವಿರಾಮವಾಗಿ ಕುಳಿತು ಮನಸ್ಸು ಪ್ರಸನ್ನವಾಗಿರಲಿ. ಯಾವುದೇ ಸಮಸ್ಯೆಗಳಾಗಲಿ ಯೋಚನೆಗಳು ಆಗಲಿ ಮಾಡದೆ. ಮನಸ್ಸು ಸುಖಾನುಭಾವದಲ್ಲಿ ಇರಲಿ. 


ಈಗ ಸಹಜವಾಗಿ ಉಸಿರಾಡು. ದೀರ್ಘವಾಗಿ ಒಮ್ಮೆ ಉಸಿರು ತೆಗೆದುಕೊ , ಹಾಗೆ ಉಸಿರನ್ನು ನಿಧಾನವಾಗಿ ಹೊರಗೆ ಬಿಡು. ಹಾಗೆ ಒಂದೆರಡು ಬಾರಿ ಪುನರಾವರ್ತನೆ ಮಾಡು. 


ಈಗ ಪ್ರಾಣಾಯಾಮ ಪ್ರಾರಂಭ ಆಗಲಿ. ನಿಧಾನವಾಗಿ ಉಸಿರು ಒಳಗೆ ತಗೊ , 


ಉಸಿರು ನಿಲ್ಲಿಸು, 


ಉಸಿರು ಹೊರಗೆ ಬಿಡು. 


ಉಸಿರು ನಿಲ್ಲಿಸು 


ಮತ್ತೆ ಒಳಗೆ ತೆಗೆದುಕೊ 


ನಿಲ್ಲಿಸು 

ಈಗ ನಿಧಾನವಾಗಿ ಉಸಿರು ಹೊರಗೆ ಬಿಡು


ಉಸಿರು ನಿಲ್ಲಿಸು.


ಹಾಗೆ ಇರಲಿ. 


ಒಂದೆರಡು ಕ್ಷಣ ಅಷ್ಟೇ ಒಳಗಿನಿಂದ ಒತ್ತಡ ಬರುತ್ತದೆ ಉಸಿರಿಗಾಗಿ , 


ಆ ಒತ್ತಡ ತಡೆದುಕೊ.


ಮನಸ್ಸನ್ನು ಆ ಒತ್ತಡದಿಂದ ದೂರ ಸರಿಸು


ನೀನು ದಿನ ನಿತ್ಯ ಆರಾಧಿಸುವ ದೇವಿಯಲ್ಲಿ ಮನಸ್ಸನ್ನು ಸ್ಥಿರಗೊಳಿಸು. 


ಉಸಿರಿನ ಸ್ತಂಭನ ಹಾಗೆ ಇರಲಿ ಬಾಹ್ಯ ಕುಂಭಕದಲ್ಲಿ.


ಈಗ ಮಾನಸಿಕ ಆರಾಧನೆ ಪ್ರಾರಂಭ ಆಗಲಿ 


ನಿನಗೆ ಗೊತ್ತಿರುವ ಮೂಲಾಕ್ಷರಗಳ ಪಠಣ ಆರಂಭ ಆಗಲಿ.


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಮನಸ್ಸು ದೇವಿಯ ಪಾದದಲ್ಲಿ ಸ್ಥಿರಗೊಳ್ಳುತ್ತ ಇರುವಂತೆ ಮನಸ್ಸು ಎಲ್ಲದರಿಂದ ವಿಮುಕ್ತಿ.

ಈಗ ನಿನಗೆ ಗುಪ್ತ ಮಂತ್ರಾಕ್ಷರ ಬೋಧಿಸುವೆ 


ಅದನ್ನು ಮನದಲ್ಲಿ ಮೂರು ಬಾರಿ ಪಠಿಸು.


"......................"


"......................."


"......................."

ಉಸಿರಾಟದ ಜೊತೆ ಹೃದಯ ಸಂಬಂಧಿಸಿದ ಕ್ರಿಯೆ, ಹಾಗಾಗಿ ಹೃದಯ ಬಡಿತ, 


ನಾಡಿ ಬಡಿತ ಕ್ಷೀಣ ಆಗುತ್ತ ಸಾಗುವುದು. 

ಕ್ರಮೇಣ ಮನ ಶಾಂತವಾಗುತ್ತ ಹೋಗುವುದು. ರಕ್ತಪರಿಚಲನೆ ನಿಲ್ಲುತ್ತ ದೇಹ ನಿಧಾನವಾಗ ತನ್ನ ಶಾಖ ಕಳೆದುಕೊಳ್ಳುತ್ತ ತಣ್ಣಗಾಗುವುದು. 

ಇಷ್ಟೇ ಮಗು ಇದರ ರಹಸ್ಯ. ನನಗೆ ಗುರುಗಳು ನೀಡಿದ ಉಪದೇಶ ಇಷ್ಟೆ. 


ಅವರು ಅದನ್ನು ಅನುಷ್ಠಾನಕ್ಕೆ ತರುವ ಮಾರ್ಗ ಸೂಚಿಸಲಿಲ್ಲ "

ಸನ್ಯಾಸಿ ತನ್ನ ಮಾತು ನಿಲ್ಲಿಸಿದರು. 


ಸೂರ್ಯನು ಪಶ್ಚಿಮಕ್ಕೆ ಸಾಗುತ್ತ ಇರುವಂತೆ. ಕಿರಣಗಳು ತಮ್ಮ ಶಾಖ ಕಳೆದುಕೊಳ್ಳಲು ಪ್ರಾರಂಭ ವಾಯಿತು. 

ಮನಸ್ಸು ಖಾಲಿಯಾದ ಭಾವದ ಜೊತೆ ಸನ್ಯಾಸಿ ಕಣ್ಣು ಮುಚ್ಚಿ ಕುಳಿತರು. 


.


.


ಅರ್ಧ ಗಂಟೆ ಕಳೆಯಿತೇನೊ.

ಹೊರಗೆ ಯಾರೊ ಬಂದ ಹಾಗಾಗಿ ಸನ್ಯಾಸಿ ಕಣ್ಣು ತೆರೆದರು. ಯಾರೊ ಇಬ್ಬರು ಹೆಂಗಸರು ಹಾಗು ಮೂವರು ಗಂಡಸರು. 

ಅವರೆಲ್ಲ ವಿನೀತರಾಗಿ ನಮಸ್ಕಾರ ಮಾಡಿದರು.

"ಯಾರು ನೀವೆಲ್ಲ " ಸನ್ಯಾಸಿ ಪ್ರಶ್ನೆ ಮಾಡಿದರು. 

"ಸ್ವಾಮಿ ನಾನು ಇವರ ಪತ್ನಿ ಕುಸುಮ" 


ಎನ್ನುತ್ತ ನರಸಿಂಹನತ್ತ ಆಕೆ ಕೈ ಮಾಡಿದರು.

ಸನ್ಯಾಸಿ ಇನ್ನೂ ತಮ್ಮ ಎದುರಿಗೆ ಕುಳಿತಿದ್ದ ನರಸಿಂಹನತ್ತ ದೃಷ್ಟಿ ಸಿದರು. ಇದೇನು ಈತ ಇನ್ನು ಇಲ್ಲಿಯೆ ಕಣ್ಮುಚ್ಚಿ ಕುಳಿತಿರುವರು. 

"ಹೌದೆ ಒಳ್ಳಯದಾಗಲಿ ತಾಯಿ. ಇವರು ಹೀಗೆ ನನ್ನ ಬಳಿ ಯಾವುದೋ ಪ್ರಶ್ನೆ ಕೇಳುತ್ತ ಇದ್ದರು. ಬಹುಶಃ ಹಾಗೆ ಕುಳಿತೆ ಇರುವರು. ಕುಳಿತಲ್ಲೆ ನಿದ್ದೆಯೊ ಏನೊ. ಎಚ್ಚರಗೊಳಿಸಿ, ಇಲ್ಲಿಂದ ಹೊರಡಿ. "

ಆಕೆ ಅವನನ್ನು ಕೂಗಿದರು. 


"ರೀ ಎದ್ದೇಳಿ" 


ಯಾವುದೇ ಪ್ರತಿಕ್ರಿಯೆ ಇಲ್ಲ. 


ಮತ್ತೊಮ್ಮೆ ಕೂಗಿದರುಇಲ್ಲ. 


ಬುಜ ಹಿಡಿದು ಅಲುಗಿಸಿದರು.


"ಎದ್ದೇಳಿ ಇದೇನು ಹೀಗೆ ಕುಳಿತಿರಿ" 


ನರಸಿಂಹ  ಹಾಗೆ ಹಿಂದೆ ಒರಗಿದ. 


ಈಗ ಅವಳಿಗೆ ಗಾಭರಿ.


"ರೀ ಏನಾಯಿತು , ಏಕೆ ಎಚ್ಚರ ಮಾಡಿಕೊಳ್ಳಿ"


ಈಗ ಶಿವರಾಮು ಸಹ ಮುಂದೆ ಬಂದರು


"ನರಸಿಂಹ ಎದ್ದೇಳಿ ", ಎನ್ನುತ್ತ ಹತ್ತಿರ ಬಂದರು 


ಅವರಿಗೆ ಏನೊ ಅನುಮಾನ ಅನಿಸಿತು. 


ಕೈ ಮುಟ್ಟಿದರು ತಣ್ಣನೆಗೆ ಕೊರೆಯುತ್ತ ಇದೆ. 


ಪರೀಕ್ಷೆ ಮಾಡಿ ನೋಡಿದರು. 


ಇಲ್ಲ ನರಸಿಂಹ ಬದುಕಿಲ್ಲ. 

ಶಿವರಾಮು ಆಶ್ಚರ್ಯ ಹಾಗು ಭಯದಿಂದ ನುಡಿದರು. 


"ಇಲ್ಲಮ್ಮ ನರಸಿಂಹ ಬದುಕಿಲ್ಲ." 

ಈಗ ಎಲ್ಲರು ಮುಂದೆ ಬಂದರು ಎಲ್ಲರಿಗು ಗಾಭರಿ. 


ನರಸಿಂಹನ ಪತ್ನಿ ಜೋರಾಗಿ ಅಳುತ್ತ ಇರುವರು. 


ಶಿವರಾಮುವಿಗೆ ಸಹ ಗಾಭರಿ 


ನರಸಿಂಹನ ಪತ್ನಿ  ಕೇಳಿದರು , ಅಳುತ್ತಲೆ


"ಗುರುಗಳೆ ಏಕೆ , ಇವರಿಗೆ ಏನಾಯಿತು ನಾವೆಲ್ಲ ಹೋಗುವಾಗ ಚೆನ್ನಾಗಿಯೆ ಇದ್ದರು." 

ಸನ್ಯಾಸಿಗೆ ಏನೊಂದು ತೋಚಲಿಲ್ಲ


ಹೇಳಿದರು. 

"ನಾನು ಮೋಸ ಹೋದೆ , ಸಾದರಣ ಒಬ್ಬ ಕುತೂಹಲದಿಂದ ಕೂಡಿದ ಮನುಷ್ಯ ಅಂದುಕೊಂಡೆ. ನನ್ನ ಶಿಷ್ಯ ಅನ್ನುವ ಭಾವದಿಂದ ಉಪದೇಶ ನೀಡಿದೆ. ಆದರೆ ತಪ್ಪಾಗಿ ಹೋಯಿತು. ಇವರು ನನಗೆ ಶಿಷ್ಯ ನಾಗಿ ಬರಲಿಲ್ಲ ಗುರುವಾಗಿ ಬಂದಿದ್ದರು. ಅರವತ್ತು ವರ್ಷಗಳ ಹಿಂದೆ ಇದೇ ಮರದ ಕೆಳಗೆ ಒಬ್ಬ ಗುರುಗಳು ಮಂತ್ರ ತಂತ್ರ ವನ್ನು ಬೋಧಿಸಿ ಹೋದರು. ಇಂದು ಇವರು ಮತ್ತೆ ಗುರುವಾಗಿ ಬಂದು ಆ ತಂತ್ರವನ್ನು ಅನುಷ್ಠಾನಗೊಳಿಸುವುದು ಹೇಗೆ ಎಂದು ತೋರಿಸಿದರು. ನನಗೆ ಮಾರ್ಗದರ್ಶನಕ್ಕಾಗಿ ಬಂದಿದ್ದರು ತಾಯಿ ಇವರು. ನಾನು ಅರಿಯಲಾರದೆ ಹೋದೆ. ನನಗೆ ಮುಂದಿನ ದಾರಿ ತೋರಿದರು."

ಆಕೆಗೆ ಈ ಸನ್ಯಾಸಿಯ ಮಾತು ಅರ್ಥವೇ ಆಗಲಿಲ್ಲ. 

ಮುಂದೆ ಏನು ಮಾಡುವುದು ಎನ್ನುವ ಚರ್ಚೆಗೆ ಶಿವರಾಮು ಇತರರು ತೊಡಗಿದರೆ. ಸನ್ಯಾಸಿ ಎದ್ದವರು ನರಸಿಂಹನಿಗೆ ನಮಸ್ಕಾರ ಮಾಡಿ ಅಲ್ಲಿಂದ ಗುಪ್ತ ಸ್ಥಳವೊಂದಕ್ಕೆ ಹೊರಟರು.




ಮುಗಿಯಿತು.

ಕತೆಯ ಭಾವ :  ಕಡೆಯಲ್ಲಿ ಸಾವು ಇರುವದಾದರು ಕರುಣ ಪ್ರಸಂಗಕ್ಕೆ ಇದು ಉತ್ತಮ ಆಯ್ಕೆ ಆಗಲಾರದು. ಯಾವುದೋ ಒಂದು ಅರಿಯಲಾರದ ವಿಷಯವನ್ನು , ಆಶ್ಚರ್ಯವನ್ನು , ಅದ್ಭುತವನ್ನು ಕಥೆ ಹಿಂಬಾಲಿಸುತ್ತ ಸಾಗುವದರಿಂದ 


ಕಥೆಯ ರಸವಾಗಿ ಆಯ್ಕೆ : " ಅದ್ಭುತ "




Monday, June 6, 2016

ಮದರ್ಸ್ ಡೇ

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ ಮಾತನಾಡಲೆ ಅವರಿಗೆ ಈಚೆಗೆ ಭಯ. ಮಾತನಾಡಿದರೆ ಸಿಡುಕುವನು.
’ಈ ದಿನ ನಿನಗೆ ಆಫೀಸಿಗೆ ರಜಾ ಅಲ್ಲವೆ ? ’ ಸರೋಜಮ್ಮ ಮೆಲುದ್ವನಿಯಲ್ಲಿ ಕೇಳಿದರು.
’ಇವತ್ತು ಬಾನುವಾರ ಅಲ್ಲವೇನಮ್ಮ, ರಜಾ ಅಲ್ಲವೇ ಅಂತ ಬೇರೆ ಕೇಳ್ತೀಯ, ಇವತ್ತು ಆಫೀಸ್ ಗೆ ಹೋಗಕ್ಕೆ ಆಗುತ್ತ’
’ಅಲ್ಲವೋ ಇವತ್ತು ಹೇಗಿದ್ದರು ರಜಾ, ನೀನೆ ಹೇಳಿದ್ದಲ್ಲ, ಈ ಬಾನುವಾರ ಆದರೆ ಚೆಕ್ ಅಪ್ ಗೆ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗ್ತೀನಿ, ಅಂತ. ಹೋಗೋಣವೆ, ಏಕೋ ಈವತ್ತು ಏಳುವಾಗಲೆ ಸರಿ ಇಲ್ಲ, ಇಂತದೋ ಹಿಂಸೆ, ಪಕ್ಕೆಯಲ್ಲೆಲ್ಲ ನೋವು’ 
ಮಗ ಅಮ್ಮನನ್ನು ದೀರ್ಘವಾಗಿ ನೋಡಿದ . 
’ಏನಮ್ಮ,..  ನಿನ್ನೆ ಹೇಳಿದ್ದನ್ನು  ಮರೆತುಬಿಟ್ಟೆಯಾ. ಈ ದಿನ ನಮ್ಮ  ವಾಟ್ಸಪ್ ಗ್ರೂಪಿನಿಂದ ನಂದಿತಾ ಮನೆಯಲ್ಲಿ ಮದರ್ಸ್ ಡೇ ಸೆಲೆಬ್ರೇಟ್ ಮಾಡ್ತೀವಿ,ನೀನು ಬರಬೇಕಾಗುತ್ತೆ ಅಂತ ಹೇಳಿದ್ದೆನಲ್ಲಮ್ಮ. ಈಗ ಸ್ನಾನ ಮಾಡಿ ಹೊರಡಬೇಕು. ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಅವರ ಮನೇಲಿ ಇರಬೇಕು ಅಂದಿದ್ದಾರೆ , ನಿನಗೆ ಎಲ್ಲೋ ಬಹುಷಃ ಗ್ಯಾಸ್ಟ್ರಿಕ್ ಜಾಸ್ತಿ ಆಗಿರಬೇಕು. ರಾತ್ರಿಹೊತ್ತು ಚಪಾತಿ ತಿಂದರೆ ಕೆಲವೊಮ್ಮೆ ಅರಗಲ್ಲ.   ಮತ್ತೆ ಈ ವಾರದಲ್ಲಿ ಎಂದಾದರು ಒಂದು ದಿನ ರಜಾ ಹಾಕಿ , ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗುತ್ತೇನೆ ಆಯ್ತಾ ? ’ 
ಅಮ್ಮನಿಗೆ ಅರ್ಥವಾಗಿತ್ತು, ಮಗ ಸದ್ಯಕ್ಕೆ ತನ್ನನ್ನು ಡಾಕ್ಟರ್ ಬಳಿ ಕರೆದೊಯ್ಯಲ್ಲ, ಎಂದು. ಅವರಿಗೆ ಡಾಕ್ಟರ್ ಬಳಿ ಪದೇ ಪದೇ ಹೋಗುವ ಅಭ್ಯಾಸ ಏನಿಲ್ಲ. ಆದರೆ ಕಳೆದ ಎರಡು ವಾರಗಳಿಂದ ಅವರ ಅರೋಗ್ಯ ತೀರ ಹದಗೆಟ್ಟಿದೆ ಎಂದು ಅವರಿಗೆ ಅನ್ನಿಸುತ್ತಿತ್ತು. ಹೇಳಲಾಗದು ಅನುಭವಿಸಲಾಗದು ಅಂತಾರಲ್ಲ ಹಾಗೆ. ಬೇರೆ ದಾರಿ ಇಲ್ಲ ಈಗ ಸಿದ್ದರಾಗಿ ಮಗನ ಜೊತೆ ಹೋಗಲೇ ಬೇಕು. 
ಅಷ್ಟರಲ್ಲಿ ಸೊಸೆ ರಮ್ಯ ಅಂದಳು
’ನಿಮಗೆ ಮೊದಲೆ ಸರಿ ಇಲ್ಲ ಅಂತೀರಿ, ಇನ್ನು ಇಲ್ಲಿ ತಿಂಡಿ ತಿಂದು ಹೊರಡಬೇಡಿ ,  ಅಲ್ಲಿ   ಮತ್ತೇನು ಮಾಡ್ತಾರೋ   ಅಲ್ಲಿ  ಎಲ್ಲರ ಎದುರಿಗೆ ತಿನ್ನಲ್ಲ ಅನ್ನುವದಕ್ಕಾಗಲ , ಈಗ ತಿಂಡಿ ತಿನ್ನ ಬೇಡಿ, ಒಂದು ಲೋಟ ಹಾಲು ಕೊಡುವೆ ಕುಡಿದುಬಿಡಿ, ಒಟ್ಟಿಗೆ ಅಲ್ಲಿ ಊಟ ಮಾಡಿದರಾಯಿತು’ 
ಸರೋಜಮ್ಮನಿಗೆ ತಿಂಡಿಯದೇನು ಆತುರವಿಲ್ಲ, ಆದರೆ ಕಾಫಿಯ ಬಯಕೆ ಸ್ವಲ್ಪ ಜಾಸ್ತಿ
’ಹಾಗೆ ಆಗಲಮ್ಮ ತಿಂಡಿ ಬೇಡ ಬಿಡು, ಒಂದು ಲೋಟ ಕಾಫಿ ಕುಡಿದುಬಿಡುವೆ ಸಾಕು ’ ಎಂದರೆ ಸ್ವಲ್ಪ ಆಸೆಯಿಂದ. 
’ನಿಮಗೆ ಅರ್ಥವಾಗಲ್ವ ಅತ್ತೆ,  ಮೊದಲೆ ಗ್ಯಾಸ್ ಅಂತೀರಿ, ಪದೇ ಪದೇ ಕಾಫಿ ಏಕೆ. ಹಾಲು ಕುಡೀರಿ’ 
ಸರೋಜಮ್ಮ ಸಪ್ಪಗಾಗಿ ಸುಮ್ಮನಾದರು.
ಗೋಕುಲ್ ಮೌನವಾಗಿದ್ದ. 
…………
ನಂದಿತಾ ಮನೆಯಲ್ಲಿ ಬಾರಿ ಜನರೇ ಸೇರಿದ್ದರು. ಒಟ್ಟು ಹದಿನಾಲಕ್ಕು ಫ್ಯಾಮಿಲಿ ಅನ್ನುವಾಗಲು, ಐವತ್ತು ಜನರ ಹತ್ತಿರ. ’ಮದರ್ಸ್ ಡೇ’ ಎನ್ನುವ ಸಂಭ್ರಮಾಚರಣೆ. ನಂದಿತಾಳಿಗೆ ಈಟಿವಿ    ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಸಿನ್ ಒಬ್ಬರಿದ್ದರು, ಕ್ಯಾಮರಾಮನ್, ಅವರ ಮೂಲಕ ಸಂಪರ್ಕಿಸಿ, ತನ್ನ ಮನೆಯ ಮದರ್ಸ್ ಡೇ ಸೆಲೆಬ್ರೇಶನ್ ಸುದ್ದಿ, ಟೀವಿಯ ಸುದ್ದಿಯಲ್ಲಿ ಬರುವಂತೆ ಮಾಡುತ್ತೇನೆ ಅಂದಿದ್ದಳು. ಹಾಗಾಗಿ ಎಲ್ಲ ಹೆಂಗಸರು ತಮ್ಮ ಅಲಂಕಾರದೊಡನೆ ಸಿದ್ದರಾಗಿ ಬಂದಿದ್ದರು. 
ಎಲ್ಲರ ಸಂಭ್ರಮ ಆಕಾಶ ಮುಟ್ಟಿತ್ತು,. ತಮ್ಮೊಡನೆ ಕರೆತಂದಿದ್ದ, ತಾಯಂದಿರನ್ನು ಎಲ್ಲರಿಗೂ ಪರಿಚಯ ಮಾಡಿಸುತ್ತ, ನಂತರ ಸಾಲಾಗಿ ಕುರ್ಚಿಗಳನ್ನು ಹಾಕಿ ಎಲ್ಲರನ್ನೂ ಕೂಡಿಸಲಾಯಿತು. ಟೀವಿಯ ಕ್ಯಾಮರಗಳ ಜೊತೆ ಜೊತೆಗೆ ಎಲ್ಲರ ಮೊಬೈಲ್ ಗಳು ಕೆಲಸ ಮಾಡುತ್ತಿದ್ದವು, ತಮ್ಮ ತಮ್ಮ ಮೊಬೈಲ್ ನಲ್ಲಿ ಅಮ್ಮನ ಜೊತೆ , ಎಲ್ಲ ಅಮ್ಮಂದಿರ ಗುಂಪನ್ನು ಪೋಟೋ ತೆಗೆಯುತ್ತ, ಅಲ್ಲಿಂದಲೆ ವಾಟ್ಸಪ್ ಗುಂಪುಗಳಿಗೆ, ತಮ್ಮ ಪೇಸ್ ಬುಕ್ ಪುಟಗಳಿಗೆ ಅಪ್ ಲೋಡ್ ಮಾಡುತ್ತ ಹರ್ಷಿಸುತ್ತಿದ್ದರು. 
ನಂತರದ ಕಾರ್ಯಕ್ರಮ ಎಂದರೆ, ’ಕೈ ತುತ್ತು’ ಎಂದು ಪ್ರಕಟಿಸಲಾಯಿತು. 
ಎಲ್ಲರೂ ಅವರವರ ತಾಯಿಯ ಕೈಲಿ ಅನ್ನ ತಿನ್ನುವುದು. ತಟ್ಟೆಗಳಲ್ಲಿ  ತಿನಸುಗಳನ್ನೆಲ್ಲ ಹಾಕಿ , ತಾಯಂದಿರ ಕೈಗೆ ಕೊಡಲಾಯಿತು, ಅವರ ಮುಂದೆ ಅವರ ಮಕ್ಕಳು,  ’ಆ ’ ಎನ್ನುತ್ತ ಬಾಯಿ ತೆಗೆದು ತಮ್ಮ ಅಮ್ಮನ ಕೈಲಿ ತುತ್ತು ಇಡಿಸಿಕೊಳ್ಳುವುದು. ಮನೆಯಲ್ಲಿ ತೀರ ಗಂಬೀರವಾಗಿಯೆ ಇರುವ ಗೋಕುಲ್ ಅಲ್ಲಿ ಎಲ್ಲರೆದುರಿಗೆ ಅಮ್ಮನನ್ನು ಮುದ್ದುಗೆರೆಯುತ್ತಿದ್ದ. ಅಮ್ಮ ಅದು ತಿನ್ನಿಸು, ಇದು ತಿನ್ನಿಸು, ನೋಡು ನನಗೆ ಮೈಸೂರ್ ಪಾಕ್ ಅಂದರೆ ಇಷ್ಟ ನೀನು ಅದನ್ನೆ ಮರೆತುಬಿಟ್ಟೆ, ಎಂದು ಕೇಳುತ್ತ ಅಮ್ಮನ ಕೈಲಿ ತಿನ್ನಿಸಿಕೊಂಡ. 
ಸರೋಜಮ್ಮನಿಗೆ ಆಶ್ಚರ್ಯ , ಮನೆಯಲ್ಲಿ ಸಿಹಿಯನ್ನು ಮುಟ್ಟುವನೇ ಅಲ್ಲ, ಗೋಕುಲ್, ಒಮ್ಮೆ ಬಲವಂತವಾಗಿ ತಟ್ಟೆಗೆ ಹಾಕಿದರು, ಸಿಹಿ ಚೆಲ್ಲಬಾರದು ಎಂದರೂ ಕೇಳದೆ, ಬಿಸಾಕುತ್ತಿದ್ದವನು ಎಲ್ಲರೆದುರಿಗೆ ಅವನ ವರ್ತನೆಯೆ ಬೇರೆಯಾಗಿ ತೋರುತ್ತಿದೆ ಅವರಿಗೆ. ಹಾಗೆ ಸೊಸೆಯು ತಮ್ಮ ಅತ್ತೆಯ ಕೈಲಿ ಕೈತುತ್ತು ತಿಂದಳು.  ಸಂಜೆ ಎಲ್ಲವೂ ಟೀವಿಯ ಮದರ್ಸ್ ಡೆ ಕಾರ್ಯಕ್ರಮದಲ್ಲಿ ಎಲ್ಲ ಬರುವುದು ಎನ್ನುವ ಸಂತಸ , ನಿರೀಕ್ಷೆ ಅವರಿಗೆಲ್ಲ. ಸರೋಜಮ್ಮನಿಗೆ ಏಕೊ ಬಳಲಿಕೆ ಅನ್ನಿಸುತ್ತಿತ್ತು. ಎಲ್ಲರೆದುರು ಹೇಗೆ ಹೇಳುವುದು ಎಂದು ಸುಮ್ಮನಿದ್ದರು. ಅಲ್ಲದೆ ಅದೇಕೊ ಬಾರಿ ಬಾಯರಿಕೆ, ಸ್ವಲ್ಪ ನೀರು ಕುಡಿಯ ಬೇಕು ಅನ್ನಿಸುತ್ತಿತ್ತು
ಕೈ ತುತ್ತು ಕಾರ್ಯಕ್ರಮ ಮುಗಿದ ನಂತರ ಅಮ್ಮಂದಿರಗೆ ಊಟ ಏರ್ಪಾಟಾಗಿತ್ತು.  ಹೋಟೆಲ್ ನಿಂದ ತರಿಸಿದ ಊಟ ಸರೋಜಮ್ಮನಿಗೆ ಇಷ್ಟವೇ ಆಗುವದಿಲ್ಲ, ಆದರೆ ಅಲ್ಲಿಯೆಲ್ಲ ಏನು ಮಾತನಾಡುವುದು. ತಟ್ಟೆಯಲ್ಲಿ ಬಡಿಸಿದ್ದ ಯಾವ ವ್ಯಂಜನವು ಅವರಿಗೆ ಇಷ್ಟ ಅನ್ನಿಸುತ್ತಿಲ್ಲ. ತಿನ್ನಲೂ ಆಗುತ್ತಿಲ್ಲ. ಎಲ್ಲರ ಬಲವಂತಗಳು ಬೇರೆ. ಸ್ವಲ್ಪ ಅನ್ನ ಮಜ್ಜಿಗೆ ತಮ್ಮ ತಟ್ಟೆಗೆ ಹಾಕಿಸಿಕೊಂಡರು. ಪಕ್ಕದಲ್ಲಿದ್ದ  ಕಮಲಮ್ಮ ಅವರಿಗೆ ಪರಿಚಿತರೆ, ಮಗನ ಸ್ನೇಹಿತ, ಸತೀಶನ ಅಮ್ಮ.  ತಮ್ಮ ಮನೆಗೆ ಬಂದಿದ್ದವರು. ಆದರೆ ಏಕೊ ಅವರು ತಮ್ಮೊಡನೆ ಮಾತನಾಡುತ್ತಿಲ್ಲ. ಆಕೆಯ ಮುಖವನ್ನೊಮ್ಮೆ ದಿಟ್ಟಿಸಿದರು. ಆಕೆಯ ಮುಖದಲ್ಲಿ ಅದೇನೊ ನೋವು ಮಡುವುಗಟ್ಟಿದೆ ಅನ್ನಿಸಿತು. ಬಹುಷಃ ತನ್ನ ಹಾಗೆ ಆಕೆಗೂ ಏನು ನೋವು ಅನ್ನಿಸಿ , ನಗು ಬಂದಿತು. ಎಂತದೋ ಮದರ್ಸ್ ಡೇ ಅಂತೆ ಹುಚ್ಚುಮುಂಡೇವು , ಅಂದು ಕೊಂಡರು.  
ಹತ್ತಿರದಲ್ಲಿ ಕುಳಿತಿದ್ದ ನಂದಿತಾ, ಗೋಕುಲ್ ನನ್ನು ಕುರಿತು ಹೇಳಿದಳು 
’ನೋಡಿ ಗೋಕುಲ್ ನಿಮ್ಮ ಅಮ್ಮ ನಗುತ್ತಿದ್ದಾರೆ . ಬಹುಷಃ ಅವರು ನಿಮ್ಮ ಚಿಕ್ಕವಯಸ್ಸಿನ ತುಂಟತನವನ್ನು ನೆನೆಸಿಕೊಂಡು ಈಗ ನಗುತ್ತಿದ್ದಾರೆ, ಅಲ್ಲವೇ ಅಮ್ಮ ’ ಎನ್ನುತ್ತ ಸರೋಜಮ್ಮನನ್ನು ಕೇಳಿದಳು. ಸರೋಜಮ್ಮ ಏನು ತೋಚದೆ ಒಮ್ಮೆ ಪೆಚ್ಚುನಗೆ ಬೀರಿದರು. 
ಮದರ್ಸ್ ಡೇಯ ಎಲ್ಲ ಸಂಭ್ರಮಾಚರಣೆ ಮುಗಿಯಿತು 
ಅಲ್ಲಿ ಎಲ್ಲವನ್ನು ಮುಗಿಸಿ ಹೊರಡುವಾಗ ಸರೋಜಮ್ಮನಿಗೆ ಸಾಕೆನಿಸಿತ್ತು. ಅದೇನೊ ಮೈಯೆಲ್ಲ ಬೆವರು , ಥೂತ್ , ಬಿಸಿಲಿನ ಜಳ ತಡೆಯುವುದು ಕಷ್ಟವೇ. ಸೊಸೆಯಲ್ಲಿ ಅಂದರು, ತುಂಬಾ ಕಷ್ಟವಮ್ಮ ವಿಪರೀತ ಸೆಕೆಯಾಗುತ್ತಿದೆ. ಅದಕ್ಕವಳು 
’ಅಯ್ಯೋ ಈ ಬೆಸಿಗೆ ಎಲ್ಲರೂ ಬೆವರುತ್ತಿದ್ದಾರೆ, ನಿಮಗೆ ಮೊದಲೆ ವಯಸ್ಸಾಯಿತು ತಡೆಯುವುದು ಕಷ್ಟ’ ಎಂದಳು
’ನನಗಷ್ಟೆ ಏನು ರಮ್ಯಾ , ನಿನಗೂ ವಯಸ್ಸಾಯಿತು, ಈ ಯುಗಾದಿಗೆ ಐವತ್ತೊಂದು ಆಯಿತಲ್ಲವೆ ’ ಎನ್ನಲೂ ಹೋಗಿದ್ದವರು, ಆಕೆಯ ಮುಖದ ಮೇಕಪ್ಪನ್ನು, ತುಟಿಗೆ ಹಚ್ಚಿದ್ದ ಲಿಫ್ ಸ್ಟಿಕ್ಕನ್ನು ನೋಡುತ್ತ ಸುಮ್ಮನಾದರು. ಆಕೆಯ ಅನುಭವ ಹೇಳುತ್ತಿತ್ತು, ಕೆಲವು ಮಾತುಗಳನ್ನು ಆಡಿ ನಂತರ ಅರಗಿಸಿಕೊಳ್ಳುವುದು ಕಷ್ಟ ಎಂದು. 
ಮಗ ಸೊಸೆ ಮುಂದಿನ ಸೀಟಿನಲ್ಲಿದ್ದರೆ, ಕಾರಿನ ಹಿಂದಿನ ಸೀಟಿನಲ್ಲಿ ಸರೋಜಮ್ಮ ಒರಗಿದ್ದರು, ಆಕೆಗೆ ಅದೇನೊ ತುಂಬಾನೆ ಬಾಯರಿಕೆ ಅನ್ನಿಸುತ್ತಿತ್ತು. ನೀರು ಕುಡಿಯಬೇಕು, ಆದರೆ ಈಗ ಯಾರಲ್ಲಿ ಕೇಳುವುದು , ಮನೆಗೆ ಹೋಗವವರೆಗೂ ತಡೆಯಲೇ ಬೇಕು. 
ಮನೆಯ ಗೇಟಿನ ಮುಂದೆ ಕಾರು ನಿಂತು,  ರಮ್ಯ ಕೆಳಗಿ ಇಳಿದು ಗೇಟನ್ನು ತೆಗೆದು , ಮನೆಯ ಕೀ ಹಿಡಿದು ಒಳಹೋದಳು. ಗೋಕುಲ್ ಕಾರನ್ನು ನಿಧಾನವಾಗಿ ಒಳಗೆ ತಂದ. ಕಾರನ್ನು ನಿಲ್ಲಿಸಿ. ಕಾರಿನ ಏ.ಸಿ. ಆಫ್ ಮಾಡಿ. ಕೆಳಗಿಳಿಯ ಹೊರಟವನು ಸರೋಜಮ್ಮ ಇನ್ನು ಕೆಳಗಿಳಿಯದೆ, ಸೀಟಿಗೆ ಒರಗಿ ನಿದ್ರಿಸುತ್ತಿರುವದನ್ನು ಕಂಡ.
’ಅಮ್ಮ ಮನೆ ಬಂತು ಕೆಳಗಿಳಿ’
ಆಕೆಗೆ ಅದೇನು ನಿದ್ದೆಯೋ, ಆಕೆ ಮಲಗಿರುವ ಬಂಗಿಯನ್ನು ಕಾಣುತ್ತ, ಅವನಿಗೆ ಅದೇನೊ ಆತಂಕ ಎನಿಸಿ,  ಕಾರಿನ ಹಿಂದಿನ ಬಾಗಿಲು ತೆರೆದು, ಕೂಗುತ್ತಿದ್ದ
’ಅಮ್ಮ ಎದ್ದೇಳು ಮನೆ ಬಂದಿತು’ , ಗಂಡನ ಕೂಗು ಕೇಳಿ ಸೊಸೆ ರಮ್ಯಳು, ಬಾಗಿಲಿಗೆ ಬಂದು ಕೇಳಿದಳು
’ಅದೇನು ನಿಮ್ಮ ಕೂಗಾಟ, ಅಮ್ಮ ಅಮ್ಮ ಎಂದು’
ಅವನು ಹೇಳಿದ
’ಅಮ್ಮ ಅದೇಕೊ ಎಷ್ಟು ಕೂಗಿದರು, ಏಳುತ್ತಲೆ ಇಲ್ಲ ಕಣೇ’  ರಮ್ಯಳು ಸಹ ಮೆಟ್ಟಿಲಿಳಿದು ಬಂದಳು. ..

Wednesday, December 23, 2015

ಕತೆ : ಐಚ್ಚಿಕಮು

ಕತೆ : ಐಚ್ಚಿಕಮು


 
ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ. 
ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು. 
ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು. 
ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು. 
ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ 
’ಅವುನೂ ’ ಎನ್ನುತ್ತ ಇಳಿದುಹೋದ!, 
ನಾನು ಸಹ ಬ್ಯಾಗ್ ಹಿಡಿದು ಇಳಿದು ಬಿಟ್ಟೆ , 
ನಂತರವೇ ಗೊತ್ತಾಗಿದ್ದು ಅದು ಮತ್ಯಾವುದೋ ಸ್ಟೇಶನ್, ಹೈದರಾಭಾದ ಅಲ್ಲ ಎಂದು. 
ರೈಲ್ವೇ ಸ್ಟೇಶನ್ ಖಾಲಿ ಖಾಲಿ, ಜನರೇ ಇಲ್ಲ,  ಮತ್ತೆ ಅಲ್ಲಿಂದ ಯಾವ ರೈಲು ಇಲ್ಲ, ಹೊರಗೆ ಬಂದೆ. 
ಅದು ಯಾವುದೋ ಒಂದು ಆಂದ್ರದ ಚಿಕ್ಕ ಊರು ಇರಬೇಕು, ಆದರೆ ಸಾಕಷ್ಟು ಅದುನಿಕವಾಗಿತ್ತು!. 
ಊರ ಹೆಸರು ಕೇಳಿದರೆ 
’ ಐಚ್ಚಿಕಮು ’ ಎಂದರು. ಇದೆಂತ ಹೆಸರೋ ! 
ರೈಲಂತೂ ಇಲ್ಲ ಬಸ್ ಸಿಗುವುದೋ ಎನ್ನುವ ಆಸೆಯೊಂದಿಗೆ ಊರಲ್ಲಿ ನಡೆದಿದ್ದೆ. 
ಅದೇನೊ ಅಲ್ಲಿಯ ಜನ , ಮನೆ , ಅಂಗಡಿಗಳಾಗಲಿ ಹೋಟೆಲ್ ಯಾವುದು ಸಹಜವಾಗಿದೆ ಎಂದು ಅನಿಸಲಿಲ್ಲ. ಎಂತದೋ ಒಂದು ವಿಪರೀತ, ಹೀಗೆ ಎಂದು ನಿಮಗೆ ಹೇಳಲಾರೆ. ಮತ್ತೆ ಒಂದು ಆಶ್ಚರ್ಯ ಕಾದಿತ್ತು, ಯಾರಲ್ಲಿ ಮಾತನಾಡಿದರು ಸ್ವಚ್ಚವಾಗಿ ಕನ್ನಡವೆ ಮಾತನಾಡುತ್ತಿದ್ದರು, ಇದೇನು ಕರ್ನಾಟಕದ ಇಷ್ಟೂ ದೂರದಲ್ಲಿ ಕನ್ನಡವೆ ಎಂದು ಪ್ರಶ್ನಿಸಿದರೆ, ನೀವು ಯಾವ ಬಾಷೆಯಲ್ಲಿ ಮಾತನಾಡಿದರು ಅದೇ ಬಾಷೆಯಲ್ಲಿ ಉತ್ತರಿಸುವುದು ಅಲ್ಲಿನ ಪದ್ದತಿ ಎಂದು ತಿಳಿಸಿದರು. 
’ಪರವಾಗಿಲ್ಲ ನಮ್ಮ ಬೆಂಗಳೂರಿನ ತರವೇ ಇದೆಯಲ್ಲ ’  ಎಂದುಕೊಂಡೆ. 
ಕಡೆಗೆ ಬಸ್ ನಿಲ್ದಾಣದ ಬಗ್ಗೆ ಅಥವ ಬಸ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯಾವುದಾದರು ಲಾಡ್ಜ್ ಸಿಕ್ಕರೆ ಅಥವ ಹೋಟೆಲ್ ಸಿಕ್ಕರೆ ಉಳಿದು ಮಾರನೇ ದಿನ ಪುನಃ ರೈಲಿನಲ್ಲಿಯೇ ಹೈದರಾಭಾದಿಗೆ ಪ್ರಯಾಣ ಮಾಡಬಹುದೇ ಅನ್ನಿಸಿತು. ಆಗೆ ಸಂಜೆ ಕಳೆದು ರಾತ್ರಿಗೆ ಕಾಲ ಕಾಲಿಟ್ಟಿತ್ತು. 
ಅಲ್ಲೊಂದು ಹೋಟೆಲ್ ತರದ ಬೋರ್ಡ್ ಕಾಣಿಸಿತು
ಹೆಸರಾದರೋ ’ಮಿಹಾಮ್ ’ ಎಂದೋ ಏನೊ ಇತ್ತು, ನನಗೆ ತೆಲಗನ್ನು ಅಕ್ಷರ ಅಕ್ಷರ ಸೇರಿಸಿ ಓದುವೆನಾದರು ಸರಿಯಾಗಿ ಓದಲಾರೆ
ಒಳಗೆ ಹೋದೆ. ಜನ ದಟ್ಟನೇ ಏನು ಇಲ್ಲ , ಆಫೀಸಿನಲ್ಲಿಯ ಚಿಕ್ಕ ಚಿಕ್ಕ ಕ್ಯಾಬಿನ್ ರೀತಿಯ ರೂಮುಗಳು. 
ಒಂದು ರೂಮಿನಲ್ಲಿ ಹೋಗಿ ಕುಳಿತೆ , 
ಒಬ್ಬಾಕೆ ಕಾಣಿಸಿದಳು, ನನ್ನನ್ನು ಸ್ವಲ್ಪ ಅನುಮಾನಾಸ್ಪದ ಎನ್ನುವಂತೆ ನೋಡುತ್ತ
’ನೀವು ಇಲ್ಲಿಯವರಂತೆ ಕಾಣುವದಿಲ್ಲವಲ್ಲ ’ ಎಂದಳು ನಗುತ್ತ. 
’ನಿಜ ನಾನು ಇಲ್ಲಿಯವನಲ್ಲ, ಬೆಂಗಳೂರಿನವನು, ಅಚಾತುರ್ಯದಿಂದ ರೈಲಿನಿಂದ ಇಳಿದೆ ಮುಂದಿನ ರೈಲು ಸಿಗದೆ ಪರದಾಟ’ ಎಂದೆ 
ಆಕೆ
’ಎಲ್ಲವೂ ಸರಿ ಹೋದಿತು ಬಿಡಿ, ನಿಮಗೆ ಏನು ಮಾಡಿ ಕೊಡಲಿ ತಿನ್ನಲು’ ಎಂದಳು
ನನಗಂತು ಮೊದಲಿಗೆ ಆಕೆ ಕನ್ನಡದಲ್ಲಿ ಮಾತನಾಡಿದ್ದು ಆಶ್ಚರ್ಯವೆನಿಸಿತ್ತು, ಮೇಲಾಗಿ ಮನೆಯಲ್ಲಿ ಕೇಳುವಂತೆ ಕೇಳುತ್ತಿದ್ದಾಳೆ ಏನು ಮಾಡಿಕೊಡಲಿ ಎಂದು. 
ನಾನು ನಗುತ್ತ ಹೇಳಿದೆ
’ಅಂದರೆ ನಮ್ಮನ್ನು ಕೇಳಿ ಮಾಡುವ ಪದ್ದತಿಯ ಇಲ್ಲಿ, ನಮಗೆ ಬೇಕಾದ್ದು ಮಾಡಲು ಹೇಗೆ ಸಾದ್ಯ’ ಎಂದೆ
ಆಕೆ
’ಇಲ್ಲಿಯೆಲ್ಲ ಹೋಟಲಿಗೆ ಬರುವವರೆ ಕಡಿಮೆ, ಅಲ್ಲದೆ ನಮ್ಮ ಹೋಟೆಲ್ ಹೆಸರೆ ನಿಮ್ಮ ಮನೆ ಎಂದು ನೀವು ಹೇಳಿ ಪ್ರಯತ್ನಮಾಡುವ’ ಎಂದಳು ನಗುತ್ತ
’ಸರಿ ದೋಸೆ ಆದರೆ ಚೆನ್ನಾದೀತು, ದೋಸೆ ಚಟ್ನಿ ಆಲೂಗೆಡ್ಡೆ ಈರುಳ್ಳಿಯ ಪಲ್ಯ ಸಿಕ್ಕೀತೆ ’ ಎಂದೆ ತಮಾಶಿ ಎನ್ನುವಂತೆ
’ಸರಿ ಆದೀತು, ಅಲ್ಲಿಯವರೆಗೂ, ತಂಪಾದ ಪಾನಕ ಕುಡಿದು ಸುದಾರಿಸಿಕೊಳ್ಳಿ ’   
ಒಳಗಿನಿಂದ ನಿಂಬೆ ಹಣ್ಣಿನ ಪಾನಕ ತಂದುಕೊಟ್ಟಳು 
ಅದನ್ನು ಕುಡಿಯುತ್ತ ಯೋಚಿಸಿದೆ, ಅದೇನು ಇಲ್ಲಿ ಎಲ್ಲವು ಸಹಜವಾಗಿ ಕಾಣುತ್ತಿಲ್ಲವೆ ಎಂದು . 
ಸ್ವಲ್ಪ ಸಮಯದಲ್ಲಿಯೆ ದೋಸೆ, ಹಾಗು ಚಟ್ನಿ ಪಲ್ಯ ಎಲ್ಲವೂ ನಾನು ಬಯಸಿದಂತೆ ಸಿದ್ದವಾಗಿ ಬಂದಿತು. ಹೆಚ್ಚು ಆಶ್ಚರ್ಯಪಡದೆ ತಿಂದೆ. ಕಾಫಿ ಆಯಿತು. ಅದೇನೊ ಕುತೂಹಲ ಅನ್ನಿಸಿತು, ಇದೇ ಊರಿನಲ್ಲಿ ಒಂದು ದಿನ ಇದ್ದು ಹೋದರೆ ಮತ್ತಷ್ಟು ವಿಷಯಗಳು ತಿಳಿಯಬಹುದು ಇಲ್ಲಿಯ ಬಗ್ಗೆ .
’ಈ ಊರಿನಲ್ಲಿ ಇಳಿದುಕೊಳ್ಳಲು ಎಲ್ಲಿಯಾದರು ಸ್ಥಳ ಸಿಗಬಹುದೇ, ಗೆಸ್ಟ್ ಹೌಸ್ ರೀತಿ ’ 
’ಖಂಡಿತ ಸಿಗುತ್ತದೆ’ ಎಂದಳು
ಅವಳ ಬಳಿಯಿದ್ದ ವಿಸಿಟಿಂಗ್ ಕಾರ್ಡ್ ಒಂದನ್ನು ಕೊಟ್ಟು, ನೋಡಿ ಈ ವಿಳಾಸದಲ್ಲಿ ಹೋಗಿ, ಅಲ್ಲಿ ನೀವು ಉಳಿದುಕೊಳ್ಳಬಹುದು. ಎಂದಳು
ಸರಿ ಹಣ ಎಷ್ಟಾಗಿರಬಹುದೆ ಎಂದು ಚಿಂತಿಸುತ್ತ, ಜೋಬಿನಿಂದ ನೂರು ರೂಪಾಯಿ ನೋಟು ತೆಗೆದು ಅವಳ ಕೈಗೆ ಕೊಟ್ಟೆ 
ಆಕೆ ಅದನ್ನು ಆಶ್ಚರ್ಯಚಕಿತಳಾಗಿ ಹಿಂದೆ ಮುಂದೆ ತಿರುಗಿಸಿ ನೋಡುತ್ತ ನಿಂತು ಬಿಟ್ಟಳು. ಸ್ವಲ್ಪ ಸಮಯದ ನಂತರ ಕೇಳಿದಳು
’ಈ ಹಣ ನಿಮಗೆಲ್ಲಿ ಸಿಕ್ಕಿತು’ 
ನನಗೆ ಮತ್ತೆ ಆಶ್ಚರ್ಯ ವಾಗಿತ್ತು,’ ಅಲ್ಲ ನನ್ನ ಹಣ ಎಲ್ಲಿ ಸಿಕ್ಕಿತ್ತು ಎಂದರೆ ಏನು ಹೇಳುವುದು’  
’ಸಿಗುವದೇನು ಬಂತು, ATM ನಿಂದ ಡ್ರಾ ಮಾಡಿರುವುದು’ ಎಂದೆ , 
ಆಕೆ ಅನುಮಾನಾಸ್ಪದವಾಗಿ ನನ್ನನ್ನು ನೋಡುತ್ತ, ತಲೆ ಆಡಿಸಿದಳು. ಮತ್ತೆ 
’ಇಷ್ಟು ಹಣಕ್ಕೆ ನಾನು ಚಿಲ್ಲರೆ ಹೊಂದಿಸುವುದು ಕಷ್ಟ’ ಎಂದಳು 
’ನಾನು ತಿಂದಿದ್ದ ತಿಂಡಿ, ಕಾಫಿ , ಪಾನಕ ಎಲ್ಲ ನೆನೆಯುತ್ತ 
’ಪರ್ವಾಗಿಲ್ಲ ಬಿಡಿ’ ಎಂದರೆ , ಆಕೆ ಕಣ್ಣರಳಿಸಿ ನನ್ನತ್ತ ನೋಡಿದಳು, ನಾನು ಅಲ್ಲಿಂದ ವಿಳಾಸದ ಕಾರ್ಡ್ ಹಿಡಿದು ಹೊರಟೆ
ಬೆಂಗಳೂರು ಬಿಟ್ಟು ಹದಿನೈದು ದಿನವಾಗಿತ್ತು, ತಲೆಯಲ್ಲಿ ಕೂದಲು ಬೆಳೆದು ಎಂತದೋ ಮುಜುಗರ, ಅಲ್ಲದೆ ರೈಲಿನ ಪ್ರಯಾಣದ ನಡುವೆ ಶೇವ್ ಸಹ ಮಾಡಲಾಗಿರಲಿಲ್ಲ. ದಾರಿಯಲ್ಲಿ ಹೋಗುವಾಗ , ಕಟಿಂಗ್ ಶಾಪ್ ಒಂದರ ಫಲಕ ಕಾಣಿಸಿತು. 
’ಮೇನಿಯಾ ಹೇರ್ ಡ್ರೆಸ್ ’ 
ಸರಿ ಕ್ಷೌರ ಮಾಡಿಸಿಯೆ ಬಿಡುವುದು ಎಂದು ನಿರ್ಧರಿಸಿ ಒಳಗೆ ಹೋದೆ. 
ನಾನು ಸಾಮಾನ್ಯವಾಗಿ ಕಟಿಂಗ ಇಂತಹುದಕ್ಕೆಲ್ಲ ಸಮಯ ಎಲ್ಲ ನೋಡುತ್ತಿರಲಿಲ್ಲ. ಕೈಲಿದ್ದ ಬ್ಯಾಗನ್ನು ಕೆಳಗಿಟ್ಟು ಸುತ್ತಲೂ ನೋಡುವಾಗ ಒಳಗಿನಿಂದ ಒಬ್ಬಾತ ಬಂದ. ಲಕ್ಷಣವಾಗಿ ಬಿಳಿಯ ಪಂಚೆ ಶರ್ಟ್ ಧರಿಸಿದ್ದ. 
ಹಣೆಯಲ್ಲಿ ಅಗಲ ಗಂಧ, ತಕ್ಷಣ ನೋಡಿದರೆ, ದೇವಾಲಯದ ಪುರೋಹಿತನಂತೆ ಕಾಣುತ್ತಿದ್ದ. 
’ಒಳಗೆ ಬರಬಹುದೇ’ ಎಂದು ಕೇಳಿದೆ.
ಅವನು ನಗುತ್ತ ,
’ದಯಮಾಡಿ ಬನ್ನಿ,  ಯಾವ ಸೇವೆ ಆಗಬೇಕಿತ್ತು’ ಎಂದು ಕೇಳಿದ. ಇದೆನು ಹುಚ್ಚೋ, ಇಲ್ಲಿ ಯಾವ ಸೇವೆ, ಎಂದು ಮನದಲ್ಲಿ ಗೊಣಗಿಕೊಳ್ಳುತ್ತ.
’ಊರು ಬಿಟ್ಟು ತುಂಬಾ ದಿನವಾಯಿತಲ್ಲ, ಕೂದಲು ಬೆಳೆದಿದೆ, ತಲೆಕ್ಷೌರ ಮಾಡಿಸೋಣ ಎಂದು ಬಂದೆ’ ಎಂದೆ ಮುಗುಮ್ಮಾಗಿ,
’ಸರಿ ಇಲ್ಲಿ ಆಸೀನರಾಗಿ, ’ ಎನ್ನುತ್ತ ಖುರ್ಚಿ ಒಂದನ್ನು ತೋರಿಸಿದ. ಎದುರಿಗೆ ಕನ್ನಡಿ, ನೋಡಲು ಸ್ವಚ್ಚವಾಗಿಯಿ ಇತ್ತು ಅಂಗಡಿ. 
ಎದುರಿಗೆ ನಿಂತವನು, 
’ಎಲ್ಲಿ ಕೈ ಮುಂದೆ ಚಾಚಿ’ ಎಂದ. 
ನೋಡಿದರೆ ಅವನ ಕೈಲಿ ಪಂಚಪಾತ್ರೆಯಂತ ಪುಟ್ಟ ಲೋಟ, ಹಾಗು ಉದ್ದರಣೆ. ಇದೇನು ಪದ್ದತಿಯೋ ಹಾಳಾದ್ದು ಎಂದು ಗೊಣಗಿಕೊಳ್ಳುತ್ತ , ಕೈ ಚಾಚಿದೆ
’ಗಂಗೇ ಚ ಯಮುನೇ ಚ ….’ ಎಂದು ಸಣ್ಣ ದ್ವನಿಯಲ್ಲಿ ಗೊಣಗಿಕೊಳ್ಳುತ್ತ ನನ್ನ ಕೈಗೆ ಮೂರು ಉದ್ದರಣೆ ನೀರು ಹಾಕಿ. 
’ಈಗ ಸಂಕಲ್ಪ ಮಾಡಿಬಿಡೋಣ, ನಿಮ್ಮ ಹೆಸರು, ಗೋತ್ರ ಹೇಳುತ್ತೀರ’ ಎಂದು ವಿನಯವಾಗಿ ಕೇಳಿದ 
ಅಯ್ಯೋ ಇದೇನು ಹುಚ್ಚರ ಲೋಕವೆ ? , 
ಕಟಿಂಗ್ ಎಂದು ಬಂದರೆ ದೇವಾಲಯದಲ್ಲಿ ಕೇಳುವಂತೆ , ಗೋತ್ರ ಪಾತ್ರ ಎಂದೆಲ್ಲ ಕೇಳುತ್ತಿರುವನಲ್ಲ ಎನ್ನುತ್ತ 
’ಇದೇನು ನೀವು ಕೇಳುವುದು ವಿಚಿತ್ರ, ಕಟಿಂಗ್ ಮಾಡಿಸಲು ಬಂದರೆ ದೇವಾಲಯದ ಪುರೋಹಿತರ ರೀತಿಯಲ್ಲಿ ಗೋತ್ರ ಪ್ರವರ ಎಂದೆಲ್ಲ ಕೇಳುವಿರಲ್ಲ. ’ ಎಂದು ನಕ್ಕೆ 
’ಹಾ ಹಾಗೆ , ಒಂದು ರೀತಿ ಅಭ್ಯಾಸ ಬಲ ಅಂದುಕೊಳ್ಳಿ, ಮೊದಲು ದೇವಾಲಯದಲ್ಲಿ ಪೂಜೆಯ ಕೆಲಸ ಮಾಡಿಕೊಂಡಿದ್ದೆ, ಈಗ ಈ ಉದ್ಯೋಗ ಹಿಡಿದಿರುವೆ. ಯಾವುದೇ ಕೆಲಸಕ್ಕೆ ಮೊದಲು ದೇವರ ಹೆಸರಿನಲ್ಲಿ ಸಂಕಲ್ಪ ಮಾಡುವುದು ಒಳ್ಳೆಯದಲ್ಲವೇ. ಅಲ್ಲದೆ ಮೊದಲಿನಿಂದ ಬಂದ ವೃತ್ತಿಧರ್ಮ. ಹೀಗೆ ಹತ್ತು ಹಲವು ಕಾರಣಗಳು. ನೀವು ನಿಮ್ಮ ಗೋತ್ರ, ನಕ್ಷತ್ರ ಹೆಸರು ಹೇಳಿದಲ್ಲಿ, ಸಂಕಲ್ಪ ಮುಗಿಸಿ, ಕಟಿಂಗ್ ಪ್ರಾರಂಭಿಸುವೆ ’ ಎಂದನು 
ನಾನು ಸಖೇಧಾಶ್ಚರ್ಯದಲ್ಲಿ ಮುಳುಗಿ, 
’ಏಕೆ ಈಗ ಆ ವೃತ್ತಿಯನ್ನು ಬಿಟ್ಟು ಬಿಟ್ಟಿರಿ’
’ನಾನೆಲ್ಲಿ ಬಿಟ್ಟೆ, ಈಗ ದೇವಾಲಯ ಹಾಗು ಪೂಜೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಅಲ್ಲಿ ಅದು ಪೂಜೆಗೆ ತನ್ನದೇ ನೌಕರರನ್ನು ನೇಮಿಸಿದೆ. ಅಲ್ಲದೆ ಈಗ ಅಲ್ಲಿ ಕೆಲವು ಎಮ್ ಎನ್ ಸಿ ಕಂಪನಿಗಳು , ರಿಲೆಯನ್ಸ್ ಮುಂತಾಸ ಭಾರತೀಯ ಕಂಪನಿಗಳು ಬಂಡವಾಳ ಹೂಡಿವೆ. ಹಾಗಿರಲು ನಾನು ಅಷ್ಟೊಂದು ಬಂಡವಾಳ ಹಾಕಲಾಗಲಿ, ದೇವಾಲಯ ನಡೆಸಲಾಗಲಿ ಎಲ್ಲಿ ಸಾಧ್ಯ ? ಅದಕ್ಕೆ ಈ ವೃತ್ತಿ’ ಎಂದನು
ನಾನು ಏನನ್ನಾದರು ಹೇಳುವ ಮುಂಚೆಯೆ , ಎತ್ತರದ ವ್ಯಕ್ತಿ ಒಬ್ಬರು ಪ್ರವೇಶಿಸಿದರು. ಅವರನ್ನು ನೋಡುವಾಗಲೆ , ಅಂಗಡಿಯ ಮಾಲಿಕ ಭಯ ಭಕ್ತಿಯಿಂತ ಅತ್ತ ತಿರುಗಿದ. ನಾನು ಕುಳಿತಿರುವುದು ಲೆಕ್ಕವೆ ಇಲ್ಲ ಎನ್ನುವ ರೀತಿ. ಅವರ ಕಡೆ ನಡೆದು. ಅಲ್ಲಿದ್ದ ಖುರ್ಚಿ ತೋರಿಸುತ್ತ 
’ಕುಳಿತುಕೊಳ್ಳಿ ಸಾರ್, ತುಂಬಾ ದಿನ ಆಯಿತು ಇತ್ತ ಬಂದು, ಕಟಿಂಗ್ ಮಾಡಲ , ಶೇವಿಂಗ್ ’ ಎಂದರು. ಹೊರಗಿನಿಂದ ಬಂದಾತ 
ಅಲಕ್ಷ್ಯದಿಂದ ಎಂಬಂತೆ 
’ಇಲ್ಲಿ ಬಂದಿರುವೆನಲ್ಲ , ಕಟಿಂಗ್ ಹಾಗು ಶೇವಿಂಗ್ ಎರಡು ಮಾಡಿಬಿಡು. ಹುಷಾರ್, ಹೆಚ್ಚು ಕಡಿಮೆ ಆದರೆ ಅಷ್ಟೆ’ ಎಂದರು
ನಾನು ಸ್ವಲ್ಪ ಕೋಪ ಭಾವದಿಂದ , ಕಟಿಂಗ್ ಅಂಗಡಿಯಾತನತ್ತ ನೋಡಿದೆ. ಅವನು ಕಣ್ಸನ್ನೆಯಲ್ಲಿಯೆ ನನ್ನನ್ನು ಮಾತನಾಡಬೇಡಿ ಎಂದು ತಡೆದ. ಹೊರಗಿನಿಂದ ಬಂದಿದ್ದ  ವ್ಯಕ್ತಿ ನನ್ನ ಕಡೆ ನೋಡುತ್ತ, ಅಂಗಡಿಯವನೊಡನೆ.
’ಯಾರಿವನು , ಹೊಸಬನಂತೆ ಕಾಣುತ್ತಿದ್ದಾನೆ ’ 
’ಹೌದು ಸಾರ್ ಪಟ್ಟಣಕ್ಕೆ ಹೊಸಬನಂತೆ ಕಾಣುತ್ತಿದ್ದಾನೆ, ರೈಲ್ ಮಿಸ್ಸಾಗಿ ಇಲ್ಲಿ ಇಳಿದಿದ್ದಾನೆ’ ಎಂದ 
ಅದಕ್ಕೆ ಹೊರಗಿನಿಂದ ಬಂದವನು ನಕ್ಕು,
 ’ರೈಲ್ ಮಿಸ್ಸಾದವರೆಲ್ಲ, ನಿನ್ನ ಬಳಿ ಕಟಿಂಗ್ ಎಂದು ಬರುತ್ತಾರೊ ಸರಿ’ 
ಎಂದು ಸುಮ್ಮನಾದ.
ನಾನು ಚಿಂತಿಸುತ್ತಿದ್ದೆ, ಇವನಿಗೆ ಹೇಗೆ ತಿಳಿಯಿತು, ನಾನು ರೈಲು ಮಿಸ್ಸಾಗಿ ಇಲ್ಲಿ ಬಂದಿರುವೆ ಎಂದು ! ಇವನಿಗೆ ಹೇಗೆ ತಿಳಿಯಿತು?. 
ಅವನ ಕಟಿಂಗ್ ಶೇವಿಂಗ್ ಮುಗಿಯಿತು. ಅಲ್ಲಿದ್ದ ಮಿಶಿನ್ ಒಂದರಲ್ಲಿ ತನ್ನ ಹೆಬ್ಬರಳನ್ನು ಒತ್ತಿದ್ದ ಆತ ಹೊರಟುಹೋದನಂತರ ಅಂಗಡಿಯಾತ ನನ್ನ ಕಡೆ ಬಂದ. 
’ನೀವು ಮಾತನಾಡದೆ ಸುಮ್ಮನೆ ಕುಳಿತಿದ್ದು, ಒಳ್ಳೆಯದಾಯಿತು. ಇಲ್ಲದಿದ್ದರೆ ಒಂದು ಹೋಗಿ ಒಂದು ಅನ್ನುವಂತೆ ಉತ್ತರಿಸುವುದು ಕಷ್ಟ ಆಗುತ್ತಿತ್ತು. ಬನ್ನಿ ಕಟಿಂಗ್ ಮಾಡುವೆ ’ ಎಂದೆ 
’ಅದೇನು ಆತ ಹಣವನ್ನೆ ಕೊಡಲಿಲ್ಲ,ಹಾಗೆ ಹೊರಟುಹೋದರಲ್ಲ ಪರಿಚಯವೇ?" ಎಂದೆ
’ಪರಿಚಯ ಎಲ್ಲಿ ಬಂತು, ಮಾಡಬೇಕಷ್ಟೆ. ಅವರಿಗೆ ಕಟಿಂಗ್ ಹಾಗು ಶೇವಿಂಗ್ ಮಾಡಿದ ಹಣ ನಂತರ ಸರ್ಕಾರ ನಮ್ಮ ಖಾತೆಗೆ ಜಮಾ ಮಡುತ್ತದೆ. ಒಮ್ಮೊಮ್ಮೆ ಅದು ಮಿಸ್ ಆಗುತ್ತದೆ’ 
ನನಗೆ ಆಶ್ಚರ್ಯ
’ಅಲ್ಲ ಅದು ಹೇಗೆ , ಅದೇನು ಅವರಿಗೆ ಕಟಿಂಗ್ ಮಾಡಿದರೆ ಸರ್ಕಾರ ಏಕೆ ಹಣ ಪಾವತಿಸುತ್ತದೆ?" ಎಂದು ಕೇಳಿದೆ,
’ಹೌದು ಅದು ಹಾಗೆ ಸರ್ಕಾರ ಅವರಿಗೆ ಎಲ್ಲ ರೀತಿಯ ಸವಲತ್ತು ಒದಗಿಸಿದೆ, ಹಾಗಾಗಿ ಈ ವ್ಯವಸ್ಥೆ, ’ ಎಂದ
’ನನಗೆ ಅರ್ಥವಾಗಲಿಲ್ಲ, ಅದೇನು ಎಲ್ಲ ವ್ಯವಸ್ಥೆ ಎಂದರೆ, ಕಟಿಂಗ್ ಸಹ ಸರ್ಕಾರ ರಿಬೆಟ್ ಕೊಡುತ್ತದೆಯೆ , ಅದು ಹೇಗೆ ’ ಎಂದೆ
’ನೀವು ತೀರ ಅಮಾಯಕರಂತಿ ನಟಿಸುತ್ತೀರಿ. ನನ್ನನ್ನು ಇಕ್ಕಟಿಗೆ ಸಿಲುಕಿಸಬೇಡಿ’ ಎಂದ ಕಟಿಂಗ್ ಮಾಡುತ್ತಲೆ. 
ಅವನ ದ್ವನಿಯಲ್ಲಿ ಸ್ವಲ್ಪ ಭಯ!  
ಕಡೆಗೆ ಕಟಿಂಗ್ ಮುಗಿಯಿತು. 
’ಎಷ್ಟು ಆಯಿತು, ಇಲ್ಲಿ ಎಷ್ಟು ದರ’ ಎಂದೆ
’ಈಗಲಾದರೆ ನೂರು ರುಪಾಯಿ, ಬೆಳಗ್ಗೆ ಸಮಯವಾದರೆ ನೂರಾಐವತ್ತು ಆಗುತ್ತಿತ್ತು’ ಎಂದ 
’ಅದೇನು ಒಂದೊಂದು ಸಮಯಕ್ಕೆ ಒಂದೊಂದು ದರವೇ?" ನನಗೆ ಆಶ್ಚರ್ಯ
’ಹೌದು , ಬೆಳಗ್ಗೆ ಸಾಮಾನ್ಯ ಪೀಕ್ ಅವರ್ ಎಲ್ಲರೂ ಬರುತ್ತಾರೆ, ಆಗ ರೇಟ್ ಜಾಸ್ತಿ, ಸಂಜೆ ರಾತ್ರಿ ಕಡಿಮೆ ಜನ ಹಾಗಾಗಿ ಪ್ರೋತ್ಸಾಹ ನೀಡಲು, ಕಡಿಮೆ ದರ, ಫ್ಲೈಟ್ ಗಳಲ್ಲಿ ಇರುತ್ತದಲ್ಲ ಹಾಗೆ ’ ಎಂದ.
’ಬಾನುವಾರ ?" ಎಂದೆ ತಮಾಷಿಗೆ,
’ಬಾನುವಾರ ಇನ್ನೂರಾಐವತ್ತಕ್ಕೆ ಕಡಿಮೆ ಇಲ್ಲ’ ಎಂದ  
ನನಗೆ ತಲೆ ಕೆಟ್ಟಿತು, ಸರಿ ಎಂದು ಪರ್ಸ್ ತೆಗೆದು ಅದರಲ್ಲಿ ನೂರರ ನೋಟು ತೆಗೆದು ಅವನ ಕೈಗಿತ್ತೆ. ಅವನು ನೋಟನ್ನು ಒಮ್ಮೆ ಆಶ್ಚರ್ಯದಿಂದ ದಿಟ್ಟಿಸಿದ. ನಂತರ ನನ್ನಪರ್ಸ್ ನೋಡಿ ಅದರಲ್ಲಿ ಇದ್ದ ನೋಟಗಳನ್ನು ನೋಡುತ್ತ ಅವನು ಆಶ್ಚರ್ಯ ಚಕಿತನಾದಂತೆ ಕಾಣಿಸಿತು.
’ಅದೇನು ಈ ನೋಟು ಇಷ್ಟೊಂದು ಎಲ್ಲಿಂದ ಬಂತು’ ಅವನು ಆಶ್ಚರ್ಯದಿಂದ ಕೇಳಿದ   
 ಮತ್ತೆ ಅಘಾತ, ಹೋಟೆಲಿನಲ್ಲಿ ಸಹ ಇದೇ ಪ್ರಶ್ನೆ ಕೇಳಿದ್ದಳು ಆಕೆ. 
’ಮತ್ತೆಯದು  ATM ನಿಂದ ಡ್ರಾ ಮಾಡಿದ್ದು’ ಎಂದೆ ಗೊಂದಲದಿಂದ. 
ಸರಿ ಅಲ್ಲಿಂದ ಹೊರಟೆ. ಸ್ವಲ್ಪ ದೂರದಲ್ಲಿ ಹೋಗವದರಲ್ಲಿ , ಹೋಟೆಲ್ ನವಳು ಹೇಳಿದ್ದ ಲಾಡ್ಜ್ ಸಿಕ್ಕಿತು, 
ಒಳಗೆ ಹೋಗುವಾಗಲೆ , ಬಾಗಿಲಲ್ಲಿ ನಿಂತು ಸ್ವಾಗತಿಸಿದರು, ಅಲ್ಲಿಯವರೆ , ಅಹಾ ಎಷ್ಟೊಂದು ಉಪಚಾರ, ನನಗೆ ಖುಶಿ
ನನಗೆ ಅರ್ಥವಾಗಿತ್ತು, ಹೋಟೆಲಿನಾಕೆ ಇವರಿಗೆ ನನ್ನ ಬಗ್ಗೆ ಫೋನ್ ಮಾಡಿ ವಿಷಯ ತಿಳಿಸಿರಬಹುದು, ನಾನು ಬರುತ್ತಿರುವ ವಿಷಯ. 
’ಬನ್ನಿ ಅವನು ಸ್ವಾಗತಿಸಿದ’ 
ಲಾಡ್ಜ್ ಹೆಸರು ’ ನಾಂಪಲ್ಲಿ ಲಾಡ್ಜ್ ’
ಒಳಗೆ ಸಾದಾರಣವಾಗಿಯೆ ಇತ್ತು. ಆದರೆ ಅವರು ಆಧರದಿಂದ ನೋಡಿಕೊಳ್ಳುತ್ತಿದ್ದರು. ಏಕೆ ಎಂದು ಮಾತ್ರ ಅರ್ಥವಾಗಿರಲಿಲ್ಲ. 
ಅಡ್ವಾನ್ಸ್ ಏನಾದರು ಕೊಡಬೇಕ ಎಂದು ಕೇಳಿದೆ. 
'ಕೊಡುವ ಹಾಗಿದ್ದರೆ ಕೊಡಿ, ಇಲ್ಲದಿದ್ದರೂ ಪರ್ವಾಗಿಲ್ಲ , ಹೇಗೂ ಹೊರಡುವಾಗ ಕೊಡುವಿರಲ್ಲ’ 
’ನಾನು ಆಗಲಿ , ನಾಳೆ ಇಲ್ಲಿಂದ ಹೊರಡುವನಿದ್ದೇನೆ. ಅಡ್ವಾನ್ಸ್ ಎಂದು ಐದುನೂರು ಕೊಟ್ಟಿರಲ? ಇಲ್ಲಿ ದಿನ ಒಂದಕ್ಕೆ ಬಾಡಿಗೆ ಎಷ್ಟು’ 
ಅವನು ಎಚ್ಚೆತ್ತ
’ಸಾಕು ಸಾರ್ ಅಷ್ಟು ಕೊಟ್ಟಿರಿ, ನಮ್ಮಲ್ಲಿ ಬಾಡಿಗೆ ದಿನಕ್ಕೆ ಸಾವಿರದ ಇನ್ನೂರು, ಒಂದು ಊಟ ಫ್ರೀ ಎಂದ’  
ಪರವಾಗಿಲ್ಲ, ಇಂದಿನ ಊಟ ಮಾಡಿದರೆ ಆಯ್ತು, ಅದಕ್ಕೆ  ಬೇರೆ ಹಣ ಕೊಡುವುದು ತಪ್ಪಿತು ಎಂದುಕೊಂಡೆ. 
ರಾತ್ರಿ ಊಟ  ನಿದ್ದೆ ಎಲ್ಲಾ ಕಳೆಯಿತು. 
ಬೆಳಗ್ಗೆ ಕೌಂಟರಿನಲ್ಲಿ ಕೇಳಿದೆ 
’ಇಲ್ಲಿಂದ ಹೈದರಾಬಾದ್ ಗೆ ಹೋಗಲು ರೈಲು ಎಷ್ಟು ಹೊತ್ತಿಗೆ ಸಿಗಬಹುದು’ 
’ಮಧ್ಯಾನ ಹನ್ನೆರಡು ಗಂಟೆ ಐದು ನಿಮಿಶಕ್ಕೆ ಒಂದು ಟ್ರೈನ್ ಇದೆ. ಇಲ್ಲಿಂದ ಅರ್ದಗಂಟೆ ಸ್ಟೇಶನ್ ಗೆ   ಅರಾಮವಾಗಿ ಹೋಗಬಹುದು’ ಎಂದ 
ಸರಿ ಅಲ್ಲಿ ಬೆಳಗಿನ ಉಪಾಹಾರ ಮುಗಿಸಿದವನು ಅಲ್ಲಿಂದ ರೂಮು ಖಾಲಿ ಮಾಡಿ ಹೊರಟೆ. ನಾನು ಹಣ ಕೊಟ್ಟಾಗ ಎಂದಿನಂತೆ ಅವನು ಅದನ್ನು ಜತನದಿಂದ ಎಣಿಸಿ, ಒಳಗಿಟ್ಟು ನನ್ನನ್ನು ಪೆದ್ದನನ್ನು ನೋಡುವಂತೆ ನೋಡಿ, 
’ಸರಿ ಸಾರ್ ಹೋಗಿ ಬನ್ನಿ ನಮಸ್ಕಾರ ’ ಎಂದ
ಹಾಗೆ ನಿಧಾನವಾಗಿ ನಡೆದು ಸಾಗಿದ್ದೆ, ಹೇಗೂ ಆಗಿನ್ನು ಬೆಳಗಿನ ಹತ್ತು ಗಂಟೆ , ರೈಲಿರುವುದು ಹನ್ನೆರಡಕ್ಕೆ, 
ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಬೋರ್ಡ್ ಕಾಣಿಸಿತು. 
ದಪ್ಪಕ್ಷರದಲ್ಲಿ  
’ಹಿಂದೂ ವರ್ಶಿಪ್ ಪ್ಲೇಸ್ ’ ಎಂದು ಬರೆದು
ಸಣ್ಣದಾಗಿ ಕೆಳಗೆ ಬರೆದಿದ್ದರು, ’ಯೂ ಕೆನ್ ಪ್ರೇ ಹೀಯರ್ ’.
ಇದೇನು ದೇವಾಲಯ ಈ ರೀತಿ ಮಾಲ್ ರೀತಿ ಇದೆಯಲ್ಲ ಅನ್ನಿಸಿ ಒಳಗೆ ಹೋಗಿ ನೋಡೋಣವೆ ಎನ್ನಿಸಿತು.  ಸರಿ ಮತ್ತೇನು ಬಾಗಿಲತ್ತ ನಡೆದೆ.
ದೊಡ್ಡ ಗಾಜಿನ ಬಾಗಿಲುಗಳು, ನಾನು ಒಳಗೆ ಹೋಗುವಾಗಲೆ ಬಾಗಿಲ ಬಳಿ ಸ್ವಚ್ಚವಾದ ಸೂಟ್ ಧರಿಸಿದ್ದ ವ್ಯಕ್ತಿಯೊಬ್ಬ, ಬಾಗಿಲು ತೆರೆದು ನನ್ನನ್ನು ವಿನಯಪೂರ್ವಕವಾಗಿ ಸ್ವಾಗತಿಸಿದ. 
’ಪ್ಲೀಸ್ ವೆಲ್ ಕಂ ಸಾರ್, ಫೀಲ್ ಫ್ರೀ ಟು ಪ್ರೇ ಯುವರ್ ಪೇವರೆಟ್ ಗಾಡ್ ’
ನಾನು ಪೆದ್ದನಂತೆ ಕೇಳಿದೆ
’ಇದು ದೇವಾಲಯದ ರೀತಿ ಅಲ್ಲವೆ ,  ಹೋಟೆಲ್ ರೀತಿ ಕಾಣುತ್ತಿದೆಯಲ್ಲ ’ 
ಅವನು ತಕ್ಷಣ ಕನ್ನಡಕ್ಕೆ ಬದಲಾದ
’ಹೌದು ಸಾರ್, ದಯಮಾಡಿ ಒಳಗೆ ಬನ್ನಿ. ನಿಮಗೆ ಎಲ್ಲ ಅನುಕೂಲ ಮಾಡಿಕೊಡಲಾಗುತ್ತೆ’ ನನ್ನನ್ನು ಕರೆದೋಯ್ದ. 
’ನೀವು ಒಬ್ಬರೆ ಬಂದಿರುವುದಾ ಸಾರ್, ಸಂಸಾರ ಕರೆತರಲಿಲ್ಲವಾ" 
’ಇಲ್ಲ ನಾನು ಹೀಗೆ, ಸುಮ್ಮನೆ ಬಂದೆ, ’ ಎಂದೆ ಹೆಚ್ಚಿನ ವಿವರ ಹೇಳದೆ
’ಇಲ್ಲಿ ಬನ್ನಿ ಕುಳಿತುಕೊಳ್ಳಿ ಸಾರ್, ’ ಎನ್ನುತ್ತ ದುಂಡಾದ ಒಂದು ಟೇಬಲ್, ಮತ್ತು ಸುತ್ತಲೂ ಹಾಕಿದ್ದ ಖುರ್ಚಿಗಳನ್ನು ತೋರಿಸುತ್ತ ಹೇಳಿದ 
ನನಗೆ ಕುತೂಹಲ ಎನಿಸುತ್ತಿತ್ತು, ಅಲ್ಲ ದೇವಾಲಯ ಅಂತ ಹೊರಗೆ ಫಲಕವಿದೆ, ಆದರೆ ಇಲ್ಲಿ ದೇವಾಲಯದ ಯಾವ ಲಕ್ಷಣವೂ ಇಲ್ಲ. 
ನಾನು ಕುಳಿತಂತೆ. ಸೂಟುಬೂಟು ಧರಿಸಿದ ವ್ಯಕ್ತಿಯೊಬ್ಬ ವಿನಯದಿಂದ ಬಂದು ನಿಂತು ವಂದಿಸಿದ. 
’ಸಾರ್ ತಾವು ಯಾವ ಪೂಜೆ ಮಾಡಿಸಬೇಕೆಂದಿರುವಿರಿ, ಯಾವ ದೇವರು ವಿವರ ತಿಳಿಸಿ, ಇಲ್ಲಿ ನೋಡಿ ನಿಮಗೆ ಬೇಕಾದ ಎಲ್ಲ ವಿವರವೂ ಇದೆ ’   
ಹೋಟೆಲಿನಲ್ಲಿ ಕೊಡುವಂತೆ ಒಂದು ಮೆನು ತರಹದ ಪುಸ್ತಕ ಕೊಟ್ಟ
ತೆರೆದು ನೋಡಿದೆ. 
ಮೊದಲ ಪುಟವೆ ಗಮನ ಸೆಳೆಯಿತು, ಅದು ರಿಲಾಯನ್ಸ್ ಪೂಜಾ ಸ್ಥಳ . ಇದೇನಿದು ರಿಲಾಯನ್ಸ್ ರವರು ತರಕಾರಿ ಪೆಟ್ರೋಲು ಚಪ್ಪಲಿ ಎಂದು ಏನೆಲ್ಲ ನಡೆಸುತ್ತಿದ್ದರು ಈಗ ದೇವಾಲದಯ ವ್ಯವಹಾರಕ್ಕು ತೊಡಗಿಸಿಕೊಂಡರಾ ಎಂದು ಆಶ್ಚರ್ಯ. ಇರಲಿ ಎಂದು ಮುಂದಿನ ಪುಟಗಳನ್ನು ತೆರೆದುನೋಡಿದೆ
ಪೂಜೆಗೆ ಲಭ್ಯವಿರುವ ದೇವರುಗಳು ೧.ಗಣೇಶ – ರೂ.೧೫೦ ೨. ಶಿವ – ರೂ ೧೫೦  ೩.ವೆಂಕಟೇಶ  ರೂ ೨೦೦  ೪. ನರಸಿಂಹ ರೂ ೨೦೦. ಸತ್ಯನಾರಾಯಣ – ರೂ ೧೭೫ 
ಅರ್ಥವಾಗಲಿಲ್ಲ , 
ಮುಂದಿನ ಪುಟಕ್ಕೆ ಹೋದೆ 
ಕುಂಕುಮಾರ್ಚನೆ ೧೦೦   ಪ್ರಾರ್ಥನೆ ೫೦ ರೂಪಾಯಿ  ಪ್ರಸಾದ ಸಮೇತ ಪೂಜೆ : ರೂ ೫೦೦ 
ಇದೆಲ್ಲ ಏನು ಎನ್ನುವಂತೆ ಅವನ ಮುಖ ನೋಡಿದೆ 
’ಯಾವ ದೇವರ ಪೂಜೆ ಇರಲಿ ಸಾರ್, ದೇವರ ಶುಲ್ಕ ಹಾಗು ಪೂಜೆಯ ಶುಲ್ಕ ಬೇರೆ ಬೇರೆ. ಅಲ್ಲದೆ ಪೂಜೆ ಮಾಡಿಸುವ ಲೇಬರ್ ನಮ್ಮದು ೨೫೦ ಪ್ರತ್ಯೇಕ. ಅದರ ಮೇಲೆ ವ್ಯಾಟ್ ೧೦.೫ % ಮತ್ತ್ತು ಸ್ವಚ್ಛ ಭಾರತ ಶುಲ್ಕ ೨% ಸೇರುತ್ತೆ ಸಾರ್”  ಎಂದ
ನನಗೆ ಅರ್ಥವಾಗಲಿಲ್ಲ 
’ಗಣೇಶನಿಗೆ ಕುಂಕುಮಾರ್ಚನೆ , ಎಷ್ಟಾಗುತ್ತೆ ’ ಎಂದೆ ಅಂದೆ.
’ಗಣೇಶ ಕುಂಕುಮಾರ್ಚನೆ ಅಂದರೆ ….. ಒಟ್ಟು ಸುಮಾರು ೫೫೦ ಅಥವ ೫೮೦ ಆಗಬಹುದು. ಟಿಪ್ಸ್ ನಿಮ್ಮ ಇಷ್ಟ’ 
’ಟಿಪ್ಸ್ …. ದೇವರೆ ಇದೇನು ಕಾಲ ಬಂದಿದೆಯಪ್ಪ’  ಅಂದುಕೊಂಡೆ, 
ಹಾಗೆ ನೋಡಿದರೆ ಎಲ್ಲ ಒಂದೇ,   ಮಂಗಳಾರತಿ ಎಂದು ಒಂದು ಎರಡು ರುಪಾಯಿ ಹಾಕುತ್ತಿದ್ದೆ , ಇಲ್ಲಿ ಅದನ್ನು ವ್ಯಾಪರೀಕರಣ ಮಾಡಿ ಟಿಪ್ಸ್ ಎಂದು ಕರೆಯುತ್ತಿದ್ದಾರೆ. 
ಸರಿ ಒಳಗೆ ಬಂದಾಗಿದೆ ಏಕೊ ಹಾಗೆ ಹೊರಗೆ ಹೋಗಲು ಮುಜುಗರ ನಾಚಿಕೆ ಅನ್ನಿಸಿ, 
’ಗಣೇಶನಿಗೆ ಕುಂಕುಮಾರ್ಚನೆ ಆಗಲಿ ಬಿಡಿ, ನಡೆಯಿರಿ, ಎಲ್ಲಿದೆ , ದೇವಾಲಯ ’ ಎನ್ನುತ್ತ  ಎದ್ದುನಿಂತೆ. 
’ಸಾರ್ ಕುಳಿತುಕೊಳ್ಳಿ, ಎಲ್ಲವೂ ನೀವು ಇರುವಲ್ಲಿಯೆ ಚಿಂತೆ ಬೇಡ’ ಎನ್ನುತ್ತ ನನ್ನ ಆರ್ಡರ್ ತೆಗೆದುಕೊಂಡು ಹೊರಟುಹೋದ. 
ಇದೇನಪ್ಪ ಎಂದು ಕಾಯುತ್ತ ಕುಳಿತಂತೆ, ನನ್ನ ಎದುರಿಗೆ ದೊಡ್ಡ ಎಲ್ ಸಿ ಡಿ ಪರದೆಯಲ್ಲಿ ಗಣೇಶನ ಚಿತ್ರವೂ, ಸುಮಧುರ ಸಂಗೀತವೂ ಕಾಣಿಸುತ್ತಿತ್ತು. ನನ್ನತ್ತ ಒಬ್ಬಾತ ಬಂದ ಅವನು ಬರುವಾಗಲೆ ಗಮನಿಸಿದೆ, ಸೂಟುಬೂಟು ಧರಿಸಿದ್ದ.
ಅವನ ಕೈಯಲ್ಲಿ ದೊಡ್ಡ ತಟ್ಟೆ, ಗಂಟೆ, ಮುಂತಾದ ವಸ್ತುಗಳಿದ್ದವು. 
ನನ್ನ ಎದುರಿನ ಟೇಬಲಿನಲ್ಲಿ, ಬೆಳ್ಳಿಯ ತಟ್ಟೆಯನ್ನು ಅದರ ಮೇಲೆ ಗಣೇಶನ ಸುಂದರ ವಿಗ್ರಹವನ್ನು ಇರಿಸಿದ. ನಗುತ್ತ ಪಕ್ಕದಲ್ಲಿ ಕುಳಿತವನು. ಕೈ ಹಿಡಿಯಿರಿ ಎನ್ನುತ್ತ ಕೈಗೆ ಒಂದೆರಡು ಚಮಚದಷ್ಟು ತನ್ನ ಬಳಿಯಿದ್ದ ಗಿಂಡಿಯಿಂದ ನೀರು ಹಾಕಿದ. ಶುದ್ದಿಮಾಡಿಕೊಳ್ಳಲು. 
’ನಿಮ್ಮ ಹೆಸರು ’ ಎಂದ.ಹೆಸರು ಹೇಳಿದೆ. 
ನನ್ನ ಎದುರಿಗೆ, ತಟ್ಟೆಯಲ್ಲಿ ಸ್ವಲ್ಪ ಹೂವನ್ನು, ಚಿಕ್ಕ ಚಿಕ್ಕ ಊದುಗಡ್ಡಿ, ಕುಂಕುಮ ಇರಿಸಿದ. 
ಗಣೇಶನ ಪೂಜೆ ಮಾಡುತ್ತ, ಹೂವು ಹಾಕಿ ನಂತರ ಅವನು ಹೇಳಿದಂತೆ ಕುಂಕುಮದಲ್ಲಿ ಪೂಜಿಸಿದೆ. ಗಂಧದ ಕಡ್ಡಿ ಬೆಳಗಿ, ಮಂಗಳಾರತಿ ಮಾಡಿಸಿದ. 
’ನಮ್ಮಲ್ಲಿ ಅಷ್ಟೆ ಸಾರ್, ನೀವು ಕೇವಲ ಕುಂಕುಮಾರ್ಚನೆ ಎಂದರೂ ಸಹ ಮಂಗಳಾರತಿ ಎಂದು ಮಾಡೆ ಮಾಡುತ್ತೇವೆ, ಹಣಕ್ಕಾಗಿ ಸಂಪ್ರದಾಯ ಕಡೆಗಣಿಸಬಾರದು ನೋಡಿ ’ ಎಂದ. ನಾನು ಅರ್ಥ ಆದವನಂತೆ ತಲೆ ಆಡಿಸಿದೆ. 
ಹತ್ತು ನಿಮಿಷದಲ್ಲಿ ಎಲ್ಲ ಮುಗಿಯಿತು. ನಂತರ, ನನ್ನ ಟೇಬಲ್ಲಿನ ಮೇಲಿದ್ದ ಗಣಪತಿ, ಎಲ್ಲವನ್ನು ತೆಗೆದು ತನ್ನ ಬಳಿ ಇದ್ದ ತಟ್ಟೆಯಲ್ಲಿ ಇರಿಸಿದ. ಪೂಜೆ ಮಾಡಿದ ಹೂವನ್ನು ಕೊಟ್ಟು, ಜೊತೆಗೆ ಸ್ವಲ್ಪ ಕಲ್ಲು ಸಕ್ಕರೆ ನೀಡಿದ. 
’ಎಲ್ಲ ಸಾಂಗವಾಗಿ ಆಯಿತು ಸಾರ್ ’ ಎಂದು ಹಲ್ಲು ಕಿರಿದ. 
ನಾನು ವಿದಿ ಇಲ್ಲದೆ ಕೇಳಿದೆ 
’ಸರಿ ಬಿಡಿ, ಎಲ್ಲ ಆಯಿತಲ್ಲ, ಒಟ್ಟು ಎಷ್ಟು ಹಣ ಕೊಡಬೇಕು ’ ಎಂದೆ 
’ಅವನು ತನ್ನ ಬಳಿ ಇದ್ದ ಕ್ಯಾಲ್ಕುಲೇಟರ್ ತೆಗೆದು ನನ್ನತ್ತ ತಿರುಗಿ, ರಸೀದಿ ಬೇಕಾ ಬೇಡವಾ ಸಾರ್, ನಮ್ಮಲ್ಲಿ ಸಾಮಾನ್ಯ ರಸೀತಿ ಇಲ್ಲದ ಯಾವ ವ್ಯವಹಾರವು ಇಲ್ಲ, ನೀವು ಹೊಸಬರಂತೆ ಕಂಡಿರಿ ಅದಕ್ಕೆ ಕೇಳಿದೆ , ರಸೀದಿ ಕೊಡಲ’ ಎಂದ 
ಆಗಲಿ ಎಂದು ತಲೆ ಆಡಿಸಿದೆ. 
ಅವನು ಲೆಕ್ಕ ಹಾಕುತ್ತ, ಸಾರ್ ಒಟ್ಟು, ಆರುನೂರ ಇಪ್ಪತ್ತು ರೂಪಾಯಿ ಆಯಿತು. ಎಂದ. 
ನನ್ನ ಬಳಿ ಇದ್ದ , ನೂರರ ಏಳು ನೋಟನ್ನು ಅವನಿಗೆ ನೀಡಿದೆ. ಅವನು ಗಾಭರಿ ಆಗಿ ಹೋದ . ಒಳಗೆ ಓಡಿದವ ಎಷ್ಟೋ  ಸಮಯದ ನಂತರ ಬಂದ. ನಾನು ಇನ್ನೂ ಅಲ್ಲಿ ಕುಳಿತಿರುವದನ್ನು ಕಂಡು 
’ಮತ್ತೇನು ಎನ್ನುವಂತೆ ಮುಖ ನೋಡಿದ ’
ಚಿಲ್ಲರೆ ಕೊಡಲಿಲ್ಲ ಅನ್ನಬೇಕು ಅಂದುಕೊಂಡವನು ಅದು ಟಿಪ್ಸ್ ಅಂತ ಇಟ್ಟುಕೊಂಡನೇನೊ ಅನ್ನಿಸಿತು. 
ಹತ್ತಿರ ಬಂದವನ ಬಳಿ ಕೇಳಿದೆ
’ಅಲ್ಲ ಇದೇನು ಎಲ್ಲ ಇಲ್ಲಿ ಹೀಗಿದೆ. ಮೊದಲಾದರೆ ಪುರೋಹಿತರಲ್ಲವೇ ದೇವರ ಪೂಜೆ ಮಾಡುತ್ತ ಇದ್ದದ್ದು ಈಗ ಇದೊಂದು ವ್ಯಾಪಾರದಂತೆ ಆಗಿದೆ ’ 
ಅವನ ಮುಖದಲ್ಲಿ ಕೋಪ ಕಾಣಿಸಿತು
’ಅಂದರೆ ನಾವು ಮಾಡಬಾರದು ಎಂದು ನೀವು ಹೇಳುತ್ತಿರುವುದಾ’ ಎಂದ
’ಇಲ್ಲ ನಾನೆಲ್ಲಿ ಹಾಗೆ ಹೇಳಿದೆ, ಯಾರು ಬೇಕಾದರು ದೇವರನ್ನು ಪೂಜಿಸಬಹುದು. ಇದೆಲ್ಲ ಯಾಕೆ ಬದಲಾಯಿತು, ಅಂತ ಕೇಳಿದೆ ಅಷ್ಟೆ ’ ಅಂದ
’ನೀವು ಮಾಡುತ್ತಿರುವ ಪ್ರಶ್ನೆ ಎಂತದೂ ಗೊತ್ತ ನಿಮ್ಮನ್ನು ಅರೆಷ್ಟೆ ಮಾಡಬಹುದು’ ಎಂದ 
ನನಗೆ ಗಾಭರಿ ಆಗಿಹೋಯಿತು. ಅಲ್ಲ ಇದೇನು , ನಾನೇನು ಕೇಳಬಾರದ ಪ್ರಸ್ನೆ ಕೇಳಿದೆ, ನನ್ನ ಅಪರಾದವೇನು ಅಂತ ತಿಳಿಯಲೇ ಇಲ್ಲ . 
’ನಿಮಗೆ ತಿಳಿದಿರಲಿ, ನಿಮ್ಮ ಪ್ರಶ್ನೆಯನ್ನು ಪೋಲಿಸರಿಗೆ ತಿಳಿಸಿದರೆ, ನಿಮ್ಮನ್ನು ಅಸಹಿಷ್ಣತೆಯ ಕಾನೂನಿನ ೧೪ ನೇ ಕ್ಲಾಸಿನ ಪ್ರಕಾರ ಹತ್ತು ವರ್ಷ ಜೈಲಿಗೆ ಹಾಕಬಹುದು, ಹತ್ತು ಸಾವಿರ ದಂಡವೂ ಇರುತ್ತೆ ’ ಎಂದ 
ಇಲ್ಲಿ ಎಂತದೋ ಒಂದು ಗೊಂದಲವಿದೆ ಅನ್ನಿಸಿತು, ಅಥವ ಇಲ್ಲಿಯ ಪರಿಸ್ಥಿತಿ ನನಗೆ ಪೂರ್ತಿ ಅರ್ಥವಾಗುತ್ತಿಲ್ಲ , ಮೌನವೇ ಉತ್ತಮ ಉಪಾಯ ಅನ್ನಿಸಿ
’ನನಗೆ ತಿಳಿಯಲಿಲ್ಲ ಕ್ಷಮಿಸಿ ’ ಎನ್ನುತ್ತ ಹೊರಗೆ ಬಂದೆ. 
ನಾನು ಯಾವುದೋ ಗೊಂದಲಪುರಿಯಲ್ಲಿರುವದಾಗಿ ಭಾಸವಾಯಿತು.  
ಅಲ್ಲಿಂದ ನಡೆದೆ. ರೈಲ್ವೇ ನಿಲ್ದಾಣ ಯಾವ ಕಡೆಯೋ ಯಾರನ್ನಾದರು ಕೇಳಬೇಕು. ಅಂದುಕೊಳ್ಳುತ್ತಿದ್ದೆ. ಪುಟ್ ಪಾತಿನಲ್ಲಿ ನಡೆಯುತ್ತಿದ್ದ ತಲೆ ತಗ್ಗಿಸಿದ್ದ ನಾನು ತಲೆ ಎತ್ತಿ ನೋಡಿದರೆ, ನನ್ನ ಸುತ್ತ ನಾಲಕ್ಕು ಐದು ಜನ ಇದ್ದಾರೆ, ನೋಡಿದರೆ ಕ್ರಿಮಿನಲ್ ಗಳ ಹಾಗೆ ಕಾಣುತ್ತಿರುವರು. ಅವರೆಲ್ಲ ಹ್ಯಾಟ್ ಧರಿಸಿ, ಮುಖ ಮುಚ್ಚಿಕೊಂಡಿದ್ದರು ತಕ್ಶಣ ಗಮನಿಸಿದೆ, ಅವರ ನಾಯಕನಂತೆ ಇದ್ದವನ್ನು ಕಟಿಂಗ್ ಶಾಪಿನಲ್ಲಿ ಇದ್ದು ನನಗೆ ಕಟಿಂಗ್ ಮಾಡಿದವನು.  
ಛೇ ! ಇದೆಂತದು ಎಂದು ನಾನು ಅಂದುಕೊಳ್ಳುವದರಲ್ಲಿ
’ಏಯ್ ನಿನ್ನ ಹತ್ತಿರ ಇರುವ ಹಣವನ್ನೆಲ್ಲ ಇತ್ತ ಕೊಡು’ ಎನ್ನುತ್ತ ಕೂಗು ಹಾಕಿದ. 
ನನಗೆ ಅರ್ಥವಾಗಿ ಹೋಗಿತ್ತು, ಸ್ವಷ್ಟವಾಗಿ ಕನ್ನಡದಲ್ಲಿ ರೋಪ್ ಹಾಕುತ್ತಿದ್ದಾನೆ ಅವನೇ ಖಂಡಿತ. ನಾನು ಏನು ಎಂದು ಯೋಚಿಸುವ ಮೊದಲೆ ಪಕ್ಕದಲ್ಲಿ ಮೋಟರ್ ಬೈಕ್ ಸದ್ದು ಆಯಿತು. 
ನಾನು ಅತ್ತ ತಿರುಗಿದೆ. ಪೋಲಿಸ್ ಅಧಿಕಾರಿ ಒಬ್ಬ, ಬೈಕ್ ನಿಲ್ಲಿಸುತ್ತಿದ್ದ. ನಾನು ಪುನಃ ಪಕ್ಕಕ್ಕೆ ನೋಡಿದೆ, ನನ್ನನ್ನು ಸುತ್ತುವರೆದಿದ್ದ, ಕಳ್ಳರೆಲ್ಲ ಮಾಯ, ದೂರದಲ್ಲಿ ಓಡುತ್ತಿರುವುದು ಕಾಣಿಸಿತು.
ಪೋಲಿಸ್ ಅಧಿಕಾರಿ ಹತ್ತಿರ ಬಂದ . ನಾನು ಕೃತಜ್ಞತೆಯಿಂದ 
’ಥ್ಯಾಂಕ್ಯೂ ಸಾರ್ ಸರಿಯಾದ ಸಮಯಕ್ಕೆ ಬಂದು ನನ್ನ ಕಾಪಾಡಿದಿರಿ, ಹಣ ದೋಚಲು ಬಂದಿದ್ದರು’ 
’ಥ್ಯಾಕ್ಸಾ, ಹಾ ಇರಲಿ, ನಿಮ್ಮ ಹತ್ತಿರ ಎಷ್ಟು ಹಣ ಇದೆ’ ಎಂದ ಪೋಲಿಸ್ ಅಧಿಕಾರಿ ದರ್ಪದಿಂದ. 
’ಹಣ,? ಇರಬಹುದೇನೊ ಸಾರ್, ಒಂದೂವರೆ ಸಾವಿರದಷ್ಟು ಉಳಿದಿದೆ, ಬೆಂಗಳೂರು ಸೇರಲು ಬೇಕಲ್ಲ. ನಾನು ಇಲ್ಲಿಯವನಲ್ಲ ಸಾರ್ ಬೆಂಗಳೂರಿನವನು’ 
’ಹಾ ಹಾ ಎಲ್ಲ ಗೊತ್ತಿದೆ. ಒಂದೂವರೆ ಸಾವಿರ ಎಂದು ಸುಳ್ಳು ಬೇರೆ ಹೇಳುತ್ತಿದ್ದೀರಿ, ನನಗೆ ಬಂದಿರುವ ಸುದ್ದಿ ಪ್ರಕಾರ, ನಿಮ್ಮ ಹತ್ತಿರ ಇರುವ ಹಣದ ಒಟ್ಟು ಮೌಲ್ಯ ಒಂದೂವರೆ ಕೋಟಿ’ ಅಂದ , 
ಇದೇನು ಹುಚ್ಚರ ಸಂತೆ. !! 
’ಸಾರ್ ಇದೇನು ಹೇಳುವಿರಿ’ 
’ರೀ ನಮಗೆ ಕಿವಿಯಲ್ಲಿ ಹೂ ಇಡುವಿರಾ. ಈಗ ನಿಮ್ಮ ಬಳಿ ಇರುವ ನೋಟುಗಳು, ಚಾಲ್ತಿಯಲ್ಲಿಲ್ಲ, ಇರುವುದು ದೇಶದ ಮ್ಯೂಸಿಯಂಮಿನಲ್ಲಿ ಮಾತ್ರ. ಅದರ ಬೆಲೆ ಅಷ್ಟಾಗುತ್ತೆ ಅಂತ ನಿಮಗೇ ಗೊತ್ತಿಲ್ಲ ಅಲ್ವಾ ?" ಎಂದ ವ್ಯಂಗ್ಯವಾಗಿ. 
ನಾನು ಉತ್ತರಿಸಿದೇ ಸುಮ್ಮನೆ ನಿಂತೆ. 
ಮತ್ತೆ ಅವನೇ ಹೇಳಿದ
’ಅದು ಹೋಗಲಿ, ನೀವೇನು ಇಲ್ಲಿ ಕಿಚ್ಚು ಹಚ್ಚಲು ಬರುತ್ತಿರುವಿರಾ? ಎಲ್ಲಿ ಹೋದರು,  ಜಾತಿ ಪದ್ದತಿಯನ್ನು ಮತ್ತೆ ಕೆಣಕುವ ಪ್ರಶ್ನೆಗಳನ್ನೆ ಕೇಳುತ್ತಿದ್ದೀರಿ . ಕಟಿಂಗ್ ಶಾಪಿನಲ್ಲಿ, ದೇವಾಲಯದಲ್ಲಿ ಎಲ್ಲ ಕಡೆ ? . ಬೇಕೆಂದು ನೀವು ಈ ಕೆಲಸ ನಡೆಸುತ್ತಿರುವಂತಿದೆ, ಯಾವ ದೇಶದಿಂದ ಇಲ್ಲಿಗೆ ಬರುತ್ತಿರುವಿರಿ, ಪಾಕಿಸ್ತಾನವೋ, ಇಲ್ಲ ಚೀನವೋ ನಡೆಯಿರಿ ಸ್ಟೇಶನ್ನಿಗೆ, ಒಂದಿಷ್ಟು ವಿಚಾರಿಸೋಣ ’ ಎಂದ 
ನನಗೆ ಬೆವರಲು ಶುರುವಾಯಿತು. ಇದೆಂತಹ ತಾಪತ್ರಯದಲ್ಲಿ ಸಿಕ್ಕಿದೆ, ಇಲ್ಲಿ ಏನು ನಡೆದಿದೆ. ನಾನು ಇಲ್ಲಿದ್ದರೆ ಖಂಡಿತ ತೊಂದರೆಗೆ ಸಿಲುಕುವೆ ಎಂದು ಅರಿವಾಯಿತು. ಹೇಗಾದರು ಸರಿ ಮೊದಲು ರೈಲ್ವೇ ಸ್ಟೇಶನ್ ಸೇರಿ, ಅಲ್ಲಿಂದ ಹೊರಟು ಹೈದರಾಭಾದ್ ಸೇರಬೇಕು. ಆಗ ಗಮನಿಸಿದೆ.  ಅವನು ಇನ್ನು ಬೈಕ್ ಮೇಲೆ ಕುಳಿತಿದ್ದಾನೆ. ನಾನು ನಿಂತಿರುವ ರಸ್ತೆ ಸುಮಾರು ಐದು ಅಡಿ ಎತ್ತರದಲ್ಲಿದೆ. ಕೆಳಗೆ ಮತ್ತೊಂದು ಸಣ್ಣ ರಸ್ತೆ ಒಳಬಾಗಕ್ಕೆ ಹೋಗುತ್ತಿದೆ. ಹೆಚ್ಚು ಹೋಚಿಸದೆ , ಕೆಳಗೆ ದುಮುಕಿದೆ, ಸಣ್ಣ ರಸ್ತೆಯತ್ತ ತಿರುಗಿ ಓಡಲು ಶುರುವಿಟ್ಟೆ
ಮೇಲಿನಿಂದ ಪೋಲಿಸ್ ಅಧಿಕಾರಿ ನಗುತ್ತ ಕೂಗುತ್ತಿದ್ದ
’ ಹಲೋ , ನೀನು ಎಲ್ಲಿ ಓಡಿದರು, ನನ್ನ ಕೈನಿಂದ ತಪ್ಪಿಸಿಕೊಳ್ಳಲಾರೆ, ಫೂಲ್ , ಹೆಚ್ಚು ಹೆಚ್ಚು ತಪ್ಪು ಮಾಡುತ್ತಿರುವೆ’ 
ಓಡುತ್ತಿದೆ. ರಸ್ತೆಯ ಕೊನೆ ಬರುವಾಗ ಮುಖ್ಯ ರಸ್ತೆಗೆ ಸೇರುತ್ತಿತ್ತು, ಅಲ್ಲಿದ್ದ ಒಬ್ಬರನ್ನು ಕೇಳಿದೆ 
’ರೈಲ್ವೇ ನಿಲ್ದಾಣ ಇಲ್ಲಿ ಎಲ್ಲಿ ಬರುತ್ತದೆ’ 
ಎಡಕ್ಕೆ ಹೋಗುತ್ತಿರುವ ರಸ್ತೆ ತೋರಿಸಿ ಹೇಳಿದ. 
’ಏ ರಸ್ತೆಯಲ್ಲಿ ನೇರವಾಗಿ ಹೋದರೆ, ರೈಲು ನಿಲ್ದಾಣ ತಲುಪುವಿರಿ’ 
ವೇಗವಾಗಿ ಆ ರಸ್ತೆಯಲ್ಲಿ ನಡೆದೆ. ಹತ್ತು ನಿಮಿಶ ಎದುರಿಗೆ ರೈಲ್ವೆ ನಿಲ್ದಾಣ ಕಾಣಿಸಿತು,  ಮುಖ್ಯ ದ್ವಾರದತ್ತ ಗಮನಿಸಿದೆ. ಅದೊಂದು ಅದುನಿಕ ವ್ಯವಸ್ಥೆಯಾಗಿದ್ದು, ಯಾರಾದರು ಬಂದರೆ ತನಗೆ ತಾನೆ ಬಾಗಿಲು ತೆರೆಯುವ ಗಾಜಿನ ದ್ವಾರವಿತ್ತು. ವೇಗವಾಗಿ ಬಾಗಿಲತ್ತ ಹೊರಟೆ. 
ಎಲ್ಲ ಹಾಳಾಯಿತು!. 
ನನ್ನ ಪಕ್ಕದಲ್ಲಿ , ಮೋಟರ್ ಬೈಕ್ ಸದ್ದಾಯಿತು. ತಿರುಗಿದರೆ, ಪಕ್ಕದಲ್ಲಿ ಪೋಲಿಸ್ ಅಧಿಕಾರಿ ನಗುತ್ತ ಗಾಡಿ ನಿಲ್ಲಿಸಿದ್ದ
’ಈಗ ನೀನು ಪೋಲಿಸರ ಕಣ್ತಪ್ಪಿಸಿ ಓಡಿ ನೇರವಾಗಿ ಅಪರಾಧಿ ಆಗಿದ್ದಿ. ಇನ್ನು ನಿನ್ನ ಆಟ ಮುಗಿಯಿತು’ ಎಂದ 
ಏನು ತೋಚದೆ ನಿಂತಿದ್ದೆ. ನಿಲ್ದಾಣದತ್ತ ಗಮನಿಸಿದೆ, ಯಾವುದೋ ರೈಲು ಬಂದು ನಿಂತಿತು. ಒಳಗಿನಿಂದ ಜನ ಹೊರಬರುತ್ತಿದ್ದರು. ಒಳಗಿನಿಂದ ಬರುವವರು, ಪಕ್ಕದಲ್ಲಿದ್ದ ಮೆಷಿನ್ ನಲ್ಲಿ ಹೆಬ್ಬೆರಳು ಊರಿದರೆ ಬಾಗಿಲು ತೆರೆಯುತ್ತಿತ್ತು,  ಈಗ ವೇಗವಾಗಿ ಯೋಚಿಸಿದೆ. ಬೇರೆ ದಾರಿಯೇ ಇಲ್ಲ, ತಪ್ಪು ಮಾಡಲೇ ಬೇಕು. 
ಪೋಲಿಸ್ ಅಧಿಕಾರಿಯ ಮುಖ ನೋಡುತ್ತಿರುವಂತೆ ನಟಿಸುತ್ತಿದ್ದೆ, ಅವನು ನನ್ನ ಮುಖ ನೋಡುತ್ತ ನಗುತ್ತಿದ್ದ,  ಒಳಗಿನಿಂದ ಗುಂಪು ಹೊರಬರುತ್ತಿದ್ದಂತೆ ಬಾಗಿಲು ತೆರೆಯಿತು, ಪೋಲಿಸ್ ಅಧಿಕಾರಿ ಏನೊಂದು ಯೋಚಿಸುವ ಮೊದಲೆ, ನಾನು ವೇಗವಾಗಿ ಬಾಗಿಲ ಕಡೆ ಓಡಿದೆ. ಅವನು ತನ್ನ ಗಾಡಿ ನಿಲ್ಲಿಸಿ ಸ್ಟಾಂಡ್ ಹಾಕುವ ಮೊದಲೆ ನಾನು ಬಾಗಿಲ ಒಳಗಿದ್ದೆ, ಅದೇ ವೇಗದಲ್ಲಿ ಓಡುತ್ತ ಹೋದೆ, ಒಳಗೆ ರೈಲು ಹೊರಡಲು ಸಿಗ್ನಲ್ ಕೊಡುತ್ತಿದ್ದರು. ಎಲ್ಲಡೆ ಹಸಿರು ದೀಪ ಕಾಣುತ್ತಿತ್ತು, ಈಗ ಟಿಕೆಟ್ ಮುಂತಾದ ವಿಷಯದ ಬಗ್ಗೆ ಯೋಚಿಸುವ ಕ್ಷಣ ಅಲ್ಲ, ಓಡುತ್ತ ಹೋಗಿ ರೈಲಿನೊಳಗೆ ತೂರಿಕೊಂಡೆ. ನನ್ನ ಹಿಂದೆ ರೈಲಿನ ಅಟೋಮ್ಯಾಟಿಕ್ ಬಾಗಿಲುಗಳು, ಹಾಕಲ್ಪಟ್ಟವು, ಬಗ್ಗಿ ನೋಡಿದೆ. ಒಳಗೆ ಬಂದ ಪೋಲಿಸ್ ಅಧಿಕಾರಿ ಅತ್ತ ಇತ್ತ ನೋಡುತ್ತಿದ್ದ, ನಾನುರೈಲಿನಲ್ಲಿ ಹತ್ತಿದ್ದನ್ನುಅವನು ಗಮನಿಸಲಿಲ್ಲ ಅನ್ನಿಸುತ್ತಿದೆ. 
ಒಂದು….. ಎರಡು…. ಮೂರು….. 
ನಾನು ಹತ್ತಿದ್ದ ರೈಲು ಚಲಿಸುತ್ತಿತ್ತು. 
’ಉಫ್ ’ ಸದ್ಯಕ್ಕೆ ಬಚಾವ್. ಒಳಗೆ ಹೋದವನು ಅಲ್ಲಿದ್ದ ಒಂದು ಸೀಟಿನಲ್ಲಿ ಕುಳಿತೆ.
ನನ್ನನ್ನೀಗ ಮತ್ತೊಂದು ಅನುಮಾನ ಕಾಡುತ್ತಿತ್ತು. ಪೋಲಿಸ್ ಅಧಿಕಾರಿ ಮುಂದಿನ ನಿಲ್ದಾಣಕ್ಕೆ ನನ್ನ ಬಗ್ಗೆ ತಿಳಿಸಿದ್ದರೆ ಏನು ಗತಿ. ಹಾಗೆ ಸುಮಾರು ಇಪ್ಪತ್ತು ನಿಮಿಶಕ್ಕುಅಧಿಕ ಅದೇ ಮಾನಸಿಕ ಒತ್ತಡದಲ್ಲಿಯೆ  ಕುಳಿತಿದ್ದೆ. ಮತ್ತೊಂದು ನಿಲ್ದಾಣ ಬಂದಿತು. ರೈಲು ಎರಡು ನಿಮಿಶ ನಿಂತಿತು. ಇಲ್ಲ ಯಾವುದೇ ತೊಂದರೆ ಕಾಣಿಸಲಿಲ್ಲ. ಪುನಃ ಹೊರಟಿತು. ಒಂದು ರೀತಿ ನೆಮ್ಮದಿ ನೆಲೆಸಿತು. 
ಈಗ ಎಲ್ಲ ಆಯಾಸವು ಕಾಡುತ್ತಿತ್ತು. ಮಧ್ಯಾನ್ಹದ ಊಟವೂ ಆಗಿರಲಿಲ್ಲ, ಅಲ್ಲದೆ ಓಡಿ ಬಂದ ಸುಸ್ತು. ಕಣ್ಣೆಳೆಯುತ್ತಿತ್ತು. 
ಪಕ್ಕದಲ್ಲಿದ್ದವನನ್ನು ಅಂಗ್ಲದಲ್ಲಿ ಪ್ರಶ್ನಿಸಿದೆ 
’ಹೈದರಾಬಾದ್ ಎಷ್ಟು ದೂರವಿದೆ’ ಎಂದು
’ಸುಮಾರು ನೂರಾಐವತ್ತು ಕಿ.ಮೀ ಆಗಬಹುದು, ಇನ್ನು ಒಂದೂವರೆ ಘಂಟೆ ಸಮಯವಿದೆ ’ ಎಂದ  
ಹಾಗೆ ಹಿಂದಕ್ಕೆ ತಲೆ ಒರಗಿಸಿದೆ. ಕಣ್ಣು ಎಳೆಯುತ್ತಿತ್ತು. ನಿದ್ರೆಗೆ ಜಾರಿದೆ …

ಎಷ್ಟು ಸಮಯವಾಯಿತೋ, ಯಾರೋ ಬುಜ ಹಿಡಿದು ಅಲುಗಿಸುತ್ತಿದ್ದರು
’ಸಾರ್ ಹೈದರಾಬಾದ್ ಬಂದಿತು, ಇಳಿಯಿರಿ’ ನೋಡಿದೆ,  ಪಕ್ಕದಲ್ಲಿದ್ದವನು ನನ್ನನ್ನು ಎಚ್ಚರಿಸುತ್ತಿದ್ದ. 
ಅವನಿಗೆ ವಂದನೆ ಸಲ್ಲಿಸಿ, ಎದ್ದೆ. ಕೆಳಗಿಳಿದೆ. ಜನಬರಿತ ನಿಲ್ದಾಣ. ಅಲ್ಲಿಯೆ ಕ್ಯಾಂಟಿನ್ನಿನಲ್ಲಿ ಊಟ ಮುಗಿಸಿದೆ. ಬೆಂಗಳೂರಿನತ್ತ ಹೋಗುವ ರೈಲು ಇತ್ತು, ಟಿಕೆಟ್ ಪಡೆದು. ಹತ್ತಿ ಕುಳಿತೆ. 
ರೈಲು ಬೆಂಗಳೂರಿನತ್ತ ಓಡುತ್ತಿತ್ತು. ನನ್ನ ಮನ ಈಗ ಗೊಂದಲದ ಗೂಡಾಗಿತ್ತು. ನಾನು ನಿಜಕ್ಕು ಅದ್ಯಾವುದೋ ಊರು, 
’ಐಚಿಕ್ಕಮು’ 
ಅದು ನಿಜವಾದ ಅನುಭವವ ಅಥವ ನಾನು ನಿದ್ದೆಯಲ್ಲಿ ಕಂಡ ಕನಸಾ ? 
ಪಕ್ಕದಲ್ಲಿದ್ದವನನ್ನು ಪ್ರಶ್ನಿಸಿದೆ. ಹೈದರಾಬಾದ್ ನಿಂದು ಸುಮಾರು ಇನ್ನೂರು ಕಿ.ಮೀ ದೂರದಲ್ಲಿ ಐಚಿಕ್ಕಮು ಎನ್ನುವ ಊರು , ಅದು ಯಾವ ಜಿಲ್ಲೆ ಬರುತ್ತದೆ, ನೀವು ಕೇಳಿದ್ದೀರಾ ಎಂದು . ನನ್ನ ಮುಖ ವಿಚಿತ್ರವಾಗಿ ನೋಡಿದ. ಅಕ್ಕ ಪಕ್ಕದಲ್ಲಿದವರು ನನ್ನಮುಖ ನೋಡಿದರು
’ಇಲ್ಲವಲ್ಲ, ಆ ರೀತಿ ಒಂದು ಊರಿನ ಹೆಸರು, ಕೇಳಿಲ್ಲವೆ . ನಾನು ಆಂದ್ರವನ್ನು ಎಷ್ಟೋ ಸಾರಿ ಸುತ್ತಿರುವೆ, ಆದರೆ ಈ ಹೆಸರು ಕೇಳಲಿಲ್ಲವಲ್ಲ’ ಎಂದ. 
ಸುತ್ತಲಿನವರು ಅವನ ಮಾತನ್ನು ಅನುಮೋದಿಸಿದಿರು.  
ಒಂದು ಗೊಂದಲದ ಗೂಡಾಗಿ ನಾನು ಸುಮ್ಮನೆ ಕುಳಿತೆ. 
- ಶುಭಂ 

Saturday, May 4, 2013

ವ್ಯಾಪಾರಂ...


ಬನಶಂಕರಿ ಸಮೀಪದ ರುದ್ರಭೂಮಿ. ಯಾರೋ ಪಾಪ ವಿದಿವಶರಾಗಿದ್ದರು ಅನ್ನಿಸುತ್ತೆ ಮಣ್ಣು ಮಾಡಲು  ದೊಡ್ಡದೊಂದು ಗುಂಪು ಬಂದಿತ್ತು.  .  ಎಲ್ಲ ಕ್ರಿಯೆಗಳು ನಡೆದಿದ್ದವು, ಶವವನ್ನು ನೆಲದಲ್ಲಿಟ್ಟು ಮಣ್ಣು ಮುಚ್ಚಲಾಯಿತು. ಮೇಲೆ ಸ್ವಲ್ಪ ದಿಬ್ಬದಂತೆ ಮಣ್ಣಿನ ಗುಡ್ಡೆ. ನೆರೆದಿದ್ದ ಬಂದುಗಳ ಹಲವರ ಕಣ್ಣಲ್ಲಿ ನೀರು,  ಶಾಸ್ತ್ರಗಳೆಲ್ಲ ಮುಗಿದು, ಸುಂದರ ಹಾರಗಳು ಸಮಾದಿಯನ್ನು ಅಲಂಕರಿಸಿದವು. ಕೆಲವರಂತು ಅತ್ಯಂತ ಬೆಲೆಬಾಳುವ ಹಾರಗಳನ್ನೆ ತಂದಿದ್ದರು.
.
.
ದೂರದಿಂದ ಇವರ ಕೆಲಸಗಳನ್ನೆ ದಿಟ್ಟಿಸುತ್ತ ನಿಂತಿದ್ದದ್ದು ಆರ್ಮುಗಂ ಹಾಗು ವಲ್ಲಿ ಎನ್ನುವ ಇಬ್ಬರು ಎಳೆಯರು. ಬಟ್ಟೆ ಸಹ ಸರಿಯಾಗಿ ಹಾಕಿರದ ಇಬ್ಬರು ಅಣ್ಣ ತಂಗಿಯರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ನಿಂತಿದ್ದರು, ಈ ರುದ್ರಭೂಮಿಯ ಕ್ರಿಯೆಯನ್ನು. ಅತ್ತ ಅವರೆಲ್ಲ ಹೊರಟರು. ಅಣ್ಣ ಆಗಲೆ ಮುಂದಡಿ ಇಟ್ಟ, ತಂಗಿ ವಲ್ಲಿ ತಡೆದಳು
"ತಡೆಯೊ ಅವರೆಲ್ಲ ದೂರ ಹೋಗಲಿ, ಈಗಲೆ ಹೋದರೆ ಅಷ್ಟೆ ನಮ್ಮ ಕತೆ"  ಐದು ನಿಮಿಷ ದಾಟುವದರಲ್ಲಿ ಅಲ್ಲಿ ನಿರ್ಜನವಾಯಿತು. ಈಗ ನಿರಾಂತಕವಾಗಿ ಹತ್ತಿರ ಹೋದ ಇಬ್ಬರು ಮಕ್ಕಳು, ಶವದ ದಿಬ್ಬದ ಮೇಲಿದ್ದ ಹಾರಗಳನ್ನೆಲ್ಲ ಆಯ್ದು ತೆಗೆದುಕೊಂಡರು. ಹುಡುಗನ ಮುಖದಲ್ಲಿ ಎಂತದೊ ಸಂತಸ. ಅಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ಹಿಂಬಾದಗ ಗೋಡೆಯತ್ತ ನಡೆದರು, ಗೇಟಿನ ಮೂಲಕ ಅವರು ಹೊರಹೋದರೆ ಅಲ್ಲಿನ ಕಾವಲುಗಾರರು ಅವರನ್ನು ಹಿಡಿದು ಬಡಿಯುತ್ತಿದ್ದರು ಅಷ್ಟೆ. ಹಿಂದಿನ ಗೋಡೆಯತ್ತ ನಡೆದು ಅಣ್ಣ ಮೊದಲು ಗೋಡೆ ಹತ್ತಿದ, ಹಾರವನ್ನೆಲ್ಲ ಪಡೆದು ಗೋಡೆಯ ಮೇಲಿಟ್ಟ, ಕೆಳಗೆ ಬಗ್ಗಿ ತಂಗಿಯನ್ನು ಕೈ ಹಿಡಿದು ಮೇಲೆ ಎಳೆದುಕೊಂಡ. ನಂತರ ಹೊರಬಾಗಕ್ಕೆ ದುಮುಕಿದ, ತಂಗಿಯನ್ನು ಇಳಿಸಿಕೊಂಡ, ಹಾಗೆ ಇಬ್ಬರು ಹಾರಗಳನ್ನು ಕೈಗೆ ತೆಗೆದುಕೊಂಡರು. ಒಬ್ಬರಿಗೊಬ್ಬರು ಮಾತನಾಡುತ್ತ, ಅಲ್ಲಿಯೆ ಹತ್ತಿರದಲ್ಲಿ ಛತ್ರದ ಸಮೀಪವಿದ್ದ,  ಹೂವಿನ ಬೊಕ್ಕೆಗಳನ್ನು ಮಾರುವ ಪ್ರಸಿದ್ದ ಅಂಗಡಿಯತ್ತ ಬಂದರು. ಇವರು ಎದುರು ಬಂದು ನಿಂತೊಡನೆ ಅಂಗಡಿಯ ಒಡೆಯನ ಮುಖ ಗಂಭೀರವಾಯಿತು
"ಎಲ್ಲವನ್ನು ಕ್ಲೀನ್ ಮಾಡಿ ತಂದಿರೇನೊ, ದರಿದ್ರವು ನೀವು"
ಹುಡುಗ ಸೊಗಸಾಗಿ ತಲೆ ಆಡಿಸಿದ
"ಹೌದಣ್ಣ ಇಲ್ಲ ಕಿಲೀನ್ ಮಾಡಿದ್ದೀನಿ"
"ಎಲ್ಲಿ ಮಾಡ್ತ್ರೀರಿ , ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ವ, ಸರಿ ತಗೋಳ್ಳಿ  ಇಲ್ಲಿ ಹೆಚ್ಚು ಹೊತ್ತು ನಿಲ್ಲ ಬೇಡಿ ಓಡ್ತಾ ಇರಿ "
ಎಂದವನೆ ಹತ್ತು ರೂಪಾಯಿ ಎರಡು ನೋಟು ಇಪ್ಪತ್ತು ರೂಪಾಯಿ ತೆಗೆದುಕೊಟ್ಟ. ಅವನು ಅಂದಂತೆ ಆರ್ಮುಗಂ ಹಾಗು ವಲ್ಲಿ ಅಲ್ಲಿಂದ ಮಾಯ
....

"ಈ ಹಾರ ಎಷ್ಟು ರೀ ..."
"ಎಂಬತ್ತು ರೂಪಾಯಿ ಮೇಡಮ್ , ತಗೊಳ್ಳಿ ಈಗಿನ್ನು ಪ್ರೆಶ್ ಆಗಿ ಬಂದಿದೆ"
ಅಂಗಡಿಯವನು ಆಕೆಗೆ ಹೇಳಿದ
"ಜಾಸ್ತಿ ಆಯಿತು ಅನ್ನಿಸುತ್ತೆ ರೀ ಸ್ವಲ್ಪ ಕಡಿಮೆಮಾಡಿಕೊಳ್ಳಿ"
"ಅದೆಲ್ಲ ಆಗಲ್ಲ ಮೇಡಮ್ , ಈಗಿನ ಹೂವಿನ ರೇಟ್ ನಿಮಗೆ ಗೊತ್ತಲ್ಲ, ಮಾರ್ಕೆಟ್ ನಿಂದ ಇಲ್ಲಿ ತಂದು ಮಾರಿದರೆ, ನಮಗೆ ಐದು ರೂಪಾಯಿ ಸಿಗಲ್ಲ, ನಾವಾದರು ಏಕೆ ಅಂಗಡಿ ಇಡಬೇಕು ಹೇಳಿ" ಅಂಗಡಿಯವನು ಜೋರಾಗಿ ಹೇಳಿದ
"ಲೇ ಸುಮ್ಮನೆ ತಗೊಳ್ಳೆ ನೀನು ಸುಮ್ಮನೆ ಚೌಕಾಸಿಗೆ ನಿಲ್ಲ ಬೇಡ, ರಸ್ತೆಯಲ್ಲಿ ಸೀನ್ ಕ್ರಿಯೆಟ್ ಮಾಡಬೇಡ" ಪಕ್ಕದಲ್ಲಿದ್ದ ಗಂಡ ಸಿಡುಕಿದ.
"ಸರಿ ಎರಡು ಹಾರ ಕೊಡಪ್ಪ" ಆಕೆ ಸೋತು ಹೇಳಿದಳು "ಸ್ವಲ್ಪ ಫ್ರೆಶ್ ಆಗಿರಲಿ ಮದುವೆ ಗಂಡು ಹೆಣ್ಣಿಗೆ, ಸರಿಯಾಗಿ ಪ್ಯಾಕ್ ಮಾಡಿ ಕೊಡಪ್ಪ"
"ಸರಿ ಹೋಗಲಿ ಬಿಡಿ ಎರಡು ಹಾರ ತಗೋತಿದ್ದೀರಿ, ಎರಡಕ್ಕು ಸೇರಿ 150 ಕೊಡಿ, ನಾನು ಪ್ರೇಶ್ ಆಗಿ ಕಾಣುವಂತೆ ಪ್ಯಾಕ್ ಮಾಡ್ತೀನಿ ಬಿಡಿ" ಎನ್ನುತ್ತ,  ಸ್ವಚ್ಚವಾಗಿ ಪ್ಯಾಕ್ ಮಾಡಿ ಅದರ ಮೇಲೆ ಸ್ಪ್ರೇಯರ್ ನಿಂದ ತಣ್ಣನೆಯ ನೀರನ್ನು ಸ್ಪ್ರೇ ಮಾಡಿದ"
ಗಂಡಕೊಟ್ಟ ಇನ್ನೂರು ಪಡೆದು, ಹತ್ತರ ಐದುನೋಟಿನ ಮದ್ಯ ಒಂದು ಹರಿದು, ಸೆಲೊಪಿನ್ ಟೇಪ್ ಅಂಟಿಸಿದ್ದ ನೋಟ ಸೇರಿಸಿದ್ದ, ಐವತ್ತು ರೂಪಾಯಿ ಹಿಂದೆ ಕೊಟ್ಟ. ಹಾರ ಪಡೆದ ಗೃಹಿಣಿ ಗಂಡನ ಹಿಂದೆ ಹೆಜ್ಜೆ ಹಾಕುತ್ತ ಹೊರಟಳು