Wednesday, January 30, 2013

ದೆವ್ವದ ಕಥೆ :- ನಿಜ ಹಾಗು ಭ್ರಮೆ

ಮನುವಿನ ಮನೆಗೆ ಹೋದಾಗ, ಮನೆಯೆಲ್ಲ ಮೌನ,  ಅಜ್ಜಿ ಮತ್ತು ಮನುವಿನ ಪತ್ನಿ ಸುಮ ಇಬ್ಬರೆ.
"ಮನು ಎಲ್ಲಿ " ಎಂದೆ  ಅದಕ್ಕೆ ಸುಮರವರು
"ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದರು, ಅವರನ್ನು ಹೊರಗೆ ಕರೆದುಕೊಂಡು ಹೋಗಿ ಅಂತ ಕಳಿಸಿದೆ" ಎಂದರು. ಅದಕ್ಕೆ ನಾನು
"ಮಕ್ಕಳೊ ಗಲಾಟೆಯೊ  ಅಥವ ಅವನೆ ಗಲಾಟೆ ಮಾಡ್ತಿದ್ದ ಅಂತ ಮಕ್ಕಳ ಜೊತೆ ಕಳಿಸಿದರೊ" ಅಂದೆ, ಸುಮಾ ಬಾಯಿತುಂಬಾ ನಕ್ಕರು. ಅಷ್ಟರಲ್ಲಿ ಅಜ್ಜಿ
"ಬಾರಪ್ಪ ಕುಳಿತುಕೊ ಹೇಗಿದ್ದಿ" ಅಂತ ಕರೆದರು. ಅವರಿರುವಲ್ಲಿಗೆ ಹೋಗಿ, ಕುಳಿತೆ,
"ಈಗ ಏನನ್ನಾದರು ಬರೆಯುತ್ತ ಇದ್ದೀಯ?" ಎಂದರು.
"ಹೀಗೆ ಅಂತ ಏನಿಲ್ಲ ಅಜ್ಜಿ ಮನಸಿಗೆ ತೋಚಿದ್ದು ಬರೆಯುವುದು" ಅಂದೆ. ಮತ್ತೆ ನಾನೆ ಕೇಳಿದೆ
"ಆದರು ಅಜ್ಜಿ, ಜನರಿಗೆ ಬೇರೆ ವಿಷಯಗಳಿಗಿಂತ, ಈ ದೆವ್ವ ಭೂತದ ಕಥೆಗಳೆಂದರೆ ಏಕೆ ಕುತೂಹಲ?" , ಅದಕ್ಕೆ ಅವರು
"ಅದು ಹಾಗೆ ಮಗು, ನಮಗೆ ಸದಾ ಕಣ್ಣಿಗೆ ಕಾಣದ, ಅರಿವಿಗೆ ಬಾರದ ವಿಷಯಗಳೆಂದರೆ ಆಸಕ್ತಿ ಜಾಸ್ತಿಯಲ್ಲವೆ ಮನುಜ ಜನಾಂಗದ ಸಹಜ ಸ್ವಭಾವ" ಎಂದರು.
ಮತ್ತೆ ನಾನು
" ಅಜ್ಜಿ ದಕ್ಷಿಣ ಕನ್ನಡದಲ್ಲಿ ಈ ದೆವ್ವ ಭೂತಗಳಿಗು ಪೂಜೆ ಉಂಟಲ್ಲ" ಎಂದೆ. ಅವರು
"ಅದೇನೊ ಅಪ್ಪ ದಕ್ಷಿಣ ಕನ್ನಡದಲ್ಲಿ ಭೂತಗಳಿಗೆ ಎಡೆಯಿಡುವುದು, ಭೂತ ಪೂಜೆಯು ಉಂಟು, ಅದನ್ನು ಕೋಲ ಎಂದೊ ಏನೊ ಕರೆಯುತ್ತಾರೆ, ಆದರೆ ಅವರು ಹೇಳುವ ಭೂತವೆ ಬೇರೆ ಅನ್ನಿಸುತ್ತೆ ಅದಕ್ಕೆ ದೈವಕ್ಕೆ ಸಮಾನವಾದ ಸ್ಥಾನವಿದೆ, ಆದರೆ ಬಯಲು ಸೀಮೆಯ ದೆವ್ವಗಳೆಂದರೆ,  ಆಸೆಯಿಟ್ಟುಕೊಂಡು ಅರ್ದ ಆಯಸ್ಸಿನಲ್ಲಿ ಸತ್ತುಹೋದ ಅತೃಪ್ತ ಆತ್ಮಗಳೆಂದೆ ಭಾವಿಸಲಾಗುತ್ತೆ, ಅದು ದೆವ್ವ ಭೂತ, ಪಿಶಾಚಿ,ಮೋಹಿನಿ ಹೀಗೆ ಬಗೆಬಗೆಯ ರೂಪ"

"ಅದು ಸರಿ ಅಜ್ಜಿ , ನೀವು ಏನು ಹೇಳ್ತೀರಿ, ಈ ದೆವ್ವ ಭೂತ ಇವೆಲ್ಲ ನಿಜ ಎಂದು ಭಾವಿಸುವಿರ ಅಥವ ನಮ್ಮ ಭ್ರಮೆಯ?" ಎಂದೆ ನಾನು.
ಅದಕ್ಕವರು,
"ಈ ಪ್ರಪಂಚದಲ್ಲಿ ನಮ್ಮ ಅರಿವೆಗೆ ಬಾರದ ಬೇಕಾದಷ್ಟು ವಿದ್ಯಮಾನಗಳಿರುತ್ತವೆ ಅದರಲ್ಲಿ ಇದು ಒಂದು, ಮನುಷ್ಯನು ತನಗೆಲ್ಲ ಗೊತ್ತು ಎಂದು ಮೆರೆದರು, ಅವನಿಗೆ ಏನು ಗೊತ್ತಿಲ್ಲ ಅನ್ನುತ್ತದೆ ಪ್ರಕೃತಿ, ನೀನು ಹೇಳಿದಂತೆ ದೆವ್ವ ಭೂತದ ಅನುಭವಗಳು,  ಭ್ರಮೆಯು ಆಗ ಬಹುದು ನಿಜವು ಆಗಿರಬಹುದು, ಆದರೆ ನಾವು ಕೆಲವೊಮ್ಮೆ ನಿಜವನ್ನು ಭ್ರಮೆ ಎಂದು ಕೊಳ್ತೀವಿ, ಮತ್ತು ಭ್ರಮೆಯನ್ನು ನಿಜ ಅಂದು ಕೊಳ್ತೀವಿ ಬಿಡು"  ಅಂದರು. ನನಗೆ ಆಶ್ಚರ್ಯ ಎನಿಸಿತು, ಒಮ್ಮೊಮ್ಮೆ ಅರಿಯದ ಅಮಾಯಕಳಂತೆ ಮಾತನಾಡುವ ಅಜ್ಜಿ, ಮತ್ತೊಮ್ಮೆ ಶುದ್ದ ವೇದಾಂತಿಯಂತೆ ಮಾತನಾಡುವ ಪರಿ ನನಗೆ ಆಶ್ಚರ್ಯ ಹುಟ್ಟಿಸುತ್ತಿತ್ತು. ನಾನು ಮತ್ತೆ ಕೇಳಿದೆ
"ಅಲ್ಲಜ್ಜಿ , ಭ್ರಮೆಯನ್ನು ನಿಜವೆಂದು , ನಿಜವನ್ನು ಭ್ರಮೆಯೆಂದು ಏಕೆ ಭಾವಿಸುತ್ತೇವೆ, ಹೇಗೆ"
ಆಕೆ ಹೇಳಿದಳು
" ಏಕೆಂದರೆ ನಾವು ಕೆಲವು ಘಟನೆಗಳನ್ನು ಅರ್ಥ ಮಾಡಿಕೊಳ್ಳಲಾಗುವದಿಲ್ಲ, ಅದು ನಮ್ಮ ಅರಿವಿನ ಪರಿದಿಯನ್ನು ಮೀರಿರುತ್ತದೆ, ಹಾಗದಾಗ ಘಟನೆಯ ವಿಷ್ಲೇಶಣೆ ಮಾಡುವಲ್ಲಿ ನಾವು ತಪ್ಪು ಮಾಡುತ್ತೇವೆ, ಆಗ ಭ್ರಮೆಯನ್ನು , ನಿಜವನ್ನು ಬೇರೆ ಮಾಡಲಾಗುವದಿಲ್ಲ "
ಮತ್ತೆ ಕೇಳಿದೆ
"ಅದು ಹೇಗೆ ಅಜ್ಜಿ, ವಿವರಿಸಿ" ಆಕೆ ತಮ್ಮ ಬೊಚ್ಚು ಬಾಯನ್ನು ತೆಗೆದು ನಕ್ಕರು
"ನನಗೆ ಅರ್ಥವಾಗುತ್ತಿದೆಯಪ್ಪ, ನಿನಗೆ ಈಗ ಬೇಕಾಗಿರುವುದು ಒಂದು ಕಥೆ ಅಂತ, ನೀನೇಕೆ ಹೀಗೆ ದೆವ್ವಗಳ ಕಥೆಯ ಹಿಂದೆ ಬಿದ್ದಿದ್ದೀಯ, ಅದರಿಂದ ಯಾವ ಉಪಯೋಗವು ಇಲ್ಲ. ಇದೆಲ್ಲ ಸುಮ್ಮನ ಕಾಲಹರಣವಷ್ಟೆ, ನಿಜವಾದ ಸಾಹಿತ್ಯದತ್ತ ಗಮನಹರಿಸು, ಕೆಲವು ಭ್ರಮೆಯ ಹಿಂದೆ ಬಿದ್ದು, ಹೋಗುತ್ತ, ಕಡೆಗೆ ಅದನ್ನೆ ನಿಜ ಅಂತ ನಂಬುವ ಸ್ಥಿಥಿ ನಿನಗೆ ಬರಬಾರದು, ಹೀಗೆ ದೆವ್ವದ ಕಥೆಯ ಹಿಂದೆ ಅಲೆಯುವದನ್ನು ಬಿಟ್ಟುಬಿಡು, ಭ್ರಮೆಗು ನಿಜಕ್ಕು ವೆತ್ಯಾಸ ತಿಳಿಯದಂತ ಸಂದರ್ಭಕ್ಕೆ ಉದಾಹರಣೆ ಬೇಕೆಂದರೆ, ನಮ್ಮ ಸುಮಾ ಇದ್ದಾಳಲ್ಲ ಅವಳ ದೊಡ್ಡಮ್ಮನ ಮಗಳು ಭಾಮೆಯ ಅನುಭವ , ಜೀವನದ ಕತೆಯನ್ನೆ ಕೇಳು" ಅಂದರು, ನಾನು ಸುಮರವರತ್ತ ನೋಡಿದೆ, ಆಕೆಯ ಮುಖದಲ್ಲಿ ಎಂತದೊ ಭಾವ, ಅವರು ಅಜ್ಜಿಗೆ
"ಅಜ್ಜಿ, ನಾನೆಂತ ಹೇಳುವುದು, ನೀವೆ ಅವರಿಗೆ ಹೇಳಿಬಿಡಿ, ಮದ್ಯ ನಾನೇಕೆ, ನಾನು ನಿಮ್ಮಿಬ್ಬರಿಗೆ ಕಾಫಿ, ಏನಾದರು ಮಾಡಿ ತರುತ್ತೇನೆ " ಅಂತ ಹೇಳಿ ಎದ್ದು ಹೊರಟರು.

.

.
ಅಜ್ಜಿ ಹೇಳಿದ ಕಥೆ:
------------------------------------------------------------------------
ಸುಮಳ ದೊಡ್ಡಪ್ಪನ ಮಗಳು ಭಾಮ. ಬೆಂಗಳೂರಿನಲ್ಲೆ ಇದ್ದಳು ಅವಳ ಗಂಡ ಗಿರೀಶ ಹಾಗು ಮಗ ಪ್ರಜ್ವಲ್ ಜೊತೆ. ಗಿರೀಶನದು ಸದಾ ಊರೂರು ಸುತ್ತುವ ಕೆಲಸ. ಪ್ರತಿ ಮೂರು ತಿಂಗಳು ಆರು ತಿಂಗಳಿಗೊಮ್ಮೆ ಬೇರೆ ದೇಶಕ್ಕು ಹೋಗಿ ಬರಬೇಕಾಗಿತ್ತು. ಅರಬ್ ಹಾಗು ಗಲ್ಫ್ ದೇಶಗಳಿಗೆ ಜಾಸ್ತಿ. ಅವನು ಕಂಪನಿಯ ಮಾರಾಟ ವಿಭಾಗದಲ್ಲಿದ್ದುದರಿಂದ ಅನಿವಾರ್ಯ. ಮೊದಲು ತುಂಬ ಖುಷಿ ಪಡ್ತಿದ್ದ ಬೇರೆ ದೇಶಗಳನ್ನೆಲ್ಲ ನೋಡುವ ಅವಕಾಶ ಎಂದು, ಈಗ ವಯಸ್ಸು ಐವತ್ತು ಸಮೀಪಿಸಿದಂತೆ ಅವನಿಗು ಬೇಸರ, ಮಗನ ಓದೊಂದು ಮುಗಿದುಬಿಡಲಿ ಈ ಕೆಲಸವೆ ಬೇಡ ಬಿಟ್ಟು ಬಿಡ್ತೀನಿ ಅಂತಾನೆ. ಮಗ ಪ್ರಜ್ವಲ್  ಆರನೆ ಸೆಮಿಶ್ಟರ್ ಬಿ.ಇ ಓದ್ತಿದ್ದಾನೆ ಆರ್.ವಿ. ಕಾಲೇಜಲ್ಲಿ. ಸಂಸಾರದಲ್ಲಿ ಕಷ್ಟ ಅನ್ನುವದೇನು ಇಲ್ಲ, ಹಣ ಕಾಸಿನ ತೊಂದರೆಯು ಇಲ್ಲ. ಗಿರೀಶ ಪದೆ ಪದೆ ಊರಲ್ಲಿ ಇರಲ್ಲ ಅನ್ನುವದನ್ನು ಬಿಟ್ಟರೆ ಭಾಮಾಗೆ ಯಾವ ಬೇಸರವು ಇಲ್ಲ ಮಗನು ಬುದ್ದಿವಂತ. ಎಲ್ಲ ಚೆನ್ನಾಗಿದ್ದರೆ ಅ ವಿದಿ ಸಹಿಸಬೇಕಲ್ಲ! ಅವಳ ಜೀವನದಲ್ಲಿ ವಿಚಿತ್ರ ಘಟನೆಗಳು ನಡೆದು ಹೋಯಿತು.

  ಒಮ್ಮೆ ಗಿರೀಶ ಹೀಗೆ ಟೂರ್ ಅಂತ ಹೊರಟುಬಿಟ್ಟ. ಸುಮಾರು ಹದಿನೈದು ದಿನಕ್ಕೆ ಅನ್ನಿಸುತ್ತೆ. ಅದೆ ಸಮಯ ಮಗನು ಕಾಲೇಜಿನಿಂದ ಕೇರಳದ ವೈನಾಡು ಕಡೆ ಅಂತ ಹಾಕಿದ್ದ ಟೂರಿಗೆ ಗೆಳೆಯರ ಜೊತೆ ಹೊರಟು ಹೋದ. ಅವಳೊಬ್ಬಳಿಗೆ ಬೇಸರ ಹೇಗೊ ಕಳೆದಳು. ಇದೊಂದು ದಿನ ರಾತ್ರಿ ಕಳೆದರೆ ಆಯಿತು. ಈದಿನ ರಾತ್ರಿಯೊ ಅಥವ ಬೆಳಗ್ಗೆಗೊ ಗಿರೀಶ ಬಂದು ಬಿಡುತ್ತಾನೆ ಅಂತ ಅವಳಿಗೆ ಸಮಾದಾನ. ಅದರೆ ಅವಳಿಗೆ ಅಚ್ಚರಿ ಕಾದಿತ್ತು. ಆ ದಿನ ಮದ್ಯಾನ ಊಟ ಮುಗಿಸಿ ಮಲಗಿದ್ದವಳಿಗೆ ಬಾಗಿಲು ತಟ್ಟಿದಂತಾಯ್ತು, ಎದ್ದು ಬಾಗಿಲು ತೆರೆದರೆ. ಬೆಳಗ್ಗೆ ಬರುತ್ತಾನೆ ಅಂದು ಕೊಂಡಿದ್ದ ಗಿರೀಶ ಬಾಗಿಲಲ್ಲಿ. ಸಂತೋಷವಾಗಿ ಅವನ ಕೈಯಲ್ಲಿದ ಬ್ಯಾಗನು ತೆಗೆದುಕೊಂಡು ಒಳಬಂದಳು. ಅವನು ಹಿಂದೆ ಬಂದು ಕುಳಿತ. ಅವಳಿಗೆ ಅಚ್ಚರಿ "ಏನಿದು ಯಾವಗಲು ಹೇಳಿದ ಸಮಯಕ್ಕೆ ಒಂದೆರಡು ದಿನ ತಡವಾಗಿ ಬರುತ್ತಿದ್ದವರು ಈ ಬಾರಿ ಒಂದು ದಿನ ಮುಂಚೆ" ಅಂದಳು. ಅವನು ನಗುತ್ತ "ಇಲ್ಲವೆ ನಿಜವಾಗಿ ಹೇಳಬೇಕೆಂದರೆ ಫ್ಲೈಟ್ ನಲ್ಲಿ ಆದ ಬದಲಾವಣೆಯಿಂದ ಹೀಗಾಯ್ತು. ನಾನು ನಿಜವಾಗಿ ಬರಬೇಕಿದ್ದ ಫ್ಲೈಟನಲ್ಲಿಯಾದರೆ ನಾಳೆ ಬೆಳಗ್ಗೆ  ಬರಬೇಕಿತ್ತು ಆದರೆ ಅದು ಕ್ಯಾನ್ಸಲ್ ಆಯಿತು, ಬದಲಿ ಪ್ರಯಾಣವಾಗಿ ಮುಂಬೈಗೆ ಟಿಕೆಟ್ ಸಿಕ್ಕು ಅಲ್ಲಿಂದ ಬೆಂಗಳೂರಿಗೆ ಬಂದು ಬಿಟ್ಟೆ, ಹಾಗಾಗಿ ಮುಂಚೆ ಬಂದೆ, ನಿನಗೆ ಸರ್ಪ್ರೈಸ್ ಕೊಡೋಣ ಅಂತ ಕಾಲ್ ಮಾಡಲಿಲ್ಲ " ಎಂದವನು. "ಅಂದಹಾಗೆ ಇವನೆಲ್ಲಿ ಪ್ರಜ್ವಲ್ " ಎಂದ.

 ಅದಕ್ಕೆ ಭಾಮ, 'ನೀವು ಹೋಗುವಾಗಲೆ ಹೇಳಿದ್ನಲ್ಲ, ಕಾಲೇಜಿನಿಂದ ಕೇರಳ ಕಡೆ ಟೂರ್ ಅಂತ, ಅವನು ಬರಬಹುದು ನಾಳೆ ಸಂಜೆ' ಅಂದಳು.
 ಒಳಗೆ ಹೋಗಿ ಕಾಫಿ ಮಾಡಿ ತಂದಳು. 'ಈಗ ನಿಮ್ಮದೇನು ಊಟಕ್ಕೆ ಏಳ್ತೀರ?' ಎಂದಳು.
ಗಿರೀಶ "ಹೊರಗೆ ಏನೊ ತಿಂದೆ, ಮತ್ತೆ ಊಟ ಬೇಜಾರು,ಅಕ್ಕಿ ಹಿಟ್ಟು ಇದ್ದರೆ ರೊಟ್ಟಿ ಮಾಡಿಬಿಡು, ನಿನ್ನ ಕೈಲಿ ಅಕ್ಕಿ ರೊಟ್ಟಿ ತಿಂದು ತುಂಬಾ ದಿನ ಆಯ್ತು" ಅಂದ. ಅದಕ್ಕವಳು, "ಆಯ್ತು ಬಿಡಿ, ಹೇಗು ಮನೇಲಿ ಅವರೆಕಾಳು ಇದೆ, ಹಾಕಿ ಅವರೆ ಕಾಳು ಅಕ್ಕಿರೊಟ್ಟಿನೆ ಮಾಡಿಬಿಡ್ತೀನಿ" ಎಂದಳು.
"ಅಹಾ! ಸರಿ ಮತ್ತೆ, ನಾನು ಬೇಗ ಸ್ನಾನ ಮುಗಿಸಿ ತಿನ್ನಲು ರೆಡಿ ಆಗಿಬಿಡ್ತೀನಿ " ಅನ್ನುತ್ತ ಎದ್ದ.
ಭಾಮ "ನಿಮ್ಮ ಬ್ಯಾಗನ್ನು ಈಗ ತೆಗೆಯ ಬೇಡಿ, ನಾಳೆಯೆ ಬಟ್ಟೆಯನ್ನೆಲ್ಲ ವಾಷಿಂಗ್ ಮಿಷಿನ್ಗೆ ಹಾಕ್ತೀನಿ, ಈಗ ಮಂಚದ ಕೆಳಗೆ ತಳ್ಳಿಬಿಡ್ತೀನಿ" ಎಂದಳು.
ಅದಕ್ಕವನು "ಹಾಗೆ ಮಾಡು, ಆದರೆ ನನ್ನ ಲಾಪ್ ಟಾಪ್ ಮಾತ್ರ ಹೊರಗೆ ತೆಗೆದಿಡು, ಅದನ್ನು ಕೆಳಗೆ ತಳ್ಳಿಬಿಡಬೇಡ" ಎನ್ನುತ್ತ ನಗುತ್ತ ಸ್ನಾನಕ್ಕೆ ಹೊರಟ. ಅವಳು ಅವನ ಲಾಪ್ ಟಾಪ್ ಅನ್ನು ಟೇಬಲ್ ಮೇಲೆ ಎತ್ತಿಟ್ಟು, ಬ್ಯಾಗನ್ನು ಮಂಚದ ಕೆಳಗೆ ತಳ್ಳಿದಳು.

  ಸ್ನಾನ ಮುಗಿಸಿ ಬಂದವನ್ನು ಗಲಗಲ ಮಾತನಾಡುತ್ತ ಅವಳು ಮಾಡಿದ್ದ ರೊಟ್ಟಿ ಚಟ್ನಿಯನ್ನು ತಿಂದ. ಅವಳಿಗೆ ಖುಷಿ ಗಿರೀಶ ಸ್ವಲ್ಪ ಭಾವನ ಜೀವಿ, ಕೆಲವೊಮ್ಮೆ ಮಾತನಾಡುತ್ತಿದ್ದರೆ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಬರಿ ಮೌನ. ಅವನು ಮಾತನಾಡುತ್ತಿದ್ದಾನೆ ಅಂದರೆ ತುಂಬಾ ಮೂಡಿನಲ್ಲಿದ್ದಾನೆ ಅಂತ. ರೊಟ್ಟಿ ತಿಂದವನು ಅವಳಿಗೆ 'ರಾತ್ರಿ ಏನು ಬೇಡವೆ, ಬರಿ ತಿಳಿಸಾರು ಅನ್ನ ಮೊಸರು ಸಾಕು ಅಂದ" ಅವಳು ನಗ್ಗುತ್ತ "ಅಲ್ರಿ ಇನ್ನು ರೊಟ್ಟಿ ತಿಂದು ಮುಗಿಸೆ ಇಲ್ಲ ಆಗ್ಲೆ ರಾತ್ರಿ ಊಟದ ಲೆಕ್ಕನ, ಆಯ್ತು ಬಿಡಿ" ಅಂದಳು. ತಿಂದು ಮುಗಿಸಿದ ಅವನು ಕಾಫಿ ಕುಡಿದು, ಎದ್ದವನು ನಿದಾನಕ್ಕೆ ಲ್ಯಾಂಡ್ ಲೈನ್ ಹತ್ತಿರ ಹೋಗಿ,, ಪೋನ್ ಡಿಸ್ಕನೆಕ್ಟ್ ಮಾಡಿದ. ಅವಳು ಅಚ್ಚರಿಯಿಂದ "ಏಕೆ ಫೋನ್ ಡಿಸ್ಕನೆಕ್ಟ್ ಮಾಡ್ತೀರಿ" ಅಂದಳು.  ಅವನು "ಅಯ್ಯೊ ಬಿಡೆ, ಇಲ್ಲದಿದ್ದರೆ ಸುಮ್ಮನೆ ಆಫೀಸ್ ನಿಂದ ಕಾಲ್ ಮಾಡಿ ತಲೆ ತಿಂತಾರೆ, ಇನ್ನು ಬೇಕಾದ್ರೆ ಇವತ್ತೆ ಬನ್ನಿ ಅಂದ್ರು ಅಂದ್ರೆ, ನಾಳೆ ನಿದಾನಕ್ಕೆ ಹೋದ್ರಾಯ್ತು, ಮೊಬೈಲ್ನು ಸೈಲೆಂಟ್ ಗೆ ಹಾಕಿದ್ದೀನಿ" ಅಂದ. ಅವಳು ನಗುತ್ತ ಸುಮ್ಮನಾದಳು.

  ನಂತರ ಕಾಲ ಹೇಗೊ ಕಳೆಯಿತು, ಅವನು ಲಹರಿಯಲ್ಲಿ ಮಾತನಾಡುತ್ತಿದ್ದ, ಟಿ,ವಿ ಸಹ ಹಾಕಲಿಲ್ಲ, ಮುದುವೆಯಾದ ಹೊಸದರಲ್ಲಿ ಇಬ್ಬರು ಜೊತೆಯಾಗಿರುತ್ತಿದ್ದದ್ದು ಬಿಟ್ಟರೆ ಈಗಲೆ ಜೊತೆ ಈದಿನ ಮಗನು ಇಲ್ಲ ಟೂರ್ ಹೋಗಿದ್ದಾನೆ, ನಾಳೆಯೆ ಅವನು ಬರುವುದು. ಸಂಜೆ ಕಳೆದು ರಾತ್ರಿಯಾಯಿತು. ರೊಟ್ಟಿ ತಿಂದಿದ್ದರು ಸಹ ಸ್ವಲ್ಪ ಊಟ ಮಾಡಿದ ಅವಳು ಊಟ ಮುಗಿಸಿದಳು. ಅವನು ಪುನಃ "ಪ್ರಜ್ವಲ್ ಎಲ್ಲೆ " ಎಂದ. ಅದಕ್ಕವಳು "ಏನ್ರಿ ನಿಮಗೆ ಇಷ್ಟೊಂದು ಮರೆವು, ಎರಡು ಸಾರಿ ಹೇಳಿಯಾಯ್ತು, ಅವನು ಟೂರಿಗೆ ಹೋಗಿದ್ದಾನೆ ನಾಳೆ ಬರ್ತಾನೆ " ಅಂದಳು, ಅವನು ನಗುತ್ತ " ರಾತ್ರಿ ಪೂರ ನಾವಿಬ್ಬರೆ" ಎಂದ, ಅವಳು ನಾಚುತ್ತ "ಏನ್ರಿ ಮದುವೆಯಾಗಿ ಇಪ್ಪತ್ತನಾಲಕ್ಕು ವರ್ಷ ಕಳೆದವು, ನಿಮಗಿನ್ನು ಹುಡುಗಾಟ, ನಾವೇನು ಎಳೆಹುಡುಗರ" ಅಂದಳು, ಬಾಯಲ್ಲಿ ಹಾಗಂದರು ಅವಳಿಗೆ ಒಳಗೊಳಗೆ ಪುಲಕ. ತಡರಾತ್ರಿ ನೆಮ್ಮದಿಯಾಗಿ ಅವನೆದೆಯಲ್ಲಿ ಮುಖ ಹುದುಗಿಸಿ ನಿದ್ರೆ ಮಾಡಿದಳು.

     ಬೆಳಗ್ಗೆ ಏಳುವಾಗ ಐದುವರೆ ಆಗಿತ್ತು, ಎದ್ದವಳೆ ಪಕ್ಕದಲ್ಲಿ ನೋಡಿದಳು , ಗಿರೀಶ ಇನ್ನು ನಿದ್ದೆಯಲ್ಲಿ ಮುಳುಗಿದ್ದ, ಇವಳು ಎದ್ದಿದ್ದನು ತಿಳಿದು, ನಿದ್ದೆಯಲ್ಲಿ "ಏಕೆ ಬೇಗ ಏಳ್ತಿದ್ದಿ" ಅಂದ. ಅವಳು "ಏನು ಈದಿನವಾದರು ಆಫೀಸಿಗೆ ಹೋಗೀರೊ ಹೇಗೆ, ತಿಂಡಿ ಮಾಡಲ" ಅಂದಳು, ಅವನು "ಹೋಗ್ತೀನೆ, ಏಕೊ ತುಂಬಾ ನಿದ್ದೆ, ಬೇಗ ಒಂದರ್ದ ಕಾಫಿ ಕೊಟ್ಟುಬಿಡು, ಎದ್ದು ಸಿದ್ದವಾಗ್ತೀನಿ" ಅಂತ ಮಲಗಿದ. ಅವಳು ಎದ್ದು ದೇವರಿಗೆ ಕೈಮುಗಿದು, ಒಳಗೆ ಹೋಗಿ ಫ್ರೆಶ್ ಆಗಿ ಡಿಕಾಕ್ಷನ್ ಹಾಕಿದಳು, ಫ್ರಿಜ್ನಲ್ಲಿದ ಹಾಲು ತೆಗೆದು ಕಾಯಿಸಿ, ಕಾಫಿ ಮಾಡಿ ತಂದು "ಏಳ್ರಿ ಮುಖ ತೊಳೆಯಿರಿ" ಅಂದರೆ, ಅವನು "ಹೋಗೆ ಈಗ ಯಾರು ಮುಖ ಬಾಯಿ ತೊಳಿತಾರೆ, ಹೇಗಿದ್ರು ನೀನು ತೊಳೆದಿದ್ದೀಯಲ್ಲ ನನ್ನ ಅರ್ದಾಂಗಿ ಅಲ್ಲಿಗೆ ನಾನು ತೊಳೆದ ಹಾಗೆ ಲೆಕ್ಕ" ಅಂತ ಕಾಪಿಗೆ ಕೈನೀಡಿದ. ಅವಳು 'ನೀವು ಯಾಕೊ ಕೊಳಕರಾಗ್ತಿದ್ದೀರಿ' ಅಂತ ಕಾಪಿ ಕೊಟ್ಟು ಹೊರಬಂದು, ಮೊದಲು ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಿಬಿಟ್ರೆ ಆಯ್ತು ಅನ್ನುತ್ತ, ನೀರು, ಪೊರಕೆ ರಂಗವಲ್ಲಿ ಸಮೇತ ಹೊರಬಂದು, ಗುಡಿಸಿ, ನೀರು ಚುಮುಕಿಸಿ ರಂಗೋಲಿ ಹಾಕುವಾಗ , ಹೊರಗೆ ಕತ್ತಲೆ ಕರಗುತ್ತಿತ್ತು.

   ರಂಗೋಲಿ ಮುಗಿಸಿ, ಎದ್ದವಳು ಏಕೊ ರಸ್ತೆಯ ಕಡೆಯತ್ತ ಕಣ್ಣು ಹಾಯಿಸಿದಳು, ಯಾರೊ ಇಬ್ಬರು ಇತ್ತಲೆ ಬರುತ್ತಿದ್ದಾರೆ. ಯಾರು ಅಂತ ನೋಡುವಾಗ ಒಬ್ಬ ಇವಳ ತಮ್ಮ ದೀಪು ! ಅವಳಿಗೆ ಆಶ್ಚರ್ಯ, ಇವನಿರುವುದು ತುಮಕೂರಿನಲ್ಲಿ ಇಷ್ಟು ಬೇಗ ಎಕೆ ಬಂದ ಅನ್ನುವಾಗ ನೆನೆಯಿತು, ವಯಸ್ಸಾದ ತಂದೆ, ಬೈಪಾಸ್ ಬೇರೆ ಆಗಿದೆ ಏನಾಯಿತು ಅಂತ ಅವಳ ಮನ ಅಳುಕಿತು, ಪಕ್ಕದಲ್ಲಿದವನನ್ನು ದಿಟ್ಟಿಸಿದಳು, ಆಶ್ಚರ್ಯ, ಪ್ರಜ್ವಲ್ !. ಇವನು ಟೂರಿಗೆ ಹೋಗಿದ್ದವನು ದೀಪು ಜೊತೆ ಬರುತ್ತಿದ್ದಾನೆ, ಏನಿರಬಹುದು ಅಂತ ನಿಂತಳು, ಅವರಿಬ್ಬರು ಎದುರಿಗೆ ಬಂದು ನಿಂತರು. ಅವಳು ತುಸು ಆತಂಕದಲ್ಲಿ "ಏನೊ ದೀಪು, ಇಷ್ಟು ಬೇಗ ಬಂದೆ, ನಿನಗೆ ಇವನೆಲ್ಲಿ ಸಿಕ್ಕಿದ, ಅಪ್ಪ ಹೇಗಿದ್ದಾರೆ " ಎಂದಳು
 
   "ಅಕ್ಕ ಅಪ್ಪ ಚೆನ್ನಾಗಿದ್ದಾರೆ, ನಡಿ ಒಳ ಹೊಗೋಣ" ಎನ್ನುತ್ತ ಬಂದ. ಭಾಮ  ತಡಿ ಕಾಪಿ ತರುತ್ತೇನೆ ಅಂತ ಹೊರಟಳು, ದೀಪು ಬೇಡ ಅನ್ನುತ್ತಿದ್ದರೆ ಕೇಳದೆ, ಒಳಹೋಗಿ , ಕಾಫಿ ಸಿದ್ದಪಡಿಸಿ ಇಬ್ಬರಿಗು ತಂದು ಕೊಟ್ಟು. ಮಗನನ್ನು "ನೀನು ಇವತ್ತು ಸಂಜೆ ಬರುತ್ತೇನೆ ಅಂತಲ್ಲವೇನೊ ಹೇಳಿದ್ದು, ದೀಪು ಎಲ್ಲಿ ಬಸ್ ನಿಲ್ದಾಣದಲ್ಲಿ ಸಿಕ್ಕಿದನಾ?" ಎಂದಳು.
 ಅದಕ್ಕವನು "ಇಲ್ಲಮ್ಮ ನಿನ್ನೆಯೆ ನಾನು ಮಂಗಳೂರಿಗೆ ಬಂದೆ, ಮಾವನು ಅಲ್ಲಿಯೆ ಬಂದಿದ್ದ, ಈಗ ಒಟ್ಟಾಗಿ ಬರುತ್ತಿದ್ದೇವೆ" ಎಂದ, ಅವಳಿಗೆ ಆಶ್ಚರ್ಯ, "ಮಂಗಳೂರಿಗೆ ಏಕೆ" ಎಂದಳು.

   ದೀಪು, ಮತ್ತು ಪ್ರಜ್ವಲ್ ಮುಖ ಮುಖ ನೋಡಿ ಕೊಂಡರು,ಪ್ರಜ್ವಲ್ ಮುಖವಂತು ತುಂಬಾ ಬಾಡಿತ್ತು, ಅವಳಿಗೆ ಎಂತದೊ ಆತಂಕ.
  "ಅಕ್ಕ ನೀನೂ ನಿನ್ನೆಯಿಂದ ಟಿ.ವೀ ನೋಡ್ತಿಲ್ವ" ಅಂದ
   "ಇಲ್ಲ ಏತಕ್ಕೊ " ಅಂದಳು ಸ್ವಲ್ಪ ಆಶ್ಚರ್ಯ !
  "ಏನಿಲ್ಲ ಅಕ್ಕ , ಗಲ್ಫ್ ನಿಂದ ನಿನ್ನೆ ಮಂಗಳೂರಿಗೆ ಬಂದ ಪ್ಲೇನ್ ಇಳಿಯುವಾಗ, ಕ್ರಾಶ್ ಆಗಿ, ಅದರಲ್ಲಿದ್ದ ಬಹುತೇಕ ಜನ ಹೋದರು ಗೊತ್ತಾಗಲಿಲ್ವ" ಎಂದ.
 "ಹೌದೇನೊ ನಾನು ನೋಡಲೆ ಇಲ್ಲ, ನೋಡು ಮತ್ತೆ" ಎಂದವಳು "ನೀನು ಅದಕ್ಕ್ಯಾಕೆ ಮಂಗಳೂರಿಗೆ ಹೋದೆ, ಪ್ಲೇನ್ ಆಕ್ಸಿಡೆಂಟ್ ನೋಡೋಕಾ" ಎಂದಳು
 "ಹಾಗೇನು ಇಲ್ಲಕ್ಕ ಭಾವ ಅದರಲ್ಲೆ ಅಲ್ವ ಬರ್ತಾ ಇದ್ದಿದ್ದು, ಹಾಗಾಗಿ ಹೋದೆ, ನಂತರ ಪ್ರಜ್ವಲ್ಗು ಅಲ್ಲಿಯೆ ಬರೋಕೆ ಹೇಳ್ದೆ, ನೀನು ಸ್ವಲ್ಪ ದೈರ್ಯ ತಗೋಬೇಕು ಅಕ್ಕ" ಅಂದ.
"ಅವಳು ದೈರ್ಯ ಯಾತಕ್ಕೊ ಸರಿಯಾಗಿ ಹೇಳೂ" ಅಂದಳು
"ಅದೆ ಅಕ್ಕ ಭಾವ ಅದೆ ಪ್ಲೇನಿನಲ್ಲಿ ಇದ್ರಲ್ಲ, ಅವರು ಅದರಲ್ಲಿ ಹೋಗಿಬಿಟ್ಟಿದ್ದಾರೆ, ನಿನ್ನೆ ಆಸ್ಪತ್ರೆ ಅಂತೆಲ್ಲ ಓಡಾಟವೆ ಆಗಿ ಹೋಯಿತು, ನಿನಗೆ ಎಷ್ಟೆ ಪ್ರಯತ್ನ ಪಟ್ರು, ನಿನ್ನ ನಂಬರ್ ಸಿಗಲಿಲ್ಲ, ಸರಿ ಫೋನಿನಲ್ಲಿ ಸರಿಹೋಗಲ್ಲ ಎದುರಿಗೆ ಬಂದು ನಿದಾನಕ್ಕೆ ನಿನಗೆ ಹೇಳೊದು ಅಂತ ಬಂದೆವು"  ದೀಪು ಹೆದರುತ್ತ ಹೇಳಿದ.
  ಭಾಮ ದೀಪು ಮುಖವನ್ನು ದಿಟ್ಟಿಸಿದಳು, ಸ್ವಲ್ಪ ಯೋಚಿಸಿ,
"ದೀಪು, ಎಂತದೊ ನಿನ್ನದೆಲ್ಲ ಹುಚ್ಚಾಟ, ಆತುರವಾಯಿತು, ಪಾಪ ಟೂರಿಗೆ ಹೋಗಿದ್ದ ಆ ಮಗುವಿನ ಮನಸ್ಸನು ಆತಂಕಗೊಳಿಸಿ ಕರೆಸಿದ್ದಿ, ಸರಿಯಾಗಿ ನೋಡುವ ವ್ಯವದಾನ ಬೇಡವ . ಅಸಲಿಗೆ ನಿಮ್ಮ ಭಾವ ಆ ಪ್ಲೇನಿನಲ್ಲಿ ಬರೆಲೆ ಇಲ್ಲ, ನೀನು ಸುಮ್ಮನೆ ಅವನನ್ನು ಗಾಭರಿಗೊಳಿಸಿ, ನೀನು ತೊಂದರೆ ಪಟ್ಟಿದ್ದಿ"  ಎಂದಳು
ಇಬ್ಬರಿಗೆ ಆಶ್ಚರ್ಯ "ಏನಕ್ಕ ನೀನು ಹೇಳುತ್ತಿರುವುದು, ಭಾವ ಆ ಪ್ಲೇನಿನಲ್ಲಿ ಬರಲೆ ಇಲ್ಲ ಅಂತ ನಿನಗೇನು ಗೊತ್ತು ಯಾರು ಹೇಳಿದರು " ಅಂದ
ಅದಕ್ಕೆ ಭಾಮ "ಯಾರೇನು ಹೇಳುವುದೊ, ನಿಮ್ಮ ಭಾವ ನಿನ್ನೆ ಮದ್ಯಾನವೆ ಮನೆಗೆ ಬಂದರು, ನೀನು ನೋಡಿದರೆ ಏನೇನೊ ಮಾಡಿ ಕೊಂಡಿದ್ದಿ"  ಅಂದಳು ಬೇಸರದಿಂದ.
 ದೀಪು, ಪ್ರಜ್ವಲ್ ಇಬ್ಬರು ಆತಂಕಕ್ಕೆ ಒಳಗಾದರು " ಅಕ್ಕ ನೀನು ಏನು ಮಾತನಾಡುತ್ತಿದಿ, ಸರಿ ಇದ್ದೀಯ? ನಾವು ನಿನ್ನೆಯೆಲ್ಲ ಪಟ್ಟ ಶ್ರಮ ಆತಂಕ ನಿನಗೆ ಗೊತ್ತಿಲ್ಲ, ಮಂಗಳೂರಿನ ಎಲ್ಲ ಆಸ್ಪತ್ರೆಯನ್ನು ಸುತ್ತಿ, ಭಾವ ಇರುವ ಆಸ್ಪತ್ರೆಯನ್ನು ಕಂಡುಹಿಡಿದೆವು, ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ, ಏನು ಮಾಡುವುದು ನಮ್ಮ ಅದೃಷ್ಟ ಅಷ್ಟೆ ಅದನ್ನು ನೀನು ಅರ್ಥಮಾಡಿಕೊ" ಎಂದ, ಭಾಮ ಕೋಪಗೊಂಡಳು
"ಸಾಕು ಬಾಯಿ ಮುಚ್ಚೊ, ನಾನು ಹೇಳಿದಮೇಲು ನೀನು ಪದೆ ಪದೆ ಅಮಂಗಳವನ್ನೆ ನುಡಿಯುತ್ತಿದ್ದಿ, ನಿಮ್ಮ ಭಾವ ನಿನ್ನೆ ಸಂಜೆಯೆ ಬಂದರು, ರಾತ್ರಿ ಇಲ್ಲೆ ಇದ್ದರು, ಈಗ ನೀನು ಕುಡಿದು ಕಾಪಿ ಸಹ ಅವರಿಗಾಗೆ ಹಾಕಿದ ಡಿಕಾಕ್ಷನ್ ನಿಂದ ಮಾಡಿದ್ದು, ಈಗಲು ಅವರು ರೂಮಿನಲ್ಲಿ ಮಲಗಿದ್ದಾರೆ ನೋಡು ಬಾ" ಎಂದು ಎದ್ದಳು,
ದೀಪು ಪೂರ್ತಿ ಹೆದರಿ ಹೋದ
 " ಏನಕ್ಕ ನೀನು ಹೇಳುತ್ತಿರುವುದೆ ಅರ್ಥವಾಗುತ್ತಿಲ್ಲ, ನನಗಂತು ಹೆದರಿಕೆಯಾಗುತ್ತಿದೆ, ನಡಿ ನೊಡೋಣ " ಎಂದು ಎದ್ದು ಹೊರಟು ಅಕ್ಕನ ಜೊತೆ ರೂಮಿಗೆ ಬಂದ, ಜೊತೆಯಲ್ಲಿ ವಿಸ್ಮಯದ ಮುಖದಲ್ಲಿ ಪ್ರಜ್ವಲ್
"ರೀ" ಎಂದು ಕೂಗುತ್ತ, ಬಂದ ಭಾಮ ಹಾಸಿಗೆ ಕಡೆ ನೋಡಿದಳು, ಅಲ್ಲಿ ಗಿರೀಶನಿಲ್ಲ,ಎಲ್ಲಿ ಹೋದರು,  ಬಹುಷಃ ಬಾತ್ ರೂಮಿಗೆ ಹೋದರ ಅಂತ ರೂಮಿನ ಅಟ್ಯಾಚ್ ಬಾತ್ ರೂಮಿಗೆ ಬಂದು, ಬಾಗಿಲು ತಳ್ಳಿದಳು,
ಬಾಗಿಲು ತೆರೆದುಕೊಂಡಿತು,ಒಳಗೆ ಯಾರು ಇಲ್ಲ, ಆಶ್ಚರ್ಯದಿಂದ ಅವಳು, ಹೊರಗೆ ಬಂದು, ಬಚ್ಚಲು ಮನೆ ಅಡಿಗೆ ಮನೆ ಅಂತ ಎಲ್ಲೆಲ್ಲಿ ಸುತ್ತಿದರು , ಗಿರೀಶ ಇಲ್ಲ. ಹಾಲಿಗೆ ಬಂದ ಅವಳು ಆತಂಕದಿಂದ, ಕುರ್ಚಿಯಮೇಲೆ ಕುಳಿತಳು,
 "ಇಲ್ಲ ದೀಪು, ನಿನ್ನೆ ಇವರು ಬಂದರು,ಸಂಜೆ ರೊಟ್ಟಿ ಮಾಡಿಕೊಟ್ಟೆ, ರಾತ್ರಿ ಊಟ ಮಾಡಿ ಮಲಗಿದರು, ಎರಡು ಮೂರು ಸಾರಿ ಪ್ರಜ್ವಲ್ ಎಲ್ಲಿ ಅಂತ ಕೇಳಿದರು, ಎಲ್ಲೊ ಹೊರಗೆ ಹೋದರೇನೊ" ಅಂದವಳು , ಏನೊ ನೆನಪಿಸಿಕೊಂಡವಳಂತೆ "ಇರು ಬಂದೆ" ಅಂತ ರೂಮಿಗೆ ಓಡಿದಳು, ಅವಳ ಹಿಂದೆ , ತಮ್ಮ ಹಾಗು ಮಗ "ಏಕಮ್ಮ" ಅಂತ ಅನ್ನುತ್ತಿದ ಪ್ರಜ್ವಲ್
ರೂಮಿಗೆ ಬಂದ ಅವಳು, ಮಂಚದ ಕೆಳಗೆ ಬಗ್ಗಿ ನೋಡಿದಳು,
ಅಲ್ಲಿ ಅವಳು ಇಟ್ಟಿದ ಬ್ಯಾಗ್ ಕಾಣಲಿಲ್ಲ!! , ಟೇಬಲ್ ಕಡೆ ನೋಡಿದಳು, ಅಲ್ಲಿ ಲಾಪ್ ಟಾಪ್ ಇಲ್ಲ !!!!
 ಅವಳ ಮನ ಅಘಾತಕ್ಕೆ ಸಿಕ್ಕಿ ಹೋಯಿತು ಹೊರಗೆ ಬಂದಳು, ದೀಪು, ಹಾಗು ಪ್ರಜ್ವಲ್ ಇಬ್ಬರು ಭಾಮ ಟೀವಿಯಲ್ಲಿ ಸುದ್ದಿ ನೋಡಿ ಹೆದರಿ ಅವಳ ಮನಸ್ಸು ಹೀಗಾಗಿರಬಹುದೆ ಅಂತ ಚಿಂತಿಸುತ್ತಿದ್ದರು.
ಕಡೆಗೆ ದೀಪು  ಹೇಳಿದ "ಇಲ್ಲಕ್ಕ ನನ್ನ ನಂಬು, ಭಾವ ಪ್ಲೇನ್ ಹತ್ತುವ ಮುಂಚೆ ನನಗೆ ಮೈಲ್ ಮಾಡಿದ್ದರು, ಅದೇ ಪ್ಲೇನನಲ್ಲಿ ಬರುತ್ತಿದ್ದೇನೆ ಅಂತ, ಅಲ್ಲದೆ ಅವರ ದೇಹ ಗುರುತು ಹಿಡಿಯುವಲ್ಲಿ ಯಾವ ಸಮಸ್ಯೆ ಇರಲಿಲ್ಲ, ಅವರಿಗೆ ತಲೆಯ ಹಿಂಬಾಗದಲ್ಲಿ ಬಿದ್ದಿರುವ ಬಲವಾದ ಏಟು ಬಿಟ್ಟರೆ ದೇಹದ ಯಾವ ಬಾಗವು ಊನವಾಗಿಲ್ಲ, ಮುಖವು ಹಾಗೆ ಇದೆ, ಅಲ್ಲದೆ ಸಾಯುವ ಮುಂಚೆ ಅಲ್ಲಿನ ನರ್ಸ್ ಕೈಲಿ ಮಾತನಾಡಿದ್ದಾರೆ, ನಿನ್ನ ಹೆಸರು ತುಂಬಾ ಸರಿ ಹೇಳಿದರಂತೆ , ಕಡೆಯವರೆಗು "ಭಾಮ ಭಾಮ" ಎಂದೆ ಹೇಳುತ್ತಿದರು ಅಂದಳು ಅಲ್ಲಿನ ನರ್ಸ್, ನಾವು ನಿನಗೆ ವಿಷಯ ತಿಳಿಸಲು ತುಂಬಾ ಪ್ರಯತ್ನ ಪಟ್ಟೆವು ಮನೆಯ ನಂಬರ್ ಸಿಗಲಿಲ್ಲ, ನೇರವಾಗಿ ದೇಹ ತಂದರೆ ನಿನಗೆ ಅಘಾತ ಆಗುತ್ತೆ ಅಂತ ರಸ್ತೆಯ ಕಡೆಯಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿ ಬಂದಿದ್ದೀವಿ" ಅಂದವನು ಪ್ರಜ್ವಲ್ ನತ್ತ ತಿರುಗಿ ಸನ್ನೆ ಮಾಡಿದ, ಪ್ರಜ್ವಲ್ ಹೊರಹೋಗಿ, ಒಂದೆರಡು ನಿಮಿಷದಲ್ಲೆ ಮನೆಮುಂದೆ ಅಂಬ್ಯುಲೆನ್ಸ್ ಬಂದು ನಿಂತಿತು. ಅದರಿಂದ ಗಿರೀಶನ ಶವವನ್ನು ಇಳಿಸಲಾಯಿತು. ಅನುಮಾನದಿಂದ ಹತ್ತಿರ ಹೋಗಿ ನೋಡಿದಳು ಭಾಮ, ನಿಜ ಯಾವುದೆ ಅನುಮಾನವಿಲ್ಲ ಶವ ಅವಳ ಗಂಡನದೆ, ಮಾತು ಮರೆತು ನಿಂತಳು ಅವಳು, ಸಣ್ಣ ದ್ವನಿಯಲ್ಲಿ ಕೇಳಿದಳು,
"ನಿನ್ನೆ ಯಾವ ಸಮಯದಲ್ಲಿ ಅವರು ಪ್ರಾಣಬಿಟ್ಟರು ?"
ದೀಪು ಅಂದ "ಮಧ್ಯಾನ ನಾಲಕ್ಕು ಗಂಟೆ, ಹತ್ತು ನಿಮಿಶ ಅಂತ" ಡಾಕ್ಟರ್ ಮರಣಪತ್ರದಲ್ಲಿ ಕೊಟ್ಟಿದ್ದಾರೆ.
ಭಾಮ ಕುಸಿದು ಕುಳಿತಳು, ಅವಳ ಮನ ನೆನೆಯಿತು, ನಿನ್ನೆ ಗಿರೀಶ ಮನೆಗೆ ಬಂದಿದ್ದು ಹೆಚ್ಚು ಕಡಿಮೆ ಅದೇ ಸಮಯ, ಅವಳಿಗೆ ಏನೊಂದು ಅರ್ಥವಾಗುತ್ತಿಲ್ಲ,
ಹಾಗಾದರೆ ನಿನ್ನೆ ಅವರು ಬಂದಿದ್ದೆ ಸುಳ್ಳ, ಅಥವ ಈಗ ಅವರು ಸತ್ತಿದ್ದಾರೆ ಎಂದು ಎಲ್ಲ ಹೇಳುತ್ತಿರುವುದು ಸುಳ್ಳ ?
ಯಾವುದು ನಿಜ ಯಾವುದು ಭ್ರಮೆ ?
ಹಾಗಾದರೆ ನಾನು ನಿನ್ನೆ ರಾತ್ರಿಯೆಲ್ಲ ಇದ್ದಿದ್ದು ಪ್ರೇತ ರೂಪದಲ್ಲಿ ಬಂದಿದ್ದ ಗಿರೀಶನೊಡನೆಯೆ!!!

ಭಯ ದುಖ:ದ ಮಿಶ್ರಭಾವ ಮೈಮನಗಳನ್ನೆಲ್ಲ ವ್ಯಾಪಿಸಿತು

..
...
ನಿದಾನಕ್ಕೆ ಅವಳಿಗೆ ಜ್ಞಾನ ತಪ್ಪಿ ಹೋಯಿತು
....
...
-------------------------------------------------------------------------------------
.

.
ಅಷ್ಟರಲ್ಲಿ ಸುಮಾ ಕಾಫಿ ಹಿಡಿದು ಹೊರಗೆ ಬಂದರು. ನಾನು ಅವರನ್ನು ನೋಡುತ್ತ ಕೇಳಿದೆ,
"ಹಾಗಾದರೆ ಭಾಮ ಎನ್ನುವವರು ಈಗಲು ಇಲ್ಲಿಯೆ ಇದ್ದಾರ?". ಅದಕ್ಕೆ ಅಜ್ಜಿ ಉತ್ತರ ಕೊಡದೆ ಸುಮ ಉತ್ತರಿಸಿದರು
"ಇಲ್ಲ, ಈಗ ಅವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಪ್ರಜ್ವಲ್ ತನ್ನ ಓದು ಮುಗಿಸಿ, ಕೆಲಸಕ್ಕೆ ಅಂತ ಚೆನೈಗೆ ಹೊರಟುಹೋದ, ಭಾಮ ತನ್ನ ತಮ್ಮ ಗೋಪಿಯ ಮನೆಯಲ್ಲಿ ತುಮಕೂರಿನಲ್ಲಿಯೆ ಇದ್ದಾಳೆ. ಸಾದಾರಣವಾಗಿ ಸರಿಯಾಗಿಯೆ ಇರುವ ಅವಳಿಗೆ, ಒಮ್ಮೆಮ್ಮೊ ಏನೊ ಆಗಿಬಿಡುತ್ತದೆ, ಇದ್ದಕಿದ್ದಂತೆ, ಇವತ್ತು ನಮ್ಮೆಜಮಾನರು ಬರುತ್ತಾರೆ ಅಂತ ಹೇಳಿ, ರೊಟ್ಟಿ ಮಾಡಲು ಅಕ್ಕಿಹಿಟ್ಟು ಕಲಸುತ್ತ ಕುಳಿತು ಬಿಡುತ್ತಾಳೆ, ಯಾರು ಏನು ಹೇಳಿದರು ನಂಬುವದಿಲ್ಲ, ನಂತರ ತಾನಾಗೆ ಪುನಃ ಸರಿ ಹೋಗ್ತಾಳೆ"  ಅಜ್ಜಿ ನಕ್ಕರು ಒಂದು ತರ, ಮತ್ತೆ ಹೇಳಿದರು ಅಜ್ಜಿ,
"ಅವಳು ನಿಜವಾಗಿ ಗಿರೀಶನನ್ನು ನೋಡಿದಾಗ ಎಲ್ಲರಿಗು ಅದು ಭ್ರಮೆ ಅನ್ನಿಸಿತ್ತು, ಈಗ ಅವಳು ಭ್ರಮೆಯಲ್ಲಿದ್ದಾಳೆ ಅನ್ನುವುದು ನಮಗೆಲ್ಲ ನಿಜ ನೋಡು" ಅಂದರು,
ಸುಮಾ ಮುಖ ಸಹ ಮ್ಲಾನವಾಗಿತ್ತು. ನನಗೇಕೊ ಮನಸಿಗೆ ಒಂದು ರೀತಿಯ ಹಿಂಸೆ ಅನ್ನಿಸಿತು,
"ಸರಿ ಅಜ್ಜಿ ಬರ್ತೀನಿ"  ಅಂತ ಹೇಳಿ,
"ಸರಿ ಸುಮಾ, ಮತ್ತೆ ಮನು ಬಂದರೆ ಹೇಳ್ಬಿಡಿ  "  ಅನ್ನುತ್ತ ನನ್ನ ಮನೆಯತ್ತ ಹೊರಟೆ.


  

8 comments:

  1. ಆಸಕ್ತಿಕರವಾಗಿದೆ. ಇಂತಹ ಬೇರೆ ರೀತಿಯ ಸಂಗತಿಗಳ ಬಗ್ಗೆ ಕೇಳಿರುವೆ. ಧನ್ಯವಾದ, ಪಾರ್ಥರೇ.

    ReplyDelete
    Replies
    1. ವಂದನೆಗಳು ನಾಗರಾಜ್ ಸರ್ , ಇದು ಹಿಂದೊಮ್ಮೆ ಸಂಪದದಲ್ಲಿ ಹಾಕಿದ್ದ ಕತೆಯೆ

      Delete
  2. ಬಹಳ ದಿನದನಂತರ ಒಂದೊಳ್ಳೇ ದೆವ್ವದ ಕತೆ ಓದುತ್ತಿದ್ದೇನೆ. ನಿಮ್ಮ ಬ್ಲಾಗಿಗೆ ಈಗಷ್ಟೇ ಬಂದೆ. ಚನ್ನಾಗಿದೆ.

    ReplyDelete
    Replies
    1. ಮೆಚ್ಚುಗೆಗೆ ವಂದನೆಗಳು ಕೊಳ್ಳೆಗಾಲದ ಮಂಜುನಾಥರವರಿಗೆ,

      Delete
  3. ಇದು ಕಥೆಯೋ..ನಿಜ ಸಂಗತಿಯೋ..ತುಂಬಾ ಆಸಕ್ತಿಕರವಾಗಿದೆ..😱

    ReplyDelete
  4. ವಂದನೆಗಳು ನಾಗೇಂದ್ರ ಪ್ರಸಾದ್ ತಮ್ಮ ಪ್ರತಿಕ್ರಿಯೆಗೆ

    ReplyDelete
  5. ಈ ಕಥೆ ತುಂಬಾ ಚೆನ್ನಾಗಿದೆ. ನಿಮಗೆ ಸಮಯ ಸಿಕ್ಕರೆ ಭಾಮಾ ಅವರನ್ನು ಭೇಟಿ ಮಾಡಿ ಬನ್ನಿ. ಮುಂದೆ ಅಂದರೆ, ನೀವು ಭೇಟಿಯಾದ ನಂತರ ನಿಮ್ಮ ಅನುಭವ ನಮ್ಮೊಡನೆ ಹಂಚಿಕೊಳ್ಳಿ. ಧನ್ಯವಾದಗಳು

    ReplyDelete
  6. ಈ ಕಥೆ ತುಂಬಾ ಚೆನ್ನಾಗಿದೆ. ನಿಮಗೆ ಸಮಯ ಸಿಕ್ಕರೆ ಭಾಮಾ ಅವರನ್ನು ಭೇಟಿ ಮಾಡಿ ಬನ್ನಿ. ಮುಂದೆ ಅಂದರೆ, ನೀವು ಭೇಟಿಯಾದ ನಂತರ ನಿಮ್ಮ ಅನುಭವ ನಮ್ಮೊಡನೆ ಹಂಚಿಕೊಳ್ಳಿ. ಧನ್ಯವಾದಗಳು

    ReplyDelete

enter your comments please